ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ದೇಶಕ್ಕೆ ದೇಶವೇ ಕೊರೋನದಿಂದ ಕಂಗಾಲಾಗಿದೆ. ರಾಷ್ಟ್ರದ ಪ್ರಮುಖ ಪಟ್ಟಣಗಳಲ್ಲಿ ಶವಗಳು ರಾಶಿ ಬಿದ್ದಿವೆ. ಆಕ್ಸಿಜನ್ಗಾಗಿ, ಆಸ್ಪತ್ರೆಯ ಬೆಡ್ಡಿಗಾಗಿ, ಐಸಿಯುಗಾಗಿ, ತಮ್ಮವರ ಶುಶ್ರೂಷೆಗಾಗಿ ಜನರು ಬೀದಿ ಬೀದಿಗಳಲ್ಲಿ ಒದ್ದಾಡುತ್ತಿದ್ದಾರೆ. ಮೊದಲೇ ಆರ್ಥಿಕವಾಗಿ ಸೊರಗಿ ಕುಗ್ಗಿ ಜಗ್ಗಿ ತಗ್ಗಿ ಹೋಗಿರುವ ನಮ್ಮ ದೇಶಕ್ಕೆ ನೆರವಿನ ಹಸ್ತ ಚಾಚಲು ಜಾತಿ ಧರ್ಮ ನೋಡದೆ ಹಲವು ರಾಷ್ಟ್ರಗಳು ಓಡೋಡಿ ಬರುತ್ತಿವೆ.
ಇತಿಹಾಸದಲ್ಲಿ ಹಿಂದೆಂದೂ ಕಂಡೂ ಕೇಳರಿಯದ ಮಹಾ ದುರಂತಕ್ಕೆ ದೇಶ ಸಾಕ್ಷಿಯಾಗಿದೆ. ಇದರಿಂದ ಬಚಾವಾಗಲು ಜನರು ಧರ್ಮ ಜಾತಿ ಮರೆತು ಪಡಬಾರದ ಪಾಡು ಪಡುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರೊಬ್ಬರು ಬೆಡ್ ಹಂಚಿಕೆ ಹಗರಣದ ಬಗ್ಗೆ ಕೆಲವರನ್ನು ತರಾಟೆಗೆ ತೆಗೆದುಕೊಳ್ಳುವ ನೆಪದಲ್ಲಿ ಹದಿನೇಳು ಮಂದಿ ಮುಸ್ಲಿಮರ ಹೆಸರನ್ನು ಮಾತ್ರ ಜೋರಾಗಿ ಹೇಳಿ ತನ್ನವರಿಂದ ವೀಡಿಯೋ ಮಾಡಿಸಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹರಸಾಹಸ ಪಟ್ಟಿರುವುದು ಮಾತ್ರ ಖಂಡನೀಯ.
ಒಂದೆಡೆಯಲ್ಲಿ ಜಗತ್ತಿನ ವಿವಿಧ ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ಆಕ್ಸಿಜನ್ಹೊತ್ತ ಟ್ಯಾಂಕರ್ಗಳನ್ನು ಕಳಿಸಿಕೊಡುತ್ತಿದೆ, ದೇಶಾದ್ಯಂತ ಇರುವ ಮುಸ್ಲಿಮರು ಧರ್ಮ ಜಾತಿ ಪಕ್ಷ ಪಂಥ ನೋಡದೆ ಕುಟುಂಬಿಕರು ಹೆದರಿ ಬಿಟ್ಟು ಹೋದ ಶವಗಳನ್ನು ಸಂಸ್ಕಾರ ಮಾಡುತ್ತಿದ್ದಾರೆ, ಅನ್ನವಿಲ್ಲದೆ ಕಂಗಾಲಾದ ಬಡವರಿಗೆ ಆಹಾರ ನೀಡಿ ಸಂತೈಸುತ್ತಿದ್ದಾರೆ. ಆದರೆ ಜಾತಿ ಧರ್ಮಗಳ ಹೆಸರಲ್ಲಿ, ಸತ್ತ ಶವಗಳ ಹೆಸರಲ್ಲಿ ರಾಜಕೀಯ ಮಾಡಿ ಅಧಿಕಾರ ಪಡೆದು ಐಶಾರಾಮಿ ಜೀವನ ನಡೆಸಿ ಮಾತ್ರ ಗೊತ್ತಿರುವ ಇಂಥಹಾ ಧರ್ಮಾಂಧ ಜನಪ್ರತಿನಿಧಿಗಳು ಗೋಗರೆಯುವುದು ಕಾಣುವಾಗ ನಮಗೇ ನಾಚಿಕೆಯಾಗುತ್ತಿದೆ.
ಇಲ್ಲಿ ಆಕ್ಸಿಜನ್, ಬೆಡ್, ಐಸಿಯು ಏನೇನೂ ಇಲ್ಲ, ಇದನ್ನು ನಿಯಂತ್ರಿಸುವಲ್ಲಿ ಎಲ್ಲಾ ಸರ್ಕಾರಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ, ದಿನದಿಂದ ದಿನಕ್ಕೆ ಸ್ಮಶಾನಗಳ ಮುಂದೆ ಹೆಣಹೊತ್ತ ಅಂಬ್ಯುಲೆನ್ಸ್ಗಳು ಹೆಚ್ಚಾಗುತ್ತಲೇ ಇದೆ, ಇಡೀ ದೇಶದ ಜನತೆ ಭಯಭೀತರಾಗಿದ್ದಾರೆ ಇದರ ಬಗ್ಗೆ ತುಟಿಪಿಟಿಕ್ಕೆನ್ನದೆ ಮರಣದ ಮನೆಯಲ್ಲೂ ಧರ್ಮಾಂಧತೆಯ ವಿಷಬೀಜ ಬಿತ್ತಲು ಹೊರಟಿರುವುದು ಮಾತ್ರ ಅಕ್ಷಮ್ಯ!
ಇದು ಧರ್ಮ ಜಾತಿ ಪಕ್ಷ ಪಂಥಗಳ ವ್ಯತ್ಯಾಸವಿಲ್ಲದೆ ಒಗ್ಗಟ್ಟಾಗಿ ನಿಂತು ದೇಶವನ್ನು ಕಾಪಾಡಬೇಕಾದ ಸಮಯ. ಈ ಕೊರೋನ ಇದೇ ರೀತಿ ಮುಂದುವರಿದರೆ ಈಗಾಗಲೇ ಆರ್ಥಿಕವಾಗಿ ಕುಸಿದು ಕಂಗಾಲಾಗಿರುವ ನಮ್ಮ ದೇಶ ಏನಾಗಿ ಬಿಡುತ್ತದೋ? ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತು ಎಲ್ಲರನ್ನೂ ಗಣನೆಗೆ ತೆಗೆದು ದೇಶವನ್ನು ಕಾಪಾಡಬೇಕಾದ ಇವರುಗಳು ಸತ್ತ ಮನೆಯಲ್ಲೂ ತಮ್ಮ ಚಪಲ ತೀರಿಸಿಕೊಳ್ಳಲು ಇಳಿದಿರುವುದು ನಾಚಿಕೆಗೇಡು. ಪ್ರಬುದ್ಧ ಸಮಾಜ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಇಂಥಹಾ ಧರ್ಮಾಂಧ ಅವಕಾಶವಾದಿಗಳನ್ನು ಮೂಲೆಗೆಸೆದು ಸುಂದರ ರಾಷ್ಟ್ರ ನಿರ್ಮಾಣಕ್ಕಾಗಿ ಒಟ್ಟಾಗ ಬೇಕಿದೆ. ಕೊರೋನ ವಿರುದ್ಧ ಒಗ್ಗಟ್ಟಾಗಿ ಹೋರಾಡಿ ದೇಶವನ್ನು, ದೇಶದಲ್ಲಿರುವ ನಮ್ಮವರನ್ನು ಉಳಿಸಿಕೊಳ್ಳಬೇಕಾಗಿದೆ.
✍️ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಕೋಶಾಧಿಕಾರಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.