(www.vknews.com) : ಪವಿತ್ರ ರಮಳಾನ್ ತಿಂಗಳ ಪರಿಸಮಾಪ್ತಿ ಯನ್ನು ಸೂಚಿಸುವ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಮರು ಅತ್ಯಂತ ಸಡಗರೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಆದರೆ ಕೊರೋನದಿಂದಾಗಿ ಈ ವರ್ಷ ಸರಳವಾಗಿ ಆಚರಿಸಿ ಸಾಮಾಜಿಕ ಬದ್ದತೆ ಪ್ರದರ್ಶಿಸುವ ಅಗತ್ಯ ನಮ್ಮ ಮುಂದಿದೆ. ಹಾಗೆ ನೋಡಿದರೆ ಇಸ್ಲಾಮಿನ ಎಲ್ಲಾ ಆರಾದನೆಗಳೂ,ಆಚರಣೆಗಳೂ ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರುವಂತದ್ದು. ಶಿಸ್ತಿನ, ಐಕ್ಯತೆಯ,ಸಮಾನತೆಯ ಪ್ರತಿರೂಪವಾದ ಸಾಮೂಹಿಕ ನಮಾಜ್ ಇರಬಹುದು ಅಥವಾ ಬಡವರ ಕಣ್ಣೀರೊರೆಸುವ ಝಕಾತ್ ಪದ್ದತಿ ಇರಬಹುದು ಅಥವಾ ಹಸಿವಿನ ಅನುಭವ ಪಡೆದು ಕೊಳ್ಳುವ ಉಪವಾಸ ಇರಬಹುದು ಗಡಿಗುರುತಿನ ಹಂಗಿಲ್ಲದೇ ವಿಶ್ವಮಾನವೀಯತೆಯನ್ನು ಪ್ರತಿಪಾದಿಸುವ ಹಜ್ ಇರಬಹುದು,ಮಾನವರಿಗೆಲ್ಲಾ ಸೃಷ್ಡಿಕರ್ತ ಒಬ್ಬನೇ ಎಂದು ಸಾರುವ ಕಲಿಮ ಶಹಾದಃ ಇರಬಹುದು ಎಲ್ಲವೂ ಸಾಮಾಜಿಕ ಕಳಕಳಿ ಮತ್ತು ಬದ್ದತೆಯ ಸಂದೇಶವನ್ನು ಜಗತ್ತಿಗೆ ಸಾರುತ್ತದೆ.
ಅದೇ ಕಾರಣದಿಂದಾಗಿ ಈ ಕೊರೋನದ ಸಂಕಷ್ಟದ ಸಮಯದಲ್ಲಿ ಮುಸ್ಲಿಮರು ಆ ಕೂಡಲೇ ತಮ್ಮ ಪವಿತ್ರ ಮಸೀದಿಗಳನ್ನೇ ಸಾರ್ವಜನಿಕರಿಂದ ನಿರ್ಭಂದಿಸಿ ಮನೆಗಳಲ್ಲಿ ಪ್ರಾರ್ಥನೆ ನೆರವೇರಿಸಲು ಧರ್ಮದ ಆದಾರದಲ್ಲೇ ಮುಂದೆ ಬಂದರು. ಜಗತ್ತಲ್ಲಿ ಬೇರೆ ಎಲ್ಲಕ್ಕಿಂತಲೂ ಮಾನವನ ಜೀವ ಅತ್ಯಂತ ಅಮೂಲ್ಯವಾದದ್ದು ಎಂಬ ಸಂದೇಶವನ್ನು ಇಸ್ಲಾಂ ಸಾರಿರುವುದರಿಂದ ಕೊರೋನ ಟೈಮಲ್ಲಿ ಮಸೀದಿಯ ಆರಾಧನೆಯನ್ನು ಮೊಟಕು ಗೊಳಿಸಲು ಮುಸ್ಲಿಮರಿಗೆ ಹಿಂದೆ ಮುಂದೆ ನೋಡುವ ಅಗತ್ಯ ಉಂಟಾಗಲಿಲ್ಲ. ಅದೇ ರೀತಿ ನೆರೆಕರೆಯವರು ಹಸಿದಿರುವಾಗ ತಿಂದು ತೇಗುವವ ಮುಸಲ್ಮಾನನೇ ಆಗುವುದಿಲ್ಲ ಎಂಬ ಪ್ರವಾದಿ ನುಡಿಯ ಸಾಕ್ಷಾತ್ಕಾರ ಈಗಿನ ಲಾಕ್ ಡೌನ್ ಸಂಧರ್ಬದಲ್ಲಿ ಮುಸ್ಲಿಮರ ಕಡೆಯಿಂದ ಉಂಟಾಯಿತು ಎಂಬುದು ಉಲ್ಲೇಖನೀಯ. ಜಾತಿ ಧರ್ಮದ ಹಂಗಿಲ್ಲದೇ ಸಂಘ ಸಂಸ್ಥೆಗಳು ಮತ್ತು ಶ್ರೀಮಂತರು ತಮ್ಮಿಂದಾದ ದಿನಸಿ ಸಾಮಾನುಗಳನ್ನು ಈ ಸಂಕಷ್ಟದ ಕಾಲದಲ್ಲಿ ವಿತರಿಸಿದ್ದು ಬಡವರ ಪಾಲಿಗೆ ಅಮೃತವಾಯುವಿನಂತೆ ಪ್ರಯೋಜನಕ್ಕೆ ಬಂತು.
ಈ ನಿಟ್ಟಿನಲ್ಲಿ ಝಕಾತ್ ಎಂಬ ಹಂಚಿತಿನ್ನುವ ಪರಿಕಲ್ಪನೆ ಇಸ್ಲಾಮಿನ ದೊಡ್ಡ ಒಂದು ಕೊಡುಗೆಯಾಗಿದೆ ಎಂದು ಹೇಳಬಹುದು. ಆದರೆ ಇಂದು ಈ ಝಕಾತ್ ಎಂಬುದು ಬಿಕ್ಷಾಟನೆಗೆ ದಾರಿ ಮಾಡಿಕೊಟ್ಟದ್ದು ಮಾತ್ರ ದುರದೃಷ್ಡಕರ ಎನ್ನದೇ ವಿಧಿ ಇಲ್ಲ. ಖಾಝಿಗಳ ಮಾರ್ಗದರ್ಶನದಲ್ಲಿ ಸಮರ್ಪಕವಾಗಿ ಝಕಾತ್ ವಿತರಣೆ ನಡೆದರೆ ಅದು ಸಮಾಜದ ಅಭವೃದ್ದಿಯ ಹಾದಿಯಲ್ಲಿ ದೊಡ್ಡ ಮೈಲಿಗಲ್ಲಾಗ ಬಹುದು. ಈ ವರ್ಷ ಹಜ್ ಯಾತ್ರೆ ಕೂಡಾ ಸಂಶಯಾಸ್ಪದ ವಾಗಿದ್ದು ಬಡವರಿಗೆ ಸಹಾಯ ಮಾಡುವುದರಿಂದ ಹಜ್ ನ ಪುಣ್ಯ ದಕ್ಕಿಸಿ ಕೊಳ್ಳ ಬಹುದಾಗಿದೆ. ಇನ್ನು ಈದ್ ಆಚರಣೆಗೆ ಸಂಭಂದಿಸಿದಂತೆ ಹೇಳುವುದಾದರೆ ಮಸೀದಿಯ ಸಾಮೂಹಿಕ ನಮಾಜ್ ಒಂದು ಬಿಟ್ಟು ಇತರ ಎಲ್ಲಾ ಆಚರಣೆಗಳನ್ನು ಪಾಲಿಸಲು ಯಾವುದೇ ಅಡ್ಡಿ ಇಲ್ಲ.ಆದರೆ ಯಾವುದೇ ಕಾರಣಕ್ಕೂ ಜನಜಂಗುಳಿ ಉಂಟಾಗದಂತೆ ಎಚ್ವರ ವಹಿಸುವುದಕ್ಕೆ ಪ್ರಥಮ ಆದ್ಯತೆ ನೀಡ ಬೇಕಾಗುತ್ತದೆ.ಬೆಳಿಗ್ಗೆದ್ದು ಸ್ನಾನ ಮಾಡಿ ಇರುವುದರಲ್ಲಿ ಉತ್ತಮ ವಸ್ತ್ರ ಧರಿಸಿ ಮನೆಮಂದಿಗಳು ಒಟ್ಟು ಸೇರಿ ಈದ್ ನಮಾಜ್ ನಿರ್ವಹಿಸ ಬಹುದಾಗಿದೆ.ಅದೇ ರೀತಿ ಸರಕಾರ ಅನುಕೂಲ ಮಾಡಿಕೊಟ್ಟರೆ ಹತ್ತಿರದ ಸಂಭಂದಿಕರ ಬೇಟಿ,ಕಬರ್ಸ್ಥಾನ ಸಂಧರ್ಶನ ಮಾಡಬಹುದು.ಆದರೆ ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಾಗಿದೆ.ಸತ್ಯ ಹೇಳುವುದಾದರೆ ನಮ್ಮ ಆರಾಧನೆಗಳು ಮತ್ತು ಆಚಾರ ವಿಚಾರಗಳು ಎಲ್ಲವೂ ಮಾನವನ ಒಳಿತಿಗಾಗಿ ಇದೆಯೇ ವಿನಃ ದೇವನ ಅಗತ್ಯ ಪೂರೈಸಲಿಕ್ಕಾಗಿ ಅಲ್ಲ ಎಂಬ ಪ್ರಾಥಮಿಕ ಅರಿವು ಪ್ರತಿಯೊಬ್ಬ ಆಸ್ತಿಕನಲ್ಲಿ ಇರ ಬೇಕಾಗಿದೆ.
ನಾವು ಧರ್ಮದ ಆಧಾರದಲ್ಲಿ ನೈತಿಕ ಹಾದಿ ತುಳಿದರೆ ಅದರಿಂದ ನಮಗೇ ಪ್ರಯೋಜನ ಎಂಬ ಜ್ಞಾನ ಇದ್ದರೆ ಮತ್ತೆ ಅಲ್ಲಿ ಈ ಧರ್ಮದ ಕಾರಣಕ್ಕಾಗಿ ಯಾವುದೇ ಕೋಮು ಧ್ರುವೀಕರಣ, ದ್ವೇಷಾಸೂಯೆ ಉಂಟಾಗುವುದಿಲ್ಲ. ಆದರೆ ಇಂದು ಏನಾಗಿದೆ ಎಂದರೆ ಧರ್ಮಗಳು ಜನರ ಮಧ್ಯೆ ದ್ವೇಷ ಬಿತ್ತುವ ಸಾಧನವಾಗಿ ಮಾರ್ಪಟ್ಟಿದೆ. ಧರ್ಮವನ್ನು ಮುಂದಿಟ್ಟು ಅಧಿಕಾರ ಪಡೆಯಲಿಕ್ಕಿರುವ ಕೆಲವರ ಹುನ್ನಾರದಿಂದಾಗಿ ಹೀಗಾಗಿದೆ. ಬುದ್ದಿವಂತ ಜನಸಾಮಾನ್ಯರು ಇದಕ್ಕೆ ಆಸ್ಪದ ಕೊಡದೇ ಧರ್ಮವನ್ನು ಅದರಷ್ಟಕ್ಕೆ ಬಿಟ್ಟು ರಾಜಕಾರಣವನ್ನು ಪ್ರಗತಿಯ ಆಧಾರದಲ್ಲಿ ನಿರ್ಣಯಿಸುವ ಪ್ರಭುದ್ದತೆ ತೋರಿಸಿದರೆ ಧರ್ಮವೂ ಉದ್ದಾರವಾಗುತ್ತೆ.ದೇಶವೂ ಅಭಿವೃದ್ದಿಯಾಗುತ್ತೆ. ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಇದೇ ಸ್ಥಿತಿ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಇಸ್ಲಾಂ ಧರ್ಮದ ಪ್ರಕಾರ ಈ ಜಗತ್ತು ಒಬ್ಬ ಸೃಷ್ಟಿಕರ್ತನ ಒಡೆತನದಲ್ಲಿದ್ದು ಆ ಸೃಷ್ಡಿಕರ್ತನನ್ನು ಮೆಚ್ವಿಸಲು ಇರುವ ಏಕೈಕ ದಾರಿಯೇನೆಂದರೆ ಅವನ ಸೃಷ್ಟಿಗಳಿಗೆ ಸಲ್ಲಬೇಕಾದ ಹಕ್ಕುಗಳನ್ನು ನೀಡುವುದಾಗಿದೆ.
ವಿಶೇಷವಾಗಿ ಮಾನವನಿಗೆ ಒಬ್ಬ ಎಷ್ಟು ಹತ್ತಿರವಾಗುತ್ತಾನೋ ಅಲ್ಲಾಹನಿಗೂ ಆತ ಅಷ್ಟೇ ಹತ್ತಿರ ಆಗುತ್ತಾನೆ. ಮಾನವನ ಆಸೆ ಆಕಾಂಕ್ಷೆಗಳಿಗೆ ಸ್ಪಂದಿಸದೇ ದೇವನಿಗೆ ಹತ್ತಿರವಾಗಲು ಖಂಡಿತ ಸಾದ್ಯವಿಲ್ಲ. ಈ ಆಶಯವನ್ನು ಪ್ರತಿಪಾದಿಸುವ ಕುರ್ಆನ್ ವಚನಗಳು ಮತ್ತು ಪ್ರವಾದಿ ನುಡಿಗಳು ಸಾಕಷ್ಟಿವೆ. ಇಸ್ಲಾಮಿನ ತಿರುಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದೇ ಆಗಿದೆ. ತಂದೆ ತಾಯಿಗಳಿಗೆ,ಕುಟುಂಬ ವರ್ಗದವರಿಗೆ,ನೆರೆಕೆರೆಯವರಿಗೆ ಮಡದಿ ಮಕ್ಕಳಿಗೆ ಹಾಗೂ ಇತರ ಎಲ್ಲಾ ಜೀವ ಜಾಲಗಳಿಗೆ ಒಳಿತನ್ನು ಭಯಸುವವನೇ ಮುಸಲ್ಮಾನನಾಗಿ ಗುರುತಿಸುತ್ತಾನೆಯೇ ಹೊರತು ಕೇವಲ ಹೆಸರಿನಿಂದ ಮುಸ್ಲಿಮನನ್ನು ಗುರುತಿಸಲು ಸಾದ್ಯವಿಲ್ಲ. ಏಕದೇವೋಪಾಸನೆಯನ್ನು ತನ್ನದಾಗಿಸಿ ನಾವು ಹುಟ್ಟಿ ಬೆಳೆದ ನಾಡನ್ನು ಪ್ರೀತಿಸಿ ಅಮಾನವೀಯವಲ್ಲದ ಸ್ಥಳೀಯ ಸಂಸ್ಕೃತಿಗಳನ್ನು ಗೌರವಿಸಿ ದೇಶದ ಕಾನೂನನ್ನು ಪಾಲಿಸಿ ನ್ಯಾಯ ಪಾಲಿಸುವ ದೊರೆಗಳಿಗೆ ಒಳಿತನ್ನು ಭಯಸಿ ಶಾಂತಿ ಮತ್ತು ಪ್ರೀತಿಯನ್ನು ಹಂಚಿ ಉತ್ತಮ ಗುಣಸ್ವಭಾವವನ್ನು ಜೀವನದಲ್ಲಿ ರೂಡಿಸಿ ,ತನಗೆ ಕೇಡು ಬಗೆಯದ ಎಲ್ಲಾ ಜಾತಿ ಜನಾಂಗದೊಂದಿಗೆ ಸೌಹಾರ್ಧತೆಯೊಂದಿಗೆ ಬದುಕಿ ಬಾಳುವವನೇ ನಿಜವಾದ ಮುಸ್ಲಿಮನಾಗಿದ್ದು ಪರಲೋಕದಲ್ಲಿನ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಇಸ್ಲಾಮ್ ಧರ್ಮದ ಆಚಾರ ವಿಚಾರಗಳನ್ನು ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಅನುಸರಿಸುವವನೇ ದೇವನ ಇಷ್ಟ ದಾಸನಾಗುತ್ತಾನೆಯೇ ವಿನಃ ನಾನೊಬ್ಬ ಧರ್ಮ ರಕ್ಷಕ ಎಂದು ಫೋಸ್ ಕೊಟ್ಟು ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡಿದಾತ ನಿಜವಾದ ಧರ್ಮದ್ರೋಹಿಯಾಗುತ್ತಾನೆ.
ಒಟ್ಟಾರೆ ಹೇಳುವುದಾದರೆ ಧರ್ಮದ ಬಗ್ಗೆಗಿನ ಅಜ್ಞಾನವನ್ನು ತೊಳಗಿಸಿ ಧರ್ಮದ ನಿಜವಾದ ತಿರುಳನ್ನು ಜನರಿಗೆ ತಿಳಿಸಿ ಕೊಡುವ ಕೆಲಸ ಜರೂರತ್ತಾಗಿ ಆಗ ಬೇಕಿದೆ. ಈದ್ ಆಚರಣೆ ಅದಕ್ಕೆ ಪ್ರೇರಣೆಯಾಗಲಿ.ಲಾಕ್ ಡೌನ್ ನಮಗೆ ಕಲಿಸಿದ ಹಲವು ಪಾಠಗಳು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿ.
– ಎಸ್ ಬಿ ದಾರಿಮಿ, ಉಪ್ಪಿನಂಗಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.