(www.vknews.com) : ಓರ್ವ ಮಧ್ಯಮವರ್ಗದ ಹುಡುಗ. ಆಕಸ್ಮಿಕವಾಗಿ ಆರೋಗ್ಯದಲ್ಲಿ ಏರುಪೇರಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಲೇಬೇಕೆಂದರು. ಹಣ ಇರಲಿಲ್ಲ. ಅಲ್ಲಿಂದ ಇಲ್ಲಿಂದ ಸೇರಿಸಲು ಪ್ರಯತ್ನಿಸಿದರು. ಒಂದು ಟ್ರಸ್ಟ್ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಧನ ಸಹಾಯ ಮಾಡುತ್ತದೆ ಎಂದು ತಿಳಿಯಿತು. ಅಲ್ಲಿಗೆ ಹೋದರು. ಅವರು ಎಲ್ಲ ಮಾಹಿತಿಗಳನ್ನು ಪಡೆದು ನಾವು ಆದಷ್ಟು ಸಹಾಯ ಮಾಡುತ್ತೇವೆ ಎಂದರು. ಎರಡು ತಿಂಗಳು ಕಾದರೂ ಅಲ್ಲಿಂದ ಸಿಗಬೇಕಾದ ಸಹಾಯ ಸಿಗಲಿಲ್ಲ. ಟ್ರಸ್ಟ್ ಹೆಸರಿನಲ್ಲಿ ಅವರು ತಮ್ಮ ಜೇಬಿನ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ನಂತರದ ದಿನಗಳಲ್ಲಿ ತಿಳಿಯಿತು. ಹೀಗೆ ಓರ್ವ ಪರಿಚಯಸ್ತರ ಬಳಿ ಸಹಾಯ ಕೇಳಿದಾಗ, ಅವರು ಬಡವರಾಗಿದ್ದರೆ ಬಿಪಿಎಲ್ ಕಾರ್ಡು ಇರಬೇಕಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗಲು ಹೇಳಿ ಎಂದು ವ್ಯಂಗ್ಯವಾಗಿ ಹೇಳಿದರು. ಹಾಗೋ ಹೀಗೋ ಸಾಲ ಮಾಡಿ ಶಸ್ತ್ರಚಿಕಿತ್ಸೆ ನಡೆದು ಹೋಯಿತು.
ಸಾವಿರಾರು ಜನ ಸರ್ಕಾರಿ ಮತ್ತು ಪ್ರೈವೇಟ್ ಆಸ್ಪತ್ರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಕರೋನ ಭಯದಿಂದ ಜನರು ಆಸ್ಪತ್ರೆಗಳಿಗೆ ಹೆಚ್ಚಾಗಿ ಹೋಗುತ್ತಿಲ್ಲ. ಆಸ್ಪತ್ರೆಗಳು ಸಹ ಹೊರರೋಗಿ ವಿಭಾಗವನ್ನು ಮುಚ್ಚಿದ್ದಾರೆ. ಈಗ ಹಂತ ಹಂತವಾಗಿ ತೆರೆಯಲು ಮುಂದಾಗುತ್ತಿದ್ದಾರೆ.
ಆಸ್ಪತ್ರೆಗಳು ಮತ್ತು ಶಾಲಾಕಾಲೇಜುಗಳು ವ್ಯಾಪಾರೀಕರಣದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗು ತಿಳಿದಿರುವ ವಿಷಯ. ಬಡವರಾಗಲಿ ಅಥವಾ ಮಧ್ಯಮವರ್ಗದವರಾಗಲಿ ರೋಗ ಬಂದರೆ ಹೆದರುತ್ತಾರೆ. ಆಸ್ಪತ್ರೆಯ ಮೆಟ್ಟಿಲು ಹತ್ತಿದರೆ ಹಣ ಬೇಕು. ಸಣ್ಣಪುಟ್ಟ ರೋಗಗಳಾಗಿದ್ದರೆ ಹೇಗೋ ನಿಭಾಯಿಸಿಕೊಳ್ಳುತ್ತಾರೆ. ಶಸ್ತ್ರಚಿಕಿತ್ಸೆಗಳಿಗೆ ತಗಲುವ ವೆಚ್ಚ ಅಷ್ಟಿಷ್ಟಲ್ಲ.
ಸರ್ಕಾರ ಅರೋಗ್ಯ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅದು ಮಧ್ಯಮವರ್ಗದವರಿಗಲ್ಲ. ಇಂದು ಅವರ ಪರಿಸ್ಥಿತಿ ಸಾಯುವ ಹಾಗಿಲ್ಲ-ಬದುಕುವ ಹಾಗಿಲ್ಲ ಹಾಗಾಗಿದೆ. ದೊಡ್ಡ ಸರ್ಕಾರಿ ಆಸ್ಪತ್ರೆಗಳಿಗೆ ಬರಬೇಕಾದರೆ ಹಳ್ಳಿಗಳಿಂದ ಪಟ್ಟಣಗಳಿಗೆ ಬರಬೇಕು. ಆಸ್ಪತ್ರೆಗಳ ಕಾರ್ಯವೈಖರಿ, ಅವರ ಸಮಸ್ಯೆಗಳು, ಅದೇ ಒಂದು ಬೇರೆ ಚರ್ಚೆಯ ವಿಷಯವಾಗಿದೆ.
ಲಾಕ್ ಡೌನ್ ನಲ್ಲಿ ಎಲ್ಲರು ಸರ್ಕಾರವನ್ನೇ ನಂಬಿ ಕುಳಿತುಕೊಳ್ಳಲಿಲ್ಲ. ಆದಷ್ಟು ಒಬ್ಬರನ್ನೊಬ್ಬರು ಸಹಾಯ ಮಾಡಿದರು. ದಾನಿಗಳು ಊಟದ ವ್ಯವಸ್ಥೆ ಮಾಡದೇ ಹೋಗಿದ್ದರೆ, ಎಷ್ಟೋ ಜನರು ಕರೋನ ರೋಗಕ್ಕಿಂತ ಹೆಚ್ಚಾಗಿ ಹೊಟ್ಟೆ ಹಸಿವಿನಿಂದ ಸತ್ತು ಹೋಗುತ್ತಿದ್ದರು. ದೇಶದಲ್ಲಿ ಇನ್ನೂ ಮಾನವೀಯತೆ ಉಳಿದಿದೆ, ಕೆಲ ಮಾಧ್ಯಮಗಳು ಕೋಮುವಾದದ ವಿಷಬೀಜ ಬಿತ್ತಲು ಎಷ್ಟೇ ಪ್ರಯತ್ನಿಸಿದರೂ, ಜನರು ಮಾತ್ರ ಮನುಷ್ಯತ್ವವನ್ನು ಬಿಟ್ಟು ಕೊಡಲಿಲ್ಲ. ಜಾತಿಬೇಧಭಾವ ಮಾಡದೆ ಹಸಿದವರಿಗೆ ಹೊಟ್ಟೆ ತುಂಬಿಸಿದರು.
ಜೀವನದ ಬಹಳ ಮುಖ್ಯವಾದ ವಿಷಯಗಳಲ್ಲಿ ಅರೋಗ್ಯ ಮತ್ತು ವಿದ್ಯೆ ಮಹತ್ವವನ್ನು ಪಡೆದಿವೆ. ಆದರೆ ಸರ್ಕಾರಗಳು ಈ ಎರಡೂ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ಸಂಪೂರ್ಣವಾಗಿ ಸುಲಭವಾಗಿ ದಕ್ಕಿಸುವುದರಲ್ಲಿ ವಿಫಲವಾಗಿವೆ. ಎಲ್ಲಾ ಸೌಕರ್ಯಗಳನ್ನು ಸರ್ಕಾರಗಳೇ ಒದಗಿಸಬೇಕು ಎಂದು ಜನರು ಕಾದು ಕುಳಿತುಕೊಳ್ಳುವುದು ಸಹ ಸರಿಯಲ್ಲ. ಹಾಗಾದರೆ ಏನು ಮಾಡಬೇಕು ?
ಮಠ ಮಂದಿರಗಳಿಗೆ, ಮಸೀದಿಗಳಿಗೆ ಸಂಘಟನೆಗಳು ಉಂಟು. ಹಾಗಾದರೆ ಶಾಲಾಕಾಲೇಜುಗಳನ್ನು ಮತ್ತು ಆಸ್ಪತ್ರೆಗಳನ್ನು ನಡೆಸಲು ಸಂಘಟಿತರಾಗಲು ಸಾಧ್ಯವಿಲ್ಲವೆ. ಜನರು ಎಷ್ಟೋ ಟ್ರಸ್ಟ್ ಗಳನ್ನು ನಡೆಸುತ್ತಿದ್ದಾರೆ. ಆದರೆ ಶೇಕಡ ೯೦ ರಷ್ಟು ಭಾಗ ಅದರ ಲಾಭ ಜನರಿಗಿಂತ ಹೆಚ್ಚಾಗಿ ಅದರ ಮಾಲೀಕರೇ ಪಡೆಯುತ್ತಿದ್ದಾರೆ. ಎಲ್ಲರಿಗು ಹಣ ಗಳಿಸುವ ಹುಚ್ಚು. ನಿಸ್ವಾರ್ಥ ಸೇವೆ ಮಾಡುವ ಮನಸ್ಸುಳ್ಳವರು ತೀರಾ ಕಡಿಮೆ. ಹಾಗಂತ ಎಲ್ಲರು ಸುಮ್ಮನಿರುವುದು ಸಹ ತಪ್ಪು. ಮುನ್ನುಗ್ಗುವುದೇ ಜೀವನ, ನಿಂತರೆ ನಿರ್ಜೀವನ.
ಕ್ರಿಶ್ಚಿಯನ್ ಶಾಲಾಕಾಲೇಜುಗಳ ಆಸ್ಪತ್ರೆಗಳ ಉದಾಹರಣೆಗಳು ಎಲ್ಲರ ಮುಂದಿವೆ. ಸುಮಾರು ವರ್ಷಗಳಿಂದ ದೇಶದಲ್ಲಿ ತಮ್ಮ ಸೇವೆಗಳನ್ನು ಸಲ್ಲಿಸಿಕೊಂಡು ಬರುತ್ತಿವೆ. ಅವರ ಸಮುದಾಯಕ್ಕೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಸೇವೆಗಳನ್ನು ಲಭಿಸುತ್ತಾರೆ. ಅದೇ ರೀತಿ ಎಲ್ಲರು ಸೇವೆಗಳನ್ನು ಸಲ್ಲಿಸಬಹುದಾಗಿದೆ. ಸರ್ಕಾರಗಳ ಮೇಲೆ ಅಥವಾ ಬೇರೆ ಸಮುದಾಯಗಳ ಮೇಲೆ ಅವಲಂಬಿತವಾಗಿರುವುದು ಸರಿಯೇ. ಪ್ರತಿ ಸಮುದಾಯ ತಮ್ಮ ಏಳಿಗೆಗಾಗಿ ಟಂಕ ಕಟ್ಟಿ ನಿಂತರೆ ಕೇವಲ ೨೦ ವರ್ಷಗಳಲ್ಲಿ ಎಷ್ಟೋ ಸಾಧನೆಗಳನ್ನು ಮಾಡಬಹುದು. ಈಗಾಗಲೇ ಎಷ್ಟೋ ಸಮುದಾಯಗಳು ತಮ್ಮ ಸಮುದಾಯದ ಏಳಿಗೆಗಾಗಿ ಸಹಾಯ ಮಾಡುತ್ತಿವೆ. ಕೆಂಪೇಗೌಡ ಆಸ್ಪತ್ರೆಯಾಗಿರಬಹುದು, ಜೈನ ಯೂನಿವರ್ಸಿಟಿ ಯಾಗಿರಬಹುದು, ಲಿಂಗಾಯತ ಪಾಲಿಟೆಕ್ನಿಕ್ ಗಳಾಗಿರಬಹುದು, ಕ್ರೈಸ್ಟ್ ಶಾಲಾ ಕಾಲೇಜುಗಳಾಗಿರಬಹುದು ಇತ್ಯಾದಿ.
ಇಂದಿನ ಕಾಲದಲ್ಲಿ ೧೦೦ ರೂ ದಾನ ಮಾಡಲು ಯಾರೂ ಹಿಂಜರಿಯುವುದಿಲ್ಲ. ನಿಮ್ಮ ಉದ್ದೇಶ ಮತ್ತು ಗುರಿ ಚೆನ್ನಾಗಿದ್ದರೆ ದಾನದ ಸುರಿಮಳೆಯೇ ಆಗಬಹುದು. ಉದಾಹರಣೆಗೆ ಒಂದು ಜಿಲ್ಲೆಯಲ್ಲಿ ೩೦ ಲಕ್ಷದಷ್ಟು ಜನರು ನಿಮ್ಮ ಸಮುದಾಯಕ್ಕೆ ಸೇರಿರುವವರಾಗಿದ್ದರೆ ಎಂದಿಟ್ಟುಕೊಳ್ಳೋಣ. ಒಬ್ಬರಿಂದ ರೂ ೧೦೦ ತೆಗೆದುಕೊಂಡರೆ ಎಷ್ಟಾಗುತ್ತದೆ? ಲೆಕ್ಕ ಕೋಟಿಗಳಲ್ಲಿ ಹೋಗುತ್ತದೆ.
ಇಲ್ಲಿ ಮಾಡಬೇಕಾಗಿರುವುದು ಇಷ್ಟೆ. ಬುದ್ಧಿ ಜೀವಿಗಳು, ನಿಸ್ವಾರ್ಥಿಗಳು ಕುಳಿತು , ಚರ್ಚಿಸಿ, ಸಂಘಟಿತರಾಗಿ, ಸಮಾಜ ಸೇವೆ ಮಾಡಲು ಮುಂದಾಗಬೇಕು. ಆಗ ಪ್ರತಿ ಜಿಲ್ಲೆಯಲ್ಲಿ ನಿಮ್ಮ ಸಮುದಾಯದ ಆಸ್ಪತ್ರೆ, ಬ್ಲಡ್ ಬ್ಯಾಂಕ್ , ಡಯಾಲಿಸಿಸ್ ಸೆಂಟರ್ ಅಥವಾ ಶಾಲಾ ಕಾಲೇಜು ನಿರ್ಮಾಣ ಮಾಡಲು ಸಾಧ್ಯ. ಹೇಳುವುದು ಸುಲಭ. ನಿಜ. ಆದರೆ ಅಸಾಧ್ಯವಾದುದು ಯಾವುದೂ ಇಲ್ಲ. ಪ್ರಯತ್ನಿಸಿ. ಇದೂ ದೇಶ ಸೇವೆಯೇ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.