ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸೆ.6ರ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ಅಮೃತ್ ಗ್ರಾಮ ಪಂಚಾಯತ್ ಯೋಜನೆ ಅನುಷ್ಠಾನದ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 27 ಗ್ರಾಮ ಪಂಚಾಯತ್ಗಳನ್ನು ಅಮೃತ್ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅಮೃತ್ ಯೋಜನೆಯಡಿ ಆಯ್ಕೆ ಮಾಡಲಾದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು, ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಆಯಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು ಎಂದು ಸೂಚಿಸಿದರು. ಅಮೃತ್ ಗ್ರಾಮ ಪಂಚಾಯತ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯತ್ಗೆ 25 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದರು.
ಬಂಟ್ವಾಳ ತಾಲೂಕಿನ ಸಂಗಬೆಟ್ಟು, ಇರ್ವತ್ತೂರು, ಪಿಲಾತ ಬೆಟ್ಟು, ಕಡೇಶ್ವಾಲ್ಯ, ಬಾಳೆಪುಣಿ ಹಾಗೂ ಇಡ್ಕಿದು, ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಕೊಕ್ಕಡ, ಧರ್ಮಸ್ಥಳ, ಉಜಿರೆ, ಹೊಸಂಗಡಿ, ಅಳದಂಗಡಿ, ಕಡಬ ತಾಲೂಕಿನ ಸವಣೂರು, ಅಲಂಕಾರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಆರ್ಯಾಪು, ಕಬಕ, ಸುಳ್ಯ ತಾಲೂಕಿನ ಅರಂತೋಡು, ಮಂಡೆಕೋಲು, ಮರ್ಕಂಜ, ಮೂಡಬಿದ್ರೆ ತಾಲೂಕಿನ ಬೆಳುವಾಯಿ, ತೆಂಕಮಿಜಾರು, ಮಂಗಳೂರು ತಾಲೂಕಿನ ಬಡಗ ಎಡಪದವು, ಗಂಜಿಮಠ, ಮುನ್ನೂರು, ಹಳೆಯಂಗಡಿ, ಪೆರ್ಮುದೆ ಗ್ರಾಮ ಪಂಚಾಯತ್ಗಳು ಅಮೃತ್ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದವರು ಹೇಳಿದರು.
ಅಮೃತ್ ಗ್ರಾಮ ಪಂಚಾಯತ್ ಅನುಷ್ಠಾನ ಮಾಡಲು ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ನಳ ಸಂಪರ್ಕ, ಗ್ರಾಮ ಪಂಚಾಯತ್ ಸ್ವಂತ ಅಥವಾ 15 ನೇ ಹಣಕಾಸು ಯೋಜನೆಯಡಿ ಬೀದಿ ದೀಪಗಳು ಮತ್ತು ಸೋಲಾರ್ ದೀಪಗಳ ಅಳವಡಿಕೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯಾನವನಗಳ ನಿರ್ಮಾಣ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಅನುದಾನದಿಂದ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ, ಮಹಾತ್ಮ ಗಾಂಧಿ ನರೇಗಾ, ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶಾಲೆ, ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು, ಆಟದ ಮೈದಾನ, ಆವರಣ ಗೋಡೆಗಳ ನಿರ್ಮಾಣ, ಗ್ರಾಮ ಪಂಚಾಯತ್ ಸ್ವಂತ ಅನುದಾನ ಹಾಗೂ 15 ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತ್ ಡಿಜಿಟಲೀಕರಣ, ಸ್ವಚ್ಛ ಭಾರತ ಮಿಷನ್ ಹಾಗೂ 15 ನೇ ಹಣಕಾಸು ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು. ಶಾಸಕರಾದ ರಾಜೇಶ್ ನಾಯ್ಕ್, ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಕುಮಾರ್ ಹಾಗೂ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.