(www.vknews.in)
ರಾಜ್ಯ ,ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಪ್ಪತ್ತು ಹಾಗು ಸವಾಲಾಗಿ ಪರಿಣಮಿಸಿರುವ ಕೋವಿಡ್ ೧೯; ಕೊರೋನ ವೈರಸ್ ನ ಪರಿಣಾಮ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಸಮುದಾಯದ ಮಟ್ಟದಲ್ಲಿ ಈ ವೈರಸ್ ಹರಡದಂತೆ ತಡೆಯಲು ಕೇಂದ್ರ ಹಾಗು ರಾಜ್ಯ ಸರ್ಕಾರ ಎಲ್ಲವನ್ನು ಲಾಕ್ ಡೌನ್ (ಬಂಧ್) ಮಾಡುವ ಮೂಲಕ ಶಾಲಾ -ಕಾಲೇಜುಗಳಿಗೆ ಶಿಕ್ಷಕರಿಗೆ ರಜೆ ನೀಡಿದೆ. ಎಚ್ಚರಿಕೆಯಿಂದ ವೈದ್ಯಕೀಯ ಕಾರಣಗಳಿಗಾಗಿ ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ಸೋಂಕು ಮಕ್ಕಳಿಗೆ,ಕುಟುಂಬಕ್ಕೆ ಶಿಕ್ಷಕರಿಗೆ ಹಾಗು ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದು ಸ್ವಾಗತಾರ್ಹ. ಇದು ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಅನಿವಾರ್ಯತೆ ಕೂಡ ಆಗಿತ್ತೆಂಬುದು ವಾಸ್ತವದ ಸಂಗತಿ.
ಕೋವಿಡ್-19 ಜಗತ್ತಿನ ಶೈಕ್ಷಣಿಕ ವ್ಯವಸ್ಥೆಯ ಸುಮಾರು 1.57 (1,575,270,054) ಬಿಲಿಯನ್ ವಿದ್ಯಾರ್ಥಿಗಳ ಅಂದರೆ ಸರಿಸುಮಾರು157 ಕೋಟಿ ದಾಖಲಾಗಿರುವ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮವನ್ನುಂಟುಮಾಡಿದೆ. ಜಗತ್ತಿನಾದ್ಯಂತ ಕೋವಿಡ್-19 ರ ಪರಿಣಾಮಕ್ಕೆ ಒಳಗಾದ ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ 91.3.ಇದರ ಪರಿಣಾಮ 191 ದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಿವೆ.
ನಮ್ಮ ರಾಜ್ಯದಲ್ಲಿ ಸರಿಸುಮಾರು 77,000 ಶಾಲೆಗಳು, 1.03 ಕೋಟಿ ಮಕ್ಕಳು (ಪೂರ್ವ ಪ್ರಾಥಮಿಕದಲ್ಲಿ 5,97,346,ಪ್ರಾಥಮಿಕದಲ್ಲಿ 55,03,960,ಹಿರಿಯ ಪ್ರಾಥಮಿಕದಲ್ಲಿ 30,72,836 ಮತ್ತು ಪ್ರೌಢ ಶಾಲೆಯಲ್ಲಿ 18,00,674) ಮತ್ತು ಸುಮಾರು 3 ಲಕ್ಷ ಶಿಕ್ಷಕರು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ . ಇದರ ಪರಿಣಾಮ ಮಕ್ಕಳ ಮೇಲೆ ಹೆಚ್ಚು ಕಾರಣ ಅವರ ಸಂಖ್ಯೆ ಹೆಚ್ಚು. ಇಂಥಹ ಸವಾಲಿನ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕೈಗೊಳ್ಳಬಹುದಾದ ತೀರ್ಮಾನಗಳ ಬಗ್ಗೆ ಬೆಳಕು ಚೆಲ್ಲುವ ಆಶಯದಿಂದ ಈ ಟಿಪ್ಪಣಿ ಬರೆಯುತ್ತಿದ್ದೇನೆ.
ಮಕ್ಕಳಲ್ಲಿ ಸಾಮೂಹಿಕ ಜಾಗೃತಿ
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಹಾಗು ಮುಂದಿನ ವಿದ್ಯಾಭ್ಯಾಸದ ಪೂರ್ವ ಸಿದ್ಧತೆಗೆ ನಿರ್ಣಾಯಕ ಸಮಯವೆಂದೇ ಭಾವಿಸಿರುವ ಮಾರ್ಚ್-ಏಪ್ರಿಲ್-ಮೇ ತಿಂಗಳಿನಲ್ಲಿ ಈ ಪರಿಸ್ಥಿತಿ ಎದುರಾಗಿದ್ದು ಸ್ವಾಭಾವಿಕವಾಗಿ ಇಡೀ ಶೈಕ್ಷಣಿಕ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಪಾಲಕರಲ್ಲಿ ಹಲವು ಬಗೆಯ ಆತಂಕ ಮತ್ತು ಅನಿಶ್ಚತೆಯನ್ನು ಉಂಟು ಮಾಡಿತು ಎಂಬುದು ಕಟು ಸತ್ಯ ಹಾಗು ನಿರ್ವಿವಾದ ಸಂಗತಿ. ಇದು ಪಾಲಕರಲ್ಲಿ ಮತ್ತು ಮಕ್ಕಳಲ್ಲಿ ಹಲವು ಬಗೆಯ ಆತಂಕ, ಭಯ ಹಾಗು ಕೌತುಕವನ್ನು ಹುಟ್ಟು ಹಾಕಿದೆ/ಹಾಕುತ್ತಿದೆ. ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಾಸ್ತವ ಅಂಶಗಳನ್ನು ಪಾಲಕರಿಗೆ-ಮಕ್ಕಳಿಗೆ ತಿಳಿಸುವ ಮೂಲಕ, ಈ ಸಮಸ್ಯೆ ನಮ್ಮ ರಾಜ್ಯ-ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಎದುರಾಗಿರುವ ಅತಿ ದೊಡ್ಡ ಶೈಕ್ಷಣಿಕ ಬಿಕ್ಕಟ್ಟು ಎಂಬುದನ್ನು ಬಿಡಿಸಿ ಹೇಳುವ ಪ್ರಯತ್ನ ಮಾಡಬೇಕಿದೆ.ಇಲ್ಲಿಯವರೆಗೆ ನಾವು ವಯಸ್ಕರನ್ನು ಆಧಾರವಾಗಿಟ್ಟುಕೊಂಡು ಜಾಗೃತಿ ಮೂಡಿಸಿದ್ದೇವೆ. ಮಕ್ಕಳ ಆರೋಗ್ಯದ ಜೊತೆಗೆ ಅವರ ಮಾನಸಿಕ ಆತಂಕ, ಭಯ ಇತ್ಯಾದಿಗಳನ್ನು ಗಮನದಲ್ಲಿರಿಸಕೊಂಡು ಜಾಗೃತಿ ಮೂಡಿಸಬೇಕಾದ ಕೆಲಸ ಇನ್ನು ಪ್ರಾರಂಭವಾಗಬೇಕಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ಮಕ್ಕಳು ಓಡಾಡಲು ಪ್ರಾರಂಭಿಸಿದಾಗ ಈ ಜಾಗೃತಿ ಬಹಳ ಮುಖ್ಯವಾಗುತ್ತದೆಯಲ್ಲದೆ ವೈರಾಣು ಹರಡದಂತೆ ತಡೆಯಲು ನಿರ್ಣಾಯಕವಾಗುತ್ತದೆ.
ಪರೀಕ್ಷೆಗಳನ್ನು ರದ್ದು ಮಾಡಿ ಮಾನಸಿಕ ನೆಮ್ಮದಿ ನೀಡಿದ್ದು ಸ್ತುತ್ಯಾರ್ಹ.ಈಗ ಮಕ್ಕಳ ಹೊಟ್ಟೆಗೆ ಊಟ ಹಾಕಬೇಕಿದೆ
ಕೋವಿಡ್-19ರ ನಂತರ, ಕೇಂದ್ರೀಯ ವಿದ್ಯಾಲಯಗಳ ಸಂಘಟನೆಯು ತನ್ನ ಎಲ್ಲಾ ಕೇಂದ್ರೀಯ ಶಾಲೆಗಳಲ್ಲಿ 1 ರಿಂದ 8 ನೇತರಗತಿಯ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಸೂಚಿಸಿ ಎಲ್ಲ ರಾಜ್ಯಗಳಿಗೆ ಪತ್ರ ಬರೆಯಿತು. ನಂತರ , ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ , ತಮಿಳುನಾಡು ಮುಂತಾದ ರಾಜ್ಯಗಳು 1 ರಿಂದ 8/9 ನೇತರಗತಿಯ ಎಲ್ಲಾ ಮಕ್ಕಳನ್ನು ಯಾವುದೇ ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ತೇರ್ಗಡೆಗೊಳಿಸುವ ಆದೇಶಗಳನ್ನು ಹೊರಡಿಸಿದವು.ಅದರಲ್ಲೂ ವಿಶೇಷವಾಗಿ ಗುಜರಾತ್ ಸರ್ಕಾರವು 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ತೇರ್ಗಡೆ ಮಾಡಲು ನಿರ್ಧರಿಸಿತು. ಈ ಅಂಶಗಳನ್ನು ಆಧರಿಸಿ ಶಿಕ್ಷಣ ಇಲಾಖೆ 6,7,8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವ ನಿರ್ಧಾರ ಪ್ರಕಟಿಸಿದೆ. ಇದು ಸ್ವಾಗತಾರ್ಹ.
ಪೂರ್ವ-ಪ್ರಾಥಮಿಕದಿಂದ (ಅಂಗನವಾಡಿ) 9ನೇ ತರಗತಿಯವರೆಗಿನ ಮಕ್ಕಳು ಮೇ 31ರವರೆಗೆ ಮನೆಯಲ್ಲಿಯೇ ಇರುತ್ತಾರೆ . ಶಾಲೆಯಲ್ಲಿದ್ದಾಗ ಒಂದು ಹೊತ್ತಿನ ಮಧ್ಯಾಹ್ನದ ಊಟ ಶಾಲೆಯಲ್ಲಿ ದೊರಕುತಿತ್ತು . ಈಗ ಅದೇ ಮಕ್ಕಳಿಗೆ ಮೂರು ಹೊತ್ತಿನ ಊಟದ ವ್ಯವಸ್ಥೆಯಾಗಬೇಕಿದೆ. ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಹೆಚ್ಚಿನ ಮಕ್ಕಳು ಅನಾನುಕೂಲ ಸಮುದಾಯಗಳಿಂದ ಬಂದವರಾಗಿರುವುದರಿಂದ, ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯ ಸಾಕಷ್ಟು ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬೇಕಿದೆ . ವಿಶೇಷವಾಗಿ ಬಡ ಕುಟುಂಬದಲ್ಲಿ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು . ಆದ್ದರಿಂದ, ಏಪ್ರಿಲ್ 11 ,2020 ರ ಮೇ 31 ರವರೆಗೆ ಮಧ್ಯ್ನಾದ ಬಿಸಿಯೂಟದ ಕಾರ್ಯಕ್ರಮದ ಭಾಗವಾಗಿ ಎಲ್ಲಾ ಮಕ್ಕಳಿಗೆ ಪಡಿತರ ವಿತರಿಸಬೇಕು .ಮಕ್ಕಳು ಈಗ ಮೂರು ಹೊತ್ತು ಊಟ ಮನೆಯಲ್ಲಿಯೇ ಊಟ ಮಾಡುವುದರಿಂದ ಬಿಸಿಯೂಟದ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಮಗುವಿಗೆ ಒದಗಿಸುತ್ತಿದ್ದ ಮೂರು ಪಟ್ಟು ದಿನಸಿಯನ್ನು ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ. ಮಕ್ಕಳ ಆಹಾರ , ಆಶ್ರಯ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು .
ಶೈಕ್ಷಣಿಕ ಕ್ಯಾಲೆಂಡರ್ನ ಪ್ರಕಾರ ಸಾಮಾನ್ಯವಾಗಿ ಶಾಲೆಗಳು ಮೇ ಅಂತ್ಯ ಅಥವಾ ಜೂನ್ ಮೊದಲ ವಾರದವರೆಗೆ ಮುಚ್ಚಲ್ಪಟ್ಟಿರುವುದರಿಂದ ಆನ್ಲೈನ್ ತರಗತಿಗಳ, ಕಲಿಕೆ ಮತ್ತು ಕಲಿಯುವುದರ ಬಗ್ಗೆ ಚಿಂತಿಸುವುದನ್ನು ಕಡಿಮೆ ಮಾಡಿ, ಮಕ್ಕಳ ಆಹಾರ , ಆಶ್ರಯ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು . ಈ ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯೆಂದರೆ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಅಗತ್ಯ ಸಾಕಷ್ಟು ನೀರು, ಆಹಾರ, ಪೋಷಣೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು.ಮಕ್ಕಳಿಗೆ ಬೇಕಾದ.ವಿಶೇಷವಾಗಿ ಬಡ ಕುಟುಂಬದಲ್ಲಿ ಯಾವುದೇ ಮಗು ಸಾಕಷ್ಟು ಪೋಷಣೆ ಮತ್ತು ಆಹಾರವಿಲ್ಲದೆ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು . ಆದ್ದರಿಂದ, 2020 ರ ಮೇ 31 ರವರೆಗೆ ಮಧ್ಯ್ನಾದ ಬಿಸಿಯೂಟದ ಕಾರ್ಯಕ್ರಮದ ಭಾಗವಾಗಿ ಎಲ್ಲಾ ಮಕ್ಕಳಿಗೆ ಪಡಿತರ ವಿತರಿಸಬೇಕು .
10ನೇತರಗತಿ ಪರೀಕ್ಷೆ ಹಾಗು ಪಿಯುಸಿಯಲ್ಲಿ ಬಾಕಿ ಇರುವ ಒಂದು ವಿಷಯಕ್ಕೆ ಶಾಲಾ/ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ
ನಮ್ಮ ಮುಂದೆ ಇರುವ ಅತ್ಯಂತ ಸವಾಲಿನ ಮತ್ತು ನಿರ್ಣಾಯಕ ವಿಷಯವೆಂದರೆ 10ನೇತರಗತಿ (ಎಸ್ಎಸ್ಎಲ್ ಸಿ) ಹಾಗು ದ್ವಿತೀಯ ಪಿಯುಸಿ (ಒಂದು ವಿಷಯ) ಮಕ್ಕಳ ಪಬ್ಲಿಕ್ ಪರೀಕ್ಷೆಗಳು. ಈಗಾಗಲೇ ತಿಳಿಸಿದಂತೆ, ಮಾರ್ಚ್-ಏಪ್ರಿಲ್-ಮೇ ತಿಂಗಳು ಶೈಕ್ಷಣಿಕ ವರ್ಷದ ಸಿದ್ಧತಾ ಸಮಯ.ಮಕ್ಕಳ ಮುಂದಿನ ವಿದ್ಯಾಭ್ಯಾಸ , ಸೇರಬೇಕಾದ ವಿದ್ಯಾಸಂಸ್ಥೆಗಳ ಬಗ್ಗೆ ಮಕ್ಕಳಿಗೆ ಪಾಲಕರಿಗೆ ಆತಂಕ ಸಹಜ. ಕೊರೋನಾದ ರಕ್ಷಣೆ ಮತ್ತು ಸುರಕ್ಷತೆಯನ್ನು ಆಧರಿಸಿ ಸರ್ಕಾರವು ಲಾಕ್ ಡೌನ್ ಜಾರಿಯಾದಾಗಿನಿಂದ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಆತ೦ಕ ಮನೆಮಾಡಿದೆ ಎಂಬುದು ಸತ್ಯಸಂಗತಿ.ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಆಲೋಚನೆ ಮತ್ತು ಅಭಿಪ್ರಾಯಗಳನ್ನು ಆಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ತಜ್ಞರು ,ಇಲಾಖೆಯ ಅಧಿಕಾರಿಗಳು ಹಾಗು ಪಾಲಕರು ಆಗಿಂದ್ದಾಗ್ಗೆ ಅಭಿಪ್ರಾಯ ವ್ಯಕ್ತ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಶಿಕ್ಷಣ ಶಾಸ್ತ್ರದ ಅನ್ವಯ ಮಕ್ಕಳು ಎಷ್ಟು ಬೇಗ ಕಲಿಯುತ್ತಾರೆಯೋ ,ಅಷ್ಟೇ ಬೇಗ ಮರೆಯುವ ಸ್ವಭಾವವನ್ನೂ ಹೊಂದಿರುತ್ತಾರೆ. ಇದು ನಮ್ಮ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ರೂಢಿಗತವಾಗಿದೆ . ಕಾರಣ ನಾವು ಅನ್ವಯಕ್ಕಿಂತ ಕಂಟಪಾಠ ಹಾಗು ಸ್ಮರಣೆಗೆ ಹೆಚ್ಚು ಒತ್ತು ನೀಡುತ್ತೇವೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿನ ದೌರ್ಬಲ್ಯ.ಮಕ್ಕಳ ಕಲಿಕಾವಾತಾವರಣ ಬಹು ಆಯಾಮದಲ್ಲಿ ನಡೆಯುವ ಸಹಜ ಕ್ರಿಯೆ. ಹೀಗಿರುವಾಗ ಸಹಪಾಠಿಗಳಿಲ್ಲದೆ, ಶಿಕ್ಷಕರ ಮಾರ್ಗದರ್ಶನವಿಲ್ಲದೆ,ಆರೋಗ್ಯಕರ ಚರ್ಚೆ -ಬಾಹ್ಯ ಪ್ರೇರಣೆ ಇಲ್ಲದೆ ಕಲಿಕೆಗೆ ತೊಡಗುವುದು ಮಗುವಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ .ಕಲಿತ ಮಗು ಪರೀಕ್ಷೆಯನ್ನು ಒಂದು ಸವಾಲಾಗಿ ಸ್ವೀಕರಿಸಿ ಬರೆಯಲು ಮಾನಸಿಕವಾಗಿ ಸಿದ್ಧವಿದ್ದಾಗ ಅದನ್ನು ಮತ್ತೆ ಮತ್ತೆ ಮುಂದೂಡಿದರೆ ಆಗುವ ನಿರಾಸೆ ಮತ್ತು ಆತಂಕದ ಜೊತೆಗೆ ತಾನು ಕಲಿತಿರುವುದನ್ನು ಕಾಯ್ದುಕೊಳ್ಳಲು ಪಡುವ ಆತಂಕ ಸದಾ ಇದ್ದೇ ಇರುತ್ತದೆ . ಈ ಹಿಂದೆ ಹಲವು ಸಂದರ್ಭಗಳಲ್ಲಿ ಪರೀಕ್ಷೆ ಮುಂದೂಡಿದಾಗ ಮಕ್ಕಳಿ ಖಿನ್ನತೆ ಹಾಗು ಆತಂಕಕ್ಕೆ ಒಳಗಾಗಿದ್ದನ್ನು ನಾವು ನೋಡಿದ್ದೇವೆ . ವಿಶೇಷವಾಗಿ , ಮಾರಕ ಕೊರೋನಾದಂತ ಸಂದರ್ಭದಲ್ಲಿ ಈ ಬಗೆಯ ಆತಂಕ ಎರಡು ಬಗೆಯದು; ಒಂದು, ಕೊರೋನಾದಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳುವುದು ಮತ್ತು ಎರಡನೆಯದು, ಬರೆಯಬೇಕಾದ ಪರೀಕ್ಷೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು. ಈ ಆತಂಕಕಾರಿ ಮನೋಸ್ಥಿತಿ ಮಗುವನ್ನು ದುರ್ಬಲಗೊಳಿಸುತ್ತದೆ.
ಈ ಸಂದರ್ಭದಲ್ಲಿ ಸೋಂಕಿತರು, ಭಾದಿತರು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದವರು ಹಾಗು ಕ್ವಾರಂಟೈನ್ನಲ್ಲಿ ಇರುವವರು, ಮುನ್ನೆಚ್ಚರಿಕೆಯಿಂದ ವೈದ್ಯಕೀಯ ಕಾರಣಕ್ಕಾಗಿ ದೈಹಿಕ ಅಂತರ ಕಾಯ್ದುಕೊಂಡವರು ಹೀಗೆ ಎಲ್ಲರೂ ಆತಂಕದಲ್ಲಿದ್ದಾರೆ.ಜೊತೆಗೆ, ಲಾಕ್ ಡೌನ್ ನನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ. ಮೇ 3 ರ ನಂತರ ಏನು ಎಂಬುದು ಇನ್ನೂ ಅನಿಶ್ಚಿತವಾಗಿದೆ .ಹೀಗಿರುವಾಗ , ಎಸ್ ಎಸ್ ಎಲ್ ಸಿ ಮಕ್ಕಳಿಗೆ, ಪಬ್ಲಿಕ್ ಪರೀಕ್ಷೆ ನಡೆಸುವುದು ನಾವಾಗಿ ನಾವೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ಮನುಷ್ಯನ ಜೀವಕ್ಕಿಂತ ಅಮೂಲ್ಯವಾದದ್ದು ಬೇರೊಂದಿಲ್ಲ. ಆದ್ದರಿಂದ ಪರ್ಯಾಯ ವ್ಯವಸ್ಥೆಯನ್ನು ಯೋಚಿಸಬೇಕಿದೆ . ಇಲ್ಲಿ ಎರಡು ಆಯ್ಕೆಗಳಿವೆ:
ಒಂದು, 10ನೇತರಗತಿ ಪರೀಕ್ಷೆ ಹಾಗು ಪಿಯುಸಿಯಲ್ಲಿ ಬಾಕಿ ಇರುವ ಒಂದು ವಿಷಯಕ್ಕೆ ಈ ಬಾರಿ ಪರೀಕ್ಷೆಯಿಂದ ಮಕ್ಕಳಿಗೆ ವಿನಾಯಿತಿ ನೀಡಿ ಆಂತರಿಕ ಅಂಕಗಳ ಆಧಾರದ ಮೇಲೆ ಎಲ್ಲಾ ಮಕ್ಕಳನ್ನು ತೇರ್ಗಡೆಗೊಳಿಸಲು ಕ್ರಮ ಕೈಗೊಳ್ಳುವುದು . ಇದು ಸಾಧ್ಯವಾಗದಿದ್ದಲ್ಲಿ ಪರೀಕ್ಷೆ ನಡೆಸಲು ಪರ್ಯಾಯ ಮಾರ್ಗವನ್ನು ಯೋಚಿಸುವುದು ಮುಖ್ಯವಾಗುತ್ತದೆ.
ಎರಡು, ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಿ ಮುಗಿಸುವುದು. ಈ ಬಾರಿ ಸುಮಾರು ಎಂಟು ಲಕ್ಷ ಮಕ್ಕಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಂದೊಂದು ಪರೀಕ್ಷಾ ಕೇಂದ್ರದಲ್ಲಿ 250-300 ಮಕ್ಕಳು ಎಂದರೂ, ಅವರನ್ನು ಬಿಡಲು ಬರುವ ಅಷ್ಟೇ ಸಂಖ್ಯೆಯ ಪೋಷಕರು,25-30 ಸಿಬ್ಬಂದಿ ಸುಲಭವಾಗಿ ಒಂದು ಕೇಂದ್ರದಲ್ಲಿ ಸೇರುತ್ತಾರೆ. ಇಷ್ಟು ದೊಡ್ಡ ಸಂಖ್ಯೆ ಬಹಳ ಸುಲಭವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಎಲ್ಲಡೆ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆ ಬರೆಯುವುದಾದರೆ, ಇದು ಎಂಥಹ ಆತಂಕವನ್ನು ಸೃಷ್ಟಿಸಬಲ್ಲದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಇಷ್ಟೆಲ್ಲ ಮುಂಜಾಗರೂಕತೆ ಇದ್ದರೂ ನಾವು ಪ್ರತೀ ವಿದ್ಯಾರ್ಥಿಯನ್ನು ಪರೀಕ್ಷೆಗೆ ಒಳಪಡಿಸದ ಕಾರಣ ಸೋಂಕು ತಗುಲಿದರೂ ಅದನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಿದ್ದು ಸೋಂಕು ಕಣ್ಣಿಗೆ ಕಾಣದ ರೀತಿಯಲ್ಲಿ ಹರಡುವ ಸಂಭವನೀಯತೆ ಹೆಚ್ಚಿರುತ್ತದೆ. ಇದು ಅತ್ಯಂತ ಅಪಾಯಕಾರಿ .
ಪರೀಕ್ಷಾ ನಂತರದಲ್ಲಿ ಮೌಲ್ಯ ಮಾಪನ ಕೇಂದ್ರಕ್ಕೆ ಉತ್ತರ ಪತ್ರಿಕೆಯ ಸಾಗಾಟ ನಂತರ ಮೌಲ್ಯ ಮಾಪನಕೇಂದ್ರದಲ್ಲಿ ಸುಮಾರು 400 ರಿಂದ 500 ಶಿಕ್ಷಕರು ಗುಂಪು ಸೇರಿದಾಗ ಶಿಕ್ಷಕರ ಸುರಕ್ಷತೆ ಮತ್ತು ಮುಂಜಾಗ್ರತೆಯ ಕ್ರಮಗಳು ನಿಜಕ್ಕೂದೊಡ್ಡ ಸವಾಲಾಗಿ ಪರಿಣಮಿಸುತ್ತದೆ.ಇದಕ್ಕೆ ಬದಲಾಗಿ, ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಈಗಾಗಲೇ ಸಿದ್ದವಾಗಿರುವ ಪ್ರಶ್ನೆಪತ್ರಿಕೆಗಳನ್ನು ಬಳಸಿ ಆಯಾ ಶಾಲಾ ಮಟ್ಟದಲ್ಲಿಯೇ ನಡೆಸಲು ತೀರ್ಮಾನಿಸುವುದು ಸಾಂದರ್ಭಿಕ ಮತ್ತು ಸಕಾಲಿಕ ತೀರ್ಮಾನವಾಗುತ್ತದೆ. ಪರೀಕ್ಷೆ ನಂತರ ಆಯಾ ವಿಷಯದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಮೌಲ್ಯ ಮಾಪನ ಮಾಡಿ ಅಂಕಗಳನ್ನು ಮಂಡಳಿಗೆ ಕಳಿಸುವುದು ಅತ್ಯಂತ ಪ್ರಾಯೋಗಿಕ ಮತ್ತು ಮುಂಜಾಗರೂಕತೆಯ ತೀರ್ಮಾನವಾಗುತ್ತದೆ.ಎಲ್ಲಕ್ಕಿಂತ ಮಿಗಿಲಾಗಿ, ಮಕ್ಕಳ-ಶಿಕ್ಷಕರ ಜೀವಗಳನ್ನು ರಕ್ಷಿಸುವ ಕಾಪಾಡುವ ದೃಷ್ಟಿಯಿಂದ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸುವುದುಸೂಕ್ತ ಎಂಬ ಕೂಗು ದಟ್ಟವಾಗಿದೆ.ಈ ಹಿನ್ನೆಲೆಯಲ್ಲಿ, ಎಲ್ಲಾ ರೀತಿಯಿಂದ ಈ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಿ ಮಕ್ಕಳಮತ್ತು ಪಾಲಕ ಪೋಷಕರ ಆತಂಕ ಮತ್ತು ಭಯವನ್ನು ಹೋಗಲಾಡಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ .
ಸಂಭವನೀಯ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟಿಸುವುದು (ಜೂನ್ ಕೊನೇ ಅಥವಾ ಜುಲೈ ಮೊದಲ ವಾರ) 2019-20 ನೇ ಸಾಲಿನ 10ನೇತರಗತಿ (ಎಸ್ಎಸ್ಎಲ್ ಸಿ) ಹಾಗು ದ್ವಿತೀಯ ಪಿಯುಸಿ ಮಕ್ಕಳ ಪಬ್ಲಿಕ್ ಪರೀಕ್ಷೆಗಳ ಬಗ್ಗೆ ಇರುವ ಆತಂಕವನ್ನು ನಿವಾರಿಸಲು ಆ ಪರೀಕ್ಷೆಗಳನ್ನು ಶಾಲಾ/ಕಾಲೇಜು ಹಂತದಲ್ಲಿಯೇ ನಡೆಸಲು ಸಂಭವನೀಯ ದಿನಾಂಕಗಳನ್ನು ಪ್ರಕಟಿಸುವುದು. ಉದಾಹರಣೆಗೆ ಜೂನ್ ಕೊನೇ ಅಥವಾ ಜುಲೈ ಮೊದಲ ವಾರ .
ತಾತ್ಕಾಲಿಕವಾಗಿ ಮೇ 31 ಮತ್ತು ನಂತರ ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ
ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ ನಿಲ್ಲುವುದು ಒಂದು ದೊಡ್ಡ ಸವಾಲು ಮತ್ತು ಮಹತ್ವದ ವಿಷಯ. ಈ ಕೆಲಸದ ಭಾಗವಾಗಿ ಪಾಲಕರ ಅಥವಾ ಮಕ್ಕಳ ಸ್ಮಾರ್ಟ್ ಪೋನ್ ಗಳನ್ನು ಬಳಸಿ ಆಯಾ ಶಾಲಾ ವ್ಯಾಪ್ತಿಯ (ಶಾಲಾ ನೆರೆಹೊರೆ) ಮಕ್ಕಳ-ಶಿಕ್ಷಕರ ವಾಟ್ಸ್ಆಫ್ ಗುಂಪುಗಳನ್ನು ರಚಿಸುವುದು .ಈ ಗುಂಪಿನಲ್ಲಿ ಮಕ್ಕಳಿಗೇನಾದರು ಆತಂಕ –ತೊಂದರೆ; ಕಲಿಕೆಯಲ್ಲಾಗಲಿ ಅಥವಾ ವೈಯುಕ್ತಿಕವಾಗಲಿ , ಸಂಶಯಗಳಿದ್ದರೆ ಬಗೆಹರಿಸುವುದು ಮತ್ತು ಪೂರಕ ಬೆಂಬಲವನ್ನು ಒದಗಿಸುವುದು. ಅದೇ ರೀತಿಯಲ್ಲಿ ,ಶಿಕ್ಷಕರು ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ಆತ್ಮಸ್ಥೈರ್ಯ ಹಾಗು ವಿಷಯ ಪುನಾರಾವರ್ತನೆಗೆ ಸಹಾಯ ಮಾಡುವುದು. ಶಿಕ್ಷಕರು ಅವರು ಕಲಿಸುವ ವಿಷಯದಲ್ಲಿ ಮಕ್ಕಳಿಗೆ ಅನುಕೂಲವಗುವಂತೆ ಚಿಕ್ಕ ಚಿಕ್ಕ ವಿಡಿಯೋಗಳನ್ನು ಮಾಡಿ ಗುಂಪಿನಲ್ಲಿ ಹಂಚಿಕೊಳ್ಳಬಹುದು. ಇದು ಮಕ್ಕಳು ನಿರಂತರ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವುದಲ್ಲದೆ ಅವರ ಆತಂಕವನ್ನು ದೂರಮಾಡಿ ಸಿಕ್ಕಿರುವ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ. ಇದೇ ಸೌಲಭ್ಯವನ್ನು ದ್ವಿತೀಯ ಪಿಯುಸಿಯಲ್ಲಿ ಉಳಿದ ವಿಷಯಗಳನ್ನು ಬರೆಯಬೇಕಾದ ವಿದ್ಯಾರ್ಥಿಗಳಿಗೂ ಒದಗಿಸುವುದು .
ಸ್ಮಾರ್ಟ್ ಪೋನ್ ಸೌಲಭ್ಯಗಳಿಲ್ಲದ ಗ್ರಾಮೀಣ ಮಕ್ಕಳಿಗೆ ಬೇಕು ವಿಶೇಷ ಸಹಾಯ
ಸ್ಮಾರ್ಟ್ ಪೋನ್ ಸೌಲಭ್ಯಗಳಿಲ್ಲದ ಗ್ರಾಮೀಣ ಮಕ್ಕಳ ಅದರಲ್ಲೂ ವಿಶೇಷವಾಗಿ ಬಡ ಕೂಲಿ ಕಾರ್ಮಿಕರ ಮತ್ತು ಅವಕಾಶ ವಂಚಿತ ಮಕ್ಕಳ ಸಹಾಯಕ್ಕಾಗಿ ಕನಿಷ್ಠ ಆ ಮಕ್ಕಳು ಊರಿನ ಶಾಲೆಗೆ ಎರಡು ದಿನಕ್ಕೊಮ್ಮೆ ಭೇಟಿನೀಡಲು ಅವಕಾಶ ಕಲ್ಪಸಿ ಅಂದು ಕನಿಷ್ಠ ಒಬ್ಬರು ಶಿಕ್ಷಕರು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳುವುದು . ಈ ಸಂದರ್ಭದಲ್ಲಿ ದೈಹಿಕ/ವೈದ್ಯಕೀಯ ಅಂತರ ಕಾಯ್ದುಕೊಂಡು ಮಕ್ಕಳು ತಮಗಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಕ್ರಮ ವಹಿಸುವುದು. ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಗತ್ಯವಾದ ಮಾಸ್ಕ್ ಹಾಗು ಸ್ಯಾನಿಟೈಜರ್ ನ್ನು ಶಾಲೆಯಲ್ಲಿ ಒದಗಿಸುವುದು
ಎಸ್ಎಸ್ಎಲ್ ಸಿ/ಪಿಯುಸಿ ನಂತರ ಮಕ್ಕಳಿಗಿರುವ ಅವಕಾಶ ಹಾಗು ಅವರು ಬರೆಯಬೇಕಾದ ಅರ್ಹತಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಕೃತ ನಿಖರ ಮಾಹಿತಿ ಮಕ್ಕಳಿಗೆ ಆತಂಕವಿರುವ ಸಂದರ್ಭದಲ್ಲಿ , ಎಸ್ಎಸ್ಎಲ್ ಸಿ/ಪಿಯುಸಿ ನಂತರ ಮಕ್ಕಳಿಗಿರುವ ಅವಕಾಶ ಹಾಗು ಅವರು ಬರೆಯಬೇಕಾದ ಅರ್ಹತಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಕೃತ ನಿಖರ ಮಾಹಿತಿಯನ್ನು ಅವರ ವಾಟ್ಸ್ಆಫ್ ಗುಂಪುಗಳಲ್ಲಿ ರವಾನಿಸುವುದು.
ಮನೆಯಲ್ಲಿ ಮಕ್ಕಳು ನೆಮ್ಮದಿಯಿಂದ ಸೃಜನಾತ್ಮಕವಾಗಿ ತೊಡಗಿಸಕೊಳ್ಳಲು ಹೊಸಬಗೆಯ ಕಾರ್ಯಕ್ರಮ
ಲಾಕ್ಡೌನ್ ಸಮಯದಲ್ಲಿ ಮನೆಗಳೊಳಗೆ ಸಕ್ರಿಯವಾಗಿರಲು ಹೊಸ ಬಗೆಯ ಸೃಜನಶೀಲ ಮನರಂಜನೆಯ ಮೂಲಕ ಕಲಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ರೇಡಿಯೋ ಮತ್ತು ದೂರದರ್ಶನದಂತಹ ಉಚಿತ ಮತ್ತು ಸುಲಭವಾಗಿ ಲಭ್ಯವಿರು ಸಂವಹನ ಮಾಧ್ಯಮವನ್ನು
ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಕ್ರಮ
ಕೋವಿಡ್ -19 ಬಡವರ ಅದರಲ್ಲೂ ದಿನಗೂಲಿ ನೌಕರರು, ಅಂದು ದುಡಿದು ಅಂದೇ ತಿನ್ನುವ ಲಕ್ಷಾಂತರ ಶ್ರಮ ಜೀವಿಗಳ,ರೈತರ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಜನರ ಜೀವನವನ್ನು ಮೂರಾಬಟ್ಟೆಯಾಗಿಸಿದೆ. ಅವರು ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದಾರೆ. ಜೀವನ ನಿರ್ವಹಣೆಯೇ ಅತಿ ದೊಡ್ಡ ಸವಾಲಾಗಿ ಪರಿಣಮಿಸದೆ . ಈ ಸಂದರ್ಭದಲ್ಲಿ ಲಕ್ಷಾಂತರ ಪಾಲಕರು ಖಾಸಗಿ ಶಾಲೆಗಳಲ್ಲಿ ಹಣ ತುಂಬಿ ಓದಿಸುವುದು ಅತ್ಯಂತ ಕಷ್ಟವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಮಾನವೀಯತೆಯಿಂದ ವರ್ತಿಸಿ ಮಕ್ಕಳ-ಪಾಲಕರ ಮೇಲೆ ಯಾವುದೇ ಬಗೆಯ ಒತ್ತಡ ಹಾಕದಂತೆ ಕ್ರಮವಹಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಜೊತೆಗೆ ಈ ಕೆಳಕಂಡ ಕ್ರಮಗಳನ್ನು ಖಾಸಗಿ ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ಒಮ್ಮತದಿಂದ ಕೈಗೊಳ್ಳಬೇಕಿದೆ . 1. ಮಕ್ಕಳು –ಪಾಲಕರು-ಶಿಕ್ಷಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅನುವಾಗುವಂತೆ ಉಚಿತ ದೂರವಾಣಿಯನ್ನು ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸುವುದು. ಜೊತೆಗೆ ಸಾರ್ವಜನಿಕರಿಗೆ ಎಲ್ಲಾ ಬಿಇಒ ಗಳ ಮೊಬೈಲ್ ಮತ್ತು ಕಛೇರಿ ದೂರವಾಣಿ ಒದಗಿಸುವುದು 2. 2019-20ರಲ್ಲಿ ನಿಗದಿಪಡಿಸಿದ ಟ್ಯೂಷನ್ ಶುಲ್ಕ ವನ್ನು ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಶಾಲೆಗಳು ವಸೂಲಿ ಮಾಡಬಾರದು .ಈ ಶುಲ್ಕವನ್ನು ಶಿಕ್ಷಕರ ಸಂಬಳಕ್ಕೆ ಮಾತ್ರ ಬಳಸಬೇಕು 3. ಶಾಲೆಗಳು ತೆಗೆದುಕೊಳ್ಳಬಹುದಾದ ನಿರ್ವಹಣಾ ಶುಲ್ಕ ಹಾಗು ಸಾರಿಗೆ ಶುಲ್ಕವನ್ನು ಇಲಾಖೆ ವೈಜ್ಞಾನಿಕವಾಗಿ ಪಾಲಕರಿಗೆ ಹೊರೆಯಾಗದಂತೆ ಸರ್ಕಾರಿ ಶಾಲೆಗಳಿಗೆ ಈ ಅನುದಾನವನ್ನು ನೀಡುವ ಮಾದರಿಯಲ್ಲಿ ತೀರ್ಮಾನಿಸ ಬೇಕು. ಆರ್ ಟಿ ಒ (ಸಾರಿಗೆ) ಸಹಾಯದಿಂದ ಬಸ್ ಶುಲ್ಕವನ್ನು ನಿಗದಿಪಡಿಸಬೇಕು 4. ಈ ಬಾರಿ ಯಾವುದೇ ಅಭಿವೃದ್ಧಿ ಶುಲ್ಕ ವಸೂಲಿಗೆ ಅವಕಾಶ ನೀಡಬಾರದು 5. ಬದಲಿಗೆ ಸಶಕ್ತವಾಗಿರುವ ಶಾಲೆಗಳು ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು
ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬರಬಹುದಾದ ಮಕ್ಕಳನ್ನು ಸ್ವಾಗತಿಸಲು ಇಲಾಖೆ ವಿಶೇಷ ಯೋಜನೆ ತಯಾರಿಸಬೇಕು
ಮೇಲಿನ ಎಲ್ಲಾ ಕಠಿಣ ಕ್ರಮಗಳ ಹೊರತಾಗಿಯು , ಕೋವಿಡ್-19 ರ ಆರ್ಥಿಕ ದಿವಾಳಿಯಿಂದ ತತ್ತರಿಸಿರುವ ಲಕ್ಷಾಂತರ ಶ್ರಮ ಜೀವಿಗಳ,ರೈತರು ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಮುಂದುವರಿಸುವುದು ಕಷ್ಟಸಾಧ್ಯವಾಗಿ ಸರ್ಕಾರಿ ಶಾಲೆಗಳಿಗೆ ಮರಳುವ ಸಂಭವನೀಯತೆ –ಸಾಧ್ಯತೆ ದಟ್ಟವಾಗಿದೆ. ಈ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರಮಾಡಿಕೊಳ್ಳಲು ಇಲಾಖೆ ವಿಶೇಷ ಯೋಜನೆ ತಯಾರಿಸಬೇಕು
ಒಟ್ಟಾರೆ, ಇಡೀ ದೇಶ-ರಾಜ್ಯವೇ ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಬಂಧಾಗಿರುವ ಇಂಥಹ ಸಂದರ್ಭದಲ್ಲಿ ಇಂಥಹ ಕೆಲವು ರಚನಾತ್ಮಕ ಕೆಲಸಗಳು ಮನೆಯಲ್ಲಿದ್ದುಕೊಂಡೇ ನೆಮ್ಮದಿಯಿಂದ ಆತಂಕವಿಲ್ಲದೆ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಇಂದಿನ ಕಠಿಣ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಮನೋಸ್ಥೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸಕ್ಕೆ ಈ ರೀತಿಯ ಸಣ್ಣ ಸಣ್ಣ ಉಪಕ್ರಮಗಳು ದೊಡ್ಡರೀತಿಯಲ್ಲಿ ನೆರವಾಗುತ್ತವೆ . .
ನಿರಂಜನಾರಾಧ್ಯ ವಿ ಪಿ ಅಭಿವೃದ್ಧಿ ಶಿಕ್ಷಣ ತಜ್ಞ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.