(www.vknews.com) : ಕಾಲೇಜಿಗೆ ಹೋಗಲು ಬೆಳಗಿನ ಬಸ್ಸಿಗೆ ತಯಾರಿ ನಡೆಸುವ ವೇಳೆ ಏನೋ ಸಮಯದ ಕೊರತೆಯಿಂದ ಪರ್ಸನ್ನು ಮನೆಯಲ್ಲಿ ಮರೆತುಬಿಟ್ಟೆ. ಪುಸ್ತಕವನ್ನು ಚೀಲದಲ್ಲಿ ತುಂಬಿಸಿ ವೇಗವಾಗಿ ಮಾರ್ಗಕ್ಕೆ ಲಗ್ಗೆ ಇಟ್ಟಾಗ ಪುಣ್ಯಕ್ಕೆ 7ಗಂಟೆಯ ಕುಂಟಾರ್ ಸಿಕ್ಕಿತು. ಕಾಕಿ ಹಾಕಿದ ಕಂಡಕ್ಟರ್ ಟಿಕೆಟ್ ಕೇಳಿದಾಗ “ಪಾಸ್” ಅಂತ ಹೇಳಿ ಚೀಲಕ್ಕೆ ಕೈ ಹಾಕಿದಾಗ ಕಂಡಕ್ಟರ್ ಮುಂದೆ ನಡೆದರು. ಅಂತೂ ಕೊನೆಗೆ ಕಾಲೇಜಿಗೆ ತಲುಪಿದನು.
ಮಧ್ಯಾಹ್ನದ ಉಪಹಾರ 30ರೂ ಕೊಟ್ಟು ಯಾವತ್ತು ಗೂಗಲ್ ಪೇ ಮಾಡಿ ತಿನ್ನುವುದರಿಂದ ಪರ್ಸ್ ಮನೆಯಲ್ಲಿ ಮರೆತು ಬಿಟ್ಟದ್ದನ್ನು ನೆನಪಿಸಲಿಲ್ಲ. ಹೀಗೆ ಲ್ಯಾಬ್ ತರಗತಿ ಮುಗಿಸಿ ಸಂಜೆ ಮನೆಗೆ ಹಿಂತಿರುಗುವಾಗ ಐದುವರೆಯಾಗಿತ್ತು. ಓಡೋಡಿ ಬಂದು ಬಸ್ ಹತ್ತಿ ಕುಳಿತು ಕೊಂಡಾಗ ಮತ್ತೊಮ್ಮೆ ಖಾಕಿ ಮಾಮ ಬಂದು ಟಿಕೆಟ್ ಕೇಳಿದ “ಪಾಸ್” ಅಂತ ಹೇಳಿ ಜೇಬಿಗೆ ಕೈ ಹಾಕುವಾಗ ಪರ್ಸ್ ಮನೆಯಲ್ಲಿ ಬಿಟ್ಟಂತಹ ಸಂದರ್ಭವನ್ನು ಜ್ಞಾಪಕಕ್ಕೆ ಬಂತು. ಬಸ್ ಹೊರಡಲು ಕೇವಲ ಎರಡು ನಿಮಿಷ ಮಾತ್ರ ಬಾಕಿ. ಕೈಯಲ್ಲಿ ಏನೂ ಇಲ್ಲ. ಎಟಿಎಂಗೆ ಹೋಗಿ ಹಣ ತೆಗೆದುಕೊಂಡು ಬರೋಣ ಅಂದರೆ ಸಮಯವೂ ಇಲ್ಲ. ಊರಿಗಿರುವ ಕೊನೆಯ ಬಸ್ಸು ಆದ್ದರಿಂದ ಮತ್ತೊಂದು ಬಸ್ಸಲ್ಲಿ ಬಂದು ಊರುಸೇರಲು ಅಸಾಧ್ಯ. ಹೀಗೆ ಮನಸ್ಸು ಗಲಿಬಿಲಿಗೊಂಡು ಗಾಬರಿಯಾದಾಗ ಹಣೆಗೆ ಅಡ್ಡನಾಮ ಹಾಕಿದ ಮಧ್ಯವಯಸ್ಸಿನ ಮಹಿಳೆಯೊಬ್ಬಳು “ಪುಟ್ಟ ನೋ ಟೆನ್ಶನ್” ಬೇಗ ಟಿಕೆಟ್ ಮಾಡು ಅಂತ ಹೇಳಿಬಿಟ್ಟರು.
ಅವರ ಮನೋಜ್ಞವಾದ ಸ್ವರದಲ್ಲಿ ಅಮ್ಮನ ವಾತ್ಸಲ್ಯ ಅಡಗಿತ್ತು.ಟಿಕೆಟ್ ಮಾಡಿ ಉಳಿದ ಹಣವನ್ನು ಅವರಿಗೆ ಕೊಟ್ಟು ಗೂಗಲ್ ಪೇ ಮಾಡೋಣ ಅಂತ ಹೇಳಿದಾಗ “ಬೇಡ ಪುಟ್ಟ ಇರ್ಲಿ ಬಿಡು ಅಂತ ಹೇಳಿದ” ಎಷ್ಟು ಒತ್ತಾಯ ಮಾಡಿದರೂ ಹಣವನ್ನು ಸ್ವೀಕರಿಸಲಿಲ್ಲ. ತದನಂತರದಲ್ಲಿ ಅವರ ಬಗ್ಗೆ ವಿಚಾರಿಸಿದಾಗ ಈಶ್ವರಮಂಗಲದ ಒಬ್ಬ ಮಹಿಳೆ ಯಾಗಿದ್ದಳು ಹೆಸರನ್ನು ನಾನಂತೂ ಕೇಳಲಿಲ್ಲ. ಹೀಗೆ ಬಸ್ ಪ್ರಯಾಣ ಮಾಡಲು ಹೊರಟಾಗ ಬಸ್ಸಿನಲ್ಲಿನ ನನ್ನ ದೈನಂದಿನ ಹವ್ಯಾಸವಾದ ಹೆಡ್ ಫೋನನ್ನು ಕಿವಿಗೆ ಹಾಕಿ ವಾಟ್ಸಪ್ ನಲ್ಲಿ ಸ್ಟೇಟಸ್ ನೋಡುವಾಗ ಅದರಲ್ಲಿ ಒಬ್ಬ ವ್ಯಕ್ತಿಯ ಸ್ಟೇಟಸ್ ಪರಿಚಯದ ಯುವಕರೆಲ್ಲರೂ ಹಾಕಿಕೊಂಡಿದ್ದರು. ಅದರಲ್ಲಿನ ಮುಖ್ಯ ವಿಷಯ “ನೀ ತಂಟ್ರೆ ಬಾ ತಾಂಟ್” ಅಂತಹ ಪ್ರಚೋದನಕಾರಿ ಸ್ಟೇಟಸ್ಗೆ ಪ್ರತಿಯಾಗಿ ಇನ್ನೊಂದು ಸಮುದಾಯದ ಯುವಕರು ಲೇವಡಿ ಮಾಡುತ್ತಾ ಮತ್ತೊಂದು ಸ್ಟೇಟಸ್ ಅನ್ನು ಕೂಡ ಹಾಕಿಕೊಂಡಿದ್ದರು.
ಆಗ ನಾನು ತಲೆಗೆ ಅಡ್ಡನಾಮ ಹಾಕಿ ನನ್ನ ಪಕ್ಕದಲ್ಲಿ ಕುಳಿತು ಕೊಂಡಿರುವ ನಿಷ್ಕಲ್ಮಶ ರಹಿತ ಮನಸ್ಸಿನ ಆ ಮಹಿಳೆಯ ಮುಖ ನೋಡಿ ನಾನು ನನ್ನಲ್ಲಿ ಹೇಳಿಕೊಂಡೆ ಯಾವ ಧರ್ಮವು ಇನ್ನೊಬ್ಬರಿಗೆ ಕೆಡುಕನ್ನು ಬಯಸುವುದಿಲ್ಲ. ಕೇವಲ ಭೌತಿಕ ಲಾಭಕ್ಕೆ ಬೇಕಾಗಿ ಎಲುಬಿಲ್ಲದ ನಾಲಿಗೆಯನ್ನು ನಿಯಂತ್ರಿಸಲಾಗದ ಸಮುದಾಯದ ಒಳಿತಿಗೆ ನಮ್ಮ ಜಾಗೃತಿ ಎಂಬ ನೆಪದಲ್ಲಿ ಮುಗ್ಧ ಯುವಕರನ್ನು ಪ್ರಚೋದನಾಕಾರಿ ಮಾತಿ ನಿಂದ ದಾರಿ ತಪ್ಪಿಸುತ್ತಿರುವ ಅನೈಜ ಮಾತುಗಾರರ ಮಾತಿಗೆ ಕಿವಿಗೊಡದಿದ್ದರೆ ನಮ್ಮ ಸುಂದರ ಭಾರತ ಮಣ್ಣಿನಲ್ಲಿ ಕೋಮುವಾದಕ್ಕೆ ಧಾರ್ಮಿಕ ಗಲಭೆಗಳಿಗೆ ಶಾಶ್ವತವಾಗಿ ಇತಿಶ್ರೀಯನ್ನು ಹೇಳಬಹುದು.
ಸಹದ್ ಕರ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.