(www.vknews.com) : ಮನ ಮುದ ಗೊಳಿಸಲು ಸಂಗೀತದ ಪದ ಅತ್ಯಂತ ಪ್ರಾಮುಖ್ಯತೆ. ಅದಕ್ಕೆ ಹೇಳುವುದು ಪಿಕವ ನಾಚಿಸುವಂತಹ ಆ ಸಿರಿಕಂಠ ನಿಮ್ಮದು. ಕೋಗಿಲೆಯ ಹಾಗಿದೆ ನಿಮ್ಮ ಸುಸ್ವರ ಆ ಸ್ವರ ಯಾರಿಗೂ ಬರುವುದಿಲ್ಲ. ಈ ಕೋಗಿಲೆ ವಸಂತ ಮಾಸದಲ್ಲಿ ಹೆಚ್ಚಾಗಿ ಮಾವಿನ ಚಿಗುರೆಲೆ ತಿಂದು ಕೋಗಿಲೆ ಹಾಡುತ್ತದೆ. ಆ ಗಾನ ಕೇಳಿದ ನಮಗೆ ಮುದಗೊಳ್ಳುತ್ತದೆ. ಹೀಗೆ ಯಕ್ಷಗಾನ ಪ್ರಕಾರದಲ್ಲಿ ಗಾಯನ, ನರ್ತನ, ಮಾತು, ಹಾಸ್ಯ ಎಲ್ಲಾ ಇದೆ. ಇಂತಹ ಯಕ್ಷಗಾನದ ಪದ ಹೇಳುವರನ್ನು ನಿರ್ದೇಶಕರು ಹಾಗು ಭಾಗವತರು ಎಂದು ಕರೆಯುತ್ತಾರೆ. ಹೀಗೆ ಯಕ್ಷಗಾನದ ಭಾಗವತರ ಸಾಲಿನಲ್ಲಿ ಮಲೆನಾಡಿನ ಕೋಗಿಲೆ ಎಂದು ಪ್ರಖ್ಯಾತಿ ಹೊಂದಿರದ ಕೇವಲ ಎಲೆಮರೆಯಲ್ಲೇ ಉಳಿದ ಇಂದಿನ ಅಗ್ರಪಂಥಿಯ ಭಾಗವತರ ಸಾಲಿನಲ್ಲಿ ನಿಲ್ಲುವ ಹಿರಿಯ ಭಾಗವತರು ಶಿವಶಂಕರ ಭಟ್ ಹರಿಹರಪುರ ಕೊಪ್ಪ.
ಶ್ರೀಯುತರು ಮಲೆನಾಡಿನ ಶಾರದೆಯ ಸನ್ನಿಧಿಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶ್ರೀಯುತ ಗಣೇಶಯ್ಯ ಭಟ್ ಹಾಗು ಶ್ರೀಮತಿ ಸಾವಿತ್ರಮ್ಮನ ಗರ್ಭ ಸಂಜಾತರಾಗಿ 23 ಜನವರಿ 1962ರಲ್ಲಿ ಹರಿಹರಪುರದಲ್ಲಿ ಕಿರುಟಿಗೊಬ್ಬ ಕುಲದೀಪಕನಾಗಿ ಜನಿಸಿದರು. ಆಗ ಇವರಿಗೆ ಬಾಲ್ಯದಲ್ಲಿಯೇ ಯಕ್ಷಗಾನವನ್ನು ನೋಡುತ್ತಿದ್ದ ಇವರಿಗೆ ಗುರುವಾಗಿ ಸಿಕ್ಕಿದವರು ಗೋರ್ಪಾಡಿ ವಿಠ್ಠಲ ಪಾಟೀಲ್. ಅವರು ಸುಮಾರು ಶಿಷ್ಯರಲ್ಲಿ ಇವರೊಬ್ಬರಾಗಿ ತುಂಬಾ ಆಸಕ್ತಿಯಿಂದ ರಾಗ ತಾಳಗಳನ್ನು ಹಾಗು ಲಯ ಸ್ವರ ಏರಿಳಿತವನ್ನು ಕಲಿತುಕೊಂಡರು. ಆಗ ಬಡಗಿನಲ್ಲಿ ಮಲೆನಾಡಿನಲ್ಲಿ ಪ್ರಚಲಿತದಲ್ಲಿದ್ದ ಸೀತೂರು ಮೇಳಕ್ಕೆ ಸಂಗೀತದಾರನಾಗಿ 1978ರಲ್ಲಿ ಸೇರಿದರು . ಆಗ ಶ್ರೀಯುತರಿಗೆ ಸುಮಾರು 16 ವಯಸ್ಸಿನಲ್ಲಿ ಮೇಳಕ್ಕೆ ಸೇರ್ಪಡೆ ಹೊಂದಿದ್ದರು. ಅದೇ ಸಮಯದಲ್ಲಿ 1981ರಲ್ಲಿ ಇವರಿಗೆ ಅಂಚೆ ಇಲಾಖೆಯಲ್ಲಿ ಅಂಚೆ ನಿರ್ವಾಹಕನಾಗಿ ಸರಕಾರಿ ಉದ್ಯೋಗ ದಕ್ಕಿತು. ಅಲ್ಲಿ ಸಹ ಉದ್ಯೋಗದಲ್ಲಿ ಸಹ ನ್ಯಾಯ ಒದಗಿಸಿ. ರಾತ್ರಿ ಸೀತೂರು ಮೇಳದಲ್ಲಿ ಭಾಗವತರ ಸಾಲಿನಲ್ಲಿ ಕುಳಿತು ರಂಗದಲ್ಲೂ ಸಹ ನ್ಯಾಯವನ್ನು ಕೊಡುತ್ತಿದ್ದರು. ಸೀತೂರು ಮೇಳದಲ್ಲಿ ಸುಮಾರು 18 ವರುಷಗಳ ಕಾಲ ಸೀತೂರು ಮೇಳದ ಪ್ರಧಾನ ಭಾಗವತರಾಗಿ ಕಲೆಗೆ ನ್ಯಾಯವನ್ನು ಒದಗಿಸಿಕೊಟ್ಟರು. ನಂತರ ಮೇಗರವಳ್ಳಿಯಲ್ಲಿ 4 ವರುಷ, ನಂತರ 1 ವರುಷ ಶಿವರಾಜಪುರಂ ಮೇಳದಲ್ಲಿ, ಮಡಾಮಕ್ಕಿಯಲ್ಲಿ 3 ವರುಷ ಕಲಾ ಸೇವೆಯನ್ನು ಮಾಡಿದರು. ಅದಲ್ಲದೆ ತಾಳಮದ್ದಳೆ ಕೂಟದಲ್ಲಿ ಸಹ ಬಾಗವಹಿಸುತ್ತಿದರು. ಆಗ ಶ್ರೀಯುತರು ಕೀರ್ತಿಶೇಷ ಕಾಳಿಂಗ ನಾವುಡರ ಒಟ್ಟಿಗೆ ಬಾಗವಹಿಸಿದ ಭಾಗ್ಯ ದೊರಕಿತು. ಅಲ್ಲಿ ಅವರಿಗೆ ಕಾಳಿಂಗ ನಾವುಡರ ಸಂಪೂರ್ಣ ಪ್ರೋತ್ಸಾಹ ಹಾಗು ಸಹಕಾರ ದೊರೆಯಿತು. ಸ್ವತಃ ಕಾಳಿಂಗ ನಾವುಡರೇ ಮುಂದೆ ಸಮರ್ಥ ಭಾಗವತರ ಶಿವಶಂಕರ ಭಟ್ ರಿಗೆ ದೊಡ್ಡ ಸಾಮಗರು ಹಾಗು ಶ್ರೇಣಿಯವರ ಹತ್ತಿರ ಹೇಳಿದರು.
ಯಕ್ಷಗಾನದ ದಂತಕಥೆಯಾದ ಕೀರ್ತಿಶೇಷ ಕಾಳಿಂಗ ನಾವುಡರೊಂದಿಗೆ ಅಲ್ಲಲ್ಲಿ ತಾಳಮದ್ದಲೆ ಕೂಟದಲ್ಲಿ ಬಾಗವಹಿಸಿದ್ದರಂತೆ, ಆಗ ಶ್ರೀಯುತರಿಗೆ ರಂಗದ ನಡೆ, ಪದ್ಯದ ಆಲಾಪನೆ, ಪದ್ಯದ ಮಟ್ಟುಗಳ ಬಳಕೆ ಎಲ್ಲವನ್ನು ಶ್ರೀಯುತ ಶಿವಶಂಕರ ಭಟ್ ಕಲಿತ್ತಿದ್ದರು. ಅಲ್ಲದೆ ಕಾಳಿಂಗ ನಾವುಡರು ಹಾಗು ಶ್ರೇಣಿ ಗೋಪಾಲ ಕೃಷ್ಣ ಭಟ್ ಮತ್ತು ಮಲ್ಪೆ ಶಂಕರನಾರಾಯಣ ಸಾಮಗರು, ಕುಂಬ್ಳೆ ಸುಂದರ ರಾವ್, ಮಹಾಬಲ ಹೆಗಡೆಯವರು, ಕೋಟ ವೈಕುಂಠ, ಪ್ರಭಾಕರ ಎಂ ಜೋಶಿ ಮುಂತಾದ ವಾಕ್ ಚತುರರೊಂದಿಗೆ ತಾಳ ಮದ್ದಲೆಯಲ್ಲಿ ಭಾಗವಹಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲಿಸಬೇಕು. ಆಗ ಯಕ್ಷಗಾನದ ಮೇಲೆ ಇವರ ಒಲವು ಮತ್ತು ಆಸಕ್ತಿ ನೋಡಿದ ಮೇರು ಪರ್ವತ ಶ್ರೇಣಿಯವರು ಹೇಳಿದರಂತೆ ನಾವುಡರೇ ನಿಮ್ಮ ಉತ್ತರಾಧಿಕಾರಿ ಆಗಬಹುದು. ಇಬ್ಬರು ಒಂದೇ ರೀತಿಯ ಸ್ವರ ಭಾರವನ್ನು ಹೊಂದಿದ್ದೀರಿ ನಿಮ್ಮ ಸಮಕಾಲೀನ ವ್ಯಕ್ತಿಯಾಗಿ ಹೊರ ಹೊಮ್ಮಬಹುದು ಎಂದು ನಾವುಡರಿಗೆ ಶ್ರೇಣಿಯವರು ಹೇಳಿದ್ದಾರೆ. ಅಂತವರಿಂದಲೇ ಭೇಷ್ ಎಂದು ಕೊಂಡ ನಮ್ಮ ಹರಿಹರಪುರದ ಶಿವಶಂಕರ ಭಟ್ ಇಂದಿಗೂ ಸಹ ನಾವುಡರ ದಾಟಿಯಲ್ಲೇ ಅದೇ ಏರಿಳಿತದಲ್ಲೇ, ಅದೇ ಶ್ರುತಿ ಜ್ಞಾನದಲ್ಲೇ, ಅದೇ ನಿಜ ಸ್ವರದಲ್ಲೇ ಹಾಡುವ ಧ್ವನಿ ಶ್ರೀಯುತರಲ್ಲಿದೆ.
ಶ್ರೀಯುತರು ಚಲುವೆ ಚಿತ್ರಾವತಿಯ “ಧರಣಿ ಮಂಡಲ ಮಧ್ಯದೊಳಗೆ” ರತ್ನವತಿ ಕಲ್ಯಾಣ ಪೌರಾಣಿಕ ಪ್ರಸಂಗದ “ನುಡಿಯೇ ನಿನ್ನ ನೋಡೇಯನ ಪೆಸರನ ನುಡಿಯೇ” “ಕೇಳಯ್ಯ ಖಳರಾಯ ಪೂರ್ವದಲ್ಲಿ ನಾನು”, “ಮರುಳು ನಾನಾಗಿರ್ಪೆ ಮತ್ ಪಿತ ಪರಮ ಪಾತಕಿ ಸಾಲ್ವ ಮೂರ್ಖನು”, ಭಕ್ತ ಸುಧನ್ವ ಪ್ರಸಂಗದ “ಸತಿ ಶಿರೋಮಣಿ ಪ್ರಭಾವತಿ,” “ಸತಿಗೆ ಷೋಢಶದ ಋತು ಸಮಯ”, ಚಂದ್ರಹಾಸ ಪ್ರಸಂಗದ “ಶ್ರೀ ಮದ್ದ್ ಸಚಿವ ಶಿರೋಮಣಿ ಮಹಾಮಂತ್ರಿ ದುಷ್ಟಭುದ್ಧಿ”. ಹಾಗು ಸಾಮಾಜಿಕ ಪ್ರಸಂಗವಾದ ನಾಗಶ್ರೀ ಪ್ರಸಂಗದಲ್ಲಿ “ನೀಲ ಗಗನದೊಳು”, “ಎಲ್ಲೆಲ್ಲೂ ಸೊಬಗಿದೆ”, ಚಲುವೆ ಚಿತ್ರಾವತಿ ಪ್ರಸಂಗದ “ಅವಂತಿ ಅರಸನಾನಾಗುನೆಂಬ ಆ ಹೊತ್ತು ನೀನೆಂದ ಮಾತು” ಮುಂತಾದ ಪದವು ಕಾಳಿಂಗ ನಾವುಡರು ಹೇಳಿದ ಹಾಗೆ ಹೇಳುತ್ತಿದ್ದರು. ಸರಿ ಸುಮಾರು ಇವರ ಸುಸ್ವರವು ಕಾಳಿಂಗ ನಾವುಡರ ಇಂಪಿನ ಮಾಧುರ್ಯವನ್ನು ಸಹ ಹೊಂದುತ್ತದೆ. ಇವರನ್ನು ನಿಜಾರ್ಥದಲ್ಲಿ ಅಭಿನವ ಕಾಳಿಂಗ ನಾವುಡ ಎಂಬ ಅಭಿಮಾನಿಗಳು ಹೇಳುತ್ತಾರೆ.
ನನ್ನ ಅನುಭವದ ಮಾತು ಸರಿ ಸುಮಾರು ಕಾಳಿಂಗ ನಾವುಡರು ನಾನು ಒಂದು ಸರಿ ರಂಗದಲ್ಲಿ ನೋಡಿದೆ. ಆಗ ಸಣ್ಣವ. ಮತ್ತೆ ಮೂರೂ ನಾಲ್ಕು ಬಾರಿ ಶ್ರೀಯುತ ಮಡಾಮಕ್ಕಿ ಮೇಳದಲ್ಲಿ ಹವ್ಯಾಸಯಾಗಿ ಹೋದ ನನಗೆ ಇವರ ಚೆಲುವೆ ಚಿತ್ರಾವತಿ ಪ್ರಸಂಗದ “ಧರಣಿ ಮಂಡಲ ಮಧ್ಯದೊಳಗೆ” ಎಂಬ ಪದ್ಯಕ್ಕೆ ಕಾಳಿಂಗ ಗೊಲ್ಲನ ಪಾತ್ರಕ್ಕೆ ಹೆಜ್ಜೆ ಹಾಕುವ ಸುಯೋಗ ಬಂತು. ಅಲ್ಲದೆ ನಾವೇ ಪದ್ಯ ರಚಿಸಿದ ಸ್ವರ್ಣ ಕಮಲ ಪ್ರಸಂಗದಲ್ಲಿ “ಕಣಿಯ ಪೇಳ ಬಂದನಯ್ಯಾ ಕಿಂದರಿಜೋಗಿ” ಎಂದು ಕಿಂದರಿಜೋಗಿ ಪಾತ್ರದಲ್ಲಿ ಹೆಜ್ಜೆ ಹಾಕುವ ಯೋಗ ಬಂತು. ಹೀಗೆ ಇಂದಿನ ಸಮಕಾಲೀನ ಅಗ್ರಶ್ರೇಣಿಯ ಭಾಗವತರ ಪಂಕ್ತಿಯಲ್ಲಿ ಶ್ರೀಯುತ ಶಿವಶಂಕರ ಭಟ್ ರನ್ನು ಸೇರಿಸಬಹುದು. ಕಾಳಿಂಗ ನಾವುಡರ ನಿಜ ಸ್ವರವನ್ನು ಎಲ್ಲ ಪದ್ಯದಲ್ಲೂ ಸಮರ್ಥ ರಂಗದಲ್ಲಿ ಹೇಳಬಲ್ಲರು ಶಿವಶಂಕರ ಭಟ್ ಹರಿಹರಪುರ. ಶ್ರೀಯುತರು ಶ್ರೀಮತಿ ಲತಾವರ ಕರ ಪಿಡಿದು ಮಕ್ಕಳಾದ ಹರ್ಷ ಹಾಗು ವೆಂಕಟೇಶರೊಂದಿಗೆ ಹರಿಹರಪುರದಲ್ಲಿ ವಾಸವಾಗಿದ್ದರು. ಇಂದಿಗೂ ಅವರು ಅಂಚೆ ಇಲಾಖೆಯಲ್ಲಿ ಉದ್ಯೋಗವನ್ನು ಮಾಡಿ ಹಾಗೆ ತಾಳಮದ್ದಲೆ ಹಾಗು, ಯಕ್ಷಗಾನ ಮೇಳದ ತಿರುಗಾಟಕ್ಕೂ ಸಹ ಕರೆದರೆ ಅತಿಥಿಯಾಗಿ ಹೋಗಿ ವೃತ್ತಿಯಲ್ಲೂ ಹಾಗು ಪ್ರವೃತ್ತಿಯಲ್ಲೂ ಸಹ ನ್ಯಾಯವನ್ನು ದೊರಗಿಸಿಕೊಟ್ಟ ಕೀರ್ತಿ ಶಿವಶಂಕರ್ ಭಟ್ ಹರಿಹರಪುರರು. ಹೀಗೆ ಅನೇಕ ಸಂಘ ಸಂಸ್ಥೆಗಳು ಸುಮಾರು ಸನ್ಮಾನಗಳು ಪ್ರಶಸ್ತಿಗಳು ಸಹ ಇವರಿಗೆ ಅರಸಿಬಂದಿವೆ. ಇವರಿಗೂ ಸಹ ನಾವುಡ ಸಂಸ್ಮರಣೆಯ ನಾವುಡ ಪ್ರಶಸ್ತಿ, ಅಭಿನವ ಕಾಳಿಂಗ ನಾವುಡ ಬಿರುದು ಹಾಗು ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ನಾವು ಹಾರೈಸೋಣ. ಈ ಎಲ್ಲಾ ಪ್ರಶಸ್ತಿಗಳು ಇವರು ಅರ್ಹರು ಇವರು ಎಲೆ ಮರೆಯಲ್ಲೇ ಇದ್ದುದರಿಂದ ಯಾರು ಇವರ ಪ್ರತಿಭೆಯನ್ನು ಗುರುತ್ತಿಸಲಿಲ್ಲ ಎಂಬ ನೋವು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
– ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.