(www.vknews.com) : I can’t breath – ಈ ಒಂದು ಪದ ಬಹಳ ಸುದ್ದಿಯಾಗಿದೆ. ಅಮೆರಿಕಾದಲ್ಲಿ ಕಪ್ಪು ಜನಾಂಗಕ್ಕೆ ಸೇರಿದ್ದ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯನ್ನು ಪೋಲೀಸರು ಅಮಾನವೀಯವಾಗಿ ಹತ್ಯೆಗೈದ ವಿಚಾರವಾಗಿ ಪ್ರತಿಭಟನೆಗಳು ಮುಗಿಲೆತ್ತರಕ್ಕೆ ಸದ್ದು ಮಾಡಿತ್ತು. BLACK LIVES MATTER ಎಂಬ ಘೋಷಣೆಯೊಂದಿಗೆ ಅಮೆರಿಕಾ ಜನತೆ ಮಾತ್ರವಲ್ಲದೇ ಇತರ ರಾಷ್ಟ್ರಗಳೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಧ್ವನಿಗೂಡಿಸಿದ್ದರು. ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ಬೆಳೆದು ಅಮೆರಿಕ ಅಧ್ಯಕ್ಷ ಟ್ರಂಪ್ ನಿವಾಸವಾದ ಶ್ವೇತ ಭವನಕ್ಕೂ ಪ್ರತಿಭಟನಾಕಾರರು ಮುಗಿಬೀಳುವ ಹಂತಕ್ಕೆ ತಲುಪಿತ್ತು. ಜಾರ್ಜ್ ಫ್ಲಾಯ್ಡ್ ಎಂಬ 46 ವರ್ಷದ ಕಪ್ಪು ಜನಾಂಗದ ವ್ಯಕ್ತಿಯನ್ನು ಮೇ 25 ರಂದು ಅಮೆರಿಕಾದಲ್ಲಿ ಪೋಲೀಸರ ಕ್ರೂರ ಕೃತ್ಯದಿಂದ ಬಲಿಯಾಗಿದ್ದು ಇಷ್ಟೊಂದು ವ್ಯಾಪಕವಾಗಿ ಸುದ್ದಿಯಾಗಿದೆಯಾದರೂ, ಅಮೆರಿಕಾದಲ್ಲಿ ಕರಿಯರ-ಬಿಳಿಯರ ನಡುವಿನ ಈ ಕೋಲಾಹಲ ಹಿಂದಿನಿಂದಲೂ ಮುಂದುವರಿಯುತ್ತಿದೆ. ಜಾರ್ಜ್ ಪ್ರಕರಣವನ್ನು ಎತ್ತಿ ಹಿಡಿದು ನಮ್ಮಲ್ಲೂ ಕೂಡ ಪ್ರತಿರೋಧ ಕಂಡುಬಂದಿದೆ. ಸಾಮಾಜಿಕ ತಾಣಗಳು, ಪತ್ರಿಕೆಗಳಲ್ಲಿ ಈ ಕುರಿತು ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಮೂಲಕ ಈ ಕ್ರೂರ ಕೃತ್ಯದ ವಿರುದ್ಧ ಶಬ್ಧ ಸೇರಿಕೊಂಡಿದೆ. #blaklivesmatter ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟ್ಟರ್ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಬರಹಗಳು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈ ಒಂದು ಆಂದೋಲನ ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯವನ್ನು ಕೊಣೆಗಾಣಿಸಿದೆಯೇ ಅಂತ ಕೇಳಿದರೆ ಇಲ್ಲ ಎನ್ನಬಹುದು. ಈ ಪ್ರಕರಣದ ಕಾವು ಸುಡುತ್ತಿರುವಾಗಲೇ ಇದೇ ಕಪ್ಪುಜನಾಂಗಕ್ಕೆ ಸೇರಿದ ರೆಷಾರ್ಡ್ ಬ್ರೂಕ್ಸ್ ಎಂಬ ವ್ಯಕ್ತಿಯನ್ನು ಪೋಲೀಸರು ಗುಂಡಿಟ್ಟು ಕೊಲ್ಲಲಾಗಿದೆ. ಜಾರ್ಜ್ ಜೊತೆಯಲ್ಲೇ ಬ್ರೂಕ್ಸ್ ಕೂಡ ಜನಾಂಗೀರ ಧೋರಣೆಗೆ ಬಲಿಯಾಗಿಬಿಟ್ಟ.
ಇಲ್ಲಿ ವಿಷಯ ಅದಲ್ಲ, ದೂರದ ಅಮೆರಿಕಾದ ಘಟನೆಗಳಿಗೆ ನಾವು ಕಣ್ಣು ಮಿಡಿಯುತ್ತೇವೆ. ತಪ್ಪು ಎಂದಲ್ಲ, ಕ್ರಾಂತಿಕಾರೀ ಹೋರಾಟಗಾರ ಚೆಗುವೇರಾ ಹೇಳಿದ ಮಾತೊಂದಿದೆ, “ಜಗತ್ತಿನ ಯಾವ ಮೂಲೆಯಲ್ಲಾದರೂ ನಡೆಯುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ..!” ಎಂದು. ಹಾಗಿರುವಾಗ ಇಲ್ಲಿ ಕೂಡ ಜಾರ್ಜ್ ಗಾಗಿ ಶಬ್ಧ ಉದಿಸಿದ್ದು ತಪ್ಪಾಗದು. ಅದು ನಡೆಯಲೇ ಬೇಕಾಗಿದ್ದು ಕೂಡ.
ಆದರೆ ನಮ್ಮ ಭಾರತದಲ್ಲಿ ಕೂಡ ಇದೇ ರೀತಿಯ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಕಾಣಸಿಗುವಾಗ ನಮ್ಮ ಈ ಶಬ್ಧ ಮೌನವಾಗಿದ್ದು ಯಾಕೆ? ಬಹುಶಃ ಭಾರತದಲ್ಲಿ ಬಣ್ಣದ ಆಧಾರದಲ್ಲಿ ದೌರ್ಜನ್ಯಗಳು ನಡೆಯುವುದು ವಿರಳ. ಇಲ್ಲಿ ಕೆಳವರ್ಗದ ಜನರಿಗೆ ಮೇಲ್ವರ್ಗದ ಜನರಿಂದ ನಿತ್ಯ ತೊಂದರೆಗಳು ನಡೆಯುತ್ತಿರುವುದು. ಹೆಚ್ಚಾಗಿ ದಲಿತರು, ಬುಡಕಟ್ಟು ಜನಾಂಗದವರು, ಆದಿವಾಸಿ ಕುಟುಂಬಗಳು.. ಹೀಗೆ ಕೆಳ ಜಾತಿಯವರನ್ನು ಅಮಾನವೀಯವಾಗಿ ಜಾರ್ಜ್ ಮಾದರಿಯಲ್ಲೇ ಹತ್ಯೆಗೈದ ಹಲವಾರು ಪ್ರಕರಣಗಳು ಇವೆ. ಕೆಲವೊಂದು ಹೆಚ್ಚು ಸುದ್ದಿಯಾದರೂ, ಇನ್ನುಳಿದವು ತೆರೆಮರೆಯಲ್ಲಷ್ಟೇ ಮಾತಾಗಿತ್ತು. ಅಸ್ಪಶ್ಯತೆ ಇನ್ನೂ ತಾಂಡವಾಡುತ್ತಿದೆ. ಇದರ ವಿರುದ್ಧ ಹಲವಾರು ಸಮರಗಳು ನಡೆದಿದ್ದರೂ ಪ್ರತಿಫಲ ಶೂನ್ಯವಷ್ಟೇ.
ದೇವಾಲಯವೊಂದರಲ್ಲಿ ಪೂಜೆಯ ಬಗ್ಗೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಕಳೆದ ವಾರ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಡೊಮ್ಖೇರಾದಲ್ಲಿ 17 ವರ್ಷದ ದಲಿತ ಬಾಲಕನನ್ನು ಮೇಲ್ಜಾತಿಯ ಗ್ರಾಮಸ್ಥರು ಗುಂಡಿಕ್ಕಿ ಕೊಂದಿದ್ದರು.
ಜೂನ್. 7 ರಂದು ಪುಣೆಯಲ್ಲಿ ವಿರಾಜ್ ಜಗತಾಪ್ ಎಂಬ 20 ವರ್ಷದ ಯುವಕನನ್ನು ಮೇಲ್ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿದ ಎನ್ನುವ ಕಾರಣಕ್ಕೆ ಕಲ್ಲುಹೊಡೆದು ಕೊಲ್ಲಲಾಯಿತು.
ಮೇಲ್ವರ್ಗದ ವ್ಯಕ್ತಿಯೊಬ್ಬನ ಫ್ಯಾನ್ ಕಳವು ಮಾಡಿದ್ದಾರೆ ಎನ್ನುವ ಆರೋಪ ಹೊರಿಸಿ ಇತ್ತೀಚಿಗೆ ಲಕ್ನೋ ದ ಬರೌಲಿ ಖಲೀಲಾಬಾದ್ ಎಂಬ ಗ್ರಾಮದಲ್ಲಿ ಮೂವರು ದಲಿತ ಯುವಕರನ್ನು ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆಗೈದು, ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿಸಿ ಊರಿಡೀ ಮೆರವಣಿಗೆ ನಡೆಸಿ ಅವಮಾನಿಸಲಾಗಿತ್ತು. ಈ ಘಟನೆಯ ವಿಡಿಯೋ ತುಣುಕೊಂದು ಸಾಮಾಜಿಕ ತಾಣದಲ್ಲಿ ಹರಿದಾಡಿತ್ತು.
ಈ ಮೇಲಿನ ಮೂರು ಘಟನೆಗಳು ಇತ್ತೀಚೆಗೆ ಸ್ವಲ್ಪ ಸುದ್ದಿಯಾದವುಗಳು. ಇದೇ ರೀತಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇದೆ. ಪ್ರತಿಭಟನೆಗಳು, ಸಮರಗಳು, ಆಂದೋಲನಗಳು ಬರೀ ಹೆಸರಿಗಷ್ಟೇ. ಯಾರಿಗಾದರೂ ಹಲ್ಲೆಯಾದಾಗ, ಯಾರಾದರೂ ಕೊಲ್ಲಲ್ಪಟ್ಟಾಗ ಈ ರೀತಿಯ ಪ್ರತಿಭಟನೆಗಳು ಸದ್ದು ಮಾಡುತ್ತದೆ. ಅದರ ಕಾವು ಒಂದಷ್ಟು ದಿನ ಮಾತ್ರ. ಆಮೇಲೆ ಯಾವುದೇ ಆ ಬೆಂಕಿ ಕೂಡ ಆರಿ ಹೋಗುತ್ತದೆ. ಮತ್ತೆ ಆ ಸ್ವರ ಕೇಳಬೇಕೆಂದಾದರೆ, ಇನ್ನೊಂದು ಪ್ರಕರಣ ನಡೆಯಬೇಕು. ಇದು ಹೀಗೆಯೇ ಮುಂದುವರಿಯುತ್ತಿದೆ.
ಅಮರಿಕಾದಲ್ಲಿ ನಡೆಯುತ್ತಿರುವ Black Lives Matter ಎಂಬ ಆಂದೋಲನವು ಪರಿಪೂರ್ಣ ಯಶಸ್ಸು ಕಾಣದಿದ್ದರೂ, ಕಪ್ಪುಜನಾಂಗದವರು ಎಚ್ಚರಗೊಂಡಿದ್ದಾರೆ ಎಂಬ ಆತಂಕವನ್ನು ಬಿಳಿಯರು ಅರ್ಥ ಮಾಡಿಕೊಂಡಿದ್ದಾರೆ. ಈ ಹೋರಾಟ ಇನ್ನೂ ಮುಂದುವರಿದಲ್ಲಿ ತಕ್ಕ ಮಟ್ಟಿಗೆ ಕರಿಯರ ಮೇಲೆ ನಡೆಯುವ ದೌರ್ಜನ್ಯವನ್ನು ಮಟ್ಟಹಾಕಬಹುದು. ಅದನ್ನೇ ಮಾದರಿಯಾಗಿಸಿಕೊಂಡು ಭಾರತದಲ್ಲಿ Dalit Lives Matter ಎಂಬ ಆಂದೋಲನವೂ ಕೇಳಿಬರುತ್ತಿದೆ. ಆದರೆ, ಅದು ಅಷ್ಟೊಂದು ಪರಿಣಾಮಕಾರಿಯಾಗಿ ಹೊರಬರುತ್ತಿಲ್ಲ. ದಲಿತ ಹೋರಾಟದ ಬಗ್ಗೆ ಮಾತನಾಡುವಾಗ ಮೊದಲಿಗೆ ನೆನಪಿಗೆ ಬರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹೆಸರು. ಭಾರತದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ, ಅಸ್ಪೃಶ್ಯತೆ, ಜಾತಿ ಪದ್ಧತಿಗೆ ಕೊನೆಗಾಣಿಸಲು ನಿರಂತರ ಸೆಣಸಾಡಿದವರು. ಆದರೆ, ಅವರ ಅಂತ್ಯಕ್ಕೆ ಆ ಹೋರಾಟದ ತೀಕ್ಷ್ಣತೆಯೂ ಕಡಿಮೆಯಾಗಿದೆ. ಸಮಾನತೆಯ ಭಾರತಕ್ಕಾಗಿ ಸಂವಿಧಾನ ರಚಿಸಿ ಕೊಟ್ಟಿದ್ದರೂ, ಈಗೀಗ ಅದನ್ನೂ ತಿರುಚುವ ಮಟ್ಟಕ್ಕೆ ಕೆಲವರು ತಲುಪಿದ್ದಾರೆ ಅನ್ನಬಹುದು.
ಜಾತಿ ಪದ್ದತಿ ಯನ್ನು ಮನು ಸೃಷ್ಟಿಸಿದ್ದು ಎಂಬುದು ಅಂಬೇಡ್ಕರ್ ರ ವಾದ. ಅಸ್ಪೃಶ್ಯತೆಗೆ ಅಂತ್ಯ ಹಾಡಬೇಕೆಂದು ಸದಾ ಕ್ರಾಂತಿ ಹಚ್ಚಿದವರು. ‘ಸ್ವಾತಂತ್ರ್ಯವೇ ನಮ್ಮ ಜನ್ಮ ಸಿದ್ಧ ಹಕ್ಕು’ ಎಂಬ ಘೋಷಣೆಗೆ ಪ್ರತಿಕ್ರಿಯೆಯಾಗಿ ‘ಅಸ್ಪೃಶ್ಯತೆ ಯ ಸರ್ವನಾಶ ನನ್ನ ಜನ್ಮ ಸಿದ್ಧ ಹಕ್ಕು’ ಎಂಬ ದೃಢ ಸಂಕಲ್ಪವನ್ನು ನೀಡಿದ್ದರು. ಮನು ಧರ್ಮಶಾಸ್ತ್ರ ದ ಕುರಿತು ಅಂಬೇಡ್ಕರ್ ರವರ ಅಭಿಪ್ರಾಯ ಈ ಕೆಳಗಿನಂತಿವೆ;
“ಸಾಮಾಜಿಕ ಹಕ್ಕುಗಳ ಬಗೆಗೆ ಮನುಧರ್ಮ ಸಂಹಿತೆಯಂತಹ ದುಷ್ಟ ಕಾನೂನುಗಳು ಇನ್ನೆಲ್ಲಿಯೂ ಇಲ್ಲ. ಸಾಮಾಜಿಕ ಅನ್ಯಾಯದ ಯಾವುದೇ ದೇಶದ ಯಾವುದೇ ಉದಾಹರಣೆ ಇದರ ಮುಂದೆ ಸಪ್ಪೆಯಾಗಿ ಬಿಡುತ್ತವೆ. ಮನುಷ್ಯ ಸಮೂಹಗಳು ಈ ಸಾಮಾಜಿಕ ದೌರ್ಯಜನ್ಯವನ್ನು ಏಕೆ ಶಂಕಿಸಿ ಅವರನ್ನು ಹಿಂಬಾಲಿಸಿದರು? ಇಂಡಿಯಾದಲ್ಲಿ ಸಾಮಾಜಿಕ ಬಂಡಾಯಗಳು ಏಕೆ ನಡೆಯಲಿಲ್ಲವೆಂಬುದು ನನ್ನನ್ನು ಯಾವಾಗಲೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆ ನಾನು ಕೊಡಬಹುದಾದ ಉತ್ತರ ಒಂದೇ ಒಂದು, ಕೆಳವರ್ಗದ ಹಿಂದೂಗಳು ನೇರ ಕ್ರಮಕ್ಕೆ ತೊಡಗದಂತೆ ಅವರನ್ನು ಪ್ರತಿಬಂಧಿಸಿದ್ದು, ಈ ಕೊಳಕು ಜಾತಿವರ್ಣ ಪದ್ಧತಿ.” (ಡಾ. ಎಂ.ಎ. ರಾಜಶೇಖರಯ್ಯ, ಸಂಪುಟ-3, 1994, ಪುಟ-101)
ಅಸ್ಪೃಶ್ಯತೆಯನ್ನು ಹೋಗಲಾಡಿಸಿದರೆ ಮಾತ್ರವೇ ಜಾತಿ ಪದ್ಧತಿಯು ಇಲ್ಲವಾಗಬಹುದು. ಮೇಲ್ಜಾತಿ-ಕೆಳಜಾತಿ ಎಂಬ ವಿಂಗಡನೆಯಿಂದ ದಲಿತರು, ಶೂದ್ರರು ಸೇರಿದಂತೆ ಕೆಲಕವರ್ಗದ ಜನಾಂಗವು ಹಿಂಸೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ಸಾಮಾಜಿಕವಾಗಿ ಅವಮಾನಕ್ಕೊಳಗಾಗುತ್ತಲೇ ಇದ್ದಾರೆ. ಪ್ರತಿ ವಿಚಾರದಲ್ಲೂ ಮೇಲ್ಜಾತಿಯವರನ್ನು ಮೀರಿ ಹೋಗದಂತೆ ಪ್ರತಿಬಂಧಿಸಲಾಗಿದೆ. ತಪ್ಪಿದಾಗ ಹಲ್ಲೆ, ಅವಮಾನ ಸೇರಿ ಸಾವನ್ನೂ ಅನುಭವಿಸಬೇಕಾಗುತ್ತದೆ. ಭಾರತವೆಮನಬ ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲಾ ಧರ್ಮ ಎಲ್ಲಾ ಜಾತಿಯವರಿಗೂ ಸಮಾನ ಹಕ್ಕನ್ನು ಸಂವಿಧಾನ ಕಲ್ಪಿಸಿದರೂ ಅದನ್ನೆಲ್ಲಾ ಗಾಳಿಗೆ ತೂರಿ ರಾಕ್ಷಸ ವರ್ತನೆಗಳು ರುದ್ರನರ್ತನ ಮಾಡುತ್ತಿದೆ.
ಅಸ್ಪೃಶ್ಯತೆಯು ಸರ್ವನಾಶವಾದಲ್ಲಿ ಮಾತ್ರ ಈ ಜಾತಿ, ಧರ್ಮ, ವರ್ಣ, ಲಿಂಗ ಬೇಧಗಳಿಂದ ನಡೆಯುವ ದೌರ್ಜನ್ಯಗಳು ಕೊನೆಯೊಪ್ಪಬಹುದು..
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.