ತುಮಕೂರು: ರಾಜ್ಯದಲ್ಲಿ ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸೀಟುಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ರಂಗನಾಥಪುರದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ವಸತಿ ಶಾಲಾ ಸಮುಚ್ಚಯದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳು ಇರುವ ಗ್ರಾಮಗಳ ಮಕ್ಕಳಿಗೆ ಇದುವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೇವಲ ವಸತಿ ಶಾಲೆಯನ್ನು ಹೊರಗಿನಿಂದ ನೋಡಿ ಸಮಾಧಾನಪಡಬೇಕಾಗಿತ್ತು. ಆದರೆ ಇದುವರೆಗೂ ಕಾನೂನನ್ನು ಬದಲಿಸಿ ಇನ್ನು ಮುಂದೆ ವಸತಿ ಶಾಲೆಗಳು ಇರುವ ತಾಲೂಕಿನ ಸ್ಥಳೀಯ ಮಕ್ಕಳಿಗೆ ಶೇ. 25 ರಷ್ಟು ಸೀಟುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ವಸತಿ ಶಾಲೆಗಳು ಇರುವ ಗ್ರಾಮಗಳಲ್ಲಿ ಸ್ಥಳೀಯ ಮಕ್ಕಳು ಕೇವಲ ಕಟ್ಟಡ ನೋಡಿ ಸಂತೋಷ ಪಡಬಾರದು. ಈ ವಸತಿ ಶಾಲೆಯ ಸೌಲಭ್ಯವೂ ಸ್ಥಳೀಯ ಮಕ್ಕಳಿಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದು ಅವರು ಹೇಳಿದರು. ಸ್ಥಳೀಯ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸರ್ಕಾರ ಒದಗಿಸಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬಡವರ ಮಕ್ಕಳು ವ್ಯಾಸಂಗ ಮಾಡಲು ಉತ್ತಮ ಮೂಲಭೂತ ಸೌಕರ್ಯ ಇರುವಂತಹ ಕಟ್ಟಡ ಇರಬೇಕು. ವಾಸಕ್ಕೆ ಉತ್ತಮ ವಾತಾವರಣ ಇರಬೇಕು ಎನ್ನುವ ಕಾರಣಕ್ಕೆ ನೂತನವಾಗಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸದ್ಯ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಹಾಗಾಗಿ ಸರ್ಕಾರದ ವತಿಯಿಂದಲೇ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಸುಮಾರು ೪ ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇಡೀ ರಾಜ್ಯದಲ್ಲಿ ಶೇ. 96 ರಷ್ಟು ಫಲಿತಾಂಶ ಪಡೆದು ಮುಂದಿದ್ದಾರೆ. ಎಲ್ಲರೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರಲ್ಲದೇ ಸಮಾಜದಲ್ಲಿ ಶೋಷಿತರಾಗಿ, ಶಿಕ್ಷಣದಲ್ಲಿ ವಂಚಿತರಾಗಿದ್ದ ಮಕ್ಕಳಿಗೆ ಸರ್ಕಾರ ಉತ್ತಮ ವ್ಯವಸ್ಥೆ ಕಲ್ಪಿಸುತ್ತಿದೆ. ವಸತಿ ಶಾಲೆಗಳಲ್ಲಿ ಓದುವಂತಹ ಮಕ್ಕಳು ಕಳೆದ ವರ್ಷ ಇಲಾಖೆಯಲ್ಲಿ 29ಸಾವಿರ ಕೋಟಿ ಹಣ ಇತ್ತು. ಈ ಹಣವನ್ನು ಖರ್ಚು ಮಾಡಿ ಶೇ. 95 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಸಾಮಾಜಿಕ ಕಳಕಳಿಯಿಂದ ಇಂತಹ ಕೆಲಸಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಈ ಬಾರಿ ಇನ್ನು 52 ವಸತಿ ಶಾಲೆಗಳನ್ನು ಮಂಜೂರು ಮಾಡುವಂತಹ ಕೆಲಸ ನಡೆಯಲಿದೆ ಎಂದರು. ವಸತಿ ಶಾಲೆಗಳು ಸುಗಮವಾಗಿ ನಡೆಯಲು ಸ್ಥಳೀಯ ಗ್ರಾಮಸ್ಥರ ಸಹಕಾರವೂ ಅತಿ ಮುಖ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಜನತೆ ಸರ್ಕಾರದ ವಸತಿ ಶಾಲೆಗಳ ಸುಲಲಿತ ಸೇವೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಿರಾ ತಾಲ್ಲೂಕು ಬುಕ್ಕಾಪಟ್ಟಣದ ರಂಗನಾಥಪುರದಲ್ಲಿ ಸುಮಾರು 2೦ ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ವಸತಿ ಶಾಲೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರವಾಗಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸುಮಾರು ೧೯ ಕೋಟಿ ರೂ. ವೆಚ್ಚದಲ್ಲಿ ಈ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ೫ ಹಾಸ್ಟೆಲ್ ನಿರ್ಮಾಣಕ್ಕೆ 125 ರಿಂದ 130 ಕೋಟಿ ರೂ. ಹಣ ತಂದು ನಿರ್ಮಾಣ ಮಾಡಲಾಗುತ್ತಿದೆ ಎಂದರಲ್ಲದೇ ಗುತ್ತಿಗೆದಾರರು ಆದಷ್ಟು ಬೇಗ ಈ ವಸತಿ ಶಾಲೆಯ ಕಟ್ಟಡ ಕಾಮಗಾರಿ ಮುಗಿಸಬೇಕು ಎಂದು ಅವರು ಹೇಳಿದರು.
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪವಿಭಾಗದ ನೂತನ ಕಟ್ಟಡ ಉದ್ಘಾಟನೆ:-
ಮಧುಗಿರಿ ಪಟ್ಟಣದಲ್ಲಿ 1232 ಚದರ ಮೀಟರ್ ಅಳತೆಯ 3.58 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆಯ ಮಧುಗಿರಿ ಉಪವಿಭಾಗದ ನೂತನ ಕಟ್ಟಡವನ್ನು ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಉಪವಿಭಾಗ ಕಚೇರಿಯ ಕಟ್ಟಡವನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ದು, ಲೋಕೋಪಯೋಗಿ ಇಲಾಖೆಯ ಎಲ್ಲಾ ಕಚೇರಿಗಳು ಒಂದೆಡೆಗೆ ಬರಲಿವೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. 2019-2೦ನೇ ಸಾಲಿನ ಮಧುಗಿರಿ ವಿಭಾಗದಲ್ಲಿ ರಾಜ್ಯ ಹೆದ್ದಾರಿ ಸೇವೆಗಳು, ಎಸ್ಸಿಪಿ/ಟಿಎಸ್ಪಿ, ಶಿಕ್ಷಣ ಇಲಾಖೆ ಕಟ್ಟಡಗಳು ಸೇರಿದಂತೆ ಸುಮಾರು 227 ಕೋಟಿ.ರೂ ವೆಚ್ಚದಲ್ಲಿ ೫೬೪ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
2020-21 ನೇ ಸಾಲಿನ ಮಾರ್ಚ್ನಲ್ಲಿ ಬಜೆಟ್ ಅನುಮೋದನೆಯಾದ ಮೇಲೆ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕೊವಿಡ್-19 ನಿಯಂತ್ರಣಕ್ಕಾಗಿ 3 ತಿಂಗಳ ಕಾಲ ಕೆಲಸ ಮಾಡಲು ಅನುವಾಗಲಿಲ್ಲ. ಲಾಕ್ಡೌನ್ ಸಡಿಲಿಕೆಯಾಗಿದ್ದು, ಕೆಲಸ ಆರಂಭಿಸಲು ಆದೇಶಿಸಲಾಗಿದೆ. ಕಾಮಗಾರಿ ಆರಂಭಿಸಿದರೂ ಸಹ ಕಾರ್ಮಿಕರ ಕೊರತೆಯಿದೆ. ಕಾರಣ ಹೊರ ರಾಜ್ಯ/ಜಿಲ್ಲೆಯಿಂದ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಾಸ್ಸಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಮಗಾರಿಗಳು ನಿಧಾನವಾಗಿ ನಡೆದರೂ ಮುಂದಿನ ದಿನಗಳಲ್ಲಿ ವೇಗವಾಗಿ ಕೆಲಸ ನಡೆಯುತ್ತವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಸ್.ಬಸವರಾಜ್ ಅವರು, ಎತ್ತಿನಹೊಳೆ ಯೋಜನೆ ಜೊತೆಗೆ ಕುಮಾರ ಧಾರಾ ಯೋಜನೆ ಅನುಷ್ಠಾನಗೊಳಿಸಿ, 15ರಿಂದ 16 ಟಿಎಂಸಿ ನೀರನ್ನು ಈ ಭಾಗಕ್ಕೆ ದೊರೆಯುವಂತೆ ಮಾಡಬೇಕು ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತಾಲೂಕಿನ ಅಲೆಮಾರಿ ಜನಾಂಗದವರಿಗೆ ವಸತಿ ಕಲ್ಪಿಸುವ ಹಿನ್ನೆಲೆಯಲ್ಲಿ 4೦೦೦ ಮನೆಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಯಿಂದ ಕಾಡುಗೊಲ್ಲ, ಅಕ್ಕಿಪಿಕ್ಕಿ ಸೇರಿದಂತೆ ತಾಲೂಕು ಅಲೆಮಾರಿ ಜನಾಂಗದವರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ವೀರಭದ್ರಯ್ಯ, ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸಿಇಓ ಶುಭಾ ಕಲ್ಯಾಣ್, ಪಿಡಬ್ಲ್ಯೂಡಿ ಇಇ ವಿರೂಪಾಕ್ಷ ಮತ್ತಿತರು ಹಾಜರಿದ್ದರು.
ಪ್ರವಾಸಿ ಮಂದಿರ ಉದ್ಘಾಟನೆ:-
ಶಿರಾ ಪಟ್ಟಣದಲ್ಲಿ 2.25 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರವಾಸಿ ಮಂದಿರವನ್ನು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಉದ್ಘಾಟಿಸಿದರು.
ಅನಂತರ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2019-20ನೇ ಸಾಲಿನಲ್ಲಿ 1278 ಕಾಮಗಾರಿಗಳನ್ನು 655 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಈ ಪೈಕಿ 24 ಕಿ.ಮೀ ರಾಜ್ಯ ಹೆದ್ದಾರಿ, 331 ಜಿಲ್ಲಾ ರಸ್ತೆ ಸೇರಿದಂತೆ ಒಟ್ಟು 355 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ2019-20ನೇ ಸಾಲಿನಲ್ಲಿ 8788 ಕೋಟಿ.ರೂ ಖರ್ಚು ಮಾಡಿ 39೦೦ ಕಿ.ಮೀ ರಾಜ್ಯ ಹೆದ್ದಾರಿ, 143 ಸೇತುವೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಮಳೆ ನೀರು ಬಂದರೆ ಮತ್ತೆ ಹೇಮಾವತಿ ನೀರು:-
ಇದೇ ಸಮಯದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು, ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯ ಮೇರೆಗೆ ಹೇಮಾವತಿಯಿಂದ ಜಿಲ್ಲೆಗೆ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ಮಳೆ ಆರಂಭವಾಗಿ ಉತ್ತಮ ನೀರು ಬಂದರೆ ಮತ್ತೆ ನೀರನ್ನು ಜಿಲ್ಲೆಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಬಿ. ಸತ್ಯನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ವೈ.ಎ. ನಾರಾಯಣಸ್ವಾಮಿ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಎಸ್.ಆರ್. ಗೌಡ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಜಿ.ಪಂ. ಸಿಇಓ ಶುಭ ಕಲ್ಯಾಣ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.