ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಖಾಸಗಿ ಶಾಲೆಗಳಲ್ಲಿ ಪೆÇೀಷಕರಿಂದ ಪೂರ್ಣ ಶುಲ್ಕ ಪಾವತಿಗೆ ಒತ್ತಾಯ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಶಾಲಾ ಶುಲ್ಕ ಪಾವತಿ ಬಗ್ಗೆ ಇನ್ನೂ ಸರಕಾರದ ಯಾವುದೇ ಅಧಿಕೃತ ಆದೇಶ ಬಂದಿರುವುದಿಲ್ಲ. ಹೀಗಾಗಿ ಕಳೆದ ಸಾಲಿನ ಸುತ್ತೋಲೆಯಂತೆ ಬೋಧನಾ ಶುಲ್ಕದಲ್ಲಿ ಶೇಕಡ 70 ರಷ್ಟು ಶುಲ್ಕ ಪಡೆಯಬಹುದಾಗಿರುತ್ತದೆ. ಈ ಬಗ್ಗೆ ಶಾಲಾ ಮುಖ್ಯಸ್ಥರು ವಿದ್ಯಾರ್ಥಿ ಪೋಷಕರಿಂದ ಯಾವುದೇ ದೂರು ಬರದಂತೆ ಕ್ರಮ ವಹಿಸುವಂತೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಪಿ ಜ್ಞಾನೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಇನ್ನೂ ಬಾರದೆ ಇದ್ದು, ತಾಲೂಕಿನ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಅಥವಾ ಪೆÇೀಷಕರಲ್ಲಿ ಸರಕಾರ ನಿಗದಿಪಡಿಸಿದ ಬೋಧನಾ ಶುಲ್ಕ ಹೊರತುಪಡಿಸಿ ಇತರ ಯಾವುದೇ ಶುಲ್ಕಕ್ಕಾಗಿ ಒತ್ತಾಯಪಡಿಸುವಂತಿಲ್ಲ. ಹಾಗೇನಾದರೂ ಶಾಲೆಗಳು ಶುಲ್ಕ ಪಾವತಿಗಾಗಿ ಒತ್ತಾಯಿಸಿದರೆ ನೇರವಾಗಿ ದೂರು ನೀಡುವಂತೆ ಬಿಇಒ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿ ತಾಲೂಕಿನ ಕೆಲ ಶಾಲಾ ಮುಖ್ಯಸ್ಥರು ವಿದ್ಯಾರ್ಥಿ ಪೋಷಕರನ್ನು ಹಾದಿ ತಪ್ಪಿಸುವ ಸಂದೇಶಗಳನ್ನು ತಮ್ಮ ಶಾಲಾ ವಾಟ್ಸಪ್ ಗ್ರೂಪುಗಳಲ್ಲಿ ಹಂಚಿಕೊಂಡಿದ್ದರು. ಇದು ವಿದ್ಯಾರ್ಥಿ ಪೋಷಕರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಅಲ್ಲದೆ ಕೆಲ ಶಾಲೆಗಳು ಶುಲ್ಕ ಪಾವತಿಸಿದ ವಿದ್ಯಾರ್ಥಿಗಳನ್ನು ಮಾತ್ರ ಪ್ರತ್ಯೇಕ ವಾಟ್ಸಪ್ ಗುಂಪು ರಚಿಸಿ ಆನ್ ಲೈನ್ ತರಗತಿ ಹಾಗೂ ಪರೀಕ್ಷಾ ಪೂರ್ವ ಸಿದ್ದತೆಯನ್ನು ನಡೆಸುತ್ತಿದ್ದು, ಹೆಚ್ಚುವರಿ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಇಂತಹ ಗುಂಪಿನಿಂದ ಪ್ರತ್ಯೇಕಿಸಿ ಅವರನ್ನು ಪರೀಕ್ಷಾ ಪೂರ್ವ ಸಿದ್ದತೆಯಿಂದ ದೂರ ಇರಿಸಿದ ಬಗ್ಗೆಯೂ ವಿದ್ಯಾರ್ಥಿ ಪೋಷಕರು ದೂರಿದ್ದಾರೆ.
ಈ ಬಗ್ಗೆ ಪತ್ರಿಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಸ್ಪಷ್ಟನೆ ಬಯಸಿದ್ದು, ಈ ಸಂದರ್ಭ ಪ್ರತಿಕ್ರಯಿಸಿದ ಬಿಇಒ ಜ್ಞಾನೇಶ್ ಅವರು ಸರಕಾರಿ ಬೋಧನಾ ಶುಲ್ಕ ಹೊರತುಪಡಿಸಿ ಇತರ ಯಾವುದೇ ಶುಲ್ಕವನ್ನು ಖಾಸಗಿ ಶಾಲೆಗಳು ವಸೂಲಿ ಮಾಡುವಂತಿಲ್ಲ. ಸರಕಾರ ನಿಗದಿಪಡಿಸಿದ ಬೋಧನಾ ಶುಲ್ಕ ಬಗ್ಗೆ ಪ್ರತಿ ಶಾಲೆಗಳು ತಮ್ಮ ನೋಟೀಸು ಬೋರ್ಡಿನಲ್ಲಿ ಪ್ರಕಟಿಸತಕ್ಕದ್ದು. ಇದು ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ನಿಯಮವಾಗಿದ್ದು, ಶಾಲೆಗಳಲ್ಲಿ ಶುಲ್ಕ ವಿವರ ನೋಟೀಸು ಪ್ರದರ್ಶನದ ಬಗ್ಗೆಯೂ ವಿದ್ಯಾರ್ಥಿ ಪೋಷಕರು ತಿಳಿದುಕೊಂಡು ಕಾರ್ಯಪ್ರವೃತ್ತರಾಗುವಂತೆ ಬಿಇಒ ಸೂಚಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.