(www.vknews.com) : ಕಳೆದ 30 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಎಸಿ ಟೆಕ್ನೀಷಿಯನ್ ಆಗಿ ದುಡಿಯುತ್ತಿದ್ದು, ಅಲ್ಲಿಯವರನ್ನು ತಂಪಾಗಿ ಇಡುತ್ತಿದ್ದ ಕುಂದಾಪುರದ ಮೇಲ್ ಖಾರ್ವಿಕೇರಿ ನಿವಾಸಿ ಚಂದ್ರಶೇಖರ್ ಪಾಂಡುರಂಗ ಸಾರಂಗ್ ರವರ ಬದುಕಿನಲ್ಲಿ ಬಿಸಿ ಬಿರುಗಾಳಿಯ ಹೊಡೆತ. ಕಳೆದ 3 ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿ ರಿಯಾದ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಘಾತದ ವಿಷಯವನ್ನು ಅವರ ಭಾರತೀಯ ಸಹೋದ್ಯೋಗಿಗಳು ಕುಟುಂಬದವರಿಗೆ ವಿಷಯ ತಿಳಿಸಿದ್ದು, ನಂತರ ಪಾರ್ಶ್ವವಾಯುವಿನಿಂದ ಮಾತನಾಡಲಿಕ್ಕೂ ಆಗದೆ, ಮೊಬೈಲ್ ಕೂಡಾ ಆಸ್ಪತ್ರೆಯ ಸಿಬ್ಬಂದಿ ಭದ್ರವಾಗಿ ಎತ್ತಿಟ್ಟಿದ್ದರಿಂದ ಅವರು ಸಂಪರ್ಕಕ್ಕೆ ಸಿಗದೆ, ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬ ವಿಷಯವೂ ತಿಳಿಯದೆ, ಕೊರೋನಾ ಮಹಾಮಾರಿಯಿಂದಾಗಿ ಆಸ್ಪತ್ರೆಗೆ ಸಂದರ್ಶಕರನ್ನು ಬಿಡುತ್ತಿರಲ್ಲಿಲ್ಲ ಮತ್ತು ಅವರಿಗೆ ಕೊರೋನಾ ಸೋಂಕು ಉಂಟಾದರೇನು ಗತಿ ಎಂದು ಮನೆಯವರು ಆತಂಕಗೊಂಡು ಅವರ ಮಗನು ಮೂಲತ: ಕೋಟೇಶ್ವರದವರಾದ ಪ್ರಸ್ತುತ ಕುವೈತ್ ನಲ್ಲಿರುವ ಸುರೇಶ್ ರಾವ್ ನೇರಂಬಳ್ಳಿಯವರನ್ನು ಸಂಪರ್ಕಿಸಿ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆ ಸಹಾಯಕ್ಕಾಗಿ ಕೇಳಿಕೊಂಡಾಗ, ಸುರೇಶ್ ರಾವ್ ರವರು ಅವರ ಬಗ್ಗೆ, ಕಂಪೆನಿ ಮತ್ತು ಮಾಲೀಕರ ಬಗ್ಗೆ ಎಲ್ಲಾ ವಿವರಗಳನ್ನೆಲ್ಲಾ ಪಡೆದುಕೊಂಡು, ಮೊತ್ತಮೊದಲು ಅವರ ಪರಿಸ್ಥಿತಿಯ ಬಗ್ಗೆ ತಿಳಿಯಲಿಕೋಸ್ಕರ ಸೌದಿಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ನರ್ಸ್ ಬಬ್ಬರ ಸಹಾಯದಿಂದ ಅವರದೆ ಮೊಬೈಲ್ ನಿಂದ ವಿಡಿಯೋ ಕಾಲ್ ಮೂಲಕ ಕುಟುಂಬದವರ ಸಂಪರ್ಕ ಸಾಧಿಸಿದರು. ದುರಾದೃಷ್ಟವೆಂದರೆ, ರೋಗಿಯು ಪಾರ್ಶ್ವವಾಯು ಪೀಡಿತರಾದ್ದರಿಂದ ಮಾತನಾಡಲು ಆಗದೆ, ಬರಿಯ ಕೈ, ತಲೆ ಅಲುಗಾಡಿಸುವುದರಿಂದ ಮನೆಯವರೊಂದಿಗೆ ಸಂವಹನ ನೆಡೆಸಿ ಸಮಾಧಾನ ಪಡಿಸಬೇಕಾಯಿತು.
ಸುರೇಶ್ ರಾವ್ ರವರು ಕುವೈತ್ ನಿಂದ ತಾವು ಪ್ರತಿನಿಧಿಸುತ್ತಿದ್ದ ತಮ್ಮ ಗಲ್ಫ್ ರಾಷ್ಟ್ರಗಳ ಸಂಘವಾದ ಗಲ್ಫ್ ಕನ್ನಡಿಗರ ಒಕ್ಕೂಟದ ವತಿಯಿಂದ ಪ್ರತಿನಿಧಿಗಳಾದ ಅಬುಧಾಬಿಯ ಸರ್ವೋತ್ತಮ ಶೆಟ್ಟಿ ಹಾಗೂ ದುಬೈನ ಪ್ರವೀಣ್ ಕುಮಾರ್ ಶೆಟ್ಟಿ, ದೀಪಕ್ ಸೋಮಶೇಖರ್ ರವರ ಜೊತೆ ಸಮಾಲೋಚಿಸಿ, ಸಂಘದ ಸೌದಿ ಅರೇಬಿಯಾದ ಪ್ರತಿನಿಧಿಗಳಾದ ಸೌದಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಂಗೀಕೃತ ಸಮಾಜ ಸೇವಕರೂ ಆದ ಮಂಗಳೂರಿನ ಗಣೇಶಪುರ ಪ್ರಸನ್ನ ರಾವ್ ಮತ್ತು ಸೌದಿಯಲ್ಲಿ ಕೆ.ಎಮ್.ಸಿ. ಆಸ್ಪತ್ರೆಯನ್ನು ನೆಡೆಸುತ್ತಿರುವ ಆರ್ಡಿ ಸಂತೋಷ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ಡಾ| ವಾಣಿಶ್ರೀ ಶೆಟ್ಟಿಯವರನ್ನು ಸಂಪರ್ಕಿಸಿದರು.
ಹಾಗೆಯೆ ಭಟ್ಕಳದಲ್ಲಿರುವ ಡಾ|ಜಹೀರ್ ರವರ ಮೂಲಕ ಸೌದಿಯಲ್ಲಿರುವ ಫೌಜನ್ ಬಿಡ್ಚೋಲ್ ಮುರ್ಡೇಶ್ವರ ರವರನ್ನು ಸಂಪರ್ಕಿಸಿ ಸಹಾಯ ಪಡೆದು ಆಸ್ಪತ್ರೆಗೆ ಭೇಟಿ ಮಾಡಿಸಲಾಗಿ ಸಾರಂಗರವರು ತನ್ನ ನಡುಗುವ ಕೈಯಿಂದ ಇವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ನನ್ನನ್ನು ಊರಿಗೆ ಕಳುಹಿಸುತ್ತೀರಾ ಎಂದು ಸಂಜ್ಞೆಯಿಂದಲೆ ದೈನ್ಯರಾಗಿ ಕೇಳಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು. ಈ ಮಧ್ಯೆ ಅವರ ಸೌದಿಯ ಮಾಲೀಕರಾದ ಅಬ್ದುಲ್ಲಾರವರನ್ನು ಸಂಪರ್ಕಿಸಿ ವಿನಂತಿಸಿಕೊಳ್ಳುವಾಗ, ಸೌದಿಯ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಚಿನ್ನದಂತಹ ವ್ಯಕ್ತಿತ್ವದ ಅಬ್ದುಲ್ಲಾರವರು, ತಾವೇ ಸ್ವತಹ: ಎರೆಡೆರೆಡು ಬಾರಿ ಟಿಕೇಟ್ ಮಾಡಿಸಿದ್ದರೂ, ಭಾರತಕ್ಕೆ ಕಳಿಸಬೇಕೆಂದಿದ್ದರೂ ಭಾರತೀಯ ರಾಯಭಾರಿ ಕಚೇರಿಯಿಂದ ಕೆಲವು ಕಾಗದ ಪತ್ರಗಳು ಬೇಕಿದ್ದು ಮತ್ತು ರೋಗಿಯು ಮಲಗಿರುವ ಸ್ಥಿತಿಯಲ್ಲೆ ಇದ್ದು, ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಸ್ಟ್ರೆಚರ್ ವ್ಯವಸ್ಥೆಯಿರುವ ದೊಡ್ಡ ವಿಮಾನಗಳ ಹಾರಾಟವಿರದೆ, ಈಗಿರುವ ಚಾರ್ಟಡ್ ವಿಮಾನಗಳು, ವಂದೇ ಭಾರತ್ ಮಿಷನ್ ಅಡಿಯಲ್ಲಿರುವ ವಿಮಾನಗಳು ಚಿಕ್ಕದಾಗಿದ್ದು ಸ್ಟ್ರೆಚರ್ ನ ವ್ಯವಸ್ಥೆ ಇಲ್ಲದೆ ಎರೆಡೆರೆಡು ಬಾರಿ ಟಿಕೇಟ್ ಮಾಡಿಸಿ ರದ್ದಾಗಿರುವ ಬಗ್ಗೆ ತಿಳಿಸಿ ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸಿದರು. ಪ್ರಸನ್ನ ರಾವ್ ರವರ ಮೂಲಕ ರಾಯಭಾರಿ ಕಚೇರಿಯಿಂದ ಕಾಗದ ಪತ್ರಗಳನ್ನು ಮಾಡಿಸಿಕೊಂಡು, ಸಾರಂಗರವರ 2 ತಿಂಗಳ ಹಿಂದೆಯೆ ಅವಧಿ ಮೀರಿದ ಪಾಸ್ಫೋರ್ಟ್ ಅನ್ನು ಉರ್ಜಿತಗೊಳಿಸಿಕೊಂಡು, ಸಾರಂಗರವರು ಈಗ ಸ್ವಲ್ಪ ಮಟ್ಟಿಗೆ ಎದ್ದು ಕುಳಿತುಕೊಳ್ಳಲು ಪ್ರಾರಂಭ ಮಾಡಿದ್ದರಿಂದ ಮೂರನೆಯ ಬಾರಿಗೆ ಮಾರ್ಚ್ 16ರ ದಮಾಮ್-ಮಂಗಳೂರು ಟಿಕೇಟ್ ಮಾಡಲಾಯಿತಾದರೂ ಆಸ್ಪತ್ರೆಯವರು ರೋಗಿಯ ಜೊತೆ ಸಹ ಪ್ರಯಾಣಿಕರಾಗಿ ಒರ್ವ ದಾದಿ ಅಥವಾ ಡಾಕ್ಟರ್ ರವರ ವ್ಯವಸ್ಥೆ ಮಾಡುವುದಾದರೆ ಮಾತ್ರ ಅನುಮತಿ ಪತ್ರ ನೀಡಿ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರಿಂದ ಮತ್ತೊಮ್ಮೆ ಪ್ರಯಾಣಕ್ಕೆ ಅಡ್ಡಿಯಾಗಿ ಕಾರ್ಯಾಚರಣೆಯಲ್ಲಿ ಹಿನ್ನಡೆ ಉಂಟಾಯಿತು.
ಮಾಲೀಕ ಅಬ್ದುಲ್ಲಾರವರು ಕೂಡಾ ಇದು ರಿಯಾದ್ ನಿಂದ ಮುಂಬೈಗೆ ಪ್ರಯಾಣವಲ್ಲ. ನೀವೀಗ ಮಾಡಿಸಿದ್ದು ದಮಾಮ್–ಮಂಗಳೂರು ಟಿಕೇಟ್, ರಿಯಾದ್ ಆಸ್ಪತ್ರೆಯಿಂದ 400 ಕಿಲೋ ಮೀಟರ್ ದೂರವಿರುವ ದಮಾಮ್ ವಿಮಾನ ನಿಲ್ದಾಣಕ್ಕೆ ರಸ್ತೆ ಮಾರ್ಗವಾಗಿ ವಾಹನದಲ್ಲಿ ಕರೆದುಕೊಂಡು ಹೋಗುವ ಅಪಾಯವನ್ನು ತಪ್ಪಿಸಬಹುದಲ್ಲಾ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು. ಹೀಗೆ ಅವರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆಯ ಹಲವಾರು ಪ್ರಯತ್ನಗಳು ವಿಫಲವಾಗಿ ಕಳೆದ 15 ದಿನಗಳಿಂದ ಛಲಬಿಡದೆ ಪ್ರಯತ್ನಿಸಿ, ಸಹ ಪ್ರಯಾಣಿಕರಾಗಿ ಡಾ।ಶೈಲೇಂದ್ರನಾಥ್ ಬೇಕಲ್ ರನ್ನು ವಿನಂತಿಸಿಕೊಂಡು, ಮಾಲೀಕ ಅಬ್ದುಲ್ಲಾರವರಲ್ಲಿ ರಿಯಾದ್ ನಿಂದ ಟಿಕೇಟ್ ಮಾಡಿದರೆ ಮುಂಬೈಗೆ ಮಾತ್ರ ವಿಮಾನವಿರುವುದು. ಮುಂಬೈನಿಂದ ಮಂಗಳೂರಿಗೆ ಇರುವ ದೂರ, ಮುಂಬೈನಲ್ಲಿ ಕೊರೋನಾ ಹಾವಳಿ, ಅಂತರಾಜ್ಯವಾದ್ದರಿಂದ ವೈದ್ಯಕೀಯ ತಪಾಸಣೆ, ಅನುಮತಿ ಪತ್ರ, ಕುಟುಂಬದವರಿಗೆ ಮುಂಬೈವರೆಗೆ ಬರಲು ಇರುವ ಅಡ್ಡಿ-ಆತಂಕಗಳನ್ನೆಲ್ಲಾ ವಿವರಿಸಿ, ದಮಾಮ್-ಮಂಗಳೂರು ಪ್ರಯಾಣ ಸುಲಭ ಸಾಧ್ಯ ಮತ್ತು ಡಾಕ್ಟರ್ ಒಬ್ಬರಲ್ಲಿ ವಿನಂತಿಸಿಕೊಂಡಿದ್ದೇವೆ ಎಂದು ಸಮಾಧಾನ ಪಡಿಸಿ, ನಾಲ್ಕನೆಯ ಬಾರಿಗೆ, ಮಾರ್ಚ್ 24ರ ದಮಾಮ್-ಮಂಗಳೂರು ವಿಮಾನದ ಟಿಕೇಟ್ ಮಾಡಿಸಿ, ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ದಮಾಮ್ ಗೆ ಕರೆತರಲಾಯಿತು.
ಇನ್ನೊಂದು ಅಡ್ಡಿ! ಮತ್ತೊಂದು ವಾಹನದಲ್ಲಿ ಹಿಂಬಾಲಿಸುತ್ತಿರುವ ಪ್ರಸನ್ನ ರಾವ್ ರವರು ಸಾರಂಗರವರ ಬ್ಯಾಗ್ ಗಳನ್ನು ಕೊಟ್ಟ ಅವರ ರೂಂ ಮೇಟ್ ಹೇಳಿದ ಮಾತಿನಂತೆ ಪಾಸ್ಫೋರ್ಟ್ ಬ್ಯಾಗಿನಲ್ಲಿದೆ ಎಂದು ನಂಬಿಕೊಂಡು ಬಂದರೆ, ಪಾಸ್ಫೋರ್ಟ್ ರೂಂ ನಲ್ಲೆ ಉಳಿದಿದ್ದು ಅರ್ಧದಾರಿಯಿಂದ ಹಿಂತಿರುಗಿ ಹೋಗಿ ತರಬೇಕಾದ ಪ್ರಸಂಗವೂ ನೆಡೆಯಿತು. ಇಷ್ಟೆಲ್ಲಾ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಂಡು ಬಂದರೆ ದಮಾಮ್ ನಲ್ಲಿ ಇವರು ಪ್ರಯಾಣಿಸುವ ಎರ್ ಇಂಡಿಯಾ ಎಕ್ಸ್ಪ್ರೆಸ್ ಸಿಬ್ಬಂದಿಗಳಿಂದ ಇವರಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂಬ ಕಿರಿಕಿರಿ. ಡಾ|ಶೈಲೇಂದ್ರನಾಥ್ ಬೇಕಲ್ ರವರು ಡಾಕ್ಟರ್ ಎಂದು ತನ್ನ ಪರಿಚಯ ಹೇಳಿಕೊಂಡು, ಅವರ ಸಹಾಯಕ್ಕೋಸ್ಕರ ಸಹ ಪ್ರಯಾಣಿಕನಾಗಿ ಬಂದಿದ್ದೇನೆ, ಅವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆಂದು ಹೇಳಿದ ನಂತರ ಅನುಮತಿ ದೊರೆಯಿತು.
ಕಾರ್ಯಾಚರಣೆಯ ಅಂಗವಾಗಿ ಅವರು ಬಂದಿಳಿದ ನಂತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತೊಂದರೆ, ಅಡಚಣೆಯಿಲ್ಲದೆ ಶೀಘ್ರವಾಗಿ ಹೊರಬರಲು ಸುರೇಶ್ ರಾವ್ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರು-ಸಂಸದರಿಗೆ ಪೋನ್ ಮೂಲಕ ಹಾಗೂ ಪ್ರಧಾನ ಮಂತ್ರಿಯವರಿಗೆ ಕೂಡಾ ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದರು. ಸಾರಂಗರವರ ಕ್ಷೇಮವಾಗಿ ತಲುಪುವಿಕೆಗೋಸ್ಕರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಲಾಗಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಗಲ್ಫ್ ಕನ್ನಡಿಗರ ಒಕ್ಕೂಟದ ವತಿಯಿಂದ ತಮ್ಮ ಗ. ಕ. ಒಕ್ಕೂಟದ ದುಬೈ ಪ್ರತಿನಿಧಿಯಾದ ಸಾಧನ್ ದಾಸ್ ಶಿರೂರುರವರು ಅಂಬ್ಯುಲೆನ್ಸ್ ನ್ನು ಕೂಡಾ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಕಾದಿರಿಸುವ ವ್ಯವಸ್ಥೆ ಮಾಡಿಸಿದ್ದು, ಕೊನೆಗೂ ಸಾರಂಗ್ ರವರು ದಮಾಮ್ ನಿಂದ ಸುಖಕರವಾಗಿ ಪ್ರಯಾಣಿಸಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಚ್ 25ರ ಬೆಳಗಿನ ಜಾವ 2:30 ಕ್ಕೆ ಕ್ಷೇಮವಾಗಿ ತಲುಪಿ, ಅಲ್ಲಿಂದ ಆಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸಿ ಪ್ರಾಥಮಿಕ ತಪಾಸಣೆಯನ್ನು ಮಂಗಳೂರಿನ ಎ. ಜೆ. ಆಸ್ಪತ್ರೆಯಲ್ಲಿ ಮುಗಿಸಿಕೊಂಡು ಸಂಜೆ 4:00 ಕ್ಕೆ ಮನೆ ತಲುಪಿ ಕುಟುಂಬದವರನ್ನು ಕೂಡಿಕೊಂಡಿದ್ದಾರೆ.
ಕೊನೆಗೂ ಫಲಪ್ರದವಾದ ಈ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಕುವೈತ್ ನಿಂದ ಸುರೇಶ್ ರಾವ್ ನೇರಂಬಳ್ಳಿಯವರು ಇದು ನಮ್ಮೆಲ್ಲರ ಅಳಿಲು ಸೇವೆ, ನಿಮ್ಮೆಲ್ಲರ ಪ್ರಾರ್ಥನೆ, ಆ ಭಗವಂತನ ಅನುಗ್ರಹ ಅವರನ್ನು ಕಾಪಾಡಿದೆ. ಈ ಕಾರ್ಯದಲ್ಲಿ ಭಾಗಿಯಾದ ಗಲ್ಫ್ ಕನ್ನಡಿಗರ ಒಕ್ಕೂಟದ ಎಲ್ಲಾ ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳು, ಸಲಹೆ, ಸಹಕಾರ ನೀಡಿದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ದೀಪಕ್ ಸೋಮಶೇಖರ್ ದುಬೈ ಹಾಗೂ ಮತ್ತಿತರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾದವರು, ಸೌದಿ ಅರೇಬಿಯಾದ ರಾಜಾಡಳಿತ, ಸೌದಿಯಲ್ಲಿ ಅವರ ಮಾಲೀಕರಾದ ಅಬ್ದುಲ್ಲಾರವರು, ಸಹೋದ್ಯೋಗಿಗಳು, ರಿಯಾದ್ ನ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಸೌದಿಯ ಭಾರತೀಯ ರಾಯಭಾರಿ ಮತ್ತು ರಾಯಭಾರಿ ಕಛೇರಿ ಸಿಬ್ಬಂದಿ ಗಳು, ಸೌದಿಯಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಗಳು, ಸೌದಿ ಗಲ್ಫ್ ಕನ್ನಡಿಗರ ಒಕ್ಕೂಟದ ಸದಸ್ಯರಾದ ಆರ್ಡಿ ಸಂತೋಷ್ ಶೆಟ್ಟಿ, ಡಾ।ವಾಣಿಶ್ರೀ ಎಸ್. ಶೆಟ್ಟಿ, ಗಣೇಶಪುರ ಪ್ರಸನ್ನ ರಾವ್, ಮಂಗಳೂರು ಇವರುಗಳ ಜೊತೆಯಲ್ಲಿ ಸೌದಿಯಲ್ಲಿರುವ ಫೌಜನ್ ಬಿಡ್ಚೋಲ್ ಮುರ್ಡೇಶ್ವರ, ಡಾ। ವಾಸೀಮ್, ಡಾ। ಉದಯ್ ನಾಯಕ್, ಡಾ। ಜಹೀರ್ ಬೆಂಗಳೂರು, ಡಾ। ಶೈಲೇಂದ್ರನಾಥ್ ಬೇಕಲ್, ಟೀಮ್ ಹೆಲ್ತ್ಕೇರ್ ಪೊಲಿಕ್ಲಿನಿಕ್ ಹಾಗೂ ಭಟ್ಕಳದಲ್ಲಿರುವ ಡಾ। ಜಹೀರ್ ರವರು, ಕುಂದಾಪುರ-ಮಂಗಳೂರು-ಕುಂದಾಪುರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ ನಮ್ಮ ಗ.ಕ.ಒಕ್ಕೂಟದ ದುಬೈ ಸದಸ್ಯರಾದ ಸಾಧನ್ ದಾಸ್ ಶಿರೂರು ಹಾಗೂ ಪ್ರಾರ್ಥಿಸಿದ ತಮಗೆಲ್ಲರಿಗೂ ಕೃತಜ್ಞತೆಗಳು ಹಾಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ
ಕಳೆದ 20 ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿರುವ ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ ಇವರು ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಾಜ ಸೇವಕರು, ಹವ್ಯಾಸಿ ಪತ್ರಕರ್ತರು ಆಗಿದ್ದು, ವಿಶ್ವಕನ್ನಡಿಗ ನ್ಯೂಸ್ ನ ಸಹಿತ ಹಲವಾರು ಮಾಧ್ಯಮಗಳಿಗೆ ಕುವೈತ್ ವರದಿಗಾರರು ಮತ್ತು ಭಾಷಾಂತರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲು ವಿ.ಕ. ನ್ಯೂಸ್ ನ ಸಂಪಾದಕ ಮಂಡಳಿಗೆ ಹೆಮ್ಮೆ. ಶ್ರೀಯುತರು ಹೊರನಾಡು ಕನ್ನಡಿಗ ಹಾಗೂ ಸಮಾಜ ಸೇವೆ ವಿಭಾಗ ಗಳಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.