ಬಂಟ್ವಾಳ, ಫೆ. 28, 2021 (ವಿಶ್ವಕನ್ನಡಿಗ ನ್ಯೂಸ್) : ಪೊಲೀಸ್ ಇಲಾಖೆಯನ್ನು ಜನರೊಂದಿಗೆ ಬೆರೆತು ಜನಸ್ನೇಹಿಯಾಗಿ ಸನ್ನಿವೇಶ ನಿರ್ಮಿಸಿದಾಗ ಸೌಹಾರ್ದ ಸಮಾಜ ಕಟ್ಟಲು ಕಷ್ಟವೇನಿಲ್ಲ ಎಂದು ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಅಧಿಕಾರಿ ಟಿ ಡಿ ನಾಗರಾಜ್ ಅಭಿಪ್ರಾಯಪಟ್ಟರು.
ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ನಡೆಯುತ್ತಿರುವ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 5ನೇ ಆವೃತ್ತಿಯ ಸನ್ ಪ್ಯೂರ್ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರೀಡಾಕೂಟದ ಶನಿವಾರ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬಂಟ್ವಾಳದ ಜನರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ್ದರ ಫಲವಾಗಿ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳ ಪದವಿ ಗೌರವ ನನ್ನ ಪಾಲಿಗೆ ಬಂದಿದೆ. ಈ ಗೌರವವನ್ನು ಸಂಪೂರ್ಣವಾಗಿ ಬಂಟ್ವಾಳದ ಜನತೆಗೆ ಅರ್ಪಿಸುತ್ತಿದ್ದೇನೆ. ಸೇವಾವಧಿಯ ಮುಂದಿನ ದಿನಗಳಲ್ಲೂ ಜನರ ಸಹಕಾರ ಪೂರ್ಣವಾಗಿ ಬೇಕಾಗಿದೆ ಎಂದು ಆಶಿಸಿದರು.
ಸಮಾಜದಲ್ಲಿ ನಡೆಯುತ್ತಿರುವ ಕ್ರೀಡಾ ಕಾರ್ಯಕ್ರಮಗಳು ಶಾಂತಿ-ಸೌಹಾರ್ದತೆಗೆ ಪೂರಕವಾಗುವುದರ ಜೊತೆಗೆ ಯುವಕರು ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು. ಯುವಕರು ಸಮಾಜಕ್ಕೆ ಮಾರಕವಾಗದೆ ಪೂರಕ ಕಾರ್ಯಕ್ರಮಗಳ ಮೂಲಕ ಸಮಾಜ ಹಾಗೂ ಮಾನವೀಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ಅಂಡರ್ ಆರ್ಮ್ ಕ್ರಿಕೆಟ್ನಲ್ಲಿ ಬಹಳಷ್ಟು ಪ್ರತಿಭಾವಂತ ಆಟಗಾರರನ್ನು ಕಾಣಬಹುದು. ಮಿಂಚಿನ ವೇಗದಲ್ಲಿ ಬರುವ ಚೆಂಡನ್ನು ಎದುರಿಸುವ ಮೂಲಕ ಅಪ್ರತಿಮವಾಗಿ ಆಡುವ ಯುವಕರು ಈ ಆಟವನ್ನು ಓವರ್ ಆರ್ಮ್ ಆಗಿ ಪರಿವರ್ತಿಸಿಕೊಂಡಲ್ಲಿ ನಿಮ್ಮ ಪ್ರತಿಭೆಯ ಮುಂದೆ ಯಾವ ಧೋನಿಯೂ, ಕೊಹ್ಲಿಯೂ ಮಂಕಾಗಬಹುದು ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ಸೋಲು-ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಆದರೆ ಅದುವೇ ಜೀವನದ ಸೋಲು-ಗೆಲುವಾಗಿರುವುದಿಲ್ಲ. ಕ್ರೀಡಾ ಸ್ಪೂರ್ತಿಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದಾಗ ಮನೋ ನೆಮ್ಮದಿಯ ಜೊತೆಗೆ ಸಾಮಾಜಿಕ ನೆಮ್ಮದಿಗೂ ಕಾರಣವಾಗುತ್ತದೆ. ಗ್ರಾಮೀಣ ಕ್ರೀಡಾಪಟುಗಳನ್ನು ಲೋಕಲ್ ಕ್ರೀಡೆಗಳ ಮೂಲಕ ಪ್ರೋತ್ಸಾಹಿಸಿ ಅವರನ್ನು ರಾಜ್ಯ, ರಾಷ್ಟ್ರ-ಅಂತರಾಷ್ಟ್ರ ಮಟ್ಟದಲ್ಲಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಮಾತನಾಡಿ, ಸ್ಥಳೀಯ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸುವ ಸ್ಥಳೀಯ ಲೀಗ್ ಮಾದರಿಯ ಕ್ರೀಡಾಕೂಟಗಳು ಅತ್ಯಂತ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾ ಪಂ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಯಾವುದೇ ಇಲಾಖಾಧಿಕಾರಿಗಳು ಜನರ ಮಧ್ಯೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಜನತೆಯ ಪ್ರೀತಿ ಸಂಪಾದಿಸಿದಾಗ ನಿವೃತ್ತಿ ಬಳಿಕವೂ ಜನರ ಪ್ರೀತಿ-ವಿಶ್ವಾಸಗಳು ನಿರಂತರವಾಗಿ ದೊರೆಯುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ನಡುವೆ ಯಾವುದೇ ಸಂಬಂಧ ಇಲ್ಲದಂತೆ ಮೇಲ್ನೋಟಕ್ಕೆ ಕಂಡು ಬಂದರೂ, ನಿಜಕ್ಕೂ ಈ ಎರಡು ಇಲಾಖೆಗಳ ಮಧ್ಯೆ ಅತ್ಯಂತ ನಿಕಟ ಸಂಪರ್ಕವಿದೆ. ಇದು ಕಳೆದ ಕೋವಿಡ್ ಸಂದರ್ಭ ಜನತೆಗೆ ಚೆನ್ನಾಗಿ ಅರಿವಿಗೆ ಬಂದಿರಬಹುದು. ಈ ನಿಟ್ಟಿನಲ್ಲಿ ಎರಡೂ ಇಲಾಖೆಗೆ ಸೇರಿದ ಅಧಿಕಾರಿ, ವ್ಯಕ್ತಿಗಳನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸಿ ಸನ್ಮಾನಿಸಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಸೂಕ್ತ ಎಂದು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಕೋವಿಡ್ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ವೈದ್ಯರಾದ ಡಾ ರಾಜೇಂದ್ರ ಪಡಿಯಾರ್ ಹಾಗೂ ಡಾ ಎಂ ಎಂ ಶರೀಫ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಂಘಟಕ, ಕಾರ್ಯಕ್ರಮ ಆಯೋಜಕ ಭೂಯಾ ಶರೀಫ್ ಅವರಿಗೆ ಅಝರುದ್ದೀನ್ ಯು ಅವರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಯೂರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ನಿರ್ದೇಶಕ ಸುದೇಶ್ ಕುಮಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಪಿ.ಎಸ್. ಅಕ್ಕರಂಗಡಿ, ತಾನಾಜೆ ಆರ್ ಜೆ ಗೋಲ್ಡ್, ಪುರಸಭಾ ಸಹಾಯಕ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ಪರ್ಲಿಯಾ, ಟೀಂ ಎಲಿಗೆಂಟ್ ಮ್ಯಾನೇಜರ್ ಇಜಾಝ್ ಮೇರಮಜಲು, ಉದ್ಯಮಿಗಳಾದ ಮುಹಮ್ಮದ್ ಹನೀಫ್ ಸಫಾ ಗೋಲ್ಡ್, ಅಬ್ದುಲ್ ರಹಿಮಾನ್ ಮೆಲ್ಕಾರ್, ಅಬ್ದುಲ್ ಹಕೀಂ ಉಲ್ಲಾಸ್, ರಫೀಕ್ ಎಂ.ಆರ್. ಬೋಗೋಡಿ, ಇಸ್ಮಾಯಿಲ್ ಬಾವಾಜಿ, ವಂದಿತಾ ಕುಡ್ವ, ರಮೀಝ್ ಲಾಮೋರ್, ಫಾರೂಕ್ ಎಫ್.ಆರ್.ಕೆ., ಭುವನೇಶ್ ಬಂಗ್ಲೆಗುಡ್ಡೆ, ರಾಜು ಸಾಯಿ ಆಯಿಲ್ ಸೆಂಟರ್, ಮೊದಲಾದವರು ಭಾಗವಹಿಸಿದ್ದರು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಭೂಯಾ ಸ್ವಾಗತಿಸಿ, ಅಝ್ಮಲ್ ಯುಎಫ್ಸಿ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸನ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೂಟದಲ್ಲಿ ರಿಯಾಝ್ ಹಾಗೂ ಶರೀಕ್ ಮಾಲಕತ್ವದ ಪ್ಲೇ ಬಾಯ್ಸ್, ಹಕೀಂ ಹಾಗೂ ಅಶ್ರಫ್ ಮಾಲಕತ್ವದ ಬೀಯಿಂಗ್ ಭೂಯಾ, ರಿಝ್ವಾನ್ ಪಿಜೆ. ಹಾಗೂ ಅಬ್ದುಲ್ ರಹಿಮಾನ್ ಮಾಲಕತ್ವದ ಪಿ ಜೆ ಸ್ಟಾರ್, ಖಲಂದರ್ ರಿಯಾಝ್ ಮಾಲಕತ್ವದ ಎ 2 ಝಡ್, ಅಬ್ದುಲ್ ರಹಿಮಾನ್ ಮಾಲಕತ್ವದ ಅಯಾನ್ ವಾರಿಯರ್ಸ್ ಹಾಗೂ ತನ್ವೀರ್ ಮಾಲಕತ್ವದ ಝಮೀನ್ ಸ್ಟ್ರೈಕರ್ಸ್ ಈ 6 ತಂಡಗಳು ಭಾಗವಹಿಸುತ್ತಿದ್ದು, ಎಪಿಎಲ್ ಸೀಸನ್-5 ಟ್ರೋಫಿಗಾಗಿ ಸೆಣಸಾಡುತ್ತಿದೆ. ಇಂದು (ಫೆ. 28) ರಾತ್ರಿ ಹೊನಲು ಬೆಳಕಿನಲ್ಲಿ ಪಂದ್ಯಾಟ ಮುಂದುವರಿಯುತ್ತಿದ್ದು, ಬಳಿಕ ಅಂತಿಮ ಹಂತದ ಪಂದ್ಯಾಟಗಳು ಮಾ 14 ರಂದು ಭಾನುವಾರ ಹಗಲು ವೇಳೆ ನಡೆಯಲಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಅಯಾನ್ ವಾರಿಯರ್ಸ್ ಹಾಗೂ ಝಮೀನ್ ಸ್ಟ್ರೈಕರ್ಸ್ ತಲಾ ಎರಡು ಪಂದ್ಯಗಳನ್ನು ಆಡಿದ್ದು, ಉಳಿದಂತೆ ಬಾಕಿ ತಂಡಗಳು ತಲಾ ಒಂದು ಪಂದ್ಯಗಳನ್ನು ಮಾತ್ರ ಆಡಿವೆ. ಈ ಪೈಕಿ ಎ ಟು ಝಡ್, ಬೀಯಿಂಗ್ ಭೂಯಾ ಹಾಗೂ ಅಯಾನ್ ವಾರಿಯರ್ಸ್ ತಂಡಗಳು ತಲಾ 2 ಅಂಕಗಳನ್ನು ಪಡೆದುಕೊಂಡಿದ್ದು,
ಪ್ಲೇ ಬಾಯ್ಸ್ ಹಾಗೂ ಝಮೀನ್ ಸ್ಟ್ರೈಕರ್ಸ್ ತಲಾ 1 ಅಂಕಗಳನ್ನು ಸಂಪಾದಿಸಿದೆ. ಪಿ.ಜೆ. ಸ್ಟಾರ್ ತಂಡ ಇನ್ನೂ ಅಂಕಪಟ್ಟಿಯಲ್ಲಿ ಖಾತೆ ತೆರೆಯಬೇಕಷ್ಟೆ.
ಕ್ರೀಡಾಕೂಟದ ಉದ್ಘಾಟನೆಗೆ ಪೂರಕವಾಗಿ ಆರಂಭದಲ್ಲಿ ಸ್ಥಳೀಯ ಹಿರಿಯ ಆಟಗಾರರನ್ನೊಳಗೊಂಡ ಜೈ ಭಾರತ್ ನಂದಾವರ ಹಾಗೂ ಕೈ ಕರ್ನಾಟಕ ಪಾಣೆಮಂಗಳೂರು ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆದಿದ್ದು, ಜೈ ಭಾರತ್ ನಂದಾವರ ಜಯಗಳಿಸಿತು.
ಹಸೈನಾರ್ ಪಿ.ಎಂ., ಸಯ್ಯದ್ ಬೋಗೋಡಿ, ಇರ್ಶಾನ್ ಪಾಣೆಮಂಗಳೂರು ವೀಕ್ಷಕ ವಿವರಣೆ ನೀಡಿದರು. ಪ್ರಶಾಂತ್ ಬಂಟ್ವಾಳ, ಶ್ರವಣ್ ಬಂಟ್ವಾಳ, ಶಾಲಿ ಮೆಲ್ಕಾರ್ ತೀರ್ಪುಗಾರರಾಗಿ ಸಹಕರಿಸಿದರು. ಸಲಾಲ್ ಗೂಡಿನಬಳಿ ಹಾಗೂ ಇರ್ಫಾನ್ ಅಕ್ಕರಂಗಡಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.
ಪಂದ್ಯಾ ಕೂಟದ ನೇರಪ್ರಸಾರ ಅಭಿಮತ ಟಿವಿಯಲ್ಲಿ ನೇರಪ್ರಸಾರಗೊಂಡಿದ್ದು, ವರ್ಷನ್ ವಿಟ್ಲ ಹಾಗೂ ನಿಶಾನ್ ಸುರತ್ಕಲ್ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಿದರೆ, ಹೇಮಂತ್ ಹಾಗೂ ಯತೀಶ್ ಕ್ಯಾಮೆರಾ ಕೈಚಳಕ ನಿರ್ವಹಿಸಿದರು. ನೌಫಲ್ ಲೈಟಿಂಗ್ಸ್ ಹಾಗೂ ಸೌಂಡ್ಸ್ ತಂಡದವರು ಹೊನಲು ಬೆಳಕಿನ ಹಾಗೂ ಧ್ವನಿವರ್ಧಕ ವ್ಯವಸ್ಥೆಗೊಳಿಸಿದ್ದರು.
ಮೊದಲ ದಿನದ ಕಾರ್ಯಕ್ರಮದ ನೇರಪ್ರಸಾರ ಲಿಂಕ್ ಗಾಗಿ ಕ್ಲಿಕ್ ಮಾಡಿ https://youtu.be/iNhwieiG08s
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.