(ವಿಶ್ವ ಕನ್ನಡಿಗ ನ್ಯೂಸ್) : ಕೊರೋನಾ ಕಾಲದ ಸಂದಿಗ್ಧ ಪರಿಸ್ಥಿತಿಯು ಮುಂದುವರಿಯುತ್ತಿದ್ದಂತೆ ಭಾರತದಲ್ಲೂ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತಿದೆ. ಲಾಕ್ ಡೌನ್ ಕಾರಣವಾಗಿ ಉದ್ಯೋಗ ಕಳೆದುಕೊಂಡು ಆಹಾರಕ್ಕಾಗಿ ಪರಿತಪಿಸಬೇಕಾಗಿ ಬಂದಿದ್ದು, ಊರಿಗೆ ಮರಳಲಾಗದೇ ನಡುರಸ್ತೆಯಲ್ಲಿ ಬಾಕಿಯಾದ ಕಾರ್ಮಿಕರ ಅಳಲು, ಹಸಿವಿನಿಂದ ಬಳಲಿ ಸಾವನ್ನಪ್ಪಿದ ಘಟನೆ.. ಹೀಗೆ ಪ್ರತಿಯೊಂದು ಅಮಾನವೀಯ ಸನ್ನಿವೇಶಗಳು ಕಣ್ಣ ಮುಂದೆ ಹಾದು ಹೋಗುತ್ತಿದೆ. ದೇಶದ ಆರ್ಥಿಕ ಮಟ್ಟವನ್ನೂ ಕೊರೋನಾ ಎಂಬ ಮಹಾಮಾರಿಯು ಪಾತಾಳಕ್ಕಿಳಿಸಿದ್ದು ದೇಶದ ಪ್ರತಿಯೊಂದು ಉದ್ಯಮಗಳಿಗೂ ಇದರ ಪ್ರಭಾವ ಬಾಧಿಸಿದೆ. ಈ ದುರಂತ ಕಾಲವು ಇನ್ನೂ ಮುಂದುವರಿಯುವ ಬಗ್ಗೆ ಆತಂಕಗಳು ಎದುರಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಮಿಡತೆಗಳ ಆಕ್ರಮಣವು ದೇಶದ ಸ್ಥಿತಿಗತಿಯನ್ನು ಮತ್ತೆ ಕಂದಕಕ್ಕೆ ತಳ್ಳಿದೆ. ಆಫ್ರಿಕಾ, ಒಮಾನ್ ಮತ್ತು ಪಾಕಿಸ್ತಾನದಲ್ಲಿ ಕಂಡುಬಂದ ಈ ಮಿಡತೆಗಳ ಆಕ್ರಮಣ ಭಾರತಕ್ಕೂ ಲಗ್ಗಯಿಟ್ಟಿದೆ. ವಾತಾವರಣದಲ್ಲಿ ಉಂಟಾಗುವ ಏರುಪೇರುಗಳು ಇವುಗಳ ಪ್ರಜನನಕ್ಕೆ ಅನುಕೂಲಕರವಾದಲ್ಲಿ ಮಿಡತೆಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಸುತ್ತದೆ. ಒಳ್ಳೆಯ ಮಳೆ ಸಂಭವಿಸುವುದರಿಂದ ಇವುಗಳಿಗೆ ಮರುಭೂಮಿಯಲ್ಲಿ ಮೊಟ್ಟೆಯಿಡಲು ಅನುಕೂಲವಾದ ಸಸ್ಯಗಳು ಬೆಳೆದು ಹೋಪರ್ ಡೆವಲಪ್ಮೆಂಟ್ ಘಟಕ್ಕೆ ಸಹಕಾರಿಯಾಗುತ್ತದೆ. ಎತೋಪ್ಯಾ, ಸೋಮಾಲಿಯಾ, ಎರಿತ್ರಿಯ, ಆಫ್ರಿಕಾದ ಕೆಲವು ಪ್ರದೇಶಗಳು, ಪಾಕಿಸ್ತಾನದ ಬಲೂಚಿಸ್ತಾನ್ ಜೊತೆಗೆ ಯಮನ್, ಒಮಾನ್ ಮತ್ತು ಇರಾನ್ ನ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಇವುಗಳು ಬೆಳವಣಿಗೆ ಕಂಡುಕೊಳ್ಳುತ್ತದೆ.
2018 ರಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದ ಈ ಸ್ಥಳಗಳಲ್ಲಿ ಹೆಚ್ಚಿನ ಮಳೆ ಲಭಿಸಿದ್ದರಿಂದ ಇವುಗಳು ಅಧಿಕ ಪ್ರಮಾಣದಲ್ಲಿ ಬೆಳೆದು ಎಪ್ರಿಲ್ ತಿಂಗಳಲ್ಲೇ ರಾಜಸ್ತಾನಿಗೆ ಲಗ್ಗೆಯಿಟ್ಟಿದೆ. ಪಾಕಿಸ್ತಾನದಲ್ಲಿ ಫೆಬ್ರವರಿಯಲ್ಲಿ ನಡೆದ ಈ ಮಿಡತೆಗಳ ಆಕ್ರಮಣ ಇದೀಗ ಭಾರತದ ರಾಜಸ್ತಾನ್, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ದಾಳಿಯಿಟ್ಟು ಕೃಷಿಗಳ ನಾಶಕ್ಕೆ ಕಾರಣವಾಗಿದೆ. ಮುಂದಕ್ಕೆ ಇದು ಕರ್ನಾಟಕ ಮತ್ತು ಕೇರಳಕ್ಕೂ ವ್ಯಾಪಿಸುವ ಬಗ್ಗೆ ಆತಂಕವೂ ಇದೆ.
ಈಗಾಗಲೇ ಕೊರೋನಾ ಎಂಬ ಮಹಾಮಾರಿಯಿಂದಾಗಿ ರೈತರೂ ಬಹಳಷ್ಟು ಸಂಕಷ್ಟವನ್ನು ಎದುರಿಸಿದ್ದು, ಇದರ ಜೊತೆಗೇ ಬಂದ ಮಿಡತೆಗಳ ದಾಳಿಯಿಂದ ಮತ್ತಷ್ಟು ತೊಂದರೆಯುಂಟಾಗಿದೆ. ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ವ್ಯಾಪಿಸಿದರೆ ಮುಂದಕ್ಕೆ ದೇಶದಲ್ಲಿ ಆಹಾರ ಧಾನ್ಯಗಳಿಗೆ ಕೊರತೆಯುಂಟಾಗಿ ಕ್ಷಾಮ ಎದುರಿಸುವ ಬಗ್ಗೆಯೂ ಸಂಶಯ ಹುಟ್ಟಿಕೊಂಡಿದೆ.
ಇದರ ಜೊತೆಯಲ್ಲೇ ಹೆಚ್ಚಿನ ಮಳೆ ಸಂಭವಿಸಿದರೆ ಪ್ರಳಯ ಉಂಟಾಗುವ ಗುಮಾನಿ ಕೂಡ ವ್ಯಕ್ತವಾಗುತ್ತಿದೆ.
ಪುನೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟ್ರಾಲಜಿಯ ಸಂಶೋಧಕರಾದ ದೀಪಕ್ ಗೋಪಾಲಕೃಷ್ಣ ಈ ರೀತಿ ಬರೆಯುತ್ತಾರೆ, “ ಕೇರಳವನ್ನು ಕಾದಿರುವುದು ಮೂರನೇ ಪ್ರಳಯವೇ..? ಅಂಕಿಅಂಶ ಲೆಕ್ಕಾಚಾರದೊಂದಿಗೆ ವೆದರ್ ಮಾನ್..” ಈ ಒಂದು ವಿಚಾರವು ಖಂಡಿತವಾಗಿಯೂ ಆತಂಕಕ್ಕೀಡಾಗಿಸುತ್ತದೆ.
ಈ ವಾರ್ತೆ ತಮಿಳುನಾಡು ವೆದರ್ಮಾನ್ ಎಂಬ ಫೇಸ್ಬುಕ್ ಪೋಸ್ಟ್ ಗೆ ಸಂಭಂದಿಸಿದ್ದಾಗಿದೆ. ಮುಖ್ಯವಾಗಿ ಇಲ್ಲಿ ಪ್ರಳಯ ಉಂಟಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿಕೊಂಡಿಲ್ಲ. 2018 & 2019 ರಲ್ಲಿ ಕೇರಳದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿತ್ತು. ಅಂದರೆ ಅಧಿಕಮಳೆ ( excesse mansoon) ಆಗಿತ್ತು. ಹಾಗಾಗಿ ಈ ಅಧಿಕ ಮಳೆಯ Hat-trick ಸಂಭವಿಸುವ ಬಗ್ಗೆ ಸಂಶಯ ಇಲ್ಲಿ ವ್ಯಕ್ತಪಡಿಸಲಾಗಿದೆ. ಯಾಕಾಗಿ ಈ ರೀತಿ ಸಂಶಯ ಹುಟ್ಟಿಕೊಂಡಿದೆಯೆಂದರೆ, 1922, 1923 ಮತ್ತು 1924 ಈ ಮೂರು ವರ್ಷಗಳಲ್ಲಿ ಅಧಿಕ ಮಳೆ ಸಂಭವಿಸಿತ್ತು ಮಾತ್ರವಲ್ಲ 1924 ರಲ್ಲಿ ಭೀಕರ ಪ್ರಳಯ ಉಂಟಾಗಿತ್ತು. 94 ವರ್ಷಗ ಬಳಿಕ ಈ hat-trick ಮತ್ತೆ ಮರುಕಳಿಸುವುದೇ ಎಂಬ ಆತಂಕ ಕಾಡಿದೆ.
1922-24 ಅವಧಿಯಲ್ಲಿ ಉಂಟಾದ ಅಧಿಕ ಮಳೆಯ ತೀವ್ರತೆ ಈ ಕೆಳಗಿನಂತಿವೆ;
1922 – 2318 mm 1923 – 2666 mm 1924 – 3115 mm
ಈಗ ಕೇರಳದಲ್ಲಿ 2300 ಮಿ.ಮೀ ಇನ್ನೊಂದು ಪ್ರಳಯಕ್ಕೆ ಕಾರಣವಾದೀತೇ..?
2018 – 2517 mm 2019 – 2310 mm 2020 – ???
ಎಪ್ರಿಲ್ 15 ರಂದು ಹವಾಮಾನ ಇಲಾಖೆ ಹೊರಬಿಟ್ಟ ಮಾಹಿತಿಯಂತೆ 2020 ರ ಮನ್ಸೂನ್ ಅವಧಿಯಲ್ಲಿ ದೇಶದಾದ್ಯಂತ ಹೆಚ್ಚಿನ ಮಳೆಯಾಗುವ ಬಗ್ಗೆ ಪ್ರಸ್ತಾಪವಿದೆ. ಜೊತೆಜೊತೆಗೇ ಮುಲ್ಲಪೆರಿಯಾರ್ ಅಣೆಕಟ್ಟು ಒಡೆಯುತ್ತದೆ ಎನ್ನುವ ವಾರ್ತೆಗಳೂ ಪ್ರಸಾರವಾಗುತ್ತಿದ್ದು ಬಹುತೇಕ ನಿಖರತೆಯಿಲ್ಲದ ಮಾಹಿತಿಯಾಗಿದ್ದರೂ ನೋಸ್ಟ್ರೋಡಾಮಸ್ ಪ್ರವಚನದಲ್ಲಿ ಈ ಬಗ್ಗೆ ಪ್ರಸ್ತಾವನೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಈತನ ಹಲವು ಪ್ರವಚನಗಳು ನಿಜವಾಗಿ ಸಂಭವಿಸಿದುದರ ಹಿನ್ನೆಲೆಯಲ್ಲಿ ಈ ಸಂದೇಹಗಳಿಗೂ ಪುಷ್ಟಿ ನೀಡಿದೆ.
ಕೊರೋನಾ ನಂತರ ಭಾರತ ಯಾವ ರೀತಿಯಲ್ಲಿ ಬೆಳವಣಿಗೆ ಕಂಡುಕೊಳ್ಳಲಿದೆ ಎಂದು ಯೋಚಿಸುವುದರ ಜೊತೆಗೆ ಇದರ ನಂತರ ಬರಬಹುದಾದ ದುರಂತಗಳ ಸಾಲುಗಳನ್ನೂ ನೋಡಬೇಕಾಗಿದೆ. ಈಗಾಗಲೇ ಒಂದರ ಹಿಂದೆ ಇನ್ನೊಂದರಂತೆ ದುರಂತಗಳು ಸಂಭವಿಸುತ್ತಲೇ ಇರುವುದು ಮುಂದಕ್ಕೆ ಇದಕ್ಕೂ ಭೀಕರವಾದ ರೀತಿಯಲ್ಲಿ ತೊಂದರೆಗಳು ಉಂಟಾಗಲಿವೆ ಎಂಬುವುದರ ಸೂಚನೆಯಂತೆ ತೋರುತ್ತಿದೆ.
ಕೊರೋನಾದ ಉಪಸ್ಥಿತಿಯಲ್ಲೇ ಪ್ರಳಯವೂ ಎದುರಾದಲ್ಲಿ ಜನಜೀವನ ಅತ್ಯಂತ ಅಸ್ತವ್ಯಸ್ತವಾಗುವುದರ ಜೊತೆಗೆ ವೈರಸ್ ನ ಪ್ರಭಾವವೂ ಹೆಚ್ಚುವುದಕ್ಕೆ ಕಾರಣವಾಗಬಹುದು. ಮಿಡತೆಗಳೂ ಇದಕ್ಕೆ ಸಾಥ್ ನೀಡುತ್ತಾ ಬಂದಲ್ಲಿ ಆಹಾರ ಕ್ಷಾಮವೂ ಉಂಟಾಗಿ ಸಂಪೂರ್ಣ ಜನನಾಶಕ್ಕೆ ಮುನ್ನುಡಿಯೂ ಆಗಬಹುದೆಂಬ ಗಂಭೀರ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಈ ತನಕ ದುರಂತವನ್ನು ಮಾತ್ರ ಕಂಡ 2020 ‘ದುರಂತ ವರ್ಷ’ ಎಂಬ ಪಟ್ಟ ತೊಡುವುದೇ ಎಂಬ ಭೀತಿ ಎದುರಾಗಿದೆ.
ಲೋಕ ನಾಶದತ್ತ ಚಲಿಸುತ್ತಿರುವ ಸೂಚನೆಗಳು ಪದೇ ಪದೇ ಎದುರಾಗುತ್ತಿದೆ. ಪ್ರವಾದಿಯವರ ಪ್ರವಚನದಲ್ಲಿನ ಅಂತ್ಯದಿನದ ಲಕ್ಷಣಗಳೂ ಕಾಣಿಸಿಕೊಂಡು ಬರುತ್ತಿದ್ದು ಒಟ್ಟಾಗಿ ಜಗತ್ತು ಮುಗಿಯುವ ಹಂತಕ್ಕೆ ತಲುಪಿದೆ ಅನ್ನಬಹುದು.. ರೋಗ, ಪ್ರಳಯ, ಕ್ಷಾಮ, ಬರಗಾಲ ಎಲ್ಲವೂ ಇದಕ್ಕೊಂದು ಕಾರಣವಷ್ಟೇ.. ಸಂದೇಹಗಳೆಲ್ಲವೂ ಸುಳ್ಳಾಗಲಿ ಎಂದು ಪ್ರಾರ್ಥಿಸೋಣ..
ಅಂಕಣಗಾರರು : ಹಕೀಮ್ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.