ತುಮಕೂರು : ಲಾರಿಗಳಲ್ಲಿ ಅಂತರರಾಜ್ಯಕ್ಕೆ ಸರಕು ಸಾಗಾಣಿಕೆ ಮಾಡುವ ಲಾರಿ ಚಾಲಕರು ಮತ್ತು ಲಾರಿ ಸಹಾಯಕರು ಲಾರಿ ಚಾಲನೆ ಮಾಡಿಕೊಂಡು ಹೋಗುವಾಗ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಮತ್ತು ತುಮಕೂರಿಗೆ ವಾಪಸ್ ಬಂದಾಗ ವೈದ್ಯಕೀಯ ತಪಾಸಣೆಗೆ ಒಳಪಡಿಸುತ್ತಾರೆ, ತುಮಕೂರಿಗೆ ಬಂದ ಚಾಲಕರುಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿ ಕೊರೋನ ಶಂಕೆ ಕಂಡು ಬಂದಲ್ಲಿ ಮಾತ್ರ ಕ್ವಾರಂಟೈನ್ ಮಾಡಿ ಸೋಂಕು ಇಲ್ಲದ ಚಾಲಕರುಗಳಿಗೆ ಚಾಲನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲಾ ಲಾರಿ ಚಾಲಕರು ಮತ್ತು ಲಾರಿ ಸಹಾಯಕರ ಸಂಘ (ರಿ.) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಸೈಯದ್ ಮೆಹಬೂಬ್ ಪಾಷ, ನಮ್ಮ ಸಂಘದಲ್ಲಿ ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿರುವ 3೦೦೦ ಮಂದಿ ಚಾಲಕರು ಮತ್ತು ೧೫೬೦ ಮಂದಿ ಲಾರಿ ಸಹಾಯಕರು ಸೇರಿ 4560 ಮಂದಿ ಇದ್ದು, ಕೋವಿಡ್-19 ಲಾಕ್ಡೌನ್ನಿಂದ ಲಾರಿ ಚಾಲಕರ ಕುಟುಂಬದ ಸ್ಥಿತಿ ಶೋಚನೀಯವಾಗಿದೆ. ಒಂದೊತ್ತಿನ ಊಟಕ್ಕೂ ತೊಂದರೆಯಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ನಮ್ಮ ಸಂಘದ ಚಾಲಕರು ತುಮಕೂರಿನಿಂದ ಮಹಾರಾಷ್ಟ್ರ, ಆಂದ್ರಪ್ರದೇಶ, ಗುಜರಾತ್ ಮತ್ತಿತರೆ ಅಂತರಾಜ್ಯಗಳಿಗೆ ಸರಕು ಸಾಗಾಣಿಕೆ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದು, ಅಂತರಾಜ್ಯ ಸರಕು ಸಾಗಾಣಿಕೆ ಮಾಡಿ ಬಂದ ಲಾರಿ ಚಾಲಕರುಗಳಿಗೆ ತುಮಕೂರಿನಲ್ಲಿ ೧೪ ದಿನ ಕ್ವಾರಂಟೈನ್ ಮಾಡಿದ್ದಾರೆ. ಲಾರಿ ಚಾಲಕರಿಗೆ ಮತ್ತು ಸಹಾಯಕರುಗಳಿಗೆ ಪ್ರತ್ಯೇಕವಾದ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಿ ಕಾಲಕಾಲಕ್ಕೆ ಸರಿಯಾಗಿ ಊಟ ತಿಂಡಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಒಬ್ಬ ಚಾಲಕ ಬೇರೆ ರಾಜ್ಯಕ್ಕೆ ಹೋಗಿ ಬರಲು ೪ ದಿನಗಳು ಆಗುತ್ತಿದ್ದು, ಆ ಚಾಲಕ ತುಮಕೂರಿನಿಂದ ಹೊರಡುವ ಮೊದಲು ವೈದ್ಯಾಧಿಕಾರಿಗಳು ತಪಾಸಣೆ ಮಾಡಿರುತ್ತಾರೆ. ಮದ್ಯದಲ್ಲಿ ಅಂತರ ಜಿಲ್ಲೆ ಗಡಿಯಲ್ಲಿ ತಪಾಸಣೆ ಠಾಣೆಗಳಿಂದಲೂ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಕೊನೆಯದಾಗಿ ಅಂತರರಾಜ್ಯ ಗಡಿಯಲ್ಲೂ ಕಟ್ಟು ನಿಟ್ಟಾಗಿ ವೈದ್ಯಕೀಯ ತಪಾಸಣೆ ಮಾಡುತ್ತಾರೆ. ಹಿಂತಿರುಗಿ ಬರುವಾಗ ಇದೇ ರೀತಿಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಲಾರಿ ಚಾಲಕ ತುಮಕೂರು ನಗರಕ್ಕೆ ಬಂದ ನಂತರ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಿ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ. 4 ದಿನ ಕೆಲಸ ಮಾಡಿದ ಚಾಲಕನಿಗೆ 14 ದಿನ ಕ್ವಾರಂಟೈನ್ ಮಾಡಿದರೆ ಚಾಲಕನ ಹೆಂಡತಿ ಮಕ್ಕಳ ಜೀವನ ನಡೆಸಲು ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಕೊರೋನ ಸೋಂಕು ಕಂಡುಬಂದರೆ ಮಾತ್ರ ಕ್ವಾರಂಟೈನ್ ಮಾಡಿ, ಸೋಂಕು ಇಲ್ಲದ ಚಾಲಕರುಗಳಿಗೆ ಲಾರಿ ಚಾಲನೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶೌಕತ್ ಉಲ್ಲಾ ಖಾನ್,ಬಾಬುಜಾನ್, ಅಸ್ಲಾಂಪಾಷ, ಮೆಹಬೂಬ್ ಜಾನ್, ನಯಾಜ್, ಆನಂದ್ ಮತ್ತಿತರರು ಭಾಗವಹಿಸಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.