ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಅಲ್ಲಾಹು ಅಕ್ಬರುಲ್ಲಾಹು ಅಕ್ಬರುಲ್ಲಾಹು ಅಕ್ಬರ್ …. ಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ….. ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಂದ್…..
ಕ್ವದ್ ಅಫ್ಲಹ ಮನ್ತಝಕ್ಕಾ ವ ಝಕರಸ್ಮ ರಬ್ಬಿಹೀ ಫಸ್ವಲ್ಲಾ…. (ನಿಶ್ಚಯವಾಗಿಯೂ ಫಿತ್ರ್ ಝಕಾತ್ ನೀಡಿದವನು ವಿಜಯಶಾಲಿಯಾದನು…. ಅಲ್ಲಾಹನ ನಾಮಸ್ಮರಣೆ ಮಾಡಿದವನೂ (ತಕ್ಬೀರ್ ಹೇಳಿದವನೂ) ಈದ್ ನಮಾಝ್ ಮಾಡಿದವನೂ ವಿಜಯಶಾಲಿಯಾದನು…..) (ಕುರ್ಆನ್)
ಪವಿತ್ರ ಇಸ್ಲಾಂ ಮುಸ್ಲಿಮರಿಗೆ ಅನುಗ್ರಹಿಸಿದ ವರ್ಷದ ಎರಡು ಮಹತ್ವಪೂರ್ಣ ಸಂತೋಷದ ದಿನಗಳಲ್ಲಿ ಒಂದಾಗಿದೆ ಈದ್-ಉಲ್-ಫಿತ್ರ್ ಆರ್ಥಾತ್ ಚೆರಿಯ ಪೆರ್ನಾಳ್. ಪವಿತ್ರ ರಂಝಾನಿನ ತಿಂಗಳು ಪೂರ್ತಿ ಅನ್ನಾಹಾರ ಪಾನೀಯ ಹಾಗೂ ಸಕಲ ದೇಹೇಚ್ಛೆಗಳನ್ನು ತ್ಯಜಿಸಿ ಉಪವಾಸ ಆಚರಿಸುವ ಮೂಲಕ ದೈವಭಕ್ತಿಯಿಂದ ಅಲ್ಲಾಹನ ಸಾಮೀಪ್ಯ ಬಯಸಿದ ಮುಸಲ್ಮಾನ ಶವ್ವಾಲ್ 1 ರ ಚಂದ್ರದರ್ಶನವಾಗುತ್ತಿದ್ದಂತೆ ಅಲ್ಲಾಹನ ಸ್ಮರಣೆಯನ್ನು ಮಾಡುತ್ತಾ, ಅಲ್ಲಾಹು ತನಗೆ ನೀಡಿದ ಸಕಲ ಅನುಗ್ರಹಗಳಿಗೆ ಸ್ತುತಿ ಅರ್ಪಿಸುತ್ತಾ, ಕುಟುಂಬಿಕರನ್ನು, ಸ್ನೇಹಿತರನ್ನು ಪರಸ್ಪರ ಕಂಡು ಸಂತೋಷ ಆಚರಿಸುವುದಾಗಿರುತ್ತದೆ ಈದ್-ಉಲ್-ಫಿತ್ರ್ನ ಪ್ರಮುಖ ಉದ್ದೇಶ.
ಈದುಲ್ ಫಿತ್ರ್ ಹಬ್ಬಕ್ಕೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಆ ದಿನದ ಪ್ರಾರ್ಥನೆಗೆ ವಿಶೇಷ ಮನ್ನಣೆಯನ್ನು ಅಲ್ಲಾಹು ನೀಡುತ್ತಾನೆ. ದೈವಭಕ್ತಿಯಿಂದ ಆ ದಿವಸ ಅಲ್ಲಾಹನೊಂದಿಗೆ ಯಾಚಿಸಿದರೆ ನಿಸ್ಸಂಶಯ ಅದನ್ನು ಭಗವಂತ ಕರುಣಿಸದೆ ಇರಲಾರನು. ಆ ದಿವಸದಲ್ಲಿ ಉಪವಾಸ ಆಚರಣೆ ನಿಷಿದ್ದಗೊಳಿಸಲಾಗಿದೆ. ಅನ್ನಾಹಾರ ಪಾನೀಯ ಸೇವಿಸಿ ಪರಸ್ಪರ ಧಾರ್ಮಿಕ ಚೌಕಟ್ಟಿನಲ್ಲಿ ಸಂತೋಷ ಆಚರಣೆಗೆ ಇಸ್ಲಾಂ ಕಲ್ಪಿಸುತ್ತದೆ. ಇಸ್ಲಾಮಿನಲ್ಲಿ ಹಬ್ಬಗಳ ಆಚರಣೆಗೂ ಒಂದು ಮಿತಿಯಿದೆ. ಅವುಗಳನ್ನು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮೀಕರಿಸುವುದನ್ನು ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಸಂಭ್ರಮದ ಹಬ್ಬಗಳ ಆಚರಣೆಯಲ್ಲೂ ಸೃಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ. ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣ ಕೈಗೊಳ್ಳುವ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವ ಸಾಧ್ಯತೆಗಳಿರುವುದನ್ನು ಇಸ್ಲಾಂ ಗಂಭೀರವಾಗಿ ಎಚ್ಚರಿಸುತ್ತದೆ. ಈದ್ ಎಂದರೆ ಬೇಕಾಬಿಟ್ಟಿ ತಿಂದುಂಡು ಅನಿಸ್ಲಾಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಮೋಜು-ಮಸ್ತಿ ನಡೆಸುವುದಲ್ಲ. ಬದಲಾಗಿ ಪವಿತ್ರ ರಮಳಾನ್ ಆಗಮನಕ್ಕೆ ಮುಂಚೆ ಆ ಪುಣ್ಯ ಮಾಸದ ಆಗಮನಕ್ಕಾಗಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಅದೆಷ್ಟೋ ಮಂದಿಗೆ ಆ ಪವಿತ್ರ ಕ್ಷಣಗಳನ್ನು ಜೀವನದಲ್ಲಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ…. ಅದೇ ರೀತಿ ಪವಿತ್ರ ರಮಳಾನಿನ ಆರಂಭದಲ್ಲಿದ್ದವರಿಗೆ ಅಂತ್ಯದವರೆಗೂ ಈ ಲೋಕದಲ್ಲಿ ಜೀವಿಸಲು ಸಾಧ್ಯವಾಗಿಲ್ಲ. ರಮಳಾನಿನ ಕೊನೆ ಕ್ಷಣದವರೆಗೂ ಜೀವಿಸಿದ್ದು, ಪವಿತ್ರ ಈದುಲ್ ಫಿತ್ರ್ ದಿನವನ್ನು ಸ್ವಾಗತಿಸಲು ಸಾಧ್ಯವಾಗಿಲ್ಲ. ಅವರೆಲ್ಲರೂ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ಈ ಲೋಕಕ್ಕೆ ವಿದಾಯ ಹೇಳಿ ಶಾಶ್ವತ ಬರ್ಝಖೀ ಜೀವನಕ್ಕೆ ತೆರಳಿದ್ದಾರೆ… ಆದರೆ ಸರ್ವಶಕ್ತನಾದ ಅಲ್ಲಾಹನು ನಮ್ಮ ಪಾಲಿಗೆ ಆಯುಷ್ಯವನ್ನು ನೀಡಿ ಈ ಪವಿತ್ರ ರಮಳಾನ್ ತಿಂಗಳಿನ 30 ದಿನಗಳ ವೃತಾಚರಣೆಗೂ ಭಾಗ್ಯ ಕಲ್ಪಿಸಿ, ಪವಿತ್ರ ಈದ್-ಉಲ್-ಫಿತ್ರ್ ದಿವಸವನ್ನೂ ಜೀವನದಲ್ಲಿ ಸ್ವಾಗತಿಸಲು ಸೌಭಾಗ್ಯವನ್ನು ನೀಡಿದ್ದಾನೆ. ಅಲ್ಲಾಹನು ನೀಡಿದ ಈ ಮಹತ್ತರ ಸೌಭಾಗ್ಯವನ್ನು ಸ್ಮರಿಸಿ ಅಲ್ಲಾಹನಿಗೆ ಸ್ತುತಿ ಅರ್ಪಿಸುವ ದಿನವಾಗಿದೆ ಈದ್…
ಈ ಬಾರಿಯ ರಮಳಾನ್ ನಿಜಕ್ಕೂ ಮುಸಲ್ಮಾನ ಅಲ್ಲಾಹನ ಕಠಿಣ-ಕಠೋರ ಪರೀಕ್ಷೆಗೆ ಕೊರಳೊಡ್ಡಿ ಕಳೆಯಬೇಕಾಗಿ ಬಂದಿದೆ. ಕಠಿನ ಪರೀಕ್ಷೆಯಲ್ಲೂ ಅಲ್ಲಾಹನು ಅನುಗ್ರಹದ ನೋಟವನ್ನು ನಮ್ಮೆಡೆಗೆ ಬೀರಿದ್ದಾನೆ. ಅಂದರೆ ಬರಗಾಲದ ನಡುವೆಯೂ ಪವಿತ್ರ ರಮಳಾನಿನ ಸ್ವಾದವನ್ನು ಆಸ್ವಾದಿಸಲು ಅಲ್ಲಾಹು ನಮಗೆ ಮಹಾಭಾಗ್ಯವನ್ನು ಕರುಣಿಸಿದ್ದಾರೆ. ಮಸೀದಿಗಳಿಗೆ ನಿರ್ಬಂಧ ವಿಧಿಸಲಾಗಿದ್ದರೂ ರಮಳಾನ್ ತಿಂಗಳ ಸಹಜ ಆರಾಧನಾ ಕರ್ಮಗಳನ್ನು ತಮ್ಮ ತಮ್ಮ ಮನೆಗಳಲ್ಲಿಯಾದರೂ ನಿಷ್ಕಳಂಕವಾಗಿ ನೆರವೇರಿಸಲು ಅವಕಾಶ ನೀಡಿದ ಸರ್ವಶಕ್ತನನ್ನು ಪ್ರತ್ಯೇಕವಾಗಿ ಈ ಸಂಧಿಗ್ಧ ಪರಿಸ್ಥಿತಿಯ ಈದ್ ದಿನ ಸ್ಮರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು… ಈದ್ ಹೆಸರಿನಲ್ಲಿ ಮೋಜು-ಮಸ್ತಿ, ತಮಾಷೆ, ಆಡಂಬರ, ಫ್ಯಾಶನ್ಗಳಲ್ಲಿ ಮುಳುಗೆದ್ದು ಬೀಳುವ ನಾವುಗಳು ನಮ್ಮ ಜೀವನದ ಮುಂದಿನ ಘಟ್ಟಗಳಾದ ಈ ಲೋಕಕ್ಕೆ ಶಾಶ್ವತ ವಿದಾಯ ಹೇಳುವ ಆರಂಭಿಕ ಹಂತವಾಗಿರುವ ಮರಣದ ರುಚಿ ನಾವೆಲ್ಲ ನೋಡಲಿಕ್ಕಿದ್ದೇವೆ… ನಂತರ ಪಾರತ್ರಿಕ ಜೀವನದ ಪ್ರಥಮ ಮೆಟ್ಟಿಲು ಭಯಾನಕ ಖಬ್ರ್ ಜೀವನವನ್ನು ನಾವೆಲ್ಲ ಒಬ್ಬಂಟಿಯಾಗಿ ಕಳೆಯಲಿಕ್ಕಿದ್ದೇವೆ…. ಆ ಬಳಿಕ ಸವಾಲ್-ಜವಾಬ್, ಹಿಸಾಬ್, ಒಳಿತು-ಕೆಡುಕುಗಳ ಹೊತ್ತಗೆ ಸ್ವತಃ ಕೈಯಲ್ಲಿ ಪಡೆದುಕೊಂಡು ಓದುವ ಸನ್ನಿವೇಶ… ಸ್ವಿರಾತ್, ಮಹ್ಶರಾ, ಸ್ವರ್ಗ-ನರಕ ಮೊದಲಾದ ಹಲವು ಘಟ್ಟಗಳನ್ನು ನಾವೆಲ್ಲರೂ ಅನುಭವಿಸಲಿಕ್ಕಿದ್ದೇವೆ ಎಂಬುದನ್ನು ಆತ್ಮಾರ್ಥವಾಗಿ ನೆನಪಿಸಿಕೊಂಡು ಅಲ್ಲಾಹನೆಡೆಗೆ ಇಬಾದತ್ ಹೆಚ್ಚಿಸುವ ದಿನವಾಗಿದೆ ಈದ್….. ನಮ್ಮ ಹೆತ್ತವರು, ಪೋಷಕರು, ಕುಟುಂಬಿಕರು, ಉಸ್ತಾದರು, ಸ್ನೇಹಿತರು, ನಮ್ಮೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡಿದ್ದ ಹಲವು ಮಂದಿ ಇಂದು ನಮ್ಮೊಂದಿಗಿಲ್ಲ. ಅವರು ಕಬ್ರ್ ಎಂಬ ಮಣ್ಣಿನ ಕತ್ತಲ ಲೋಕದಲ್ಲಿ ಒಂಟಿ ಜೀವನವನ್ನು ನಡೆಸುವುದು ನಮ್ಮನ್ನು ಚಿಂತೆಗೀಡುಮಾಡಬೇಕಾದ ದಿನವಾಗಿದೆ ಇಂದಿನ ಈದ್ ದಿನ… ಇವರೆಲ್ಲರನ್ನು ಒಂದು ಕ್ಷಣ ಸ್ಮರಿಸಿಕೊಂಡು ಅವರಿಗಾಗಿ ಏನಾದರೊಂದು ತುಣುಕು ಕುರ್ಆನ್ ಪಠಣ ಮಾಡಿ ಅವರ ಒಳಿತಿಗಾಗಿ ಅಲ್ಲಾಹನಲ್ಲಿ ನಿಷ್ಕಳಂಕ ಮನಸ್ಸಿನಿಂದ ದುಆ ನೆರವೇರಿಸಬೇಕಾದ ವಿಶೇಷ ದಿನವಾಗಿದೆ ಈದ್… ಕುಟುಂಬಿಕರನ್ನು, ಸ್ನೇಹಿತರನ್ನು, ಹತ್ತಿರ ಇರುವವರನ್ನು, ದೂರದಲ್ಲಿರುವವರನ್ನು ಖುದ್ದಾಗಿ ಕಂಡು ಮಾತನಾಡಿಸಿ ಧರ್ಮ ಚೌಕಟ್ಟಿನಲ್ಲಿ ಸಂಭ್ರಮ ಹಂಚಿಕೊಳ್ಳುವ ಅವಕಾಶ ಈ ಬಾರಿಯ ಈದ್ ದಿನ ನಮ್ಮ ಪಾಲಿಗೆ ವಂಚಿತವಾಗಿದೆ. ಆದರೂ ಸರಳ ಈದ್ ಆಚರಿಸುವ ಮೂಲಕ ನಮ್ಮ ಕುಟುಂಬದಲ್ಲಿ, ನೆರೆಕರೆಯಲ್ಲಿ ಹಾಗೂ ಊರಿನಲ್ಲಿರುವ ಬಡ-ಬಗ್ಗರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ಈ ಬಾರಿಯ ಈದುಲ್ ಫಿತ್ರ್ ಹಬ್ಬವನ್ನು ಸ್ಮರಣೀಯವಾಗಿಸಬೇಕಾಗಿದೆ. ಈದುಲ್ ಫಿತ್ರ್ ಹಬ್ಬದ ಸಂಭ್ರಮ-ಸಡಗರದಿಂದ ಬಡ-ಬಗ್ಗರೂ ವಂಚಿತರಾಗಬಾರದು ಎಂಬ ಮಹತ್ತರ ಸದುದ್ದೇಶದಿಂದ ಪವಿತ್ರ ಇಸ್ಲಾಂ ಕಡ್ಡಾಯಗೊಳಿಸಿದ ಫಿತ್ರ್ ಝಕಾತನ್ನು ಅರ್ಹರ ಪಾಲಿಗೆ ತಲುಪಿಸಿ ಇನ್ನೊಬ್ಬರ ಬದುಕಿನಲ್ಲೂ ಸಂತೋಷ-ಸಂಭ್ರಮವನ್ನು ಕಾಣುವ ಅತೀ ಮಹತ್ವಪೂರ್ಣ ದಿನವಾಗಿದೆ ಈದ್…..
ಈ ರೀತಿಯಾಗಿ ಇಸ್ಲಾಮಿ ಚೌಕಟ್ಟಿನಲ್ಲಿ ಸಂಭ್ರಮದಿಂದ ಈದ್ ಆಚರಿಸಿದ ಸಜ್ಜನ ವಿಶ್ವಾಸಿಗಳ ಸಾಲಿನಲ್ಲಿ ಅಲ್ಲಾಹನು ನಮ್ಮೆಲ್ಲರನ್ನು ಒಳಪಡಿಸಲಿ… ಆಮೀನ್ ಯಾ ರಬ್ಬಲ್ ಆಲಮೀನ್ ಎಂಬ ಅಂತರಾಳದ ಪ್ರಾರ್ಥನೆಯೊಂದಿಗೆ ಸರ್ವರಿಗೂ ಈದ್-ಉಲ್-ಫಿತ್ರ್ ಹಬ್ಬದ ಮನತುಂಬಿದ ಶುಭಾಶಯಗಳು …..
✍️ ಪಿ.ಎಂ.ಎ. ಪಾಣೆಮಂಗಳೂರು….
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.