(www.vknews.com) : ಮುಸ್ಲಿಮ್ ಅಂದರೆ ಅನುಸರಿಸುವನು ಎಂದಾಗಿದೆ ಅರ್ಥ. ಅಂದರೆ ಮುಸ್ಲಿಮರೆಂದರೆ ಅನುಸರಿಸಬೇಕಾದ ಎಲ್ಲವನ್ನೂ ಅನುಸರಿಸಬೇಕಾದವರೂ ಅನುಸರಿಸುವವರೂ ಆಗಿರುತ್ತಾರೆ. ಅನುಸರಣೆ ಇಲ್ಲದವನು ನಿಜವಾದ ಮುಸ್ಲಿಮನಾಗಲು ಸಾಧ್ಯವಿಲ್ಲ. ಮುಸ್ಲಿಮರು ಅನುಸರಿಸುವುದರಲ್ಲಿ ಮೊದಲನೆಯದು ಸೃಷ್ಟಿಸಿದ ಸೃಷ್ಟಿಕರ್ತನ ಆದೇಶಗಳನ್ನಾಗಿದೆ.
ಮನುಷ್ಯನೆಂಬ ಸೃಷ್ಟಿಯನ್ನು ಸೃಷ್ಟಿಸಿ ಪೋಷಿಸುವವನು ಆ ಸೃಷ್ಟಿಕರ್ತನಾಗಿರುವುದರಿಂದ ಅವನ ಆದೇಶಗಳು ಪರಿಪೂರ್ಣ ಹಾಗೂ ಪ್ರಾಯೋಗಿಕವೂ ಆಗಿರುತ್ತದೆ.
ಅದರಲ್ಲಿ ತಾನು ಜೀವಿಸುವ ರಾಷ್ಟ್ರದ ಕಾನೂನು ಪಾಲನೆ ಸೇರಿದಂತೆ ಮನುಷ್ಯನ ಜೀವನದ ಎಲ್ಲಾ ಅಂಶಗಳು ಒಳಗೊಂಡಿರುತ್ತದೆ. ಆದ್ದರಿಂದ ಒಬ್ಬ ಮುಸ್ಲಿಂ ತನ್ನ ಸೃಷ್ಟಿಕರ್ತನ ನಿಯಮಗಳನ್ನು ಪಾಲನೆ ಮಾಡುವಾಗ ಅವನಿಗೆ ಜೀವನದ ಯಾವುದೇ ವಲಯದಲ್ಲಿ ಸಮಸ್ಯೆಯುಂಟಾಗಲು ಸಾಧ್ಯವೇ ಇಲ್ಲ.
ನೀವು ಅಲ್ಲಾಹನನ್ನು ಅನುಸರಿಸಿ,ಅವನ ದೂತರಾದ ಪ್ರವಾದಿಯನ್ನು ಅನುಸರಿಸಿ ಹಾಗೂ ಅಲ್ಲಾಹನ ವಿಧಿ ವಿಧಾನಗಳನ್ನು ಹೇಳಿ ಕೊಡುವ ವಿದ್ವಾಂಸರನ್ನು ಅನುಸರಿಸಿ
ಇದು ಅಲ್ಲಾಹನ ಖುರ್ಆನಿನ ಸ್ಪಷ್ಟ ಆದೇಶವಾಗಿದೆ.
ಇದರಿಂದಾಗಿಯೇ ಮುಸ್ಲಿಮರ ಜೀವನಕ್ರಮಗಳು ವಿದ್ವಾಂಸರ ಆದೇಶ ಅಭಿಪ್ರಾಯಗಳನ್ನು ಕೇಂದ್ರೀಕರಿಸಿಯಾಗಿರುವುದು. ಇಲ್ಲಿ ವಿದ್ವಾಂಸರು ಸಮಾಜಕ್ಕೆ ನೀಡುವ ನಿರ್ದೇಶನಗಳು, ಆದೇಶಗಳು ಅಲ್ಲಾಹನ ಹಾಗೂ ಅವನ ಪ್ರವಾದಿಗಳ ಆದೇಶಗಳನ್ನು ಕೇಂದ್ರೀಕರಿಸಿ ಆಗಿರುತ್ತದೆ. ಆದ್ದರಿಂದ ವಿದ್ವಾಂಸರ ಆದೇಶ ಪಾಲನೆ ಮುಸ್ಲಿಮರಿಗೆ ಕಡ್ಡಾಯ.
ಇದರಿಂದಾಗಿಯೇ ಆಗಿತ್ತು ಕೋವಿಡ್ 19 ಸಂಬಂಧ ಪಟ್ಟಂತೆ ಇಡೀ ಜಗತ್ತಿನ ಮುಸ್ಲಿಮರು ವಿದ್ವಾಂಸ ಲೋಕದ ಆಜ್ಞೆಯನ್ನು ಪಾಲಿಸಿ ಅತ್ಯಂತ ಪವಿತ್ರವಾದ ಸಾಮೂಹಿಕ ನಮಾಝ್, ಶುಕ್ರವಾರದ ಪವಿತ್ರ ನಮಾಝನ್ನು ಬಿಟ್ಟು ಸರ್ವ ಪರಿತ್ಯಾಗಿಗಳಾಗಿ ಶಿಸ್ತನ್ನು ಮೆರೆದು ಸರಕಾರ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ರೀತಿಯ ಜಾಗೃತಿ ಕಾರ್ಯಕ್ರಮಗಳೊಂದಿಗೆ ಕೈ ಜೊಡಿಸಿರುವುದನ್ನು ಜಗತ್ತು ಅತ್ಯಂತ ಆಶ್ಚರ್ಯ ಹಾಗೂ ಕುತೂಹಲದಿಂದ ವೀಕ್ಷಿಸಿದ್ದು.
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
ಇದೀಗ ಅದರ ಮುಂದುವರಿದ ಭಾಗವಾಗಿ ವಿದ್ವಾಂಸರ ಆದೇಶಗಳು ಬಂದಾಯ್ತು.ಅದೇನೆಂದರೆ ಈದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು ಹಾಗೂ ಹಬ್ಬದ ನೆಪದಲ್ಲಿ ಹೊಸ ಬಟ್ಟೆ ಬರೆ ಖರೀದಿಗಾಗಿ ಮನೆಗಳಿಂದ ಹೊರಬಂದು ಪೇಟೆಗಳಲ್ಲಿ,ಬಜಾರುಗಳಲ್ಲಿ,ಮಾಲ್ ಗಳಲ್ಲಿ ಸುತ್ತಾಡದೆ ಈ ಮಹಾಮಾರಿಯ ನಿಗ್ರಹದಲ್ಲಿ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು ಎಂದಾಗಿದೆ.
ಆದ್ದರಿಂದ ವಿದ್ವಾಂಸರಿಂದ, ಖಾಝಿಗಳಿಂದ ತಮಾಮ್ ಆದೇಶ ಬಂದಾಗಿರುವುದರಿಂದ ಇಲ್ಲಿ ಸಮಾಜದ ಹಿರಿಯರು, ಕಿರಿಯರು, ಮಹಿಳೆಯರು, ಯುವಕರು ಎಲ್ಲರೂ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಮಾದರಿಯಾಗಬೇಕಿದೆ.
ಇಲ್ಲಿಯ ತನಕ ಉಲಮಾಗಳ ಆದೇಶವನ್ನು ಪಾಲಿಸಿ ಎಲ್ಲ ತ್ಯಾಗಗಳಿಗೂ ಸಿದ್ಧರಾದಂತೆ ಈ ವಿಷಯದಲ್ಲಿಯೂ ಮುಂದುವರಿಯ ಬೇಕಾಗಿದೆ.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.