(www.vknews.com) : ಗ್ರಾಮ ಪಂಚಾಯತ್ ಚುನಾವಣೆಯನ್ನು ಕೋವಿಡ್ ಸಾಂಕ್ರಾಮಿಕ ಕಾರಣಕ್ಕಾಗಿ ಮುಂದೂಡಲ್ಪಟ್ಟ ಸನ್ನಿವೇಶವನ್ನು ನೆಪವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಹೊಸ ಆಡಳಿತ ಸಮಿತಿ ನೇಮಕ ಮಾಡುವ ನಿರ್ಧಾರ ಕೈಗೊಂಡಿರುವುದು ಕರ್ನಾಟಕ ಪಂಚಾಯತರಾಜ್ ಕಾನೂನಿಗೆ ತೀರಾ ವಿರುದ್ಧವಾಗಿದೆ ಹಾಗೂ ವಿರೋಧಾಭಾಸವೂ ಆಗಿದೆ ಎಂದು ಎಸ್ಡಿಪಿಐ, ಕರ್ನಾಟಕ ರಾಜ್ಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಇಂದಿನ ಲಾಕ್ ಡೌನ್ ಸನ್ನಿವೇಶದಲ್ಲಿ ಪಂಚಾಯತ್ ಆಡಳಿತ ಅತ್ಯಂತ ಅನಿವಾರ್ಯ ಎನ್ನುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಪಂಚಾಯತ್ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದರೂ ಅದನ್ನು ಮುಂದಿನ ಆರು ತಿಂಗಳಿಗೆ ವಿಸ್ತರಿಸಬೇಕೇ ವಿನಃ ಸಮಿತಿಗೆ ಏನೇನು ಸಂಬಂಧಪಡದ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ ಹೊಸಸಮಿತಿ ರಚಿಸುವುದು ಮತ್ತು ಆಡಳಿತ ಅಧಿಕಾರಿಯಾಗಿ ಸರಕಾರಿ ಅಧಿಕಾರಿಯನ್ನು ನೇಮಿಸುವುದು ತೀರಾ ಅಸಂಬದ್ಧವಾಗಿದೆ. ಇಂತಹ ಕ್ರಮವು ಲಾಕ್ ಡೌನ್ ನ ಸಂದಿಗ್ಧ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ಪ್ರಯತ್ನವಲ್ಲದೆ ಇನ್ನೇನೂ ಅಲ್ಲ. ಒಂದು ವೇಳೆ ಈ ಹೊಸ ಪದ್ಧತಿಯನ್ನು ಜಾರಿಗೆ ತಂದರೆ ಮುಂದೆ ಇದು ಕೆಟ್ಟ ಸಂಪ್ರದಾಯಗಳಿಗೆ ನಾಂದಿಯಾಗುತ್ತದೆ. ಅಲ್ಲದೆ ಅಧಿಕಾರ ದುರುಪಯೋಗದ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ
ಹಾಗಾಗಿ ಗ್ರಾಮ ಪಂಚಾಯತ್ ಸಮಿತಿಗೆ ಹೊಸದಾಗಿ ನಾಮ ನಿರ್ದೇಶಕ ಸದಸ್ಯರನ್ನು ಸೇರಿಸಿ ಸಮಿತಿಯನ್ನು ರಚನೆ ಮಾಡುವ ಸರಕಾರದ ನಿರ್ಧಾರವನ್ನು ಕೈ ಬಿಡಬೇಕು ಮತ್ತು ಈಗಿರುವ ಗ್ರಾಮ ಪಂಚಾಯತಿ ಸಮಿತಿಯನ್ನು ಮುಂದಿನ ಚುನಾವಣೆ ನಡೆಯುವ ತನಕ ಮುಂದುವರಿಸುವಂತೆ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನಾ ಹೋರಾಟ ಕೈಗೊಳ್ಳಲಾಗುವುದು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.