ಮುಲ್ಕಿ (www.vknews.com) : ಸಂಪೂರ್ಣ ಸಾಕ್ಷರತೆಯ ಕೇರಳ ರಾಜ್ಯ ಮಾತ್ರವಲ್ಲದೇ ಇಡೀ ಮಾನವ ಕುಲವೇ ನಾಚಿ ತಲೆತಗ್ಗಿಸುವಂತೆ ಮಾಡಿದ ಕೆಲ ಮಲಯಾಳಿ ಯುವಕ ಯುವತಿಯರ ಮಲ ತಿನ್ನುವ (ಬೇಝಿನ್ ಕೇಕ್) ವೀಡಿಯೋವೊಂದು ವೈರಲ್ ಆಗಿದ್ದು ಇದು ಮಾನವೀಯ ಭಾವನೆಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಅಣಕಿಸುವ ಘನ ಘೋರ ಹೀನ ಕೃತ್ಯವಾಗಿದೆ. ತಿನ್ನುವ ಆಹಾರವನ್ನು ಈ ರೀತಿ ಚಿತ್ರಿಸಿ ತಮಾಷೆ ಮಾಡಿ ವೈರಲ್ ಮಾಡಿದ್ದು ಯುವ ಜನತೆಯ ನೈತಿಕ ಅದಃಪತನ ಎಲ್ಲಿವರೇಗೆ ಬಂದು ಮುಟ್ಟಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಮುಲ್ಕಿ ಶಾಪಿ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ.
ಕುರ್ಆನ್ ಮತ್ತು ಹದೀಸಿನ ಶ್ರೇಷ್ಟತೆಯನ್ನು ಹೇಳುತ್ತಾ ಇಸ್ಲಾಮಿನ ವಾಕ್ತಾರರೆಂದು ಅಭಿಮಾನ ಪಡುವ ನಾವು ಅದ್ಯಾವುದೂ ಇಲ್ಲದ ಇತರ ಧರ್ಮೀಯರಿಗಿಂತ ನೈತಿಕವಾಗಿ ಅದಪತನ ಹೊಂದಿದ್ದೇವೆಯೇ ಎಂದು ಆತ್ಮಾವಲೋಕನ ನಡೆಸಲು ಇದು ಸಕಾಲವಾಗಿದೆ ಎಂದ ಅವರು ನಾವು ಇತರರಿಗಿಂತ ಉತ್ತಮರಾಗಿದ್ದೇವೆಂದು ಆತ್ಮರತಿ ನಡೆಸುವ ಬದಲು ನಮ್ಮ ನಡವಳಿಕೆಯನ್ನು ಸರಿಪಡಿಸಲು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸ ಬೇಕಾದ ತುರ್ತು ಸಂಧರ್ಭದಲ್ಲಿ ನಾವಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.
ಇತರ ಧರ್ಮೀಯರ ಮುಂದೆ ಮಾತ್ರವಲ್ಲ ಮೃಗಗಳ ಎದುರಲ್ಲಿ ಕೂಡಾ ನಾಚಿ ತಲೆ ತಗ್ಗಿಸ ಬೇಕಾದ ಕೃತ್ಯಗಳನ್ನು ಇಸ್ಲಾಮಿನ ಸುಂದರವಾದ ಹೆಸರನ್ನಿಟ್ಟು ಮಾಡುತ್ತಿರುವುದು ನಾವು ಕಷ್ಟ ಪಟ್ಟು ನಡೆಸುತ್ತಿರುವ ಧಾರ್ಮಿಕ ಪ್ರಚಾರಗಳನ್ನೇ ಅಣಕಿಸುವ ರೀತಿಯಲ್ಲಿದೆ ಎಂದು ಅವರು ಕಿಡಿಕಾರಿದರು.
ಮಾನವ ಜೀವನದಲ್ಲಿ ತಪ್ಪುಗಳು ಉಂಟಾಗುವುದು ಸಹಜ. ಆದರೆ ಆ ಪಾಪ ಕೃತ್ಯಗಳಿಗೂ ಒಂದು ಪರಿಧಿ ,ಕಾರಣ ಇರುತ್ತದೆ. ಬದುಕಿನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲಂಬಿಸಿ ಕೆಲವು ತಪ್ಪುಗಳು ಉಂಟಾಗುತ್ತದೆ. ಆದರೆ ಆ ಕೂಡಲೇ ಅದಕ್ಕೆ ಪಾಶ್ಚಾತಾಪ ಪಟ್ಟು ಒಳಿತಿಗೆ ಮರಳಿದರೆ ಒಂದು ವೇಳೆ ದೇವನು ಅದನ್ನು ಮನ್ನಿಸಿಯಾನು.
ಅದೇ ವೇಳೆ ತಮಗೆ ಯಾವುದೇ ರೀತಿಯಲ್ಲೂ ಒಂದು ಚೂರು ಕೂಡಾ ಪ್ರಯೋಜನ ಇಲ್ಲದ ಮತ್ತು ಅನಾಗರಿಕ ರೀತಿಯಲ್ಲಿ ವರ್ತಿಸಿ ಮಾನವೀಯ ನಾಗರಿಕತೆಯ ಸಂಕಲ್ಪವನ್ನೇ ಗೇಲಿ ಮಾಡುವ ರೀತಿಯಲ್ಲಿರುವ ಇಂತಹ ವರ್ತನೆಗಳನ್ನು ಎಸಗುವುದು ಅಲ್ಲಾಹನ ಕೋಪ ಎರಗುವ ಕೃತ್ಯವಾಗಿದೆ ಎಂದು ಎಚ್ಚರಿಕೆ ನೀಡಿದ ಖತೀಬರು ಮಲತಿಂದು ಖುಷಿಪಡುವ ಮಲಯಾಳಿಗಿಂತ ಬೀದಿ ಬದಿಯಲ್ಲಿ ಮಲ ವಿಸರ್ಜಿಸುವ ತಮಿಳನೇ ಲೇಸು ಎಂದು ವ್ಯಂಗ್ಯವಾಡಿದರು.
ಗುಣ ಇಲ್ಲದವ ಹಣವಂತನಾದರೆ ಏನಾಗಬಹುದು ಎಂಬುದಕ್ಕೆ ಮುಸ್ಲಿಂ ಸಮಾಜದ ಇಂದಿನ ಕೆಲವು ವಿವಾಹ ಸಂಭ್ರಮಗಳೇ ಸಾಕ್ಷಿ ಎಂದು ಹೇಳಿದ ಅವರು, ನಿಮಗೆ ಬಡತನ ಉಂಟಾಗುವುದನ್ನು ನಾನು ಭಯಪಡುದಿಲ್ಲ. ಆದರೆ ದೇವ ಭಯವಿಲ್ಲದವನು ಹಣವಂತಾನಾಗುವುದನ್ನು ನಾನು ಭಯಪಡುತ್ತೇನೆ ಎಂಬ ಪ್ರವಾದಿ ಸ ಅ ರವರ ವಚನವನ್ನು ಉಲ್ಲೇಖಿಸಿದರು.
ಮರಣದ ನೆನಪು ಜನರಿಂದ ಮಾಯವಾಗುತ್ತಿರುವುದೇ ಈ ಎಲ್ಲಾ ಅನಾಹುತಕ್ಕೆ ಕಾರಣ ಎಂದ ಅವರು ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳನ್ನು ಪಡೆದುಕೊಂಡು ಅವನ ಆದೇಶಗಳನ್ನು ಮಾತ್ರ ಧಿಕ್ಕರಿಸಿ ನಡೆದರೆ ಇಹ ಪರದಲ್ಲಿ ಪರಾಜಯವು ಕಟ್ಟಿಟ್ಟ ಬುತ್ತಿ ಎಂದರಲ್ಲದೇ ನಾಡಿನ ಕಾನೂನನ್ನು ಉಲ್ಲಂಘಿಸಿದರೆ ಯಾವ ರೀತಿ ಜನರ ಬದುಕು ದುಸ್ತರವಾಗುತ್ತದೋ ಅದೇ ರೀತಿ ದೈವಿಕ ಕಾನೂನನ್ನು ಮೀರಿದರೆ ಮನುಷ್ಯ ನೈತಿಕವಾಗಿ ಅದಃಪತನ ಗೊಂಡು ಜೀವನವೇ ವ್ಯರ್ಥವಾಗುತ್ತದೆ ಎಂದು ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.