(www.vknews.com) : ಸಮುದಾಯದ ಮೂಲಕ ದೇಶದ ಮಾನವ ಸಂಪನ್ಮೂಲ ಅಭಿವೃದ್ದಿಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಪರಿಣಾಮಕಾರಿ ಪದ್ದತಿಯನ್ನು ರೂಪಿಸಿರುವ ಸಂಸ್ಥೆಯಾಗಿದೆ ಪುತ್ತೂರು ಕಮ್ಯೂನಿಟಿ ಸೆಂಟರ್. ಶೈಕ್ಷಣಿಕವಾಗಿ ಸಮಾಜವನ್ನು ಪ್ರಗತಿಯತ್ತ ಸಾಗಿಸಲು ದೂರದೃಷ್ಠಿಯ ಯೋಚನೆ – ಯೋಜನೆ ಇರುವ ಸೆಂಟರ್ ನಲ್ಲಿ ಕಳೆದ 4 ದಿನಗಳಿಂದ ನಾನು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿದ್ದೇನೆ.
ಇವತ್ತು ಒಬ್ಬ ವಿದ್ಯಾರ್ಥಿ ತನ್ನ ತಂದೆ ಮತ್ತು ತಾಯಿಯ ಜೊತೆಗೆ ಬಂದಿದ್ದರು. ಇಬ್ಬರೂ ಜೊತೆಯಾಗಿ ಬಂದದ್ದು ನೋಡಿ ತುಂಬಾ ಸಂತೋಷ ಆಯ್ತು. ಆ ಹುಡುಗನ ತಂದೆ ಮೊಹಮ್ಮದ್ ರಫೀಕ್ ವೃತ್ತಿಯಲ್ಲಿ ಪೈಂಟರ್. ಅವರ ಅಂಗೈಯನ್ನು ಮುಟ್ಟಿ ನೋಡಿದೆ. ಕೆಲಸ ಮಾಡಿ ಮಾಡಿ ಅವರ ಅಂಗೈ ಒರಟಾಗಿತ್ತು. ಕೆಲವೊಂದು ತೂತುಗಳು ಇತ್ತು. ಪೈಂಟರ್ ಅಪ್ಪ ದುಡಿದು ತನ್ನ ಮೊದಲ ಮಗಳನ್ನು ಬಿಎಸ್ಸಿ, ಎರಡನೇ ಮಗಳನ್ನು ಎಂಎಲ್ ಟಿ, ಮೂರನೇ ಮಗಳನ್ನು ಫಿಜಿಯೋತೆರಪಿ ಓದಿಸಿದ್ದಾರೆ. ತನ್ನ ನಾಲ್ಕನೇ ಮಗನನ್ನು ಸಾಫ್ಟ್ ವೇರ್ ಇಂಜಿನಿಯರ್ ಮಾಡಲು ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡುತ್ತಿದ್ದಾರೆ . ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತನ್ನ ಬದುಕನ್ನು ಸವೆಸಿದ ಆ ಮಹಾ ತಂದೆಯ ಬಗ್ಗೆ ಅಭಿಮಾನ ಮೂಡಿತು. ಅವರನ್ನು ಅಭಿನಂದಿಸಲೇಬೇಕು ಅಂತ ನನ್ನ ಹೃದಯ ಒತ್ತಿ ಒತ್ತಿ ಹೇಳುತ್ತಿತ್ತು. ಕಮ್ಯುನಿಟಿ ಸೆಂಟರ್ ನಲ್ಲಿ ಕ್ಯಾಂಪಸ್ ಫ್ರಂಟ್ ನ ರಾಜ್ಯ ಕೋಶಾಧಿಕಾರಿ ಮಿತ್ರ ಸವಾದ್ ಕಲ್ಲರ್ಪೆಯವರು ಪುಷ್ಪಗುಚ್ಛವನ್ನು ನೀಡಿ ಅವರನ್ನು ಅಭಿನಂದಿಸಿದರು. ಅವರ ಕಣ್ಣಂಚಿನಲ್ಲಿ ಹರಿಯುತ್ತಿದ್ದ ಆನಂದಬಾಷ್ಪ, ಮುಖದಲ್ಲಿ ಅರಳಿದ ನಗು ಮತ್ತು ಧನ್ಯತಾ ಭಾವ ಬೆಲೆ ಕಟ್ಟಲಾದೀತೇ? . ಅವರ ಎರಡೂ ಕೈಗಳಿಗೆ ಮುತ್ತಿಟ್ಟು ಆ ಕೈಯ ಮಹತ್ವವನ್ನು ವಿವರಿಸಿ ನಾನೂ ಧನ್ಯನಾದೆ.
ಎಲ್ಲಾ ತಂದೆ ಮತ್ತು ತಾಯಿ ಇದೇ ರೀತಿ ಜವಾಬ್ದಾರಿಯುತವಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸಂಸ್ಕಾರ ವನ್ನು ಕೊಟ್ಟರೆ ನಾವು ಎಲ್ಲರಂತೆ ಮತ್ತು ಎಲ್ಲರಿಗಿಂತ ಮುಂದೆ ನಿಲ್ಲಲು ಸಾಧ್ಯ. ಎಲ್ಲಾ ಹೆತ್ತವರಿಗೆ ಈ ರೀತಿಯ ಯೋಚನೆ ಮತ್ತು ಸನ್ಮನಸ್ಸು ಸರ್ವಶಕ್ತನು ಕರುಣಿಸಲಿ. ಆಮೀನ್.
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.