(www.vknews.com) : “ಇತ್ತ ಕುರುಕ್ಷೇತ್ರದೊಳು ಕುರುರಾಯ ಇದನೆಲ್ಲ ಕಂಡು ಸಂತಾಪದಿಂ” ಎಂದು ಕಾಳಿಂಗ ನಾವುಡರ ಸಾವೇರಿ ರಾಗದಲ್ಲಿ ಹೇಳುತ್ತಿದ್ದರೆ, ಅಂದು ಕವಿಪುಂಗವ ಶ್ರೀ ಕುಮಾರವ್ಯಾಸರು ರಚಿಸಿದ ಕೃತಿ “ಗದುಗಿನ ಭಾರತ”ದ ದುರ್ಯೋಧನನ ಪಾತ್ರದ ಚಿತ್ರಣವನ್ನು ಗದಾಯುದ್ಧ ಪ್ರಸಂಗದಲ್ಲಿ ಅಭಿನಯಿಸಿದ್ದಾರೆ.ಶ್ರೀಯುತ ಗೋಡೆಯವರು “ಮರುತ ಸಂಭವ ನಿಂತು ಮೂದಲಿಸಿ ಬರುತಿಹನು” ಆ ಪದಕ್ಕೆ ದುರ್ಯೋಧನ ಪಾತ್ರದಲ್ಲಿ ರಂಗದಲ್ಲಿ ಬಂದರೆ ಮಹಾಭಾರತದ ಚಿತ್ರಣವನ್ನೇ ಗೋಡೆಯವರು ರಂಗದಲ್ಲಿ ತಂದು ಬಿಡುತ್ತಿದ್ದರು. ಆ ಜಲವಳ್ಳಿಯವರ ಭೀಮನ ಗತ್ತುಗಾರಿಕೆ ಅದೇ ಮೂದಲಿಕೆಯ ಮಾತುಗಳಿಗೆ ದುರ್ಯೋಧನ ಹೇಗೆ ಇಂದ್ರಾದಿದಿಶೆಯಾಗಿ ಯುದ್ಧದಲ್ಲಿ ಹಿಂದೆಕ್ಕೆ ಹೋಗುವ ಪಾತ್ರವನ್ನು ಗೋಡೆಯವರನ್ನು ಬಿಟ್ಟರೆ ಇಲ್ಲಿಯವರೆಗೂ ಸಹ ಯಾರು ಅಭಿನಯಿಸಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.
“ಪೊಡವಿಪಾಲಕ ಭಾಗ್ಯದಾಯಕ ನುಡಿದೆ ಹೀಗೆ ಎಲ್ಲಿಗೆ ನಡೆವೆ ಓರ್ವನೇ” ಹಾಗು “ಅದಲೆಡೆ ಸಂಜಯನೇ ಕೇಳು” ಎಂಬ ಪದಕ್ಕೆ ಗೋಡೆಯವರು ಮತ್ತು ಅರ್ಗೋಡ್ ಮೋಹನದಾಸ್ ಶೈಣೈಯವರ ಸಂಜಯನ ಪಾತ್ರಕ್ಕೆ, ಆ ಕುರುಭೂಪನಲ್ಲಿ ಹದಿನೇಳನೆಯ ದಿನದ ರಾತ್ರಿ ಎಲ್ಲಿರುತ್ತೀಯ ಎಂದು ಕೇಳಿದಾಗ ಸಂಜಯ ನಾನು “ಇದೆ ದ್ವೈಪಾಯನ ಸರೋವರದ” ವೈರಿಗಳಿಗೆ ಅಂಜಿ ಮುಳುಗಿ ಇರುತ್ತೇನೆ. ನಾಳೆ ಬೆಳಗಾದರೆ “ನಿಷ್ಚ್ಪಾಂಡವ ಪೃಥ್ವಿ” ಆ ಪಾಂಡವರ ಕೊಂದು ಮತ್ತೆ ಹಸ್ತಿನಾವತಿಯನ್ನು ಏರುತ್ತೇನೆ. ಅಲ್ಲಿಯವರೆಗೂ ಯಾರಿಗೂ ಹೇಳಬೇಡ ಎಂದು ಬೆದರುತ್ತಾ, ಸಂತಾಪದ ನುಡಿಗಳನ್ನು ಹೇಳುವಾಗ ಆ ಮಹಾಭಾರತದ ಛಲದಂಕ ಚಕ್ರೇಶ್ವರ ಕೌರವ ಬಂದು ಹೇಳಿದ ಹಾಗೆ ಅಭಿನಯಿಸಿದರು.
“ಎಲಾ ಎಲಾ ಛಿ ಕುರುಕುಲ ಕುನ್ನಿ” ಎಂದು ಶತಗಜ ಶತತೃಣ ನಾದ ಭೀಮಾ ಆ ದುರ್ಯೋಧನ ದ್ವೈಪಾಯನ ಸರೋವರದಲ್ಲಿ ಅಡಗಿದ್ದವನನ್ನು ಹಂಗಿಸಿ ಮೇಲೆಳೆತರುವಾಗ ಆಡಿದ ಮಾತುಗಳು, ಕುರುಕುಲಾನ್ವಿತ ಜಲದಲ್ಲಿ ಬೆವರುತ್ತಿದ್ದನಂತೆ ಅಂತಹ ಅಭಿನಯವನ್ನು ಶ್ರೀಯುತ ಗೋಡೆಯವರು ಮಾಡಿದರೆ, ಎದುರಾಳಿ ಶತಗಜ ಶತತೃಣನಾಗಿ ಕಾಳಿಂಗ ನಾವುಡರ ಕಾಲದಲ್ಲಿ ಶ್ರೀಯುತ ಜಲವಳ್ಳಿ ವೆಂಕಟೇಶ ರಾವ್. ಹೀಗೆ ತನ್ನ ವಿಭಿನ್ನ ಶೈಲಿಯ ಮಾತುಗಾರಿಕೆ ಎಷ್ಟುಬೇಕೋ ಅಷ್ಟು ಕುಣಿತ ಪಾತ್ರಕ್ಕೊಪ್ಪುವ ಮಾತಿನಿಂದಲೇ ಜನರ ಮನೆಮಾತಾದ ಶ್ರೀಯುತ ನಾರಾಯಣ ಹೆಗಡೆಯವರು ತಮ್ಮ ಪ್ರಾಯದ ಹಂಗು ಇಲ್ಲದೆ ಯಕ್ಷಗಾನ ವೇಷಧರಿಸಿ ಕುಣಿಯುತ್ತಾರೆ. ತನ್ನ ಎಂಬತ್ತರ ಹರೆಯದಲ್ಲಿ ಮತ್ತೆ ಸಾಮ್ರಾಟ ಕೌರವನಾಗಿ ಕಾಣಿಸಿ ಜನಮನಗೆದ್ದಿದ್ದಾರೆ.
ನಂತರ ಸುಯೋಧನನು ಮತ್ತೆ ಪಾಂಡವರನ್ನು ಆರಿಸುವ ಬಗೆಗೆ ಹೇಳುತ್ತಾರೆ “ಭಾಷೆಯ ಇತ್ತೆಹಿನು ಎನ್ನ ಘಾಸಿಪ ಎನುತಿಹನು” ಎಂದು ಭೀಮನನ್ನು ಆಯ್ಕೆ ಮಾಡುತ್ತೇನೆ. ಪಚಾರಿಸುತ್ತ ಕೃಷ್ಣನನ್ನು ಸಹ ಭೀಮ ಮೊದಲ ಬಾರಿ ಯುದ್ಧದಲ್ಲಿ ಬಿದ್ದಾಗ, “ಕಪಟ ನಾಟಕ ರಂಗ ಕುಪಿತ ಇನ್ನೇನು ನಿನ್ನಂಗ” ಎಂದು ಶ್ರೀಕೃಷ್ಣನನ್ನು ಪಚಾರಿಸುವ ಆ ಪದಕ್ಕೆ ಎಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಗೋಡೆಯವರು ಕೃಷ್ಣನನ್ನು ಕರೆಯುವಾಗ ಓ ಕೃಷ್ಣಯ್ಯ ಓ ಕೃಷ್ಣಯ್ಯ ಕಪಟ ನಾಟಕ ರಂಗ ನನ್ನ ಭಾವ ಎಂದು ಗಂಭೀರದ ಹಾಸ್ಯಾಸ್ಪದ ಮಾತುಗಳಿಂದ ಕೃಷ್ಣನನ್ನು ಹಂಗಿಸುದನ್ನು ಗೋಡೆಯವರನ್ನ ನಾವು ಅಭಿನಯದಲ್ಲಿ ನೋಡುತ್ತೇವೆ. ಗದಾಯುದ್ಧದ ಕೊನೆಯಲ್ಲಿ ಬಲರಾಮನಾಗಿ ಬಂದ ಅರ್ಗೋಡ್ ಎಷ್ಟು ಗರ್ಜಿಸಿದರು ಆದರೆ ಕೃಷ್ಣನಾಗಿ ಎಂ ಎಲ್ ಸಮಾಪ್ತಿಗೊಳಿಸುವ ಯುದ್ಧದಲ್ಲಿ ನಿರ್ಣಯ ಮಾಡುತ್ತಾನೆ. ಕೊನೆಗೆ ಅಭೇರಿ ರಾಗದಲ್ಲಿ “ಅಸಮ ಪರಾಕ್ರಮಿ ಮಿಸುನಿಯ ಜ್ಯೋತಿಯು ದೆಶೆಯೊಳು ಬೆಳಗುಲು” ಎಂದು ಅಶ್ವತ್ತಾಮನಾಗಿ ಶ್ರೀಯುತ ಡಿ. ಜಿ. ಹೆಗಡೆಯವರ ಅಭಿನವ ನೋಡಲು ಹೇಳತೀರದು. ಹೀಗೆ ಗದಾಯುದ್ಧದಲ್ಲಿ ಕೊನೆಗೂ ತನ್ನ ಗುರು ಪುತ್ರರು ಮಾಡಿದ ಆ ಅಚಾತುರ್ಯವನ್ನು ನೆನೆದು ನೆನೆದು ಸಾಯುವ ಆ ದುರ್ಯೋಧನನ ಸಂಕಟವೂ ಸಹ ಎಂಥ ಸುಂದರವಾಗಿ ಗೋಡೆಯವರು ರಂಗದಲ್ಲಿ ಸಹಸ್ರ ಸುಯೋಧನನಾಗಿ ದಣಿವರಿಯದೆ ಕುಣಿದಿದ್ದಾರೆ.
ಕಲೆಯ ತವರೂರಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿಯ ಗೋಡೆ ಮನೆತನದ ಹವ್ಯಕ ಬ್ರಾಹ್ಮಣರಾದ ಶ್ರೀಯುತ ತಿಮ್ಮಯ ಹೆಗಡೆ ಮತ್ತು ತಾಯಿ ಗೌರಮ್ಮರವರ ಗರ್ಭಸಂಜಾತರಾಗಿ 15-02-1940ರಲ್ಲಿ ಜನಿಸಿದರು. ತನ್ನ 2ನೇ ವಯಸ್ಸಿನಲ್ಲೇ ತಂದೆ ತಿಮ್ಮಯ್ಯ ಹೆಗಡೆಯವರನ್ನು ವಿಧಿ ಸೆಳೆದುಕೊಂಡಿತು. ಆಗ ಇಬ್ಬರ ಅಕ್ಕಂದಿರ ಸಂಸಾರದ ಹೊಣೆಗಾರಿಕೆಯನ್ನು ತಮ್ಮನಾದ ನಾರಾಯಣ ಗೋಡೆಯವರ ಹೆಗಲೇರಿತು. ಅಮ್ಮ ಅಕ್ಕಂದಿರ ಏಳಿಗೆಗಾಗಿ ತನ್ನ ಐದನೇಯ ತರಗತಿಯ ವಿದ್ಯಾಭ್ಯಾಸಕ್ಕೆ ತೀಲಾಂಜಲಿ ಹಾಕಿ ಕೊಳಗಿ ಸೀತಾರಾಮ ಭಾಗವತರಲ್ಲಿ ಯಕ್ಷಗಾನ ಹೆಜ್ಜೆಯನ್ನು ಕಲಿತರು. ಮನೆಯಲ್ಲಿ ಕಿತ್ತುತಿನ್ನುವ ಬಡತನ ಅಮ್ಮ ಅಕ್ಕಂದಿರ ಹೊಣೆಗಾರಿಕೆ ಎಲ್ಲವನ್ನು ಮನಗೊಂಡ ಇವರು ಪ್ರಥಮ ಬಾರಿಗೆ ಹಣಜಿಬೈಲ್ ಸೀತಾರಾಮಚಂದ್ರ ಯಕ್ಷಗಾನ ಮಂಡಳಿಯಲ್ಲಿ “ವಾಲಿ ವಧೆ”ಯ ತಾರೆಯಾಗಿ ತನ್ನ 14ನೇ ವಯಸ್ಸಿನಲ್ಲಿ ರಂಗವೇರಿದರು.
ಕೊಳಗೀಸ್ ಶಿರಳಗಿ ಸಿದ್ಧಿವಿನಾಯಕ ಯಕ್ಷಗಾನ ಸಂಘದಲ್ಲಿ ಸುಮಾರು 20ವರುಷಗಳ ವೃತ್ತಿಮೇಳವಾಗಿ ತಿರುಗಾಟ ಮಾಡಿದರು. ನಂತರ ಆ ಕಾಲದಲ್ಲಿ ಉಪ್ಪುರು ನಾರಾಯಣ ಹೆಗಡೆಯವರು ಅಮೃತೇಶ್ವರೀ ಮೇಳಕ್ಕೆ ಕರೆದುಕೊಂಡರು. ಅಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಮುಂತಾದವರ ಒಡನಾಟದಿಂದ ರಂಗದಲ್ಲಿ ಬಹುಬೇಗ ಪ್ರಸಿದ್ಧಿ ಪಡೆದವರು. ಸಾಲಿಗ್ರಾಮ ಮೇಳದ ಕಾಲದಲ್ಲಿ ದಿವಂಗತ ಕಾಳಿಂಗ ನಾವಡರು ಇರುವಾಗ “ಗಧಾಯುದ್ಧ” ಪ್ರಸಂಗದಲ್ಲಿ ಜಲವಳ್ಳಿಯವರ ಭೀಮನಾದರೆ ಗೋಡೆಯವರ ಕೌರವ ಒಂದು ಕಾಲದಲ್ಲಿ ಇವರ ಜೋಡಿವೇಷ ರಂಗದಲ್ಲಿ ಮೆರೆದಿತ್ತು. ಚಿಟ್ಟಾಣಿಯವರ ಭೀಮನಾದರೆ ಇವರ ಕೌರವ ರಂಗಸ್ಥಳದಲ್ಲಿ ರಂಗೇರುತ್ತಿತು. ಕಾಳಿಂಗನಾವುಡರ ಕಂಚಿನ ಕಂಠದಿಂದ “ನಿನ್ನಯ ಬಲುವೇನೂ ಮಾರುತಿಯನ್ನು ನಿರೀಕ್ಷಿಪೇನು” “ಊಟದಲ್ಲಿ ನಿಪುಣ ನೀನು” “ಕಪಟನಾಟಕ ರಂಗ ಕುಪಿತವಿನ್ನೇನು ನಿನ್ನಂಗ ” ಎನ್ನುವ ಕುಣಿತಕ್ಕೆ ಗೋಡೆಯವರ ಅಭಿನಯ ಬಹಳ ಸೊಗಸಾಗಿತ್ತು. ಪ್ರೇಕ್ಷಕರು ನೋಡಲು ಮುಗಿಬೀಳುತ್ತಿದ್ದರು. ನಂತರ ಇಡುಗುಂಜಿ, ಪೆರ್ಡೂರು, ಮೂಲ್ಕಿ, ಶಿರಸಿ, ಮುಂತಾದ ಮೇಳಗಳ ತಿರುಗಾಟ ಮಾಡಿದ ಕೀರ್ತಿ ಶ್ರೀಯುತ ಗೋಡೆ ನಾರಾಯಣ ಹೆಗಡೆಯವರು.
“ಗಧಾಯುದ್ಧ” ಪ್ರಸಂಗದಲ್ಲಿ ಸಹಸ್ರ ಸುಯೋಧನ ಮೆರೆದಾಡಿದ ಕೀರ್ತಿ ಗೋಡೆಯವರದ್ದು. ಉಳಿದಂತೆ “ಬ್ರಹ್ಮಕಪಾಲ” ಪ್ರಸಂಗದ ಬ್ರಹ್ಮ, “ಕಾರ್ತ್ಯವೀರಾರ್ಜುನ” ಪ್ರಸಂಗದ ಚಿಟ್ಟಾಣಿಯವರ ಕಾರ್ತ್ಯವೀರ್ಯನಾದರೆ ಗೋಡೆಯವರ ರಾವಣನಾಗಿ ಮಿಂಚುತ್ತಿದ್ದರು. ಸುಂದರ ರಾವಣ, ಲವಕುಶ ಕಾಳಗದಲ್ಲಿ ಶ್ರೀರಾಮ, ಧಕ್ಷಯಜ್ಞ ಪ್ರಸಂಗದಲ್ಲಿ ಧಕ್ಷ, ಈಶ್ವರ, ಮುಂತಾದ ಪಾತ್ರಕ್ಕೆ ಜೀವ ತುಂಬಿದ ಕೀರುತಿ ಶ್ರೀಯುತ ಗೋಡೆಯವರದ್ದಾಗಿದೆ. ಅಲ್ಲದೆ ಹೊಸ ಪ್ರಸಂಗಗಳಾದ ನಾಗಶ್ರೀಯ ಶಿಥಿಲ, ರೂಪಶ್ರೀಯ ಬಾಹುಬಲಿ, ಚಲುವೆ ಚಿತ್ರಾವತಿಯ ಕೀರ್ತಿವರ್ಮ ಮುಂತಾದ ಪಾತ್ರಗಳಿಗೆ ಜೀವತುಂಬಿದರು.
ಶ್ರೀಯುತರಿಗೆ “2012ನೇ ಸಾಲಿನ ಕರ್ನಾಟಕ ರಾಜ್ಯ ಅಕಾಡಮಿ ಪ್ರಶಸ್ತಿ”, 2012ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ಕೊಡಲ್ಪಟ್ಟ “ಪೇಜಾವರ ಪ್ರಶಸ್ತಿ”, ಬೆಹರೈನ್ ಯಕ್ಷ ಕಲಾ ಸಂಘದಿಂದ “ಬೆಹರೈನ್ ಶಾಸ್ತ್ರ ಪ್ರಶಸ್ತಿ-2012” ಸ್ವರ್ಣವಲ್ಲಿ ಮಠದಿಂದ “ಸ್ವರ್ಣವಲ್ಲಿ ಯಕ್ಷರತ್ನ ಪ್ರಶಸ್ತಿ” ಬೆಂಗಳೂರಿನಲ್ಲಿ ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ 2014ರಲ್ಲಿ “ಸುವರ್ಣ ಸುಯೋಧನ” ಎಂಬ ಕಾರ್ಯಕ್ರಮ ಮಾಡಿ ಬೆಳ್ಳಿ ಗಧೆಯನ್ನು ಸಮರ್ಪಿಸಿದರು. ಹೀಗೆ ಸಾವಿರಕ್ಕೂ ಅಧಿಕ ಸನ್ಮಾನಗಳು ಅಭಿಮಾನಿಗಳು ರಂಗದಲ್ಲಿ ಮಾಡಿದ್ದರು.
ಶ್ರೀಯುತರು ಪ್ರಸ್ತುತ ಗೋಡೆ ಪ್ರಸಾದ ಹೆಗಡೆ ಮತ್ತು ಗೋಡೆ ಪ್ರಶಾಂತ ಹೆಗ್ದೆಯವರೊಂದಿಗೆ ತಮ್ಮ ಸ್ವಗೃಹ ಹಲಗೇರಿಯಲ್ಲಿ ಸುಖ ಜೀವನ ಸಾಗಿಸುತ್ತಿದ್ದರು. ಇವರ ಮಗನು ಗೋಡೆ ಪ್ರಸಾದ ಹೆಗಡೆ ಯಕ್ಷಗಾನ ಭಾಗವತರು ಹಾಗು ಇನ್ನೊಬ್ಬ ಮಗ ಗೋಡೆ ಪ್ರಶಾಂತ ಹೆಗಡೆ ಯಕ್ಷಗಾನ ವೇಷಧಾರಿ ಹಾಗು ಯಕ್ಷಗಾನ ಸಂಘಟಕರಾಗಿದ್ದರು. ಶ್ರೀಯುತರಿಗೆ ಒಂದು ದಿನ ನಮ್ಮ ಮನೆಯಲ್ಲಿ ಆತಿಥ್ಯ ಮಾಡುವ ಭಾಗ್ಯ ನಮಗಾಯಿತು. ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಇಲ್ಲದೆ ಸರಳಜೀವಿ, ನಿರ್ಗವಿ, ಸರಳ ಸಜ್ಜನ, ವ್ಯಕ್ತಿತ್ವ ಗೋಡೆಯುವರದ್ದಾಗಿದೆ. ಹೀಗೆ ಶ್ರೀಯುತರಿಗೆ ನನ್ನ ಆರಾಧ್ಯದೇವರಾದ ಜಗನ್ಮಾತೆ ಎನಿಸಿದ ಚಾರ ಮಹಿಷಮರ್ದಿನಿ ಅಮ್ಮನವರು ಹಾಗು ಕಲಾಮಾತೆ ಇನ್ನು ಹೆಚ್ಚಿನ ಆಯುಷ್ಯ ಸುಖ ಸಂಪತ್ತು ನೀಡಿ ಮುಂದಿನ ಬಾಳು ಹಸನಾಗಲಿ ಎಂಬ ಆಶಯವಾಗಿದೆ.
– ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.