ಜಿಲ್ಲೆಯಲ್ಲಿ ಶಂಕಿತ ಸೋಂಕು ಒಂದೂ ದೃಢಪಟ್ಟಿಲ್ಲ : ಜಿಲ್ಲಾಧಿಕಾರಿ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದುಬೈಯಿಂದ ಬಂದ ಉಳ್ಳಾ ನಿವಾಸಿಯ ರಕ್ತದ ಮಾದರಿ ಪರೀಕ್ಷೆಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, ಈತನಿಗೆ ಕೊರೊನಾ ಸೋಂಕು ಇಲ್ಲ ಎಂಬುದು ಸ್ಪಷ್ಟವಾಗಿದ್ದು, ಅಧಿಕಾರಿಗಳು ಹಾಗೂ ಜನ ನಿಟ್ಟುಸಿರುವ ಬಿಟ್ಟಿದ್ದಾರೆ.
ದುಬೈಯಿಂದ ಬಂದು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಜ್ವರ ಕಾರಣದಿಂದ ಶಂಕಿತ ಕೊರೊನಾ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅಲ್ಲಿಂದ ತಪ್ಪಿಸಿಕೊಂಡು ವಿಟ್ಲದ ತನ್ನ ಪತ್ನಿ ಮನೆಗೆ ಬಂದಿದ್ದ ಉಳ್ಳಾಲ ನಿವಾಸಿ ಅವರನ್ನು ಪತ್ತೆ ಹಚ್ಚಿದ ಅಧಿಕಾರಿಗಳ ತಂಡ ಆತನ ಮನವೊಲಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಐಸೋಲೇಶನ್ ಘಟಕದಲ್ಲಿಸಿದ್ದರು. ಆತನ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ 48 ಗಂಟೆಗಳ ಬಳಿಕ ವರದಿ ಬರುವವರೆಗೂ ತೀವ್ರ ನಿಗಾದಲ್ಲಿರಿಸಿದ್ದರು.
ಇದೀಗ ಈತ ಸಹಿತ ಒಟ್ಟು 7 ಜನರ ವರದಿ ಬಂದಿದ್ದು ಎಲ್ಲರ ವರದಿಯಲ್ಲಿಯೂ ನೆಗೆಟಿವ್ ಅಂಶ ಕಂಡು ಬಂದಿದೆ. ಆದರೆ 14 ದಿನ ಜಾಗರೂಕತೆಯಿಂದ ಇರಲು ಸೂಚಿಸಿದ್ದೇವೆ. ಇಲ್ಲಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಶಂಕಿತ ಕೇಸ್ ಪತ್ತೆಯಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಮಾಹಿತಿ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ಅಂಬುಲೆನ್ಸ್ ರೆಡಿ ಇದೆ. ಓರ್ವ ಡಾಕ್ಟರ್, ಇಬ್ಬರು ಅಸಿಸ್ಟೆಂಟ್ಗಳು ಕರ್ತವ್ಯದಲ್ಲಿದ್ದಾರೆ. ವಿದೇಶದಿಂದ ಬರುವ ವಿಮಾನಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ವಿಮಾನ ನಿಲ್ದಾಣ, ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ತಿಳಿಸಿದ್ದಾರೆ.