ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಮೂಲತಃ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಹಮೀದ್ ಮತ್ತು ಆಮೀನಾ ದಂಪತಿಗೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿರುವ ಒಂದು ಚಿಕ್ಕ,ಬಡ ಸಂಸಾರ. ದೊಡ್ಡ ಮಗ ನೂಮಾನ್,ಅಲ್ ಹಸ್ಸದಲ್ಲಿ ಮೊಬೈಲ್ ಟೆಕ್ನಷಿಯನ್ ಮತ್ತು ಕಿರಿಮಗ ಸುಹೈಲ್ ವಿದ್ಯಾರ್ಥಿ. (ಹೆಸರು ಬದಲಾಯಿಸಲಾಗಿದೆ.) ಆರ್ಥಿಕವಾಗಿ ಹಿಂದುಳಿದ ಈ ಬಡ ಕುಟುಂಬಕ್ಕೆ ವಿವಾಹ ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳಿಬ್ಬರಿಗೆ ಮದುವೆ ಮಾಡಿಸಿಕೊಡುವುದು ದೊಡ್ಡ ಸವಾಲಾಗಿತ್ತು. ಹಮೀದ್ ಕೂಲಿ ಕಾರ್ಮಿಕ. ವಾರಕ್ಕೆ ಎರಡು-ಮೂರು ಕೆಲಸ,ಮಿಕ್ಕಿದ ದಿನಗಳಲ್ಲಿ ರಜೆ. ಪತ್ನಿ ಆಮಿನಾ ಮತ್ತು ಹೆಣ್ಣು ಮಕ್ಕಳಿಬ್ಬರು ಹಗಲಿರುಳು ಬೀಡಿ ಸುರುಟುತ್ತಾರೆ.
ಇತ್ತೀಚೆಗೆ ಸೌದಿಯಲ್ಲಿ ಜಾರಿಗೊಂಡ ‘ನಿತಾಕತ್’ ಎಂಬ ಹೊಸ ಕಾನೂನಿನಿಂದ ವಿದೇಶಿಗಳಿಗೆ ಮೊಬೈಲ್ ಮಾರಾಟ ಮತ್ತು ರಿಪೇರಿಗಳಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ನೂಮಾನ್ ಕಳೆದ ಎರಡು ವರ್ಷಗಳಿಂದ ಕೆಲಸ ಕಳದುಕೊಂಡು ಅಲೆದಾಟ ನಡೆಸುತ್ತಿದ್ದ. ಮನೆಯ ಬಡತನ,ಪ್ರಾಯಕ್ಕೆ ಬಂದ ತಂಗಿಯಂದಿರಿಗೆ ವಿವಾಹ ಮಾಡಿಕೊಡಬೇಕಾದ ದೊಡ್ಡ ಜವಾಬ್ದಾರಿ ನೂಮಾನ್ನ ಹೆಗಲ ಮೇಲಿತ್ತು. ಆದರೆ,ಸೌದಿಯಲ್ಲಿ ಜಾರಿಯಾದ ಸ್ವದೇಶೀಕರಣ ಎಂಬ ಹೊಸ ಕಾನೂನಿಂದಾಗಿ ನೂಮಾನ್ನ ಕನಸಿನ ಗೋಪುರವೇ ಕಳಚಿ ಬಿದ್ದಿತ್ತು.
ಪ್ರಾಯಕ್ಕೆ ಬಂದ ತಂಗಿಯಂದಿರ ವಿವಾಹ,ಕಳೆದ ನಾಲ್ಕು ವರ್ಷಗಳಿಂದ ತವರು ಕಾಣ ಬೇಕೆಂಬ ಕಾತರ, ತಂದೆಯ ನಿರುದ್ಯೋಗ, ತಮ್ಮನ ಸ್ಕೂಲ್ ಫೀಸ್ ಇವೆಲ್ಲವೂ ನೂಮಾನ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕೆಲಸವಿಲ್ಲದೆ ರೂಂಲ್ಲಿ ಕಾಲ ಕಳೆಯುತ್ತಿದ್ದ ನೂಮಾನನ್ನು ರೂಂ ಮೇಟ್ಗಳು ರೂಮಿನ ಬಾಡಿಗೆ ನೀಡ ಬೇಕಾಗಿಯೂ,ರೇಶನ್ ತರಬೇಕಾಗಿಯೂ ರೇಗಿಸುತ್ತಿದ್ದರು, ಒಟ್ಟು ಸೇರಿ ರೂಮಲ್ಲಿ ಅಡುಗೆ ಮಾಡಿ ಉಣ್ಣುತ್ತಿದ್ದ ರೂಂ ಮೇಟ್ಗಳು ನೂಮಾನ್ನ ನಿರುದ್ಯೋಗದಿಂದ ರೂಮಲ್ಲಿ ಅಡುಗೆ ಮಾಡುವುದನ್ನೇ ಬಿಟ್ಟು ಹೋಟೆಲ್ನಲ್ಲಿಯೇ ತಿಂದುಂಡು ಬರುತ್ತಿದ್ದರು.
ರೂಮಲ್ಲಿ ನೂಮಾನ್ ಯಾರಿಗೂ ಬೇಡದ ವಸ್ತುವಾಗಿದ್ದ. ‘ನಿತ್ಯ ರೂಮಲ್ಲಿಯೇ ಅಡುಗೆ ಮಾಡಿ ಉಣ್ಣುತ್ತಿದ್ದವರಿಗೆ ನಾನ್ಯಾಕೆ ಹೊರೆಯಗಬೇಕೆಂದು ಕೆಲಸ ಸರಿಯಾದಲ್ಲಿ ಕೊಡಬೇಕಾದ ಅಷ್ಟೂ ಬಾಡಿಗೆಯನ್ನು ಕೊಟ್ಟು ಬಿಡುವೆ’ ಎಂದು ರೂಂ ಮೇಟ್ಗಳಿಗೆ ಭರವಸೆ ಕೊಟ್ಟು ಕಳೆದ ಎಂಟು ವರ್ಷಗಳಿಂದ ವಾಸ್ತವ್ಯವಿದ್ದ ರೂಂ ಬಿಟ್ಟು ನೂಮಾನ್, ಊರ ಉದಾರಿಯೊಬ್ಬರ ರೂಂಗೆ ತನ್ನ ವಾಸ್ತವ್ಯವನ್ನು ಸ್ಥಳಾಂತರಿಸುತ್ತಾನೆ.
ಅಷ್ಟೊತ್ತಿಗೆ ತಂಗಿಯನ್ನು ಹುಡುಕಿಕೊಂಡು ವರ ಬಂತು. ಹಮೀದ್ ದಂಪತಿಗಳಿಗೆ ಎಲ್ಲಿಲ್ಲದ ಖುಷಿ. ಆದರೆ,ಮದುವೆಗೆ ಹಣ ಮಾಡುವುದೆಂದರೆ ಅವರಿಗದು ಕಬ್ಬಿಣದ ಕಡಲೆ. ನೂಮಾನ್ ‘ಉಮ್ಮ’ನಿಗೆ ಕರೆ ಮಾಡಿ ಹಡ್ಗನ ಬಗ್ಗೆ ವಿಚಾರಿಸಿದ. ಹುಡ್ಗ ಖೋಬಾರ್ ನಲ್ಲಿರುವುದಾಗಿಯೂ,ವೃತ್ತಿಯಲ್ಲಿ ಕ್ಯಾಟರಿಂಗ್ ಕುಕ್ ಆಗಿಯೂ 3 ಲಕ್ಷ ಡೌರಿ ಮತ್ತು 30 ಪವನ್ ಚಿನ್ನ ಡಿಮಾಂಡ್ ಇರುವುದಾಗಿಯೂ, ಬಾರಿ ದೊಡ್ಡ ಮನೆ, ರೂಮಿನಲ್ಲೆಲ್ಲಾ ಎಸಿ ಇರುವುದಾಗಿಯೂ,ಅಂಗಳದಲ್ಲಿ ದೊಡ್ಡದೊಂದು ಕಾರು ಇರುವುದಾಗಿಯೂ ತಿಳಿಸಿದರು. ನೂಮಾನ್ಗೆ ಇದೆಲ್ಲಾ ಕೇಳಿ ‘ಅದೃಷ್ಟ ಬಾವ’ ಸಿಕ್ಕಿತೆಂದು ತನ್ನೊಳಗಿನ ನೋವನ್ನೆಲ್ಲಾ ಮರೆತು ಬಿಟ್ಟಿದ್ದ.
ಮದುವೆಯ ದಿನಗಳು ಸಮೀಪಿಸುತ್ತಿತ್ತು. ನೂಮಾನ್ ಅಲ್ ಹಸ್ಸದಲ್ಲಿ ಸಿಕ್ಕ ಸಿಕ್ಕವರಿಂದ ಸಾಲಶೂಲ ಮಾಡಿ ಎರಡೂವರೆ ಲಕ್ಷ ಮನೆಗೆ ಕಳುಹಿಸಿಕೊಟ್ಟಿದ್ದ. ಊರ ಜಮಾತಿಗರು ಸ್ವಲ್ಪ ಸಹಾಯ ಮಾಡಿದ್ದರು ಅಂತೂ ಮೂರು ಲಕ್ಷ ವರದಕ್ಷಿಣೆ ಮತ್ತು 23 ಪವನ್ ಚಿನ್ನ ಹಾಕಿ ಮದುವೆ ನಡೆಯಿತು.
ಮದುವೆಯ ದಿನ ಹೋದ ರುಮೈಸ, ಎರಡು ದಿನ ಬಿಟ್ಟು ತವರಿಗೆ ಬರುತ್ತಾಳೆ. ರುಮೈಸಾಳ ತಾಯಿ,ಅತ್ತೆ ಮತ್ತು ಗಂಡನ ಬಗ್ಗೆ ವಿಚಾರಿಸುತ್ತಾಳೆ., ರುಮೈಸ ಗಳಗಳ ಕಣ್ಣೀರಿಡುತ್ತಾ ಅ(ಕ)ತ್ತೆಯ ಅಸಲಿ ಮುಖವನ್ನು ತಾಯಿ ಮುಂದೆ ತೆರೆದಿಡುತ್ತಾಳೆ. ಮತ್ತೆ ಗಂಡ….? ರುಮೈಸಾಳಿಗೆ ಮಾತು ಹೊರಳಲಿಲ್ಲ.! ರುಮೈಸಾಳ ಗಂಡ ಸಿದ್ದೀಖ್ನಿಗೆ ಆಕೆಗಿಂತ ಆಕೆಯ ಒಡವೆ ಮುಖ್ಯವಾಗಿತ್ತಂತೆ. ಸಿದ್ದೀಖ್ ಕೇಳಿದಕ್ಕಿಂತ ಏಳು ಪವನ್ ಚಿನ್ನ ಕಡಿಮೆ ಹಾಕಿರುವುದಕ್ಕೆ ಮೊದಲ ರಾತ್ರಿಯಲ್ಲಿಯೇ ಮಾನಸಿಕ ಹಿಂಸೆ ಕೊಡುತ್ತಾನೆ.
ಹೀಗೆ ಹದಿನೈದು ದಿನಗಳು ಕಳೆಯಿತು. ಇದರೆಡೆಯಲ್ಲಿ ಮೂರು ಬಾರಿ ತವರು ಮನೆಗೆ ರುಮೈಸ ಹೋಗಿ ಬರುತ್ತಾಳೆ. ಒಮ್ಮೆ ಸಿದ್ದೀಖ್,ರುಮೈಸಳೊಂದಿಗೆ ತವರು ಮನೆಗೆ ಹೋಗಿ ಬರೋಣ ಎಂದು ಹೇಳಿ ಬೇಗ ತಯಾರಿಯಾಗಲು ತಿಳಿಸಿದಂನಂತೆ. ತವರು ಮನೆಗೆ ಹೋಗುವುದನ್ನೇ ಕಾಯುತ್ತಿದ್ದ ರುಮೈಸಳ ಸಂತೋಷಕ್ಕೆ ಪಾರವೆ ಇರಲಿಲ್ಲ. ಸಿದ್ದೀಖ್ ಬೈಕ್ ಸ್ಟಾರ್ಟ್ ಮಾಡಿದ. ರುಮೈಸ ಬೈಕ್ನ ಹಿಂಬದಿಯಲ್ಲಿ ಕೂತು ವಸ್ತ್ರ ತುಂಬಿದ ಬ್ಯಾಗನ್ನು ಆಕೆಯ ತೊಡೆ ಮೇಲಿಟ್ಟು ಸಿದ್ದೀಖ್ನನ್ನು ಬಲಗೈಯಿಂದ ಅಪ್ಪಿ ಹಿಡಿದಳಂತೆ. ಬೈಕಲ್ಲಿ ತೆರಳುವಾಗ ಪತಿರಾಯನ ಮೇಲೆ ಮುಗ್ಗರಿಸಿ ಬೀಳುವುದು,ಅಪ್ಪಿ ಹಿಡಿಯುವುದು ಮದುವೆಯ ಹೊಸತರಲ್ಲಿ ಸಹಜ ತಾನೆ.! ಆದರೆ ಈ ಕೋಡಂಗಿಗೆ ಅದೆಲ್ಲಾ ಇಷ್ಟವಿರಲಿಲ್ಲ. ಬ್ಯಾಗನ್ನು ತೊಡೆ ಮೇಲಿಂದ ತೆಗೆದು ಅವರಿಬ್ಬರ ಮಧ್ಯೆದಲ್ಲಿಡಲು ಹೇಳಿಕೊಂಡನಂತೆ ಹಾಗೇ. ಇಬ್ಬರು ಮುಲ್ಕಿಯಿಂದ ಹೊರಟರು. ರುಮೈಸಳ ಮನೆ ಪಕ್ಕದಲ್ಲಿ ಅಂದರೆ ಅರ್ದ ಕಿಲೋಮೀಟರ್ ದೂರದಲ್ಲಿ ಬೈಕ್ ನಿಲ್ಲಿಸಿ,ಬೈಕ್ನ ಪೆಟ್ರೋಲ್ ಮುಗಿಯಿತೆಂಬ ಎಂಬ ನೆಪವೊಡ್ಡಿ, ಇಲ್ಲಿಂದ ನಡ್ಕೊಂಡೋಗು ಪೆಟ್ರೋಲ್ ತುಂಬಿಸಿ ಬರುತ್ತೇನೆಂದು ಹೇಳಿ ರುಮೈಸಾಳನ್ನು ಅರ್ಧದಲ್ಲಿ ಇಳಿಸಿ ಸಿದ್ದೀಖ್ ಹಿಂತಿರುಗುತ್ತಾನೆ.
ರುಮೈಸ ನಡ್ಕೊಂಡು ಮನೆ ಸೇರುತ್ತಾಳೆ. ಮನೆಯವರು ಸಿದ್ದೀಖ್ಗಾಗಿ ಕಾಯುತ್ತಿದ್ದರು. ಆದರೆ ಆತ ಮಾಡಿದ್ದೇ ಬೇರೆ. ಅಲ್ಲಿಂದ ನೇರವಾಗಿ ಮನೆಗೆ ತೆರಳಿ ಅದೇ ದಿನ ಸಾಯಂಕಾಲ ದಮ್ಮಾಂಗೆ ಪಯಣ ಬೆಳಸುತ್ತಾನೆ. ಮರು ದಿನ ವಾಟ್ಸಾಪ್ನಲ್ಲಿ ಸಿದ್ದೀಖ್ನ ಫೋಟೋದ ಜತೆಗೊಂದು ಲೇಖನ ಹರಿದಾಡುತ್ತದೆ. ಇದು ನೂಮಾನ್ನ ವಾಟ್ಸ್ಆ್ಯಪ್ಗೆ ತಲುಪುತ್ತದೆ. ನೂಮಾನ್ ಕಕ್ಕಾಬಿಕ್ಕಿಯಾದ, ಸಾಲಶೂಲ ಮಾಡಿದ ಮದುವೆ ಫಲಿತಾಂಶವೇ.? ನೂಮಾನ್ಗೆ ಗಾಯದ ಮೇಲೆ ಬರೆ ಎಳೆದ ಅನುಭವ. ಮೆಸೇಜ್ ನನಗೂ ಸಿಕ್ಕಿತು. ತಕ್ಷಣವೇ ನಾವು ತಂಡವೊಂದನ್ನು ರಚಿಸಿ ಈ ಕೋಡಂಗಿಯ ತಲಾಷ್ ನಡೆಸಿದೆವು. ಸಿದ್ದೀಖ್ ದಮ್ಮಾಂನ ಖೋಬಾರ್ ನಲ್ಲಿರುವುದಾಗಿಯೂ ಮಾಹಿತಿ ಸಿಕ್ಕಿತು. ಖಚಿತ ಮಾಹಿತಿ ಪಡೆದು ಕಳೆದ ರಮಳಾನಿನ ಹದಿನೈದರ ಸಂಜೆ ಅಲ್ ಹಸ್ಸದಿಂದ ನೂಮಾನ್ನೊಂದಿಗೆ ಖೋಬಾರ್ನಲ್ಲಿರುವ ಸಿದ್ದೀಖ್ನ ರೂಮಿಗೆ ತೆರಳಿದೆವು. ರೂಮಲ್ಲಿ ಸಿದ್ದೀಖ್ ಮತ್ತು ಆತನ ತಂದೆ ಜಬ್ಬಾರ್ ಸಿಕ್ಕಿದರು.
ಸಿದ್ದೀಖ್ನನ್ನು ನೋಡಿ ನಮಗೆ ಮಾತೇ ಹೊರಲಿಲ್ಲ. ಅಯ್ಯಯ್ಯೋ. ಕಿವುಡ(ಕಿವಿಯಲ್ಲಿ ಪ್ಯೂರ್ಟೋನ್ ಆಡಿಯೋ ಮೆಟ್ರಿಕ್ ಯಂತ್ರ ಅಳವಡಿಸಿದೆ) ಬೊಕ್ಕ ತಲೆ,ಮಾತಿನಲ್ಲಿ ತೊದಲುವಿಕೆ ಒಟ್ಟಿನಲ್ಲಿ ಹೇಳುವುದಾದರೆ ರುಮೈಸಳಿಗೆ ಹೇಳಿದ ಹುಡ್ಗನೇ ಅಲ್ಲ. ಎರಡು ಗಂಟೆಗಳ ಕಾಲ ನಾವು ಅಲ್ಲಿ ಕೌನ್ಸಿಲಿಂಗ್ ನಡೆಸಿದೆವು. ಎಲ್ಲವೂ ಮುಗಿಸಿ ಹಿಂತಿರುಗುವಷ್ಟರಲ್ಲಿ ಆತ ಕೇಳಿದ್ದು ‘ಬಾಕಿ ಚಿನ್ನ ಯಾವಾಗ ಹಾಕ್ತಾರಂತೆ.? ಇಷ್ಟೆಲ್ಲಾ ಮಾತನಾಡಿ ಆತನ ಈ ಪ್ರಶ್ನೆ, ರಾಮನಿಗೆ ಸೀತ ಏನಾಗಬೇಕು.? ಎಂಬಂತಿತ್ತು. ನಮಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಅಷ್ಟಕ್ಕೂ ಆತ ಹುಟ್ಟು ಕಿವುಡ,ಪೆದ್ದಂಭಟ್ಟ! ಆತನ ಪ್ರತಿಕ್ರಿಯೆ ನಮಗೆ ತೃಪ್ತಿ ನೀಡಿರಲಿಲ್ಲ. ನಾವು ಹಿಂತಿರುಗಿದೆವು. ನೂಮಾನ್ನ ಮುಖದಲ್ಲಿ ದುಃಖ ಹೆಪ್ಪುಗಟ್ಟಿತ್ತು. ರಕ್ತ ಕುದಿಯುತ್ತಿತ್ತು.
ಹೀಗೆ ಎರಡು ತಿಂಗಳು ಕಳೆದೋಯಿತು. ನಾನು ಕೂಡ ವೆಕೇಶನ್ನಲ್ಲಿ ಊರಿಗೆ ಬಂದೆ. ಊರ ಬ್ಯುಸಿಯಲ್ಲಿ ನನಗೂ ಇದು ಮರೆತೋಗಿತ್ತು. ರಜೆ ಮುಗಿಸಿ ಅಲ್ ಹಸ್ಸಕ್ಕೆ ಹಿಂತಿರುಗಿದ ಕೆಲವು ದಿನಗಳ ಬಳಿಕ ನೂಮಾನ್ ಸಿಕ್ಕಿದ್ದ. ಬಾವ ಮಾಡಿದ ಕಿತಾಪತಿ ಬಗ್ಗೆ ಬಹಳಷ್ಟು ಹೇಳಿದ. ಅದೆಲ್ಲಾ ಇರಲಿ. ಸಮಸ್ಯೆ ಏನಾಯಿತು.? ಎಂದು ಕೇಳಿದಾಗ ತಂಗಿಗೆ ಡೈವೊರ್ಸ್ ಆಗಿ ಒಂದು ತಿಂಗಳಾಯಿತೆಂದು ಒಮ್ಮೆಲೇ ಹೇಳಿಬಿಟ್ಟ. ನೂಮಾನ್ನ ಮಾತು ಕೇಳಿ ನನ್ನ ಕಣ್ಣಂಚಲಿ ನೀರು ತುಂಬಿತ್ತು. ಅಯ್ಯೋ ಪಾಪ.!
ಇಲ್ಲಿ ಸಿದ್ದೀಖ್ ಮತ್ತು ಆತನ ತಾಯಿ, ರುಮೈಸಳ ಪಾಲಿಗೆ ರಾಕ್ಷಸಿಗರಾಗಿದ್ದರು. ಅಷ್ಟು ಮಾತ್ರವಲ್ಲ, ಸಿದ್ದೀಖ್ನ ಮನೆ ನೋಡಲೋದಾಗ ರುಮೈಸಳ ಹೆತ್ತವರಿಗೆ ಸಿದ್ದೀಖ್ನ ವೈಭವದ ಮನೆ ,ಕಾರು ಅಷ್ಟೇ ಅವರಿಗೆ ಸಾಕಾಗಿತ್ತು. ಅದರಾಚೆಗೆ ನೋಡುವುದಕ್ಕಾಗಲಿ,ವಿಚಾರಿಸುದಕ್ಕಾಲೀ ಅವರು ಮನಸು ಮಾಡಲಿಲ್ಲ. ಸಿದ್ದೀಖ್ನ ಮನೆಯಂತೆ ಮನೆಯವರ’ಮನ’ ಇರಲಿಲ್ಲ. ಪಾಪ ರುಮೈಸ ಕೂಡ ಅಷ್ಟೇ ಈ ಬೊಕ್ಕ ತಲೆಯ ಪೆದ್ದಂಭಟ್ಟನ ವಿಗ್ ಹಾಕಿದ ಫೋಟೋ ನೋಡಿ ‘ಹೂಂ’ಎಂದಿರಬೇಕು.?
ರುಮೈಸಳ ಮನೆಯವರ ಅತ್ಯಾಗ್ರಹ,ಸಿದ್ದೀಖ್ನ ಒಡೆವೆಯ ವ್ಯಾಮೋಹ,ಸೊಸೆಯ ಕಿರಿಕಿರಿಗೆ ರುಮೈಸ ಇಂದು ಗಂಡ ಜೀವಂತ ಇದ್ದೂ ವಿಧವೆಯಾಗಿದ್ದಾಳೆ. ನವ ಜೀವನದ ಕನಸೆಲ್ಲಾ ಛಿದ್ರಗೊಂಡು ದುಃಖ,ಸಂಕಟ,ಆಸೆಗಳನ್ನು ಮನದೊಳಗೆ ಅದಮಿಟ್ಟು ಕಾಲ ಕಳೆಯುತ್ತಿದ್ದಾಳೆ. ರುಮೈಸಳ ಈ ದುರಂತ ಜೀವನದಲ್ಲಿ ಎರಡು ಕಡೆಯವರ ಪಾತ್ರ ಕೂಡ ದೊಡ್ಡದಿದೆ.
ಸಿದ್ದೀಖ್ನ ಮನೆಯವರಿಗೆ ವೈಭವದ ಮನೆ ಕಟ್ಟಿದ ಸಾಲ ತೀರಿಸಲು ಈ ಕೋಡಂಗಿಗೆ ವರದಕ್ಷಿಣೆ ಪಡೆದು ಮದುವೆಯ ಮಾಡಿದ್ದರೆ,ರುಮೈಸಳ ಮನೆಯುವರಿಗೆ ಭಾರ ಸ್ವಲ್ಪ ಕಡಿಮೆಯಾಗಲೆಂದು ಮದುವೆ ಮಾಡಿಸಿ ಹರಿಕೆ ಸಂದಾಯ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ವಿಧವೆ ರುಮೈಸಾಳ ಕನಸು ನನಸಾಗಬೇಕು. ಯೋಗ್ಯ ವರವೊಂದು ಆಕೆಯನ್ನು ಹುಡುಕಿಕೊಂಡು ಬರಲಿ ಎಂದು ಪ್ರಾರ್ಥಿಸೋಣ.!
ಕಡೆಯದಾಗಿ ಎಲ್ಲಾ ಹೆತ್ತವರಿಗೊಂದು ಕಿವಿಮಾತು. ಹೆಣ್ಣು,ಗಂಡು ನೋಡುವಾಗ ಅವರ ಆಸ್ತಿ,ಅಂತಸ್ತು,ಸ್ಟೇಟಸ್ಗಳಿಗೆ ಗಮನ ಕೊಡುವ ಮುನ್ನ ಅವರಲ್ಲಿರುವ ದೇಹಾರೋಗ್ಯ,ವ್ಯಕ್ತಿತ್ವ,ಧಾರ್ಮಿಕ ಅರಿವು,ಮತ್ತು ಕುಟುಂಬದ ಹಿನ್ನೆಲೆಯನ್ನು ತಿಳಿಯಬೇಕು. ಆಗಷ್ಟೇ ನವ ದಂಪತಿಗಳ ಬಾಳು ಬಂಗಾರವಾಗ ಬಹುದು. ಇಲ್ಲದಿದ್ದಲ್ಲಿ ರುಮೈಸಳದೇ ಅನುಭವ ನಮ್ಮ ಮಕ್ಕಳು ಕೂಡ ಅನುಭವಿಸ ಬೇಕಾದಿತು.!!
-ಇಸ್ಹಾಕ್ ಸಿ.ಐ.ಫಜೀರ್.(ಗಲ್ಫ್ ಕನ್ನಡಿಗ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.