ಧಾರವಾಡ (www.vknews.com) : ಶಿಕ್ಷಣ ಇಲಾಖೆಯ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಏಕಕಾಲಕ್ಕೆ 24 ಜನರಿಗೆ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಯ ಆದೇಶಗಳನ್ನು ಬುಧವಾರ ಇಲ್ಲಿಯ ಆಯುಕ್ತರ ಕಚೇರಿಯಲ್ಲಿ ವಿತರಿಸಲಾಯಿತು.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೌನ್ಸೆಲಿಂಗ್ ನಡೆಸುವ ಮೂಲಕ 3 ಜನರಿಗೆ ಪ್ರಥಮ ದರ್ಜೆ ಸಹಾಯಕರು (ಎಫ್ಡಿಎ), 9 ಜನರಿಗೆ ದ್ವಿತೀಯ ದರ್ಜೆ ಸಹಯಾಕರು (ಎಸ್ಡಿಎ) ಹಾಗೂ 12 ಜನರಿಗೆ ‘ಡಿ’ ದರ್ಜೆ ನೌಕರರ ನೇಮಕಾತಿ ಆದೇಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ವಿತರಿಸಿದರು. “ಸರಕಾರಿ ಸೇವೆಯುದ್ದಕ್ಕೂ ಜನಪರ ಧೋರಣೆಯನ್ನು ಕೇಂದ್ರೀಕರಿಸಿ ಪ್ರಾಮಾಣಿಕ ಮತ್ತು ಕ್ರಿಯಾಶೀಲ ಸೇವೆಗೆ ಎಲ್ಲ ನೌಕರರೂ ತೆರೆದುಕೊಳ್ಳಬೇಕು. ಜನರಿಗೆ ಏನು ಬೇಕು-ಬೇಡ ಎಂಬುದನ್ನು ವಿವೇಚನೆಯಿಂದ ಆಲೋಚಿಸಿ ಯಾವುದೇ ಆಸೆ-ಆಮಿಷಗಳಿಗೆ ಈಡಾಗದೇ ಉತ್ತಮ ಹೆಸರನ್ನು ಸಂಪಾದಿಸಿರಿ” ಎಂದು ನೇಮಕಗೊಂಡ ನೂತನ ನೌಕರರಿಗೆ ಆಯುಕ್ತರು ಕಿವಿಮಾತು ಹೇಳಿದರು.
312 ಜನರಿಗೆ ಆದೇಶ : ತಾವು ಶಿಕ್ಷಣ ಇಲಾಖೆಯ ಆಯುಕ್ತರ ಹುದ್ದೆ ವಹಿಸಿಕೊಂಡ ನಂತರ ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರರ ಅವಲಂಬಿತರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಎಲ್ಲಿಯೂ ಬಿಡಿಗಾಸಿನ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ಇಲ್ಲಿಯ ತನಕ ಒಟ್ಟು 312 ಜನರಿಗೆ ಅನುಕಂಪದ ಆಧಾರದಲ್ಲಿ ನೇರ ನೇಮಕಾತಿ ಮಾಡಿ ನೊಂದ ಕುಟುಂಬಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಈ ಪೈಕಿ 77 ಜನರಿಗೆ ಎಫ್.ಡಿ.ಎ,, 120 ಜನರಿಗೆ ಎಸ್.ಡಿ.ಎ. ಹಾಗೂ 115 ಜನರಿಗೆ ‘ಡಿ’ ದರ್ಜೆ ನೌಕರರೆಂದು ನೇಮಕಾತಿ ಮಾಡಿ ಆದೇಶಗಳನ್ನು ನೀಡಲಾಗಿದೆ ಎಂದೂ ಆಯುಕ್ತ ಮೇಜರ್ ಹಿರೇಮಠ ತಿಳಿಸಿದರು. ಅನುಕಂಪ ನೇಮಕಾತಿ ಪ್ರಸ್ತಾವನೆಗಳನ್ನು ಮೊದಲ ಆದ್ಯತೆಯಲ್ಲಿ ಕೈಗೆತ್ತಿಕೊಂಡು ತ್ವರಿತವಾಗಿ ವಿಲೇವಾರಿ ಮಾಡಿದ ತಮ್ಮ ಇಲಾಖೆ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಯ ಕಾರ್ಯವನ್ನು ಅವರು ಪ್ರಶಂಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.