(www.vknews.com) : ಕೊರೋನಾ ಲಾಕ್ಡೌನ್ ಕಾಲದಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಗಳನ್ನು ಅನುಭವಿಸುತ್ತಿರುವ ಕುಂಬ್ರ ರೇಂಜಿನಲ್ಲಿ ಸೇವೆಗೈಯ್ಯು ತ್ತಿದ್ದ ಮದ್ರಸಾ ಮುಅಲ್ಲಿಮರಿಗೆ ಸಹಾಯಧನ ವಿತರಣೆಯು ಕುಂಬ್ರ ರೇಂಜ್ ಮುಅಲ್ಲಿಂ ಹಾಗೂ ಮ್ಯಾನೇಜ್ಮೆಂಟ್ ಜಂಟಿ ಆಶ್ರಯದಲ್ಲಿ ಮಾಡನ್ನೂರಿನಲ್ಲಿ ನಡೆಯಿತು. ಮಾಡನ್ನೂರು ಮಖಾಂ ಶರೀಫ್ ವಠಾರದಲ್ಲಿ ಝಿಯಾರತ್ ನೊಂದಿಗೆ ಪ್ರಾರಂಭಗೊಂಡ ಸರಳ ಸಮಾರಂಭದಲ್ಲಿ, ರೇಂಜ್ ಮುಅಲ್ಲಿಂ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಪಮ್ಮಲೆ ಸ್ವಾಗತಿಸಿ ಸಹಾಯಧನ ನೀಡಲು ಸಹಕರಿಸಿದ ಮುಅಲ್ಲಿಂ-ಮೆನೇಜ್ಮೆಂಟ್ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಹಾಮಾರಿ ಕೋವಿಡ್ ಸಮುದಾಯದಲ್ಲಿ ತಂದ ಬದಲಾವಣೆ ಸಣ್ಣದಲ್ಲ. ಮನುಷ್ಯರು ಅನುಭವಿಸುತ್ತಿರುವ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಾಮಗಳನ್ನು ಬೀರಿ ಎಲ್ಲವೂ ಬುಡಮೇಲಾಗುತ್ತಿದೆ. ಅದರಂತೆ ಮುಸ್ಲಿಮರ ಮಧ್ಯೆ ಬಹಳಷ್ಟು ಗೌರವಯುತವಾಗಿ ನಡೆಯುತ್ತಿದ್ದ ಮದ್ರಸ ಎಂಬ ಮೌಲ್ಯಯುತ ಶಿಕ್ಷಣ ಕೇಂದ್ರಗಳು ಮುಚ್ಚಿ ತಿಂಗಳುಗಳೇ ಕಳೆದಿದೆ. ತರುವಾಯ ಕೆಲವು ಮಸೀದಿ ಮದ್ರಸಗಳು ಅಧ್ಯಾಪಕರನ್ನು ಉಳಿಸಿಕೊಂಡು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವೇತನಗಳನ್ನು ನೀಡುತ್ತಾ ಬಂದಿದ್ದು, ಸಾಧ್ಯವಿಲ್ಲದ ಕಡೆ ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೋನ ಯಾವಾಗ ತನ್ನ ಕದಂಬ ಬಾಹುಗಳನ್ನು ಚಾಚುವುದನ್ನು ನಿಲ್ಲಿಸಿ ಮದ್ರಸ ಮತ್ತೆ ಯಾವಾಗ ಆರಂಭಗೊಳ್ಳುತ್ತದೆ ಎಂಬುದಕ್ಕೆ ಖಚಿತತೆಯು ಸದ್ಯಕ್ಕೆ ದೊರಕುತ್ತಿಲ್ಲ. ಮುಂದಕ್ಕೆ ಮದ್ರಸಾ ಶಿಕ್ಷಣರಂಗದಲ್ಲಿ ದುರಂತಮಯ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ಧರ್ಮ ಬೋಧಕರಾದ ಮುಅಲ್ಲಿಮರಿಗೆ ಒಂದು ಹಂತದ ಭದ್ರತೆಯನ್ನು ನೀಡುವ ಉದ್ದೇಶದಿಂದ ಕುಂಬ್ರ ರೇಂಜ್ ಮಹತ್ಕಾರ್ಯವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ರೇಂಜ್ ವ್ಯಾಪ್ತಿಯಲ್ಲಿ ಪ್ರಸ್ತುತ ಉದ್ಯೋಗದಲ್ಲಿರುವ ಮುಅಲ್ಲಿ ಮರೇ ತಮಗೆ ಲಭಿಸುವ ವೇತನದ ಒಂದಂಶವನ್ನು ಮೀಸಲಿಟ್ಟಿದ್ದಾರೆ.
ಮ್ಯಾನೇಜ್ಮೆಂಟ್ ನಿಂದ ಸಂಪೂರ್ಣ ಬೆಂಬಲ
ಮೆನೇಜ್ಮೆಂಟ್ ಅಧ್ಯಕ್ಷರಾದ ಹಿರಾ ಅಬ್ದುಲ್ ಖಾದರ್ ಹಾಜಿಯವರ ನೇತೃತ್ವದ ಸಮಿತಿಯು ಸಂಪೂರ್ಣ ಬೆಂಬಲ ಘೋಷಿಸಿದ್ದು ಸಹಾಯಧನ ವಿತರಿಸುವ ಪ್ರತಿ ತಿಂಗಳಲ್ಲಿ ಯೂ ತನ್ನ ವೈಯುಕ್ತಿಕವಾಗಿ ದೇಣಿಗೆ ನೀಡುವುದಾಗಿ ತಿಳಿಸಿ ಸದ್ರಿ ತಿಂಗಳ ಸಹಾಯಧನವನ್ನು ರೇಂಜಿಗೆ ನೀಡಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ವರ್ಗಾವಣೆ : ಬುಶ್ರಾ ಅಬ್ದುಲ್ ಅಝೀಝ್ ರವರಿಂದ ಚಾಲನೆ
ರೇಂಜ್ ವ್ಯಾಪ್ತಿಯ ಸುಮಾರು 15ರಷ್ಟು ಅಧ್ಯಾಪಕರಿಗೆ ತಲಾ ಮೂರು ಸಾವಿರದಂತೆ ಸಹಾಯಧನವನ್ನು ವಿತರಿಸಲಾಯಿತು. ರೇಂಜ್ ಖಾತೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದರ ಮೂಲಕ ಮಾಡನ್ನೂರಿನ ಪ್ರಮುಖರೂ, ಪ್ರತಿಷ್ಠಿತ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷರೂ ಆದ ಬುಶ್ರಾ ಅಬ್ದುಲ್ ಅಝೀಝ್ ರವರು ಸಹಾಯಧನ ವಿತರಣೆಗೆ ಚಾಲನೆ ನೀಡಿದರು. ಶುಭಹಾರೈಸಿ, ಸಹಾಯಧನ ನೀಡಲು ಉತ್ತಮ ದೇಣಿಗೆ ನೀಡುವ ಮೂಲಕ ಸಹಕರಿಸಿದರು.
ಅದೇ ರೀತಿ ಮಾಡನ್ನೂರು ಮಸೀದಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್, ಮ್ಯಾನೇಜ್ಮೆಂಟ್ ಪ್ರಮುಖರಾದ ಸಿ.ಎ .ಅಬ್ದುಲ್ ಕಾದರ್ ಅಮ್ಚಿನಡ್ಕ, ಕೆ.ಕೆ. ಅಬ್ದುಲ್ ಖಾದರ್ ಅಮ್ಚಿನಡ್ಕ ಸಹಾಯಧನ ನೀಡಿ ಸಹಕರಿಸಿದರು. ಮಾಡನ್ನೂರಿನ ಅನಿವಾಸಿ ಗಲ್ಫ್ ಉದ್ಯಮಿಯಾದ ಅಶ್ರಫ್ ಯಾಕೂತ್ ರವರು ವಿಶೇಷ ಸಹಕಾರ ನೀಡಿದರು. ರೇಂಜ್ ಸಮಿತಿಯು ಸದ್ರಿ ಮೂರು ತಿಂಗಳ ಯೋಜನೆಯನ್ನು ಆಯೋಜಿಸಿದ್ದು ಅದಕ್ಕಾಗಿ ಚಟುವಟಿಕೆಗಳು ಮುಂದುವರಿಯುತ್ತಿದ್ದು ರೇಂಜ್ ವ್ಯಾಪ್ತಿಯ ಸರ್ವಜಮಾಅತರ ಸಹಕಾರವನ್ನು ರೇಂಜ್ ಅಧ್ಯಕ್ಷರಾದ ಸಂಶುದ್ದೀನ್ ದಾರಿಮಿ ಅವರು ಈ ಸಂದರ್ಭದಲ್ಲಿ ವಿನಂತಿಸಿದರು.
ವಿಶೇಷ ಪ್ರಾರ್ಥನೆ
ಕೋವಿಡ್ ಮಹಾಮಾರಿ ಯಿಂದ ರಕ್ಷೆ ಹೊಂದಲೂ ಕಾರುಣ್ಯ ಸೇವಾ ಚಟುವಟಿಕೆಗಳಿಗೆ ಸಹಕರಿಸಿದ ಸರ್ವರಿಗೂ ಮತ್ತು ಶಸ್ತ್ರಕ್ರಿಯೆಗೆ ಒಳಗಾಗಿ ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸುನ್ನಿ ಯುವಜನ ಸಂಘದ ರಾಷ್ಟ್ರೀಯ ಮಹಾಕಾರ್ಯದರ್ಶಿಯೂ, ಕಲ್ಲಿಕೋಟೆಯ ಹಿರಿಯ ಖಾಝಿಗಳೂ ಆದ ಸಯ್ಯಿದ್ ಮುಹಮ್ಮದ್ ಕೋಯ ತಂಙಲ್ ಜಮಲುಲ್ಲೈಲಿ ರವರು ಶೀಘ್ರ ಗುಣಮುಖರಾಗಲು ರೇಂಜ್ ಉಪಾಧ್ಯಕ್ಷರೂ ಮಾಡನ್ನೂರು ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ ಯವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಕಾರ್ಯಕ್ರಮದಲ್ಲಿ ರೇಂಜ್ ಮುಅಲ್ಲಿಂ ಪ್ರಮುಖರಾದ ಶುಕೂರ್ ದಾರಿಮಿ ಕಾವು, ಅಮೀರ್ ಅರ್ಷದಿ ಮಾಡನ್ನೂರು, ಮಹ್ ಮೂದ್ ಮುಸ್ಲಿಯಾರ್ ಅರೆಯಲಾಡಿ, ಅಬೂಬಕರ್ ಮುಸ್ಲಿಯಾರ್ ಮಾಡನ್ನೂರು, ಮಾಡನ್ನೂರು ಮಸೀದಿ ಕೋಶಾಧಿಕಾರಿ ಮೊಯಿದೀನ್ ಎಂ ಡಿ, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ಖಾಲಿದ್ ಬಿ.ಎಮ್, ಶಾಹುಲ್ ಹಮೀದ್ ಫೈಝಿ ಮಾಡನ್ನೂರು, ಮುಸ್ತಾಕ್ ಯಾಕೂತ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.