ಮಂಗಳೂರು (www.vknews.com) : ಸೆಪ್ಟೆಂಬರ್ 17ರಂದು ಜಿಲ್ಲೆಯಾದ್ಯಂತ ನಡೆಯುವ ಬೃಹತ್ ಲಸಿಕಾ ಮೇಳ ಯಶಸ್ವಿಯಾಗುವಂತೆ ಕಾರ್ಯ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೆಪ್ಟೆಂಬರ್ 14ರ ಮಂಗಳವಾರದಂದು ವಿಧಾನಸೌಧದ ಸಮಿತಿ ಕಚೇರಿಯಲ್ಲಿ ನಡೆದ ಸೆಪ್ಟೆಂಬರ್ 17ರಂದು ನಡೆಯುವ ಬೃಹತ್ ಲಸಿಕಾ ಮೇಳದ ಕುರಿತು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 1,50,000 ಲಸಿಕಾಕರಣ ಗುರಿಯನ್ನು ನೀಡಲಾಗಿದ್ದು, ಜಿಲ್ಲೆಯ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆಯನ್ನು ನೀಡುವ ಕೆಲಸವಾಗಬೇಕು ಹಾಗೂ ಈ ಮೇಳವನ್ನು ಯಶಸ್ವಿಯಾಗಿಸಬೇಕು ಎಂದು ಸೂಚಿಸಿದರು.
ಸೆಪ್ಟೆಂಬರ್ 17ರಂದು ಸರಿಯಾದ ವಾಹನದ ವ್ಯವಸ್ಥೆ, ಲಸಿಕಾ ಕೇಂದ್ರಗಳ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಂಬಂಧಪಟ್ಟ ಅಧಿಕಾರಿಗಳು ಮುಂಚಿತವಾಗಿ ಪೂರ್ವ ಸಿದ್ಧತಾ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಹಾಗೂ ನಸಿರ್ಂಗ್ ಕಾಲೇಜುಗಳ ವೈದ್ಯಕೀಯ ಸಿಬ್ಬಂದಿಗಳ ಸಹಯೋಗ ಪಡೆದುಕೊಂಡು ಜಿಲ್ಲಗೆ ನೀಡಿದ ಗುರಿಯನ್ನು ಸಾಧಿಸಿ ಎಂದು ಕರೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಗಡಿಭಾಗದ ಗ್ರಾಮಗಳು ಹಾಗೂ ನಗರ ಪ್ರದೇಶದಲ್ಲಿ ಕೊಳಗೇರಿಗಳಲ್ಲಿ ವಾಸಿಸುವ ಮನೆಗಳಿಗೆ ಭೇಟಿ ನೀಡಿ ಹಾಗೂ ಹೆಚ್ಚು ಹೆಚ್ಚು ಲಸಿಕಾ ಕೇಂದ್ರಗಳನ್ನು ತೆರೆಯಲು ತಿಳಿಸಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಮಾತನಾಡಿ, ಸೆಪ್ಟೆಂಬರ್ 17ರ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ಮನೆಮನೆಗೆ ತೆರಳಿ ಲಸಿಕೆ ಪಡೆಯದೇ ಇರುವವರ ಮಾಹಿತಿ ಪಟ್ಟಿಯನ್ನು ಪಡೆದುಕೊಂಡು ಲಸಿಕೆ ಹಾಕಿಕೊಳ್ಳಲು ಬರುವಂತೆ ತಿಳಿ ಹೇಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾ ಗ್ರಾಮ ಸಹಾಯಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಪ್ರತಿ ಪಂಚಾಯಿತಿಗಳಲ್ಲಿ ಸಭೆ ನಡೆಸಿ ಬೃಹತ್ ಲಸಿಕೆ ಮೇಳದ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಕಿಶೋರ್, ಡಿಯುಡಿಸಿ ಗಾಯತ್ರಿ ನಾಯಕ್ ಹಾಗೂ ಮತ್ತಿತರ ವೈದ್ಯಾಧಿಕಾರಿಗಳು ವಿಡಿಯೋ ಸಂವಾದದಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.