(www.vknews.com) : ಮೊನ್ನೆ ನಮ್ಮ ಪಜೀರ್ಕಾರ್ಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದೆವು.. ಖುರ್ಆನ್ ಪಠನ, ಹಾಡು, ಕುಣಿತ, ಕ್ವಿಝ್, ಫ್ಯಾಮಿಲಿ ಕ್ವಿಝ್,ಕುಟುಂಬದ ಪರಂಪರೆಯ ಕುರಿತ ಉಪನ್ಯಾಸ, ಹಿರಿಯ ಕಿರಿಯರೆನ್ನದೇ ಎಲ್ಲರಿಗೂ ವಿವಿಧ ಆಟಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಅದರಲ್ಲಿ ವಿಶೇಷ ಆಹ್ವಾನಿತರಾಗಿ ಉಪನ್ಯಾಸ ನೀಡಲು ರಫೀಕ್ ಮಾಸ್ಟರ್ ಬಂದಿದ್ದರು.
ನಾವು ಸಮಯ ಪರಿಪಾಲನೆ ಮಾಡದಿದ್ದರೂ ಅವರು ಸಮಯಕ್ಕೆ ಅವರು ಸ್ಥಳದಲ್ಲಿದ್ದರು. ಒಂದು ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾದರೂ ಅವರು ಇನಿತೂ ಅಸಹನೆ ತೋರಿಸಲಿಲ್ಲ..ಪುತ್ತೂರು ಕಮ್ಯೂನಿಟಿ ಸೆಂಟರ್ನಲ್ಲಿ ಪೂರ್ವ ನಿಗದಿತ ಒಂದು ವಾರದ ಕೆರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮವಿದ್ದರೂ ನನ್ನ ಆಹ್ವಾನಕ್ಕೆ ಅವರಿಗೆ ಇಲ್ಲ ಎನ್ನಲಾಗಲಿಲ್ಲ. ಇಸ್ಲಾಮಿನಲ್ಲಿ ಕುಟುಂಬ ಸಂಬಂಧ ಗಟ್ಟಿಗೊಳಿಸುವುದರ ಕುರಿತಂತೆ ಉಪನ್ಯಾಸ ನೀಡುವುದರಲ್ಲಿ ಅವರೊಂದು ಅಥಾರಿಟಿ ಎಂಬಷ್ಟು ಪಳಗಿದ್ದಾರೆ. ಅವರು ಒಂದು ಗಂಟೆ ಕಾಲ ನೀಡಿದ ಉಪನ್ಯಾಸ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಕಾರ್ಯಕ್ರಮ ಮುಗಿದು ಹೋಗುವಾಗ ನಮ್ಮ ಮಹಿಳೆಯರು ಪರಸ್ಪರರಿಗೆ ಶುಭಾಶಯ ವಿನಿಮಯ ಮಾಡುವಾಗ ಅನೇಕರ ಕಣ್ಣಾಲಿಗಳೂ ಒದ್ದೆಯಾಗಿದ್ದವು. ಆ ಭಾವುಕ ಕ್ಷಣಗಳನ್ನು ನಾನಂತೂ ತುಂಬಾ ಸಂತಸದಿಂದ ಕಣ್ತುಂಬಿಕೊಂಡೆ..
ಒಂದು ಕಾಮನ್ ವಿಷಯವಿದೆ.. ಮಹಿಳೆಯರಿಗೆ ” ಬೆನ್ನ ಹಿಂದೆ ಮಾತನಾಡುವ “ಒಂದು ಕೆಟ್ಟ ಅಭ್ಯಾಸವಿದೆ. ಪುರುಷರಿಗೆ ತೀರಾ ಇಲ್ಲವೆಂದಲ್ಲ.ಪುರುಷರಿಗೆ ಹೋಲಿಸಿದರೆ ತುಸು ಕಡಿಮೆಯೆನ್ನಲಡ್ಡಿಯಿಲ್ಲ.. ಪುರುಷರಿಗೆ ಈ ಅಭ್ಯಾಸ ಕಡಿಮೆಯಿದ್ದರೆ… ಬೇರೆ ಯಾವುದಾದರೂ ಕೆಟ್ಟ ಅಭ್ಯಾಸ ಮಹಿಳೆಯರಿಗಿಂತ ಹೆಚ್ಚಿರುತ್ತದೆ. ರಫೀಕ್ ಮಾಸ್ಟರ್ ಮಾತುಗಳು ಹೃದಯಕ್ಕೆ ನಾಟಿದ್ದರಿಂದ ಪರಸ್ಪರರು ಇಸ್ಲಾಮೀ ಶಿಷ್ಟಾಚಾರದಂತೆ ಪರಸ್ಪರರಿಗೆ ಶುಭ ಹಾರೈಸಿದರು.ನೇರವಾಗಿ ಯಾರು ಯಾರಿಂದಲೂ ಕ್ಷಮೆಯಾಚಿಸದಿದ್ದರೂ ಅವರ ಹೃದಯಗಳು ಕ್ಷಮೆಯಾಚಿಸುತ್ತಿತ್ತು ಎನ್ನುವುದಕ್ಕೆ ತುಂಬಿದ ಕೊಳಗಳಂತಾಗಿದ್ದ ಕಣ್ಣಾಲಿಗಳು ಅದಕ್ಕೆ ಪುರಾವೆ ಒದಗಿಸುತ್ತಿತ್ತು.
ಮಸೀದಿಯಲ್ಲಿ ಆಝಾನ್ ಕರೆದು ಸ್ವಲ್ಪ ಹೊತ್ತಲ್ಲೇ ಸಾಮೂಹಿಕ ನಮಾಝ್ ಆರಂಭಿಸಲಾಗುತ್ತದೆ. ನಾಡ ರಾಜನೇ ಆದರೂ ಆತ ಬರುವವರೆಗೆ ಸಾಮೂಹಿಕ ನಮಾಝ್ಗೆ ಕಾಯುವ ಪದ್ಧತಿಯಿಲ್ಲ. ಇಬ್ಬರೇ ಆದರೂ ಸಮಯಕ್ಕೆ ಆರಂಭಿಸಲೇಬೇಕು. ಕೂಲಿಯಾಳುಗಳು ಮೊದಲು ಬಂದರೆ ಆ ಬಳಿಕ ಖಲೀಫ/ ರಾಜ ಬಂದರೂ ಆತನಿಗಾಗಿ ಯಾರೂ ಜಾಗ ಬಿಟ್ಟು ಕೊಡುವ ಹಾಗಿಲ್ಲ. ರಾಜ ತಡವಾದರೆ ಆತ ಬಡ ಕೂಲಿಯಾಳಿಗಿಂತಲೂ ಮೊದಲ ಹಂತದಲ್ಲಿ ನಿಲ್ಲಲು ಅವಕಾಶ ಕೋರುವಂತಿಲ್ಲ..
ನಮ್ಮಲ್ಲಿ ಅನೇಕ ದಾನಿಗಳಿದ್ದಾರೆ. ಕೆಲವರು ಕುಟುಂಬದಲ್ಲಿರುವ ಬಡವರನ್ನು ಕಡೆಗಣಿಸಿ ಇತರ ಬಡವರಿಗೆ ಸಹಾಯ ಮಾಡುತ್ತಾರೆ. ಮೊದಲು ನಿನ್ನ ಮನೆ, ಕುಟುಂಬ ಮತ್ತು ನೆರೆ ಹೊರೆಯವನ ನೋವಿಗೆ ಕಷ್ಟಕ್ಕೆ ಸ್ಪಂದಿಸು ಎನ್ನುವುದಾಗಿದೆ ಇಸ್ಲಾಮಿನ ಆಜ್ಞೆ. ಕುಟುಂಬಿಕರಿಗೆ ಕೊಟ್ಟರೆ ಎರಡು ಪ್ರತಿಫಲವಿದೆ. ” ಒಂದು ದಾನ ಮಾಡಿದ್ದು, ಎರಡು ಕುಟುಂಬ ಬಂಧ ಗಟ್ಟಿಗೊಳಿಸಿದ್ದು. ಪ್ರವಾದಿ ವರ್ಯರು ಕುಟುಂಬ ಬಂಧ ಗಟ್ಟಿಗೊಳಿಸುವ ಕುರಿತಂತೆ ಹತ್ತಾರು ಸಂಪುಟಗಳಿಗಾಗುವಷ್ಟು ವಿಷಯಗಳನ್ನು ನಮಗೆ ಬೋಧಿಸಿದ್ದಾರೆ. ಅವರ ಒಂದು ವಚನ ಹೀಗಿದೆ ” ನಿಮ್ಮಲ್ಲಿ ಯಾರಾದರೂ ದೀರ್ಘಾಯುಷ್ಯ ಮತ್ತು ನಿಮ್ಮ ಆಹಾರದಲ್ಲಿ ಸಮೃದ್ಧಿ ಬಯಸುವಿರಾದರೆ ಕುಟುಂಬ ಬಂಧ ಗಟ್ಟಿಗೊಳಿಸಿರಿ..”
ಇಂತಹ ಹತ್ತಾರು ವಿಷಯಗಳನ್ನು ರಫೀಕ್ ಮಾಸ್ಟರ್ ಹೃದಯದ ಭಾಷೆಯಲ್ಲಿ ಮಾತನಾಡಿದರು.. ಎಪ್ಪತ್ತು ಸಾವಿರ ಸಂಬಳವಿದ್ದ ಸರಕಾರಿ ಶಿಕ್ಷಕ ಹುದ್ದೆಯನ್ನು ತ್ಯಜಿಸಿದ ಅವರು ಮುಸ್ಲಿಂ ಸಮುದಾಯಕ್ಕೊಂದು ಆಸ್ತಿ. ಅಮಲು ಮುಕ್ತ ಸಮಾಜ ನಿರ್ಮಾಣ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ, ಬಡವರ ಕಣ್ಣೀರೊರೆಸಲು ಪ್ರೇರೇಪಣೆ ಹೀಗೆ ಒಂದು ದಿನವೂ ಬಿಡುವಿಲ್ಲದೇ ಅವರು ತನ್ನನ್ನು ತಾನು ಸಮಾಜಕ್ಕರ್ಪಿಸಿ ದುಡಿಯುತ್ತಿದ್ದಾರೆ. ಅಲ್ಲಾಹನು ಅವರಿಗೆ ಸದಾ ಒಳಿತನ್ನೇ ನೀಡಲಿ…
– ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.