ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿ ಯಾರು?
(www.vknews.com) : ಹೆಣ್ಣುಮಕ್ಕಳ ಸ್ವಾತಂತ್ರ್ಯ ಬಯಸದವರು ಇದಕ್ಕೆಲ್ಲ ಹೆಣ್ಣುಮಕ್ಕಳಿಗೆ ಸಿಕ್ಕ ಅತಿಯಾದ ಸ್ವಾತಂತ್ರ್ಯ ಅಥವಾ ಸಿಕ್ಕ ಸ್ವಾತಂತ್ರ್ಯವನ್ನು ಅವರು ಸ್ವೇಚ್ಛಾಚಾರ ಎಂದುಕೊಂಡಿರುವುದೇ ಕಾರಣ ಎಂದು ಹೆಣ್ಣುಮಕ್ಕಳನ್ನೇ ಅಪರಾಧಿಗಳನ್ನಾಗಿಸುತ್ತಾರೆ. ಆದರೆ ಹೆಣ್ಣು ಗಂಡು ಎನ್ನುವ ಬೇಧ ಮಾಡದೆ ಎಲ್ಲರನ್ನೂ ಸಮಾನವಾಗಿ ನೋಡಲು ಬಯಸುವ ಮನಸ್ಥಿತಿಯವರು ನಿಜವಾದ ಅಪರಾಧಿಗಳ್ಯಾರು, ತಪ್ಪಾಗುತ್ತಿರುವುದು ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಂಗಭೂಮಿ, ದೃಶ್ಯ ಮಾಧ್ಯಮ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಶ್ರೀಹರ್ಷ ಹುಣಸೂರು ಅವರು ನಿರ್ದೇಶಿಸಿ ಇತ್ತೀಚೆಗೆ ಯುಟ್ಯೂಬಿನಲ್ಲಿ ಬಿಡುಗಡೆಯಾಗಿರುವ ’ನೀ… ಅಪರಾಧಿ’ ಕಿರುಚಿತ್ರ ನಮ್ಮನ್ನು ಇನ್ನೊಂದಿಷ್ಟು ಯೋಚಿಸುವಂತೆ ಮಾಡುತ್ತದೆ. ಹಾಗೂ ಕನ್ನಡ ಕಿರುಚಿತ್ರಗಳು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಚಿತ್ರಿತಗೊಳ್ಳುತ್ತಿರುವುದು ಹೊಸ ಭರವಸೆಯನ್ನೂ ಹುಟ್ಟು ಹಾಕುತ್ತದೆ.
ಆದ್ದರಿಂದಲೇ ಬೆಂಗಳೂರು ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಇತ್ತೀಚೆಗೆ ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ’ಮಹಿಳಾ ಸುರಕ್ಷತೆ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ’ನೀ… ಅಪರಾಧಿ’ ಕಿರುಚಿತ್ರದ ಪ್ರದರ್ಶನ ಏರ್ಪಡಿಸಿದ್ದರು. ಏನೂ ತಪ್ಪು ಮಾಡದೇ, ತಮ್ಮ ಪಾಡಿಗೆ ತಮಗಿಷ್ಟ ಬಂದಂತೆ ಬದುಕು ಕಟ್ಟಿಕೊಳ್ಳುವ, ಮನೆ ನಡೆಸಲು ಹಗಲು ರಾತ್ರಿ ದುಡಿಯುವ ಹೆಣ್ಣುಮಕ್ಕಳು ಹೇಗೆ ಅತ್ಯಾಚಾರದ ಕ್ರೌರ್ಯಕ್ಕೆ ಬಲಿಯಾಗುತ್ತಾರೆ ಎನ್ನುವುದನ್ನು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿರುವ ಈ ಕಿರುಚಿತ್ರದ ಬಗ್ಗೆ ಸಂವಾದದಲ್ಲಿ ಪಾಲ್ಗೊಂಡವರು ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀಹರ್ಷ ಮತ್ತು ತಂಡವನ್ನು ಅಭಿನಂದಿಸಿದರು.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ರಾಗಿ ಕೆಲಸ ಮಾಡುತ್ತಲೇ, ಹವ್ಯಾಸಿ ರಂಗಭೂಮಿ ಹಾಗೂ ದೃಶ್ಯ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಹರ್ಷ ಹುಣಸೂರು ಅವರು ಅತ್ಯಾಚಾರದ ಕಥಾಹಂದರವನ್ನಿಟ್ಟುಕೊಂಡು ಚಿತ್ರಿಸಿರುವ, ಅತ್ಯಾಚಾರದ ಪರಿಣಾಮಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ನೋಡುಗನಿಗೆ ದಾಟಿಸುವ ‘ನೀ… ಅಪರಾಧಿ’ ಕಿರುಚಿತ್ರ ಈಗ ಯುಟ್ಯೂಬಿನಲ್ಲಿ ಬಿಡುಗಡೆಯಾಗಿದೆ.
ಈ ಕಿರುಚಿತ್ರದ ಟ್ರೇಲರ್ರನ್ನು ನಟಿ ಅನಿತಾ ಭಟ್ ಅವರು ಬಿಡುಗಡೆಗೊಳಿಸಿ, ತಂಡವನ್ನು ಮೆಚ್ಚಿಕೊಂಡಿದ್ದರು.
ಅತ್ಯಾಚಾರಕ್ಕೊಳಗಾಗುವ ಸಾವಿರಾರು ಕನಸುಗಳನ್ನು ಕಟ್ಟಿಕೊಂಡ ಅಮಾಯಕ ಹುಡುಗಿ, ಆಕೆಯನ್ನು ಕಳೆದುಕೊಂಡ ತಾಯಿಯ ಸಂಕಟ, ಮಗಳನ್ನು ಕಳೆದುಕೊಂಡ ತಾಯಿಯ ಕಲ್ಪನೆಯಲ್ಲಿ ಮಗಳೇ ಎದುರಾದಂತೆ ಅನ್ನಿಸುವ ಭಾವುಕ ಅಂತ್ಯ… ಅತ್ಯಾಚಾರ ಎನ್ನುವುದು ಒಂದು ಸಮಾಜವನ್ನು ಹೇಗೆ ವಿಚಲಿತಗೊಳಿಸುತ್ತದೆಯೋ ಹಾಗೇ ಒಂದು ಕುಟುಂಬವನ್ನು ಅದರ ಕೊನೆಯತನಕವೂ ಹೇಗೆ ಸಂಕಟಕ್ಕೊಡುತ್ತಲೇ ಇರುತ್ತದೆ ಎನ್ನುವುದನ್ನು ಶ್ರೀಹರ್ಷ ಅವರು ಈ ಕಿರುಚಿತ್ರದಲ್ಲಿ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ.
ನೀ… ಅಪರಾಧಿ ಕಿರುಚಿತ್ರದಲ್ಲಿ ನಟಿಸಿರುವ ಬಹುತೇಕರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಆದ್ದರಿಂದ ನಟನೆಯಲ್ಲಿ ಎಲ್ಲರೂ ಮೆಚ್ಚುಗೆ ಗಳಿಸುತ್ತಾರೆ. ನಿಧಿ ಪಾತ್ರದಲ್ಲಿ ನಟಿಸಿರುವ ಕುಸುಮ ಅವರ ಮುಗ್ಧ ಚೆಲುವು ಹಾಗೂ ಆ ಪಾತ್ರವೇ ಆದಂತೆ ಅವರು ನಟಿಸಿರುವ ರೀತಿ ಇಷ್ಟವಾಗುತ್ತದೆ. ರಾಧಳಾಗಿ ನಟಿಸಿರುವ ಅಮೂಲ್ಯ, ಅಮ್ಮನಾಗಿ ಅರ್ಚನಾ, ಶ್ರೇಯಸ್, ಮಹೇಶ್, ಯಕ್ಷ ಸೇರಿದಂತೆ ಎಲ್ಲರ ನಟನೆಯೂ ಚಿತ್ರವನ್ನು ಗಟ್ಟಿಯಾಗಿಸಿದೆ. ಜ್ಞಾನಚಂದ್ರ ಕ್ಯಾಮರಾ ಹಾಗೂ ಸಂಕಲನ, ಪ್ರಣವ್ ಕಾರಂತ ಅವರ ಸಂಗೀತ, ವಾಗೀಶ್ ಚನ್ನಗಿರಿ ಹಾಗೂ ವಿನೋದ್ ಕುಮಾರ್ ಅವರ ಸಾಹಿತ್ಯ, ಕ.ಶಿ. ಮೋಹನ್ ಕುಮಾರ್ ಅವರ ಸಂಭಾಷಣೆ, ಶೀರ್ಷಿಕೆ ವಿನ್ಯಾಸ ಈ ಕಿರುಚಿತ್ರಕ್ಕಿದೆ.
ಕಥೆ, ಪರಿಕಲ್ಪನೆಯೊಂದಿಗೆ ನೀ…ಅಪರಾಧಿ ಕಿರುಚಿತ್ರವನ್ನು ನಿರ್ದೇಶಿಸಿರುವ ಶ್ರೀಹರ್ಷ ಹುಣಸೂರು ಮೂಲತಃ ಮೈಸೂರಿನವರಾಗಿದ್ದು, ಸಧ್ಯ ಸಾಫ್ಟ್ವೇರ್ ಇಂಜಿನಿಯರ್ರಾಗಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ರಂಗಭೂಮಿಯಲ್ಲಿ ಕಳೆದ ಆರು ವರ್ಷಗಳಿಂದ ತೊಡಗಿಸಿಕೊಂಡಿರುವ ಇವರು, ಹಲವಾರು ಹವ್ಯಾಸಿ ರಂಗ ತಂಡಗಳಲ್ಲಿ ದುಡಿದ ಅನುಭವ ಹೊಂದಿದ್ದು, ಸಧ್ಯ ರಾಜೇಂದ್ರ ಕಾರಂತರ ‘ಚಿತ್ತಾರ ರಂಗ ತಂಡ’ ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಮಗ ಬಾಬು ಹಿರಣ್ಣಯ್ಯನವರ ‘ಡ್ರಾಮಾಟಿಕ್ಸ್’ ರಂಗತಂಡದಲ್ಲಿ ಸಕ್ರಿಯವಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ‘ನಮ್ದೇ ನಟನೆ’ ಬ್ಯಾನರ್ ಮೂಲಕ ಕಿರುಚಿತ್ರಗಳ ನಿರ್ಮಾಣ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದು, ’ನೀ… ಅಪರಾಧಿ’ ಕಿರುಚಿತ್ರ ಅವರ ಇತ್ತೀಚಿನ ಪ್ರಯತ್ನವಾಗಿದೆ. ನೀವೂ ನೀ… ಅಪರಾಧಿ ಕಿರುಚಿತ್ರವನ್ನು ನೋಡಬೇಕೆಂದರೆ, ನಮ್ದೇ ನಟನೆ ಯುಟ್ಯೂಬ್ ಚಾನೆಲ್ಲಿಗೆ ಭೇಟಿ ನೀಡಿ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬಹುದು.
ಕಿರುಚಿತ್ರವನ್ನು ನೋಡಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ : https://youtu.be/o1CJthEtsRM
-ಆರುಡೋ ಗಣೇಶ, ಕೋಡೂರು
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.