ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಮಲಬಾರ್ ಪ್ರದೇಶದಲ್ಲಿ ಕಳೆದ ಸುಮಾರು ಐವತ್ತು ವರ್ಷಗಳಿಂದ ಸಾರಸ್ವತ ಲೋಕದ ಮುಂಚೂಣಿ ಹೆಸರಾಗಿತ್ತು ಖಾಸಿಂ ಉಸ್ತಾದ್. ಅಂದ ಹಾಗೆ ಅವರು ಕೇವಲ ಧಾರ್ಮಿಕತೆಯ ಸೋಗು ಹಾಕಿ ಜನರ ಪ್ರಶಂಸೆ ಪಡೆದು ಕೊಳ್ಳಲು ಹವಣಿಸಿದವರೋ ಅದ್ಯಾತ್ಮಿಕತೆಯ ಹೆಸರಲ್ಲಿ ಜನರನ್ನು ಮರಳು ಮಾಡಿ ಪ್ರಚಾರ ಗಿಟ್ಟಿಸಿದವರೋ ಅಲ್ಲ. ತನ್ನ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳಿಂದ ತಳ ಮಟ್ಟದಿಂದಲೇ ಬೆಳೆದು ಹೆಮ್ಮರವಾಗಿ ಗುರುತಿಸಿ ಕೊಂಡವರು ಅವರು. ಯಾರನ್ನೂ ಕೂಡಾ ಮೆಚ್ಚಿಸಲು,ಓಲೈಸಲು ಅವರು ಯಾವುದೇ ಕಾರ್ಯ ಮಾಡಿದವರಲ್ಲ. ಎಂಥಹ ವಿರೋಧವನ್ನೂ ಲೆಕ್ಕಿಸದೆ ತಾನು ನಂಬಿದ ಸತ್ಯಕ್ಕಾಗಿ ನೆಲೆ ನಿಂತವರವರು. ಪಂಡಿತ ಕುಟಂಬದಲ್ಲಿ ಜನಿಸಿ ಪಾಂಡಿತ್ಯವನ್ನೇ ತಪಸ್ಸು ಮಾಡಿ ನೂರಾರು ಶಿಷ್ಯ ವರ್ಗವನ್ನು ಸಮಾಜಕ್ಕೆ ದಾರೆಯೆರೆಯುವುದರ ಜೊತೆಗೆ ಭಾಷಣ,ಲೇಖನಗಳ ಮೂಲಕ ಜನರ ಮೌಡ್ಯವನ್ನು ತಿದ್ದಿ ತೀಡಿ ಕೊನೆಯ ವರ್ಷಗಳಲ್ಲಿ ಸ್ವಂತ ಪರಿಶ್ರಮದಿಂದ ಇಮಾಂ ಶಾಫಿ ರ ರವರ ನಾಮಧೇಯದಲ್ಲಿ ಮತ ಬೌತಿಕ ಸಮನ್ವಯ ಶಿಕ್ಷಣ ಕೇಂದ್ರಕ್ಕೆ ಚಾಲನೆ ನೀಡಿ ಯಶಸ್ವಿಯಾಗಿ ಮುನ್ನಡೆಸಿದರು.
ಸಂಸ್ಥೆ ಆರಂಬಿಸಿ ಅದರ ಪ್ರಥಮ ರಿಝಲ್ಟನ್ನು ಸಮಾಜಕ್ಕೆ ಅರ್ಪಿಸಿ ಸನದುದಾನ ಸಮ್ಮೇಳನದ ಮೂಲಕ ಕಣ್ಣುತುಂಬಿ ಕೊಂಡು ಸಂತೋಷ ಪಟ್ಟು ಅವರು ನಮ್ಮಿಂದ ಅಗಲಿದ್ದು ವಿಶೇಷವಾಗಿ ಗಮನಿಸ ಬೇಕಾದ ಸಂಗತಿಯಾಗಿದೆ. ಬಹುಮಾನ್ಯ ಉಸ್ತಾದರೊಂದಿಗೆ ನನ್ನ ಸಂಪರ್ಕ ಉಂಟಾದದ್ದು
1984 ರಲ್ಲಿ ಬಂಬ್ರಾಣದಲ್ಲಿ . ಆ ವರ್ಷ ನಾನು ಬಹಳ ಪ್ರಚಾರದಲ್ಲಿದ್ದ ಅವರ ದರ್ಸ್ ಗೆ ಸೇರಿದ್ದೆ. ಅದಕ್ಕಿಂತ ಮೊದಲು ಒಂದೆರಡು ವರ್ಷ ಬಾಳೆಪುಣಿ ಮತ್ತು ವಿಟ್ಲದಲ್ಲಿ ಮರ್ಹೂಂ ಉಸ್ತಾದ್ ಕಾಶಿಪಟ್ಣ ಅಬ್ದಲ್ ಖಾದಿರ್ ಮದನಿ ಯವರಲ್ಲಿ ದರ್ಸ್ ಕಲಿತಿದ್ದೆ. ಅಂದಿನ ಬಾಳೆಪುಣಿ ಹಳ್ಳಿ ಪ್ರದೇಶವಾಗಿತ್ತು. ಊಟಕ್ಕೆ ಒಂದೆರಡು ಕಿ ಮೀ ಕ್ರಮಿಸ ಬೇಕಿತ್ತು. ತರುವಾಯ ಬೇರೊಂದು ದರ್ಸಿನ ಹುಡುಕಾಟದಲ್ಲಿದ್ದೆ. ಅಂದು ಬಾಳೆಪುಣಿ ದರ್ಸಿನ ಹಿರಿಯ ವಿದ್ಯಾರ್ಥಿಯಾಗಿದ್ದ ನೆಲ್ಯಾಡಿ ಅಬ್ದುಲ್ಲ ಮುಸ್ಲಿಯಾರ್ ರವರು ಅವರ ಸಂಭಂಂದಿ ಮುಸ್ತಪ ಎಂಬವರು ಬಂಬ್ರಾಣ ದರ್ಸಿನಲ್ಲಿ ಕಲಿಯುತ್ತಿದ್ದು ಆ ದರ್ಸಿನ ಬಗ್ಗೆ ಬಹಳ ಕೊಂಡಾಡುತ್ತಿದ್ದರು. ಇದನ್ನು ನಾನು ಬಹಳಷ್ಟು ತಲೆಗೆ ಹಚ್ಚಿ ಕೊಂಡಿದ್ದೆ. ನಾನು ಮತ್ತು ನನ್ನ ಒಂದೆರಡು ಮಿತ್ರ ರು ಬಂಬ್ರಾಣಕ್ಕೆ ಸೇರುವುದೆಂದು ತೀರ್ಮಾನಿಸಿ ಕಾಶಿ ಪಟ್ಟಣ ಉಸ್ತಾದರ ಬಳಿ ಹೇಗಾದರೂ ಮಾಡಿ ಸಮ್ಮತಿ ಪಡೆದು ಕೊಂಡೆವು.
ನನ್ನು ಹುಟ್ಟೂರು ಸುರಿಬೈಲು. ಇಲ್ಲಿಗೆ ಸಮೀಪದ ಕುಕ್ಕಾಜೆಯಲ್ಲಿ ಖಾಸಿಂ ಉಸ್ತಾದರು ಮುದರ್ರಿಸರಾಗಿದ್ದದ್ದು, ನನ್ನ ಬಾಲ್ಯ ಕಾಲದಲ್ಲಿ ಹತ್ತಿರದ ಮಂಚಿಯಲ್ಲಿ ನಡೆದ ಅವರ ಮತ ಪ್ರವಚನಕ್ಕೆ ಹೋಗಿದ್ದೆ. ಆ ನಂತರ ನಾನು ಬಂಬ್ರಾಣ ದರ್ಸಿಗೆ ಸೇರಿ ಅವರ ಮುಖ ದರ್ಶನವಾದಾಗಲೇ ಅವರೇ ಇವರು ಎಂಬುದು ಖಾತರಿಯಾಯಿತು. ದರ್ಸ್ ಗೆ ಸೇರಿ ನಾಲ್ಕೈದು ತಿಂಗಳು ಹೊಂದಿ ಕೊಳ್ಳಲು ಬಹಳ ಕಷ್ಟಕರವಾಗಿತ್ತು. ಕಾರಣ ಉಸ್ತಾದರ ದರ್ಸಿನ ಖದರೇ ಡಿಫರೆಂಟ್ ಆಗಿತ್ತು. ಗ್ರಂಥದ ಉದ್ದರಣೆಗಳನ್ನು ತರ್ಕೀಬು ಸಮೇತ ಓದಿ ಒಪ್ಪಿಸ ಬೇಕಿತ್ತು. ತರ್ಕೀಬು ಬಗ್ಗೆ ಅಂದು ನನಗೆ ಅಷ್ಟೊಂದು ಜ್ಞಾನ ಇಲ್ಲದೇ ಇರುವುದರಿಂದ ನನಗೆ ಒಡನಾಡಿಯಾಗಿ ಸಿಕ್ಕಿದ ಬಾಳೆಪುಣಿ ಉಸ್ಮಾನ್ (ಎಸ್ ಬಿ ಉಸ್ಮಾನ್ ದಾರಿಮಿ)ಯವರಿಗೆ ಈ ವಿಷಯದ ಬಗ್ಗೆ ಇರುವ ಪರಿಜ್ಞಾನ ನನಗೆ ಬಹಳ ಉಪಕಾರವಾಯಿತು. ಇನ್ನೂ ಯುವತ್ವದ ಪ್ರಖರತೆ ಮಾಸಿರದ ಆ ಕಪ್ಪು ಗಡ್ಡದ ಸ್ಥೂಲ ಕಾಯದ ಖಾಸಿಂ ಉಸ್ತಾದರನ್ನು ನೋಡುವಾಗಲೇ ನಮಗೆ ಎಲ್ಲಿಲ್ಲದ ಭಯ. ತನ್ನನ್ನು ಸಂಪೂರ್ಣ ಜ್ಞಾನ ಪ್ರಸಾರಕ್ಕಾಗಿ ಮೀಸಲಿಟ್ಟ ಶೈಖುನಾರ ಅಂದಿನ ಆ ದರ್ಸ್ ಇದೆಯಲ್ಲಾ ಅದು ಒಂದು ರೀತಿಯ ಉನ್ನತ ಜ್ಞಾನ ಮಂದಿರವಾಗಿತ್ತು.
ಇಂದು ವಿವಿಧ ಕ್ಷೇತ್ರದಲ್ಲಿ ಹೆಸರು ಪಡೆದ ಉಸ್ಮಾನ್ ಸಹದಿ ಪಟ್ಟೋರಿ,ಮುಸ್ತಾಪ್ ಸಹದಿ ಮೂಳೂರು,ಇಬ್ರಾಹಿಂ ಸಹದಿ ಪರಪ್ಪು,ಮರ್ಹೂಂ ಟಿ ಎಂ ಸಹದಿ ಮೊದಲಾದವರು ಅಂದು ದರ್ಸಿನ ಹಿರಿಯ ವಿದ್ಯಾರ್ಥಿಗಳಾಗಿದ್ದರು. ಅಂದು ಸಮಸ್ತದಲ್ಲಿ ಯಾವುದೇ ಒಡಕು ಮೂಡಿರದ ಕಾರಣ ವಿದ್ಯಾರ್ಥಿಗಳನ್ನು ಹತ್ತಿರದ ಸಹದಿಯಾಗೆ ಉನ್ನತ ವಿದ್ಯೆಗಾಗಿ ಸೇರಿಸುತ್ತಿದ್ದರು. ಆಗಲೇ ಖಾಸಿಂ ಉಸ್ತಾದರ ಸಂಘಟನಾ ಚಟುವಟಿಕೆ ಬಹಳ ಜೋರಾಗಿಯೇ ನಡೆಯತ್ತಿತ್ತು. ಸಿರಿಯಾದ ಖಾಜಾ ಗರೀಬ್ ಸಂಸ್ಥೆಯಲ್ಲಿ ತೊಡಗಿಸಿ ಕೊಂಡಿದ್ದರು. ಬಂಬ್ರಾಣದಂತಹ ಗ್ರಾಮಾಂತರ ಪ್ರದೇಶಕ್ಕೆ ಅಂದು ಚಿತ್ತಾರಿ ಉಸ್ತಾದರಂತಹ ಉಲಮಾಗಳನ್ನು ಕರೆಸಿ ಅದ್ಯಯನ ಶಿಭಿರ ಸಂಘಟಿಸಿದ್ದರು. ಅವರ ದರ್ಸಿನ ಸಾಹಿತ್ಯ ಸಮಾಜ ಹೆಸರಿಗಾಗಿ ಮಾತ್ರ ಆಗಿರದೇ ನಿಜಾರ್ಥದಲ್ಲೇ ಪ್ರತಿಭಾವಂತರನ್ನು ಸೃಷ್ಟಿಸುವ ಗರಡಿಯಾಗಿತ್ತು. ಮಾತ್ರವಲ್ಲದೇ ಮುತಹಲ್ಲಿಮರಾಗಿರುವಾಗಲೇ ಮದ್ರಸ ಮುಹಲ್ಲಿಂ ಆಗಿ ಕೂಡಾ ಶಿಷ್ಯಂದಿರನ್ನು ನಿಯೋಜಿಸುತ್ತಿದ್ದರು. ಮತಹಲ್ಲಿಂ ಮತ್ತು ಮುಹಲ್ಲಿಂ ಆಗಿ ಸುಮಾರು ನಾಲ್ಕು ವರ್ಷ ಬಂಬ್ರಾಣದ ಅವರ ಜೊತೆಗಿನ ಬದುಕಿನ ನಂತರ ಉಸ್ತಾದರು ಕುಂಬಳೆ ಟೌನ್ ಮಸೀದಿಗೆ ಶಿಪ್ಟ್ ಆದರು. ಕುಂಬಳೆಯಲ್ಲಿ ಕೂಡಾ ಮುತಹಲ್ಲಿಂ ಮತ್ತು ಮುಹಲ್ಲಿಂ ಆಗಿ ಒಂದು ವರ್ಷ ಪೂರೈಸಿ ನಂದಿ ದಾರುಸ್ಸಲಾಮಿಗೆ ಉಸ್ತಾದರ ಶಿಷ್ಯರ ಪೈಕಿ ಮೊದಲಿಗನಾಗಿ ನಾನು ಪ್ರವೇಶ ಪಡೆದು ಕಾಲೇಜಿನಲ್ಲಿ ಮೂರು ವರ್ಷ ಪೂರೈಸಿದ ನಂತರ ನನನ್ನು ಪುನಃ ಕುಂಬಳೆಗೆ ಸದರ್ ಮತ್ತು ಇಮಾಂ ಆಗಿ ಕರೆಸಿ ಕೊಂಡರು.
ಉಸ್ತಾದರು ಹಜ್ ಗೆ ತೆರಳಿದ ಮೂರು ತಿಂಗಳ ಅವಧಿಗೆ ಅಲ್ಲಿ ಮುದರ್ರಿಸ್ ಮತ್ತು ಖತೀಬ್ ಆಗಿ ಸೇವೆ ಮಾಡಿದ್ದೆ. ಅಂದಿನ ಆ ದರ್ಸಿನಲ್ಲಿ ಕೆ ಎಲ್ ಉಮರ್ ದಾರಿಮಿ ಪಟ್ಟೋರಿ,ಮರ್ಹೂಮೈನಿ ಮಹ್ಮೂದ್ ದಾರಿಮಿಗಳು,ಸಲಾಂ ದಾರಿಮಿ ಮೊಗ್ರಾಲ್,ಮರ್ಹೂಂ ಸಹೀದ್ ದಾರಿಮಿ ಮೊದಲಾದ ಅನೇಕ ಪ್ರತಿಭಾವಂತರು ವಿದ್ಯಾರ್ಥಿ ಗಳಾಗಿದ್ದರು. ನಂದಿ ಕಾಲೇಜನಲ್ಲಿ ಕಲಿಯುವ ವೇಳೆ ಖಾಸಿಂ ಉಸ್ತಾದರ ಮತ್ತು ಶೈಖುನಾ ಶಂಸುಲ್ ಉಲಮಾರ ಮದ್ಯೆ ಕೊಂಡಿಯಾಗಿ ನಾನು ಇದ್ದೆ. ಮೂರು ವರ್ಷ ಶಂಸುಲ್ ಉಲಮಾರ ಖಾದಿಂ ಆಗಲು ಭಾಗ್ಯ ಸಿಕ್ಕಿದ್ದು ಜೀವನದ ಅಮೂಲ್ಯ ಭಾಗ್ಯವೆಂದೇ ನಾನು ನಂಬಿದ್ದೇನೆ. ದರ್ಸ್ ಕಲಿಕೆಯ ವೇಳೆಯೇ ಖುತುಬಾ ,ಇಮಾಮತ್ ನಲ್ಲಿ ಉಸ್ತಾದರು ದೊರಕಿಸಿದ ಆ ಪರಿಶೀಲನೆ ಕಾಲೇಜ್ ಜೀವನದಲ್ಲೂ ನನಗೆ ಬಹಳ ಪ್ರಯೋಜನಕ್ಕೆ ಬಂದಿತ್ತು. ಅಂದು ಕಾಲೇಜಿನಲ್ಲಿ ಮಲಪುರದ ಒಬ್ಬ ಪೈಝಿ ಖತೀಬರಾಗಿದ್ದರು. ಹೇಗಾದರೂ ಮಾಡಿ ಅವರ ಸಹವಾಸ ಗಿಟ್ಟಿಸಿ ಅಸಿಸ್ಟೇಂಡ್ ಇಮಾಂ ಸ್ಥಾನ ಪಡೆದು ಅಥಿರಥ ಮಹಾರಥರ ಎದುರು ಖುತುಬಾ ಇಮಾಂ ಆಗಿ ಬಹಳಷ್ಟು ಸಲ ಕಾರ್ಯ ನಿರ್ವಹಿಸಿದ್ದೆ. ಅಂದು ಶಂಸುಲ್ ಉಲಮಾರ ಎದುರಲ್ಲಿ ಖುತುಬಾ ಇಮಾಮತ್ ನಿರ್ವಹಿಸುವುದು ಒಂದು ಸಾಹಸವೇ ಆಗಿತ್ತು. ಅದಕ್ಕೆಲ್ಲಾ ದೈರ್ಯ ಗಳಿಸ ಕೊಟ್ಟದ್ದು ಆ ಖಾಸಿಂ ಉಸ್ತಾದರ ತರಬೇತಿಯಾಗಿತ್ತು. ಬಂಬ್ರಾಣದಿಂದ ಕಾಲ್ನಡಿಗೆಯಲ್ಲಿ ಸಿರಿಯ ಮಸೀದಿಯಲ್ಲಿ ನಡೆಯುತ್ತಿದ್ದ ಕುರ್ಹಾನ್ ಹಿಝ್ಬ್ ಕ್ಲಾಸಿಗೆ ಹೋಗಲು ಖಾಸಿಂ ಉಸ್ತಾದರು ಕಡಕ್ ವಾರ್ನಿಂಗ್ ನೀಡಿದ್ದರು ಎಂಬುದು ಇಲ್ಲಿ ಸ್ಮರಣೀಯ. ಅಂತೂ ಕಾಲೇಜ್ ಜೀವನ ಮುಗಿಸಿ ಕುಂಬಳೆಯಲ್ಲಿ ತೊಂಬತ್ತೆರಡರಲ್ಲಿ ಸೇರಿಕೊಂಡಿದ್ದು ಉಸ್ತಾದರ ತರಬೇತು ಇನ್ನಷ್ಟು ಸಿಗಲು ನಿಮಿತ್ತವಾಯಿತು.
ಜನ ಸಾಮಾನ್ಯರೊಂದಿಗೆ ಮತ್ತು ಸಮಿತಿಯವರೊಂದಿಗೆ ನಮ್ಮ ಸಂಪರ್ಕ ಯಾವ ರೀತಿ ಇರ ಬೇಕೆಂದು ಆ ಟೈಮಲ್ಲಿ ಕಲಿತುಕೊಂಡೆ. ಉಸ್ತಾದರು ಹಜ್ ಗೆ ತೆರಳಿದ ಸಂಧರ್ಭ ಅಲ್ಲಿನ ಕೆಲ ನೂತನ ಆಶಯ ತಗುಲಿಸಿ ಕೊಂಡ ಕೆಲವರು ನನ್ನಲ್ಲಿ ಕುರ್ಆನ್ ಕ್ಲಾಸ್ ತೆಗೆಯಲು ಒತ್ತಾಯ ಪಡಿಸಿದ್ದರು. ನನಗೆ ಆವೇಳೆ ಅನುಭವದ ಕೊರತೆ ಇದ್ದ ಕಾರಣ ಹಿಂದೆ ಮುಂದೆ ನೋಡದೆ ಅದಕ್ಕೆ ಮುಂದಾದೆ. ಆಗ ಅಲ್ಲಿ ಕೆಲವೊಂದು ಸಮಸ್ಯೆ ಕಾಣಿಸಿ ಕೊಂಡಿತು. ಅದನ್ನು ವಿರೋಧಿಸುವ ಕೆಲವರು ಅಲ್ಲಿ ಅದಕ್ಕೆ ತಕರಾರೆತ್ತಿದ್ದರು. ಈ ಜನ ಸಾಮಾನ್ಯರ ಹಲವು ಬಗೆಯ ಮೆಂಟಾಲಿಟಿಯ ಕಹಿ ಅನುಭವ ಅದೇ ಮೊದಲು ನನಗಾಯಿತು. ಉಸ್ತಾದರು ಹಜ್ ನಿಂದ ಮರಳಿದ ನಂತರ ನನ್ನನ್ನು ತರಾಟೆಗೆತ್ತಿಕೊಂಡರು. ಉಸ್ತಾದರು ಬಂದ ನಂತರ ಆ ಬಗ್ಗೆ ತೀರ್ಮಾನಿಸೋಣ ಎಂದು ಯಾಕೆ ನೀನು ಹೇಳಿಲ್ಲ ಎಂದು ನನಗೆ ಅರಿವು ಮೂಡಿಸಿದ್ದರು. ಆ ನಂತರ ಅಲ್ಲಿಂದ ಉಪ್ಪಿನಂಗಡಿಗೆ ಸೇರಿ ಕೊಳ್ಳಲು ಕೆ ಆರ್ ಹುಸೈನ್ ದಾರಿಮಿ ಯವರು ಕುಂಬಳೆಗೆ ಬಂದು ಉಸ್ತಾದರ ಬಳಿ ನನ್ನನ್ನು ಬಿಟ್ಟು ಕೊಡಬೇಂಬ ಬೇಡಿಕೆ ಇಟ್ಟಾಗ ಅದಕ್ಕೆ ಸಮ್ಮತಿ ಸೂಚಿಸಿ ಶಂಸುಲ್ ಉಲಮಾರ ಬಳಿ ತೆರಳಿ ಈ ಬಗ್ಗೆ ಮುಶಾವರ ನಡೆಸ ಬೇಕೆಂದು ಸೂಚಿಸಿದರು. ಹೀಗೆ ಇಬ್ಬರೂ ಗುರುವರ್ಯರ ಸಂಪೂರ್ಣ ಆಶಿರ್ವಾದ ಪಡೆದು ಉಪ್ಪಿನಂಗಡಿಯಲ್ಲಿ ಸೇವೆಗೆ ಸೇರಿಕೊಂಡೆ. ಆನಂತರ ಅಲ್ಲಿ ಇಪ್ಪತ್ತು ವರುಷಗಳ ಕಾಲ ಊರಿಗೆ ಮತ್ತು ಸಮಸ್ತಕ್ಕೆ ನೀಡಿದ ಸೇವೆ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಬಗ್ಗೆ ಹೆಚ್ಚೇನೂ ಉಲ್ಲೇಖಿಸುವ ಅಗತ್ಯ ಇಲ್ಲ.
ಹಾಗೆ ನೋಡಿದರೆ ಖಾಸಿಂ ಉಸ್ತಾದರೇ ಖುದ್ದು ಬಂದು ಉಪ್ಪಿನಂಗಡಿ ದರ್ಸ್ ಉದ್ಘಾಟಿಸಿ ದುಹಾ ಮಾಡಿದ್ದರು. ನಂತರ ನನ್ನಲ್ಲಿ ಇಲ್ಲಿ ಐದು ವರ್ಷ ನಿಲ್ಲ ಬೇಕೆಂದೂ ಹೇಳಿದ್ದರು. ಕೊನೆಗೆ ನಾನು ಉಪ್ಪಿನಂಗಡಿಯಿಂದ ನಿರ್ಗಮಿಸುವ ವೇಳೆ ಖಾಸಿಂ ಉಸ್ತಾದರನ್ನು ಕರೆಸಿದ್ದೆ. ಅವತ್ತು ಅವರು ಹೇಳಿದ್ದ ಐದು ವರ್ಷದ ನಾಲ್ಕು ಪಟ್ಟು ಇಲ್ಲಿ ನಿಂತದ್ದು ಅದು ಉಪ್ಪಿನಂಗಡಿಯಂತಹ ಊರಿನಲ್ಲಿ ಒಂದು ಸಾಹಸವೇ ಸರಿ ಎಂದು ಉಸ್ತಾದರು ಭಾಷಣದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಹೀಗೆ ನಮ್ಮ ಸುದೀರ್ಘವಾದ ಮುವತ್ತೈದು ವರ್ಷದ ಒಡನಾಟದ ಜೀವನದ ತುಣುಕುಗಳನ್ನು ಸಣ್ಣ ಒಂದು ಲೇಖನದಲ್ಲಿ ತುಂಬಿಸಲು ಪರಿಮಿತಿ ಇದೆ. ಒಟ್ಟಾರೆ ಹೇಳುವುದಾದರೆ ಖಾಸಿಂ ಉಸ್ತಾದರ ಆ ಮಾದರಿ ಜೀವನ ಬಹಳ ಡಿಫರೆಂಟ್ ಆಗಿತ್ತಲ್ಲದೇ ಎಲ್ಲರನ್ನೊಳಗೊಂಡ ಅವರ ಆ ಒಡನಾಟ ಮತ್ತು ಸಂಪರ್ಕ ಅವರ ಹೃದಯ ವೈಶಾಲ್ಯತೆ ಮತ್ತು ಕ್ರಿಯಾ ಶೀಲತೆಗೆ ಸಾಕ್ಷಿಯಾಗಿದೆ.
-ಎಸ್ ಬಿ ದಾರಿಮಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.