ತುಮಕೂರು: ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನದ ಅಂಗವಾಗಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ತುಮಕೂರು ಶಾಖೆ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಕಾರದಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ನಗರದ ರೆಡ್ ಕ್ರಾಸ್ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ವಿವಿಧ ಸಮುದಾಯದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣನವರು, ಸಂಕಷ್ಟದಲ್ಲಿರುವವರ ಯೋಗಕ್ಷೇಮ ನೋಡಿಕೊಳ್ಳುವ ಏಳು ಸಿದ್ಧಾಂತಗಳನ್ನು ಇಟ್ಟುಕೊಂಡು ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭವಾಗಿದೆ. ಕೊರೊನಾ ಮಹಾ ಮಾರಿಯನ್ನು ಓಡಿಸುವಂತಹ ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಂಸ್ಥಾಪಕರಾದ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ಬದಲು, ಬಡವರಿಗೆ ನೆರವಾಗುವ ಮಾನವೀಯ ಕಾರ್ಯದೊಂದಿಗೆ ಆಚರಿಸಲಾಗುತ್ತದೆ ಎಂದರು.
ಲಾಕ್ಡೌನ್ ಕಷ್ಟಕ್ಕೆ ಸಿಕ್ಕಿದವರನ್ನು ಗುರುತಿಸಿ ಅವರಿಗೆ ನೆರವು ನೀಡುವ ಕಾರ್ಯವನ್ನು ರೆಡ್ ಕ್ರಾಸ್ ಸಂಸ್ಥೆ ಮೂರು ದಿನಗಳಿಂದ ಮಾಡುತ್ತಾ ಬಂದಿದೆ. ಅಶಕ್ತರನ್ನು ಗುರುತಿಸಿ, ಅವರ ವಿಳಾಸ, ಆಧಾರ್ ಕಾರ್ಡ್ ಆಧರಿಸಿ, ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ತಲುಪಿಸಲಾಗುವುದು. ಇಂತಹ ಸುಮಾರು 7೦೦ ಕುಟುಂಬಗಳನ್ನು ಗುರುತಿಸಲಾಗಿದೆ. ಅಕ್ಕಿ, ಬೇಳೆ, ಗೋಧಿ ಹಿಟ್ಟು, ಸಾಂಬಾರ್ ಪುಡಿ ಸೇರಿದಂತೆ ಒಂದು ಸಂಸಾರಕ್ಕೆ ಅಗತ್ಯವಿರುವ 25 ಪದಾರ್ಥಗಳು ಒಳಗೊಂಡ ಸುಮಾರು 27 ಕೆ.ಜಿ ತೂಕದ ಆಹಾರ ಧಾನ್ಯದ ಕಿಟ್ ವಿತರಿಸಲಾಗುತ್ತಿದೆ ಎಂದು ಎಸ್.ನಾಗಣ್ಣ ಹೇಳಿದರು.
ಜಿಲ್ಲಾಧಿಕಾರಿ, ತುಮಕೂರು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರೂ ಆದ ಡಾ.ರಾಕೇಶ್ಕುಮಾರ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮ ದಿನದ ನಿಮಿತ್ತ ಲಾಕ್ಡೌನ್ ಬಾಧಿತರಿಗೆ ದಿನಸಿ ಕಿಟ್ ವಿತರಿಸಲಾಗುತ್ತದೆ. ಮಹಾಮಾರಿ ಕೊರೊನಾದಿಂದ ಜನ ಸಾಮಾನ್ಯರಿಗೆ ದೊಡ್ಡ ಹೊಡೆತ ಬಿದ್ದಿದೆ, ಹೆಚ್ಚು ಸಂಕಷ್ಟದಲ್ಲಿರುವವರನ್ನು ಗುರುತಿಸಿ ದಿನಸಿ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಸಹಾಯ ಮಾಡಲಾಗುತ್ತದೆ. ಈ ಕಾರ್ಯಕ್ಕೆ ನೆರವು ನೀಡಿ ಸಹಕರಿಸಿದ ದಾನಿಗಳಿಗೆ ಅಭಿನಂದನೆ ತಿಳಿಸಿದ ಜಿಲ್ಲಾಧಿಕಾರಿಗಳು, ಮುಂದೆ ಹೆಚ್ಚಿನ ಸಹಾಯದ ಅಗತ್ಯವಿದ್ದು ದಾನಿಗಳು ಮುಂದೆ ಬರಬೇಕು ಎಂದು ವಿನಂತಿಸಿದರು.
ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಈ ವೇಳೆ ಮಾತನಾಡಿ, ಸೇವೆಯೇ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ. ತಾವು ಸರ್ವೋಯ ಶಾಲೆಯ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಬಗ್ಗೆ ತಿಳಿದಿತ್ತು. ಆಗಿನಿಂದಲೂ ಸಂಸ್ಥೆ ಅದೇ ಸೇವೆ ಮುಂದುವರೆಸಿಕೊಂಡು, ಅಗತ್ಯವಿರುವವರಿಗೆ ನೆರವಾಗುತ್ತಾ ಬರುತ್ತಿದೆ ಎಂದು ಶ್ಲಾಘಿಸಿದರು.
ಸಮತಾ ವಿದ್ಯಾಲಯದಿಂದ ನಾವು ಸಾರ್ವಜನಿಕರಿಗೆ ಒಂದು ಲಕ್ಷ ಮಾಸ್ಕ್ ವಿತರಣೆ ಮಾಡುತ್ತಿದ್ದು, ರೆಡ್ ಕ್ರಾಸ್ ಸಂಸ್ಥೆಯ ಸಹಕಾರವೂ ಇದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಸ್ಪಿ ಡಾ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ತುಮಕೂರು ವಿವಿ ಕುಲಪತಿ ಪ್ರೊ.ಸಿದ್ದೇಗೌಡರು, ಉಪವಿಭಾಗಾಧಿಕಾರಿ ಅಜಯ್, ನಗರ ಪಾಲಿಕೆ ಸದಸ್ಯ ಮಹೇಶ್, ಕಾರ್ಮಿಕ ಇಲಾಖೆ ಅಧಿಕಾರಿ ಸುಭಾಷ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದೇಶಕ ಮಂಜುನಾಥ್, ತುಮಕೂರು ರೆಡ್ ಕ್ರಾಸ್ ಸಂಸ್ಥೆ ಉಪ ಕಾಯದರ್ಶಿ ಹೆಚ್.ಜಿ.ಚಂದ್ರಶೇಖರ್, ರೆಡ್ ಕ್ರಾಸ್ ಶಾಲಾ ಉಪಸಮಿತಿ ಸಭಾಪತಿ ಪ್ರೊ.ಕೆ.ಚಂದ್ರಣ್ಣ, ರಾಮಚಂದ್ರ, ಸಂಸ್ಥೆಯ ಸಂಯೋಜಕ ಬಿ.ಆರ್.ಉಮೇಶ್, ನಿರ್ದೇಶಕರಾದ ಸಾಗರನಹಳ್ಳಿ ಪ್ರಭು, ಸುಭಾಷಿಣಿ, ಶಿವಕುಮಾರ್, ಸುರೇಂದ್ರ ಎ.ಷಾ, ಬಿ.ಆರ್.ವೇಣುಗೋಪಾಲಕೃಷ್ಣ, ಮಲ್ಲೇಶಯ್ಯ, ವೆಂಕಟೇಶ್, ರಾಮಮೂರ್ತಿ,ಯೋಗೀಶ್ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಗರದ ರೆಡ್ ಕ್ರಾಸ್ ಕಚೇರಿಯಲ್ಲಿ ಮುಖಂಡರು ಜೀನ್ ಹೆನ್ರಿ ಡ್ಯೂನಾಂಟ್ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸ್ಥೆ ಸಂಸ್ಥಾಪಕರ ಸ್ಮರಣೆ ಮಾಡಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.