ಶಿವಮೊಗ್ಗದ ಸುದ್ದಿಗಳು……
(ವಿಶ್ವಕನ್ನಡಿಗ ನ್ಯೂಸ್) : ಶಿವಮೊಗ್ಗ, ಭದ್ರವತಿಗೆ ಪ್ರತ್ಯೇಕ ಆನ್ ಲಾಕ್ ರೂಲ್ಸ್, ಕೆಲವಕ್ಕೆ ಮಧ್ಯಾಹ್ನ 12 ಗಂಟೆ, ಇನ್ನೂ ಕೆಲವಕ್ಕೆ 2ಗಂಟೆವರೆಗೆ ಅವಕಾಶ.
ಶಿವಮೊಗ್ಗ ಮತ್ತು ಭದ್ರಾವತಿ ಪ್ರತ್ಯೇಕವಾಗಿ ಲಾಕ್ ಡೌನ್ ಸಡಿಲಿಕೆ ನಿಯಮ ಜಾರಿಗೊಳಿಸಲಾಗಿದೆ. ಉಳಿದಂತೆ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ರಾಜ್ಯ ಸರ್ಕಾರದ ಅನ್ ಲಾಕ್ ಒಂದರ ನಿಯಮ ಜಾರಿಯಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಜೊತೆಗೆ ಸಭೆ ನಡೆಸಿದ ಸಚಿವ ಕೆ.ಎಸ್.ಈಶ್ವರಪ್ಪ, ಕೆಲವು ವ್ಯಾಪಾರ ವಾಹಿವಾಟಿಗೆ ಮಧ್ಯಾಹ್ನ 12 ಗಂಟೆವರೆಗೆ, ಇನ್ನೂ ಕೆಲವಕ್ಕೆ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಿರುವುದಾಗಿ ತಿಳಿಸಿದರು.
ಬಟ್ಟೆ ಮತ್ತು ಚಿನ್ನಾಭರಣ ವ್ಯಾಪಾರದ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಆದ್ದರಿಂದ ಆ ಬಗ್ಗೆ ತಾವು ಚರ್ಚೆ ಮಾಡುವುದಿಲ್ಲ. ಉಳಿದ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಈಗ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಅಂಗಡಿಗಳ ಮುಂದೆ ಗುಂಪುಗೂಡುವಂತಿಲ್ಲ.
ವ್ಯಾಪಾರ, ವಾಹಿವಾಟುಗಳಿಗೆ ಅವಕಾಶ ನೀಡುತ್ತಿರುವ ಮಳಿಗೆಗಳ ಮುಂದೆ ಜನರು ಗುಂಪುಗೂಡುವಂತಿಲ್ಲ. ಒಂದು ವೇಳೆ ಜನರು ಗುಂಪುಗೂಡಿದರೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ಕಮಲ್ ಅಂದರ್.
ತೀರ್ಥಹಳ್ಳಿ ಪಟ್ಟಣದ ಬಳಿಯ ತುಂಗಾ ಕಾಲೇಜಿನ ನಿವಾಸಿ ತುಂಗಾ ಕಾಲೇಜಿನಲ್ಲಿ ಗೂರ್ಖ ಕೆಲಸ ಮಾಡಿಕೊಂಡು ಅನೇಕ ವರ್ಷಗಳಿಂದ ಇದ್ದ ಗಣೇಶ್ ಎಂಬುವವರ ಮಗ ಕಮಲ್ ಇತ್ತೀಚೆಗೆ ದಾರಿತಪ್ಪಿ ಅನೇಕ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರುಗಳಿದ್ದವು.
ಜೂನ್ 11 ರಂದು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಪಟ್ಟಣದ ಸಮೀಪದ ದೇವಸ್ಥಾನವೊಂದರಲ್ಲಿ ಬೆಳಗಿನ ಜಾವ ಬಲತ್ಕಾರವಾಗಿ ತಾಳಿ ಕಟ್ಟಿದ್ದಾನೆ.
17 ವರ್ಷದ ವಯಸ್ಸಿನ ಈಕೆಯನ್ನು ಪ್ರೀತಿಸುವ ನೆಪದಲ್ಲಿ ತಾಳಿಕಟ್ಟಿ ಮದುವೆಯ ಸೋಗು ಹಾಕಿದ್ದಾನೆ. ನಂತರ ತೀರ್ಥಹಳ್ಳಿ ಪಟ್ಟಣದ ಆರಗ ರಸ್ತೆಯಲ್ಲಿ ಸುರಾನಿ ಸಮೀಪದ ಪರಿಚಯದವರ ತೋಟಕ್ಕೆ ಕರೆದುಕೊಂಡು ಹೋಗಿ ಅಕ್ರಮವಾಗಿ ಬಲತ್ಕಾರ ನಡೆಸಿ ಅತ್ಯಾಚಾರವೆಸಗಿದ್ದಾನೆ. ನಂತರ ಯುವತಿಯ ಪೋಷಕರಿಗೆ ಗೊತ್ತಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಕಮಲ್ ಬಿನ್ ಗಣೇಶ ಸುರಾನಿ ತೋಟದಲ್ಲಿರುವುದನ್ನು ಪತ್ತೆ ಹಚ್ಚಿ ಠಾಣೆಗೆ ಎಳೆದು ತಂದಿದ್ದಾರೆ.
ಯುವತಿಯ ದೂರಿನ ಮೇರೆಗೆ ಅಪ್ರಾಪ್ತ ಯುವತಿಯ ಮೇಲೆ ಲೈಂಗಿಕ ಕಿರುಕುಳದ ಪ್ರಕರಣ ಫೋಸ್ಕೋ ಕಾಯಿದೆ ಕಲಂ 3 ,4 ಮತ್ತು 17 ರ ಅಡಿಯಲ್ಲಿ ಹಾಗೂ ಅಪ್ರಾಪ್ತೆಯನ್ನು ಬಲತ್ಕಾರವಾಗಿ ಮದುವೆಯಾದ ಪ್ರಕರಣದಲ್ಲಿ ಕಲಂ 9 ಮತ್ತು 10 ಹಾಗೂ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಐಪಿಸಿ ಕಲಂ 363 ಹಾಗೂ 376 ರಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ಆರೋಪಿ ಕಮಲ್ ಬಿನ್ ಗಣೇಶ ಈ ಹಿಂದೆಯೂ ಸಹ ಅನೇಕ ಕಾಲೇಜ್ ಯುವತಿಯರಿಗೆ ಮತ್ತು ಗ್ರಾಮದ ಕೆಲವು ಯುವತಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಂದೇ ಪೊಲೀಸರು ಈತನನ್ನು ಮೂಲ ಊರಾದ ನೇಪಾಳಕ್ಕೆ ಕಳುಹಿಸಿಕೊಟ್ಟಿದ್ದರೆ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ರಾಜ್ಯದ ಹವಾಮಾನ ವರದಿ 21-06-2021
ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚಾಗುತ್ತಿದೆ. ಪೂರ್ವ ಅರಬ್ಬೀ ಸಮುದ್ರದಲ್ಲಿ ಒತ್ತಡ ಹೆಚ್ಚಳ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 22ರ ವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನ ಹಲವೆಡೆ ಜೂನ್ ನಿನ್ನೆಯಿಂದ ಆರಂಭವಾಗಿರೋ ಮಳೆ 22ರ ವರೆಗೆ ಮುಂದುವರೆಯಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಹಾಗೂ ಅತಿ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಇಂದಿನ ಹವಾಮಾನ ವರದಿ: ಬೆಂಗಳೂರು: 29-20 ಮಂಗಳೂರು: 28-24 ಶಿವಮೊಗ್ಗ: 28-21 ಬೆಳಗಾವಿ: 26-20 ಮೈಸೂರು: 31-21 ಮಂಡ್ಯ: 32-21 ರಾಮನಗರ: 31-24 ಮಡಿಕೇರಿ: 22-17 ಹಾಸನ: 26-19 ಚಾಮರಾಜನಗರ: 31-21 ಚಿಕ್ಕಬಳ್ಳಾಪುರ: 29-19 ಕೋಲಾರ: 32-21 ತುಮಕೂರು: 30-21 ಉಡುಪಿ: 28-24 ಕಾರವಾರ: 28-25 ಚಿಕ್ಕಮಗಳೂರು: 25-18 ದಾವಣಗೆರೆ: 28-21 ಚಿತ್ರದುರ್ಗ: 29-21 ಹಾವೇರಿ: 28-22 ಗದಗ: 29-21 ಕೊಪ್ಪಳ: 30-22 ರಾಯಚೂರು: 34-24 ಯಾದಗಿರಿ: 34-24
ಶಿವಮೊಗ್ಗ ಜಿಲ್ಲೆಯಿಂದ KSRTC ಬಸ್ ಸಂಚಾರ ಶುರು, ಯಾವೆಲ್ಲ ಊರಿಗೆ ತೆರಳುತ್ತಿವೆ ಸರ್ಕಾರಿ ಸಾರಿಗೆ?
ಕರೋನ ಮತ್ತು ಲಾಕ್ ಡೌನ್ನಿಂದಾಗಿ ಸ್ಥಗಿತವಾಗಿದ್ದ KSRTC ಬಸ್ ಸಂಚಾರ ಪುನಾರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಿಂದಲೂ ಸರ್ಕಾರಿ ಸಾರಿಗೆ ಸೇವೆ ರಸ್ತೆಗಿಳಿದಿವೆ.
ಎರಡು ತಿಂಗಳು ಡಿಪೋದಲ್ಲಿದ್ದ ಬಸ್ಸುಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿ, ನಿಲ್ದಾಣಕ್ಕೆ ತರಲಾಗಿದೆ. ಪ್ರಯಾಣಿಕರ ಆದ್ಯತೆಗೆ ಅನುಗುಣವಾಗಿ ಬಸ್ ಸಂಚಾರ ಶುರು ಮಾಡಲಾಗಿದೆ.
ಶೇ.50ರಷ್ಟು ಪ್ರಯಾಣಿಕರು
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರತಿ ಸೀಟಿಗೆ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.
ಎಲ್ಲೆಲ್ಲಿಗೆ ಬಸ್ ಸಂಚಾರ ಶುರು
ಶಿವಮೊಗ್ಗದಿಂದ ಹಲವು ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ತುಮಕೂರು, ಶಿಕಾರಿಪುರ, ಸಾಗರ, ಹೊಸನಗರ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಹರಿಹರ, ಕಡೂರು, ತರೀಕೆರೆ, ಚನ್ನಗಿರಿಗೆ ಬಸ್ ಸಂಚಾರ ಆರಂಭವಾಗಿದೆ. ಸುಮಾರು 150 ಬಸ್ಸುಗಳು ರಸ್ತೆಗಿಳಿದಿವೆ.
ಸರ್ಕಾರದ ಆದೇಶದ ಹಿನ್ನೆಲೆ KSRTC ಬಸ್ ಸಂಚಾರ ಆರಂಭಿಸಲಾಗಿದೆ. ತಾಲೂಕು ಮತ್ತು ಆಯ್ದ ಜಿಲ್ಲಾ ಕೇಂದ್ರಗಳಿಗೆ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಆದ್ಯತೆ ಮೇರೆಗೆ ಗ್ರಾಮೀಣ ಭಾಗಕ್ಕೆ ಸಂಚಾರ ಕಲ್ಪಿಸಲಾಗುತ್ತದೆ ಎಂದು ಶಿವಮೊಗ್ಗ KSRTC ವಿಭಾಗೀಯ ಡಿಸಿ ನವೀನ್ ಕುಮಾರ್ ತಿಳಿಸಿದ್ದಾರೆ.
ಬಣಗುಡುತ್ತಿದೆ ಖಾಸಗಿ ನಿಲ್ದಾಣ
ಸರ್ಕಾರಿ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಜಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್ ಸಂಚಾರ ಶುರುವಾಗಿಲ್ಲ. ಹಾಗಾಗಿ ಖಾಸಗಿ ಬಸ್ ನಿಲ್ದಾಣ ಬಣಗುಡುತ್ತಿದೆ. ಇನ್ನು, ಶಿವಮೊಗ್ಗದ ಸಿಟಿ ಬಸ್ಸುಗಳು ಕೂಡ ರಸ್ತೆಗಿಳಿಯಲು ಅವಕಾಶ ನೀಡಿಲ್ಲ. ಸದ್ಯ KSRTC ಬಸ್ ಸಂಚಾರ ಆರಂಭವಾಗಿರುವುದರಿಂದ ದೂರದ ಊರುಗಳಿಗೆ ತೆರಳುವವರು ನಿಟ್ಟುಸಿರು ಬಿಡುವಂತಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ, ವಹಿವಾಟಿಗೆ ಅನುಮತಿ, ಕೆಲವು ಕಂಡೀಷನ್ ವಿಧಿಸಿದ ಜಿಲ್ಲಾಧಿಕಾರಿ.
ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್ಡೌನ್ ಇನ್ನಷ್ಟು ಸಡಿಲಿಕೆ ಮಾಡಲಾಗಿದ್ದು, ಎಲ್ಲಾ ರೀತಿಯ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಆದೇಶ ಜುಲೈ 5ರ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ. ಕಂಟೈನ್ಮೆಂಟ್ ವಲಯದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯಾವುದಿರುತ್ತೆ? ಯಾವುದಕ್ಕೆ ಅವಕಾಶವಿಲ್ಲ?
ಹವಾನುಕೂಲಿತ ಅಂಗಡಿಗಳು, ಹವಾನುಕೂಲಿತ ಶಾಪಿಂಗ್ ಕಾಂಪ್ಲೆಕ್ಸ್ಗಳು, ಮಾಲ್ಗಳಿಗೆ ಅನುಮತಿ ನೀಡಲಾಗಿಲ್ಲ.
ಎಲ್ಲಾ ವಸ್ತುಗಳ ಹೋಂ ಡೆಲಿವರಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ.
ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಗಾರ್ಮೆಂಟ್ಸ್ ಕೈಗಾರಿಕೆ ಶೇ.30ರಷ್ಟು ಸಿಬ್ಬಂದಿಯನ್ನು ಮಾತ್ರ ಬಳಸಬಹುದಾಗಿದೆ.
ಹೊಟೇಲ್, ರೆಸ್ಟೋರೆಂಟ್, ಬಾರ್ಗಳು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಶೇ. 50ರಷ್ಟು ಸಾಮರ್ಥ್ಯವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಮದ್ಯವನ್ನು ಸ್ಥಳದಲ್ಲಿಯೇ ಸೇವಿಸಲು ಅವಕಾಶವಿರುವುದಿಲ್ಲ. ಎಸಿ ಹೊಟೇಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್ಗಳಿಗೆ ಅವಕಾಶವಿರುವುದಿಲ್ಲ.
ಲಾಡ್ಜ್, ರೆಸಾರ್ಟ್ಗಳು ಸಹ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು.
ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಪಾರ್ಕ್ಗಳಲ್ಲಿ ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ವಾಕಿಂಗ್ ಮತ್ತು ಜಾಗಿಂಗ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಹವಾನುಕೂಲಿತವಲ್ಲದ ಜಿಮ್ಗಳು ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ.
ಎಲ್ಲಾ ಹೊರಾಂಗಣ ಕ್ರೀಡೆಗಳಿಗೆ ಅನುಮತಿಸಲಾಗಿದ್ದು, ಪ್ರೇಕ್ಷಕರು ಸೇರುವಂತಿಲ್ಲ.
ಪ್ರತಿ ದಿನ ರಾತ್ರಿ 7 ರಿಂದ ಮರುದಿನ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ವೈದ್ಯಕೀಯ, ಸರಕು ಸಾಗಾಣಿಕೆ ವಾಹನಗಳ ಸಂಚಾರ, ಬಸ್, ರೈಲು ಸಂಚಾರ, ಹೋಂ ಡೆಲಿವರಿ ಇತ್ಯಾದಿ ಅವಶ್ಯಕ ಚಟುವಟಿಕೆಗಳಿಗೆ ಅವಕಾಶವಿರಲಿದೆ.
ಇದೇ ರೀತಿ ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.
ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಸಾರ್ವಜನಿಕರಿಗೊಂದು ರೂಲ್ಸು, ಸರ್ಕಾರಿ ನೌಕರರಿಗೊಂದು ಕಾನೂನು.
ಲಾಕ್ಡೌನ್ ಸಡಿಲ ಮಾಡಿ, ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಸರ್ಕಾರಿ ನೌಕರರಿಗಾಗಿ ಬಿಟ್ಟಿರುವ ಬಸ್ಸುಗಳಲ್ಲಿ ಗೈಡ್ಲೈನ್ ಉಲ್ಲಂಘಿಸಲಾಗುತ್ತಿದೆ.
ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಪ್ರಯಾಣಿಕರು ಇರುವಂತಿಲ್ಲ ಎಂದು ಸರ್ಕಾರ ಗೈಡ್ಲೈನ್ನಲ್ಲಿ ಪ್ರಕಟಿಸಿದೆ. ಆದರೆ ಸರ್ಕಾರಿ ನೌಕರರು ಪಯಣಿಸುವ ಬಸ್ಸಿನಲ್ಲೆ ಗೈಡ್ಲೈನ್ ಪಾಲನೆ ಆಗುತ್ತಿಲ್ಲ.
ಇದನ್ನು ಓದಿ | ಶಿವಮೊಗ್ಗ ಜಿಲ್ಲೆಯಿಂದ KSRTC ಬಸ್ ಸಂಚಾರ ಶುರು, ಯಾವೆಲ್ಲ ಊರಿಗೆ ತೆರಳುತ್ತಿವೆ ಸರ್ಕಾರಿ ಸಾರಿಗೆ?
ವಿವಿಧ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗಾಗಿ ಪ್ರತ್ಯೇಕವಾಗಿ ಸರ್ಕಾರಿ ಬಸ್ಗಳನ್ನು ಬಿಡಲಾಗಿದೆ. ಆದರೆ ಈ ಬಸ್ಸುಗಳಲ್ಲಿ ಸರ್ಕಾರಿ ನೌಕರರ ನಡುವೆ ಸಾಮಾಜಿಕ ಅಂತರವಿಲ್ಲದಾಗಿದೆ. ಮೂರು ಮತ್ತು ಎರಡು ಸೀಟರ್ ಬಸ್ಸುಗಳಿದ್ದು ಎಲ್ಲ ಸೀಟುಗಳು ಭರ್ತಿಯಾಗಿ ತೆರಳುತ್ತಿವೆ.
ಈ ಬಗ್ಗೆ ಪ್ರಶ್ನಿಸಿದಾಗ ಹೆಸರು ಹೇಳಲು ಇಚ್ಛಿಸದ ಮಹಿಳಾ ಸಿಬ್ಬಂದಿಯೊಬ್ಬರು, ಹೆಚ್ಚುವರಿ ಬಸ್ ಬಿಡುತ್ತಿಲ್ಲ. ಡ್ಯೂಟಿ ತಪ್ಪಿಸುವಂತಿಲ್ಲ. ಅನಿವಾರ್ಯವಾಗಿ ಹೀಗೆ ಸಂಚರಿಸಬೇಕಾಗಿದೆ. ನಮಗೂ ಕರೋನ ಭಯವಿದೆ ಅನ್ನುತ್ತಾರೆ.
ಉಳಿದ ಪ್ರಯಾಣಿಕರಿಗೆ ಮಾದರಿ ಆಗಬೇಕಿದ್ದ ಸರ್ಕಾರಿ ನೌಕರರ ಬಸ್ಸುಗಳಲ್ಲೆ ನಿಯಮ ಉಲ್ಲಂಘಿಸುತ್ತಿರುವುದು ಪ್ರಶ್ನಾರ್ಹವಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನದಂದು 542 ಕರೋನ ಲಸಿಖೆ ವಿತರಿಸಿದ ಹುಂಚ ಪ್ರಾಥಮಿಕ ಅರೋಗ್ಯ ಕೇಂದ್ರ.
ಸಹಕಾರ ನೀಡಿದ ತಾಲೂಕು ವೈದ್ಯ ಅಧಿಕಾರಿಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ,ಆಶಾ ಕಾರ್ಯಕರ್ತರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಜಯಕರ್ನಾಟಕ ಮುಖಂಡರಿಗೆ(ಚಂದನ್ ಗೌಡ, ನಂದೀಶ, ಸಂಜು ) ಅಭಿಷೇಕ್ ಕೆ , ಹುಂಚ ಸಾಮಾಜಿಕ ಜಾಲತಾಣ ಸಂಚಾಲಕರು ಹೊಸನಗರ ಮತ್ತು ಸಾರ್ವಜನಿಕರ ವತಿಯಿಂದ ಧನ್ಯವಾದಗಳು .
ನಿನ್ನೆ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕರೋನ ಲಸಿಖೆ ವಿತರಣೆಯಲ್ಲಿ 542 ಲಸಿಖೆಗಳನ್ನು ಕೊಡಲಾಯಿತು.
ಬೆಳಿಗ್ಗೆ 10.30 ಯಿಂದ ಸಂಜೆ 8.15ಘಂಟೆಯ ತನಕ ಲಸಿಖೆ ವಿತರಣೆ ಮಾಡಲಾಯಿತು. ಹೆಚ್ಚು ಲಸಿಖೆಗಳನ್ನು ವದಗಿಸಿದ ಮಾನ್ಯ ತಾಲೂಕು ಅರೋಗ್ಯ ಅಧಿಕಾರಿಗಳಾದ ಡಾ||ಸುರೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಸಹಕಾರಕ್ಕೆ ನಾವು ನಿಮಗೆ ಚಿರಋಣಿ .
ಫಲಾನುಭವಿಗಳಿಗೆ ತಕ್ಷಣ ದೃಡೀಕರಣ ಮಾಡಿಕೊಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಸರ್ ಅವರಿಗೂ ವಿಶೇಷ ಧನ್ಯವಾದಗಳು.
ಈ ಲಸಿಖೆ ವಿತರಣೆಯಲ್ಲಿ ಸಂಜೆ 8.15 ವರೆಗೂ ಮಧ್ಯಾಹ್ನದ ಊಟ ತ್ಯಜಿಸಿ ಸಾರ್ವಜನಿಕರೊಂದಿಗೆ ನಗುಮೊಗದಿಂದ ಲಸಿಖೆ ವಿತರಣೆ ಮಾಡಿದ ಹುಂಚ ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಸಿಬ್ಬಂದಿಗಳುಆಶಾ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ದೇವೇಂದ್ರ, ಸದಸ್ಯರಾದ ಆಶಾ ಯಧುಕುಮಾರ್, ಮಂಜುನಾಥ್ ಬಂಡಾರಿ, ರಾಜಶೇಖರ್ ಪಟೇಲ್,ಸವಿತಾ ಕಾರ್ಗಲ್,ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಜಯಕರ್ನಾಟಕ ಮುಖಂಡರಾದ ಚಂದನ್ ಗೌಡ ಆನೆಗದ್ದೆ , ಸಂಜು ಹೊಂಡಲಗದ್ದೆ, ನಂದೀಶ್ ಹುಂಚ ಹಾಗೂ ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೆ ಧನ್ಯವಾದಗಳು
ವಿದ್ಯಾರ್ಥಿಗಳಿಗೆ ವಿತರಿಸಲು ಶಾಲೆಯಲ್ಲಿ ಇರಿಸಿದ್ದ ಯುನಿಫಾರಂ ಬಟ್ಟೆಗೆ ಬೆಂಕಿ.
ವಿದ್ಯಾರ್ಥಿಗಳಿಗೆ ವಿತರಿಸಲು ಇರಿಸಿದ್ದ ಯುನಿಫಾರಂ ಬಟ್ಟೆಗಳು ಬೆಂಕಿಗೆ ಆಹುತಿಯಾಗಿದೆ. ಶಾಲೆಯ ಕೊಠಡಿಯಲ್ಲಿ ಈ ಸಮವಸ್ತ್ರಗಳನ್ನು ಇರಿಸಲಾಗಿತ್ತು.
ಹೊಸನಗರ ತಾಲೂಕು ಮಾರುತಿಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಮುಖ್ಯೋಪಾಧ್ಯಾಯರು ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಸುಮಾರು 300 ವಿದ್ಯಾರ್ಥಿಗಳಿಗೆ ವಿತರಿಸಲು ಬಟ್ಟೆಯನ್ನು ಇರಿಸಲಾಗಿತ್ತು. ಬೆಂಕಿ ಹೊತ್ತಿದ್ದರಿಂದ ಬಟ್ಟೆ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಹರತಾಳು ಹಾಲಪ್ಪ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆ ಆಡಳಿತ ಮಂಡಳಿ ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು.
ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.