ವಿಟ್ಲ(www.Vknews.in): ವಿಟ್ಲ ಸಮೀಪದ ಕೊಡಂಗಾಯಿ ಮುಹ್ಯಿದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯು ಅಪರೂಪದ ನಡೆಗಳಿಂದ ಸುದ್ದಿಯಾಗಿದೆ. ಮದುವೆಯಂತಹ ಶುಭ-ಸಮಾರಂಭದಲ್ಲಿ ಅನಾಚಾರಗಳಲ್ಲಿ ಭಾಗಿಯಾಗುವ ಮನೆಗಳನ್ನೇ ಜಮಾಅತಿನಿಂದ ಹೊರಹಾಕುವ ಮೂಲಕ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
ಮದುವೆ ಎಂಬುವುದು ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿಯೂ ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿರುವುದು ಖೇದಕರವಾಗಿದೆ. ಪವಿತ್ರ ಇಸ್ಲಾಮಿನ ಸ್ವಚ್ಛ ಮತ್ತು ಸುಂದರ ಆಚಾರ ಹಾಗೂ ಆರಾಧನೆಗಳಲ್ಲಿ ಒಂದಾದ ವಿವಾಹವನ್ನು ವೈಭವೀಕರಿಸುವ ಚಿಂತನೆಯಲ್ಲಿ ಎಲ್ಲಾ ಕಾರ್ಯಗಳಲ್ಲಿಯೂ ಸಂಪೂರ್ಣವಾಗಿ ಇಸ್ಲಾಮಿಕ್ ವಿರುದ್ಧವಾಗಿರುವುದು ಅತ್ಯಂತ ಬೇಸರವನ್ನುಂಟು ಮಾಡುತ್ತಿದೆ.
ಮದುವೆಯಲ್ಲಿ ಅಗತ್ಯವಾದ ನಿಕಾಹ್ ಮಾತ್ರ ಸರಿಯಾದ ರೂಪದಲ್ಲಿ ನಡೆಯುತ್ತಿದೆಯೇ ಹೊರತು ಅದರ ಹಿಂದೆ ಮತ್ತು ಮುಂದೆ ನಡೆಯುವ ಎಲ್ಲದರಲ್ಲೂ ಅನಿಸ್ಲಾಮಿಕ್ ಕಾರ್ಯಗಳು ನುಸುಳಿದೆ ಎಂಬುವುದರಲ್ಲಿ ಸಂದೇಹವಿಲ್ಲ. ವಿವಾಹದಂದು ಪೋಲಾಗುತ್ತಿರುವ ಆಹಾರಗಳು, ಮದುಮಗಳನ್ನು ಕಾಣಲು ಹೋಗುವಾಗ ಮಿತ್ರರೊಂದಿಗೆ ತೆರಳಿ ಎಲ್ಲರೂ ಮುಕ್ತವಾಗಿ ಕಾಣುವುದು, ಸುಡು ಮದ್ದುಗಳ ಪ್ರದರ್ಶನ, ತಾಳ – ಮೇಳಗಳ ಹೆಸರುಗಳಲ್ಲಿ ನಡೆಯುವ ವಿವಿದ ಅನಾಚಾರಗಳು ಜೊತೆಗೆ ಮನೆಯವರಿಗೆ ಮಾತ್ರವಲ್ಲದೆ ಪರಿಸರ ವಾಸಿಗಳಿಗೂ ಅಸಹ್ಯವಾಗುವ ಶಬ್ದ- ಕೋಲಾಹಲಗಳು ಮದುವೆಯ ಉದ್ದೇಶವನ್ನೇ ನುಚ್ಚುನೂರು ಮಾಡಿಸಿದೆ. ಇದರಿಂದಾಗಿ ತಮ್ಮ ಮಕ್ಕಳಿಗೆ ಮದುವೆ ಮಾಡಿಕೊಡಲು ಬಡವರು ಹೆದುರುವ ಸ್ಥಿತಿಗೆ ತಲುಪಿದ್ದಾರೆ.
ಕೆಲವು ಕಡೆಗಳಲ್ಲಿ ಶ್ರೀಮಂತರ ಮನೆಯ ಮದುವೆಯನ್ನು ಕಂಡು ನಮ್ಮ ಮನೆಯ ಮಕ್ಕಳಿಗೆ ಬೇಸರವಾಗದಿರಲು ಬಡವರು ಕೂಡ ತಮ್ಮ ಶುಭ ಸಮಾರಂಭಗಳಿಗೆ ಅನಾಚಾರಗಳನ್ನು ಎಳೆದು ತರುತ್ತಿರುವುದು ಮತ್ತಷ್ಟು ಬೇಸರವನ್ನುಂಟು ಮಾಡುತ್ತಿದೆ. ವಧುವಿನ ಅಲಂಕಾರಕ್ಕೆ ಅಗತ್ಯವಾಗುವುದನ್ನು ಸಿದ್ಧಪಡಿಸಲು ಕೂಡಾ ಸ್ವಂತವಾಗಿ ಸಾಧ್ಯವಾಗದವರು ಬೇರೆಯವರಲ್ಲಿ ಕೇಳಿ, ಕಾಲು ಹಿಡಿದು ಹಣ ಮತ್ತು ಚಿನ್ನವನ್ನು ರೆಡಿ ಮಾಡಿಸುವುದರ ಮಧ್ಯೆಯೂ ಅನಾಚಾರಗಳಿಗೆ ಅವಕಾಶ ನೀಡುತ್ತಿರುವುದನ್ನು ಊರಿನ ಆಡಳಿತ ಸಮಿತಿಯು ಗಮನಿಸಬೇಕಾಗಿದೆ. ಸಾಲ ಶೂಲಗಳ ಮೊರೆ ಹೋಗಿ ಅಬ್ಬರದ ಪಾರ್ಟಿಗಳನ್ನು ಏರ್ಪಡಿಸಿ ಬಳಿಕ ಸಾಲಗಳನ್ನು ಸಂದಾಯ ಮಾಡಲು ಸಾಧ್ಯವಾಗದೆ ಕದ್ದುಮುಚ್ಚಿ ಬದುಕ ಬೇಕಾಗುವುದು ಪವಿತ್ರ ವಿವಾಹದಂತಹ ಸತ್ಕರ್ಮಗಳನ್ನು ಅನಾಚಾರಗಳಿಗೆ ಬಲಿ ಮಾಡಿರುವುದರ ಫಲದಿಂದಾಗಿದೆ ಎಂದು ಹೇಳದೇ ನಿರ್ವಾಹವಿಲ್ಲ.
ಆದುದರಿಂದ ಅನೇಕಾನೇಕ ಅನಾಚಾರಗಳಿಗೆ ಬಲಿಯಾಗುತ್ತಿರುವ ಮದುವೆಯಂತಹ ಪುಣ್ಯ ಸಮಾರಂಭಗಳನ್ನು ಸಂಪೂರ್ಣವಾಗಿ ಇಸ್ಲಾಮಿನ ಚೌಕಟ್ಟಿನಲ್ಲಿ ಮುಂದುವರಿಸಲು ಎಲ್ಲಾ ಊರಿನ ಜಮಾಅತ್ ಆಡಳಿತ ಸಮಿತಿಯು ನಿರ್ಣಯ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವಿಟ್ಲ ಸಮೀಪದ ಕೊಡಂಗಾಯಿ ಜಮಾಅತ್ ಸಮಿತಿ ಮಸೀದಿ ಅಧ್ಯಕ್ಷರಾದ ಎ ಎಂ ಮುಹಮ್ಮದ್ ಕುಂಞಿ, ಪ್ರಧಾನ ಕಾರ್ಯದರ್ಶಿ ಸಿ ಎಚ್ ಅಬ್ದುಲ್ ಖಾದರ್ ಸಹಿತ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಊರಿನವರನ್ನು ಪ್ರತ್ಯೇಕವಾಗಿ ಮುಕ್ತಕಂಠದಿಂದ ಅಭಿನಂದಿಸುತ್ತೇನೆ. ನಿರ್ದಾಕ್ಷಿಣ್ಯದ ತಮ್ಮ ಈ ನಿಲುವು ಎಲ್ಲಾ ಊರಿನ ಜಮಾಅತ್ ಸಮಿತಿಗೂ ಮಾದರಿಯಾಗಲಿ ಎಂದು ಹಾರೈಸುತ್ತೇನೆ.
ಬರಹ:ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.