(www.vknews.com) : ಖ್ಯಾತ ವೈದ್ಯ ಸಾಹಿತಿ ಮತ್ತು ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಕರಾದ ಡಾ|| ಮುರಲೀಮೋಹನ್ ಚೂಂತಾರು ಇವರ ಹನ್ನೊಂದನೆಯ ಕೃತಿ ”ಸಂಕಲ್ಪ-2020” ಕೋವಿಡ್-19 ಆರೋಗ್ಯ ಮಾರ್ಗದರ್ಶಿ ಜೂನ್ 6 ರಂದು ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆಗೊಳ್ಳಲಿದೆ. ಕರೋನಾ ಗುಂಪಿನ ವೈರಾಣುವಿನಿಂದ ಹರಡುವ ಈ ಕೋವಿಡ್-19 ರೋಗವನ್ನು ಗುರುತಿಸುವುದು ಹೇಗೆ, ತಡೆಗಟ್ಟುವುದು ಹೇಗೆ? ಬಾರದಂತೆ ಏನೇನು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ಇರುವ ಪುಸ್ತಕ ಇದಾಗಿರುತ್ತದೆ. 120 ಪುಟಗಳ ಈ ಪುಸ್ತಕವನ್ನು ಕೇವಲ 50 ರೂಪಾಯಿಗಳಿಗೆ ಲಭ್ಯವಿದ್ದು, ಜನರಲ್ಲಿ ಈ ರೋಗದ ಬಗ್ಗೆ ತಿಳುವಳಿಕೆ ಮೂಡಿಸುವ ಏಕೈಕ ಸದುದ್ದೇಶದಿಂದ ಈ ಪುಸ್ತಕವನ್ನು ಬರೆದು ಪ್ರಕಟಿಸಲಾಗಿದೆ ಎಂದು ಲೇಖಕರು ತಿಳಿಸಿರುತ್ತಾರೆ.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಈ ಪುಸ್ತಕವನ್ನು ಪ್ರಕಟಿಸಿರುತ್ತದೆ. ಡಾ|| ಚೂಂತಾರು ರವರು ಈ ಹಿಂದೆ ಹತ್ತು ವೈದ್ಯಕೀಯ ಸಂಬಂಧಿ ಕೃತಿಗಳನ್ನು ರಚಿಸಿ ಪ್ರಕಟಿಸಿ ವೈದ್ಯ ಸಾಹಿತಿ ಎಂದು ಗುರುತಿಸಿಕೊಂಡಿದ್ದಾರೆ. ಪುಸ್ತಕದ ಬಿಡುಗಡೆಯನ್ನು ಡಾ|| ರಾಮಚಂದ್ರ ಬಾಯರಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ದ.ಕ. ಜಿಲ್ಲೆ ಇವರು ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಡಾ|| ಜಿ.ಕೆ. ಭಟ್ ಸಂಕಬಿತ್ತಿಲು ಸದಸ್ಯರು ಕರ್ನಾಟಕ ವೈದ್ಯಕೀಯ ಪರಿಷತ್ತು ಇವರ ಉಪಸ್ಥಿತಿಯಲ್ಲಿ ಈ ಪುಸ್ತಕ ಬಿಡುಗಡೆ ನಡೆಯಲಿರುವುದು.
ಡಾ|| ಮುರಲೀಮೋಹನ್ ಚೂಂತಾರು
ಸಾಹಿತ್ಯ ಮತ್ತು ಸಂಸ್ಕøತಿಯಲ್ಲಿ ವಿಶೇಷ ಪ್ರೀತಿ ಇದ್ದು, ಇವುಗಳಲ್ಲಿ ಸೃಜನಶೀಲವಾಗಿ ತೊಡಗಿಸಿಕೊಳ್ಳಲು ಕಾತರರಾದವರಂತೆ ಕಾಣುವ ಡಾ: ಮುರಲೀಮೋಹನ್ ಚೂಂತಾರು ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಚೊಕ್ಕಾಡಿ ಸಮೀಪದ ಚೂಂತಾರು ಎಂಬಲ್ಲಿ ಜನಿಸಿದರು. ಪ್ರಸ್ತುತ ಮಂಗಳೂರಿನ ಬಿಜೈ ಸಮೀಪದ ಕಾಪಿಕಾಡಿನಲ್ಲಿ ಕಳೆದ 22 ವರ್ಷಗಳಿಂದ ವಾಸಿಸುತ್ತಿದ್ದರು. ಶ್ರೀ ಲಕ್ಷ್ಮಿನಾರಾಯಣ ಭಟ್ ಮತ್ತು ದಿವಂಗತ ಸರೋಜಿನಿ ಭಟ್ ಇವರ ಮಗನಾಗಿ ಜನಿಸಿದ ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲೆಗಳಾದ ಶೇಣಿ ಮತ್ತು ಬೆಳ್ಳಾರೆಯಲ್ಲಿ ಮುಗಿಸಿದ ಬಳಿಕ ಸೆಂಟ್ ಫಿಲೋಮಿನಾ ಕಾಲೇಜು, ಪುತ್ತೂರು ಇಲ್ಲಿ ಪಿಯುಸಿ ಶಿಕ್ಷಣ ಪಡೆದರು.
ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಿಂದ ಬಿಡಿಎಸ್ ಪದವಿ ಪಡೆದ ಬಳಿಕ ದಾವಣಗೆರೆಯಲ್ಲಿ ಬಾಯಿ ಮತ್ತು ಮುಖ ದವಡೆ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತ್ಯ, ಸಂಸ್ಕøತಿ, ಕಲೆ, ವೈದ್ಯಕೀಯ ಸೇವೆ, ಸಮಾಜ ಸೇವೆ ಇದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀಯುತರು 2000ನೇ ಇಸವಿಯಿಂದ 16 ವರ್ಷಗಳ ಕಾಲ ಮಂಗಳೂರಿನ ದಂತ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ 22 ವರ್ಷಗಳಿಂದ ಮಂಜೇಶ್ವರ ಸಮೀಪದ ಹೊಸಂಗಡಿ ಎಂಬಲ್ಲಿ ತಮ್ಮ ಪತ್ನಿ ಡಾ: ರಾಜಶ್ರೀ ಮೋಹನ್ ಇವರ ಜೊತೆಗೂಡಿ ಸುರಕ್ಷಾ ದಂತ ಚಿಕಿತ್ಸಾಲಯವನ್ನು ನಡೆಸುತ್ತಿದ್ದರು. ಪ್ರಸ್ತುತ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಬಾಯಿ, ಮುಖ ಮತ್ತು ದವಡೆ, ಶಸ್ತ್ರಚಿಕಿತ್ಸೆಗೆ ಸಂದರ್ಶಕ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಂಗಳೂರು ಇದರ ಸಭಾಪತಿಯಾಗಿ ಮತ್ತು ಭಾರತೀಯ ದಂತ ವೈದ್ಯರ ಸಂಘ, ಮಂಗಳೂರು ಇದರ ಅಧ್ಯಕ್ಷರಾಗಿಯೂ ಕೆಲಸ ಮಾಡಿರುತ್ತಾರೆ. 2015 ರ ಜನವರಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಗೃಹರಕ್ಷಕ ದಳ ಇದರ ಸಮಾದೇಷ್ಟರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ತಂಡದ ಚೀಫ್ ವಾರ್ಡನ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ಶ್ರೀಯುತರು ಈವರೆಗೆ ರಕ್ತದಾನ, ಜೀವದಾನ, ಕಚಗುಳಿ, ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ, ಸಂಜೀವಿನಿ ಆರೋಗ್ಯ ಮಾರ್ಗದರ್ಶಿ, ಚಿತ್ರಾನ್ನ 32 ನೈಜ ದಂತ ಕಥೆಗಳು, ಸಂಜೀವಿನಿ ಆರೋಗ್ಯ ಮಾರ್ಗದಶಿ ಭಾಗ-2, ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ, ಸಂಗಾತಿ ಜ್ವರ ಸಂಹಿತೆ ಮತ್ತು ಧನ್ವಂತರಿ ವೈದ್ಯಕೀಯ ಲೇಖನಗಳು ಎಂಬ 9 ಕೃತಿಗಳನ್ನು ಬರೆದಿರುತ್ತಾರೆ. ಸುಮುಖ ದಂತ ಆರೋಗ್ಯ ಮಾರ್ಗದರ್ಶಿ ಇವರ 10ನೇ ಕೃತಿಯಾಗಿರುತ್ತದೆ. ಸಂಕಲ್ಪ 2020 ಇವರ 11ನೇಯ ಕೃತಿಯಾಗಿರುತ್ತದೆ. ವ್ಯದ್ಯಕೀಯ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇರುವ ಡಾ: ಚೂಂತಾರು ಇವರು ಸುಮಾರು ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಂಬಂಧಿ ಆರೋಗ್ಯ ಜಾಗೃತಿ ಲೇಖನಗಳನ್ನು ಬರೆದು ಪ್ರಕಟಿಸಿ ಮುಂಚೂಣಿಯಲ್ಲಿರುವ ವೈದ್ಯ ಸಾಹಿತಿ ಎಂದು ಗುರುತಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.