ಹೊಸಕೋಟೆ (ವಿಶ್ವ ಕನ್ನಡಿಗ ನ್ಯೂಸ್): ಗ್ರಾಮಾಂತರ ಜಿಲ್ಲೆ , ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿಯಲ್ಲಿರುವ , ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕೇಂದ್ರದಲ್ಲಿ “ರಾಷ್ಟ್ರೀಯ ಪ್ರಸಾರ ದಿನದ” ಪ್ರಯುಕ್ತ ಸಾಹಿತಿಗಳು , ಲೇಖಕರು , ಕಲಾವಿದರು ಹಾಗೂ ಗಾಯಕರನ್ನು ಒಳಗೊಂಡ “ಕವಿ ಸಮ್ಮಿಲನ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು . ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಲ್ ಇಂಡಿಯಾ ರೇಡಿಯೋ – ಆಕಾಶವಾಣಿ ನಿರ್ದೇಶಕರಾದ ಡಾ ನಿರ್ಮಲ ಯಲಿಗಾರ್ ಅವರು ಭಾಗವಹಿಸಿದ್ದಾರೆಂದು ರೇಡಿಯೋ ಮ್ಯಾನೇಜರ್ ಆರ್ ಜೆ ಸುನೀಲ್ ತಿಳಿಸಿದ್ದರು .
ರಾಷ್ಟ್ರೀಯ ಪ್ರಸಾರ ದಿನದ ಪ್ರಯುಕ್ತ ತಾವೇ ರಚಿಸಿರುವ ಕವಿತೆಯನ್ನು ಹೇಳುವುದರ ಮೂಲಕ ಕವಿ ಸಮ್ಮಿಲನ ಕಾರ್ಯಕ್ರಮಕ್ಕೆ ಆಕಾಶವಾಣಿ ನಿರ್ದೇಶಕಿ ಡಾ ನಿರ್ಮಲ ಯಲಿಗಾರ್ ಅವರು ಚಾಲನೆ ನೀಡಿ ಗ್ರಾಮೀಣ ಕಲಾವಿದರು , ಲೇಖಕರು , ಸಾಹಿತಿಗಳು ಹಾಗೂ ಗಾಯಕರು ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಸಮುದಾಯ ರೇಡಿಯೋ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದರು . ನಂತರ ರಾಷ್ಟ್ರೀಯ ಪ್ರಸಾರ ದಿನವನ್ನು ಕುರಿತು ಮಾತನಾಡುತ್ತಾ ಸಮುದಾಯ ರೇಡಿಯೋ ಕೇಂದ್ರಗಳು ಗ್ರಾಮೀಣ ಜನತೆಯ ಕೊಂದು ಕೊರತೆ , ಗ್ರಾಮಗಳ ಅಭಿವೃದ್ಧಿ , ಶಿಕ್ಷಣ , ಕೃಷಿ , ಮಹಿಳೆ , ಆರೋಗ್ಯ , ಪರಿಸರ ಮತ್ತು ಸರ್ಕಾರದಿಂದ ಬರುವ ಯೋಜನೆ ಮತ್ತು ಅನುದಾನಗಳ ವಿಷಯವನ್ನು ಗ್ರಾಮೀಣ ಜನತೆಗೆ ಸುದ್ದಿಗಳನ್ನು ಮುಟ್ಟಿಸುವ ಉದ್ದೇಶದಿಂದ ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ . ಹಾಗಾಗಿ ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕೇಂದ್ರವನ್ನು ಉಳಿಸಿ ಬೆಳೆಸುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ . ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಿ ಸರ್ಕಾರದಿಂದ ಬರುವ ಯೋಜನೆ ಮತ್ತು ಅನುದಾನಗಳ ಸದುಪಯೋಗವನ್ನು ಗ್ರಾಮೀಣ ಜನತೆ , ಕೃಷಿಕರು , ಮಹಿಳೆಯರು , ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಡೆದು ಮಾದರಿ ಗ್ರಾಮಗಳನ್ನಾಗಿ ಮಾಡಲು ಸಾರಥಿ ಝಲಕ್ ಸಮುದಾಯ ರೇಡಿಯೋ ಸಹಕಾರ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಆಕಾಶವಾಣಿ ನಿರ್ದೇಶಕಿ ಡಾ ನಿರ್ಮಲ ಯಲಿಗಾರ್ ಅವರು ತಿಳಿಸಿದ್ದರು.
ಸಮಾಜ ಸೇವಕರು ಹಾಗೂ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋಪಾಲ್ ಅವರು ಮಾತನಾಡುತ್ತಾ ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕೇಂದ್ರವು ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ “ಶುದ್ಧ ಜಲ , ಸ್ವಚ್ಛ ನೆಲ ಆರೋಗ್ಯವಾಗಿರಲಿ ಜೀವಸಂಕುಲ” ವಿಶೇಷ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನೀರು , ಸ್ವಚ್ಛತೆ , ಪ್ಲಾಸ್ಟಿಕ್ , ತ್ಯಾಜ್ಯ ನಿರ್ವಹಣೆ , ಶೌಚಾಲಯ , ಮಹಿಳೆಯರ ಆರೋಗ್ಯ ಹಾಗೂ ಶುಚಿತ್ವ ಇನ್ನು ಮುಂತಾದ ವಿಷಯಗಳನ್ನು ಕುರಿತು ಗ್ರಾಮೀಣ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿರುವುದು ಶ್ಲಾಘನೀಯ ಎಂದರು .
ಡಾ ಸುಷ್ಮಾ ಶಂಕರ್ ಅವರು ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸೋಣ , ರೇಡಿಯೋ ಕಾರ್ಯಕ್ರಮಗಲ್ಲಿ ಭಾಗವಹಿಸಿ ಸಮುದಾಯ ರೇಡಿಯೋ ಕೇಂದ್ರಗಳನ್ನು ಬೆಳೆಸೋಣ ಎಂದರು .
ಮಾದರಿ ಕೃಷಿಕರಾದ ಮುನಿಸ್ವಾಮಿ ರೆಡ್ಡಿ ಅವರು ಮಾತನಾಡಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಹೊಂಡವನ್ನು ನಿರ್ಮಾಣ ಮಾಡಿ ಕೊಳವೆ ಬಾವಿ ಕೊರಸದೇ ಮಳೆ ನೀರಿನಿಂದಲೇ ವರ್ಷ ಪೂರ್ತಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ . ಹಾಗಾಗಿ ಪ್ರತಿಯೊಬ್ಬ ರೈತರು ಮಳೆ ನೀರು ಕೊಯ್ಲು ಮತ್ತು ಕೃಷಿ ಹೊಂಡಗಳನ್ನು ನಿರ್ಮಿಸಿದರೆ ಕೊಳವೆ ಬಾವಿಗಳ ಅವಶ್ಯಕತೆ ನಮ್ಮಗೆ ಬರುವುದಿಲ್ಲ ಎಂದರು .
ನಮ್ಮ ಸಮುದಾಯ ರೇಡಿಯೋ ಕೇಂದ್ರವು ನಿರಂತರವಾಗಿ ಸರ್ಕಾರದ ಯೋಜನೆ ಮತ್ತು ಅನುಧಾನ , ಶಿಕ್ಷಣ , ಆರೋಗ್ಯ , ಮಹಿಳೆ , ಕೃಷಿ , ರೈತರು , ಸಾಹಿತ್ಯ , ಸಾಂಸ್ಕೃತಿಕ , ಕಾನೂನು , ಪರಿಸರ , ನೀರು , ಬಾಲ್ಯ ವಿವಾಹ , ಬಾಲ ಕಾರ್ಮಿಕ , ಯೋಗ , ಶೌಚಾಲಯ , ತ್ಯಾಜ್ಯ ನಿರ್ವಹಣೆ , ಮುಂತಾದ ಕಾರ್ಯಕ್ರಮಗಳ ಮೂಲಕ ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ಗ್ರಾಮೀಣ ಜನತೆಗೆ ಸುದ್ದಿಯನ್ನು ಮುಟ್ಟಿಸುತ್ತಿದೆ ಎಂದು ಸಾರಥಿ ಝಲಕ್ 90.4 ಸಮುದಾಯ ರೇಡಿಯೋ ನಿರ್ದೇಶಕಿ ಡಿ ಎಸ್ ಶಮಂತ ಅವರು ತಿಳಿಸಿದ್ದರು .
ಆರ್ ಜೆ ಸುನಿಲ್ ಹಾಗೂ ಆರ್ ಜೆ ನಾಗಮಣಿ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಚೈತನ್ಯ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ ಜಯಮಂಗಲ ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮತ್ತು ಗಾಯನ ಕಾರ್ಯಕ್ರಮ ನೆರವೇರಿತು . ಶಿಕ್ಷಕ ಎನ್ ವೆಂಕಟಪತಿ , ಕವಯಿತ್ರಿಯರಾದ ಮಮತಾ , ಪದ್ಮ , ರೂಪ ವೀಣಾ ಮುಂತಾದವರು ಕವಿತೆಗಳನ್ನು ವಾಚನ ಮಾಡಿದರು . ರಂಗಕಲಾವಿದ ಹರೀಶ್ ಆದಿಮ , ಅಜಯ್ , ಅಂಗನವಾಡಿ ಕಾರ್ಯಕರ್ತೆ ಉಮಾ , ರೇಡಿಯೋ ನಿರೂಪಕಿ ಆರ್ ನಾಗಮಣಿ ಹಾಗೂ ಇಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರೆಂದು ರೇಡಿಯೋ ಮ್ಯಾನೇಜರ್ ಆರ್ ಜೆ ಸುನೀಲ್ ಪ್ರಕಟಣೆಯಲ್ಲಿ ತಿಳಿಸಿದ್ದರು .
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.