(www.vknews.com) : ಅದೊಂದು ವಿಶಾಲವಾದ ಕೋಣೆ. ಆಗಷ್ಟೇ ತರಿಸಿದ್ದ ಹತ್ತಿಪ್ಪತ್ತು ಹೊಸ ಮಂಚಗಳಲ್ಲಿ ಸ್ಟಿಕರ್ ಕೂಡ ಕಿತ್ತು ಹೋಗಿರದ ಬೆಡ್ ಮೇಲೆ ಹಾಸಲಾಗಿದ್ದ ಹೊದಿಕೆ. ನಮ್ಮ ಕಥಾ ನಾಯಕ ಬರುವ ಹೊತ್ತಿಗೆ ಒಂದಷ್ಟು ಮಂದಿ ಅದನ್ನೇರಿ ಒಂದೇ ಭಂಗಿಯಲ್ಲಿ ಕುಳಿತು ಸ್ವಲ್ಪ ಹೊತ್ತಿಗೆ ಗಾಯಾಳುಗಳಾಗುತ್ತಾರೆ. ಗಾಯದ ಸಣ್ಣ ಚುಕ್ಕೆಯೂ ಅಲ್ಲಿ ಕಂಡುಬರಲಿಲ್ಲ. ಅವರು ಹೇಳುವಂತೆ ಅದೊಂದು ಚಿಕಿತ್ಸಾ ಕೊಠಡಿ. ಪ್ರಾಜೆಕ್ಟರ್ ಮತ್ತು ಸ್ಕ್ರೀನ್ ಬೋರ್ಡ್ ಅಳವಡಿಸಲಾಗಿರುವ ವಿನೂತನ ಶೈಲಿಯ ಚಿಕಿತ್ಸಾ ಕೊಠಡಿ… ಅಲ್ಲಿ ಔಷಧಿಗಳನ್ನಿಡುವುದಕ್ಕಾಗಿ ಟೇಬಲ್ ಗಳಿರಲಿಲ್ಲ, ಗ್ಲುಕೋಸ್ ಸ್ಟಾಂಡ್ ಇರಲಿಲ್ಲ, ನೀರಿನ ಬಾಟಲಿಗಳಿರಲಿಲ್ಲ.. ಅಷ್ಟೇ ಯಾಕೆ ಒಬ್ಬನೇ ಒಬ್ಬ ಡಾಕ್ಟರ್ ಕೂಡ ಅಲ್ಲಿ ಕಾಣಲು ಸಿಗಲಿಲ್ಲ. ಹಾಗಂತ ಅವರಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಅಂತ ಕೇಳಿದರೆ, ಪ್ರಬುದ್ಧವಾದ ಉತ್ತರವೊಂದಿದೆ, ಆಧುನಿಕ ತಂತ್ರಜ್ಞಾನ ಬಳಸಿ ಗಾಯಾಳುಗಳಿಗೆ ಪ್ರಾಜೆಕ್ಟರ್ ಸಹಾಯದಿಂದ ಪಾಠ ಹೇಳಿಕೊಡುವ ಮೂಲಕ ಎಂದು. ಇದೆಲ್ಲವೂ ನಮ್ಮ ಭಾರತದಲ್ಲಷ್ಟೇ ಸಾಧ್ಯ ಎಂಬುದು ಕೂಡ ಗಮನಾರ್ಹ.
ಜೂನ್ 15 ರಂದು ಗುಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಕದನದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಐವತ್ತರಷ್ಟು ಮಂದಿ ಗಾಯಗೊಂಡಿದ್ದರು ಎಂಬ ಮಾಹಿತಿಯೂ ಬರುತ್ತಿದೆ. ಇದು ನಮ್ಮಲ್ಲಿ ಬಹಳ ಗಾಢವಾಗಿ ರೀತಿಯಲ್ಲೇ ಚರ್ಚೆಯಾದಾಗ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ‘ಚೀನಾ ಸೈನ್ಯವು ಭಾರತವನ್ನು ಆಕ್ರಮಿಸಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದು ಭಾರತೀಯ ಜನತೆಯಲ್ಲಿ ಇನ್ನಷ್ಟು ಸಂದೇಹಗಳಿಗೆ ಕಾರಣವಾಯಿತು. ಚೀನಾ ಭಾರತವನ್ನು ಆಕ್ರಮಿಸಿಲ್ಲವಾದರೆ ನಮ್ಮ ಸೈನಿಕರು ವೀರಮರಣವನ್ನಪ್ಪಿದ್ದು ಹೇಗೆ ಎನ್ನುವುದು ನಮ್ಮೆಲ್ಲರ ಪ್ರಶ್ನೆಯಾಗಿತ್ತು. ಆದರೆ, ಎಲ್ಲವನ್ನೂ ನಾಟಕೀಯವಾಗಿಯೇ ಮುಗಿಸುವ ಚಾಣಕ್ಯ ಬುದ್ಧಿಯಿಂದ ಇಲ್ಲಿ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರವಾಗಲಿಲ್ಲ.
ಈ ಚರ್ಚೆಗಳು ಪ್ರಚಲಿತದಲ್ಲಿರುವಾಗಲೇ ಚೀನಾ ದೇಶಕ್ಕೆ ಸಡ್ಡು ಹೊಡೆಯಬೇಕು ಅನ್ನುತ್ತಾ ಅತಿದೊಡ್ಡ ಮೂರ್ಖತನದ ನಿರ್ಧಾರಕ್ಕೆ ಬಂದ ಭಾರತ ಸರ್ಕಾರ, ಚೀನಾ ಮೂಲದ 59 ಆಪ್ ಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಾಯಿತು. ಆದರೆ, ಇದರಿಂದ ಚೀನಾ ಕ್ಕೆ ಏನು ನಷ್ಟವಾಯ್ತು ಅಂತ ಕೇಳಿದರೆ ಮೌನವೇ ಉತ್ತರ. ಸ್ವದೇಶಿ ಆಪ್ ಗಳನ್ನು ನಿರ್ಮಿಸಿ, ಅದರ ಬಳಕೆಗೆ ಜನರನ್ನು ಉತ್ತೇಜಿಸಲು ಕರೆಕೊಟ್ಟಾಯಿತು. ಈ ತನಕ ‘ಬಾಯ್ಕಾಟ್ ಚೀನಾ’ ಅಂತ ಬೊಬ್ಬಿರಿದವರೆಲ್ಲ ಸಾರ್ಥಕತೆಯ ನಿಟ್ಟುಸಿರು ಬಿಟ್ಟು, ತಮ್ಮ ಕೈಯ್ಯಲ್ಲಿರುವ ಚೀನಾ ನಿರ್ಮಿತ ಮೊಬೈಲ್ ಗಳಿಂದ ಚೀನೀ ಮೂಲ ಆಪ್ ಗಳನ್ನು ಅಳಿಸಿಹಾಕಿದ್ದು ಇತಿಹಾಸ. ವಾಸ್ತವತೆಯನ್ನು ಅರಿಯುವ ಗೋಜಿಗೆ ಯಾರೂ ತಯಾರಿರಲಿಲ್ಲ. ಭಾರತ ಚೀನಾವನ್ನು ಅದೆಷ್ಟು ಅವಲಂಭಿಸಿದೆ ಎಂಬುದು ಕೂಡ ಯಾರಿಗೂ ತಿಳಿಯಬೇಕಿರಲಿಲ್ಲ. ಎಲ್ಲದಕ್ಕೂ ನಾಯಕನ 8 ಗಂಟೆಯ ಭಾಷಣವಷ್ಟೇ ಸಾಕಿತ್ತು.
ಹೇಗೂ ಚೀನಾ ದೇಶಕ್ಕೆ ಏಟು ಕೊಟ್ಟಾಯಿತು. ಇನ್ನೇನು ಹೊಸ ಪ್ರಹಸನಕ್ಕೆ ಕಾಲಿಟ್ಟಿದ್ದರು. ಕದನ ನಡೆದ ಗುಲ್ವಾನ್ ಕಣಿವೆಯಿಂದ ಬಹುದೂರ ಇರುವ ಲಡಾಖ್ ನ ಲೇಹ್ ಎಂಬಲ್ಲಿಗೆ ಪ್ರಧಾನಿಗಳು ಭೇಟಿ ಕೊಟ್ಟು, ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ‘ಲಡಾಕ್ ನಲ್ಲಿ ಭಾರತದ ಪ್ರಾಂತ್ಯದ ಮೇಲೆ ಕಣ್ಣಿಟ್ಟವರಿಗೆ ಸರಿಯಾದ ಪ್ರತ್ಯುತ್ತರ ನೀಡಲಾಗಿದೆ’ ಎಂದು ಹೇಳಿಯೇ ಹೊರಡಿದ್ದು ಕೂಡ. ಆದರೆ, ಲಡಾಖ್ ನಲ್ಲಿ ಅತ್ಯಂತ ಗುಪ್ತವಾಗಿ ಸಮಾಲೋಚನೆ ನಡೆಸಿದ್ದು ಭಾರತದ ಪ್ರಧಾನಿಗಳ ಧೈರ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಯಿತು. ವಿಶೇಷವೇನೆಂದರೆ, ಆ ಗುಪ್ತ ಸಮಾಲೋಚನೆಯಿಂದಲೇ ಚೀನಾ ನಡುಗಿದೆ ಅನ್ನುವುದು. (ಇದಕ್ಕೂ ಮುನ್ನ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಕೂಡ ಇದೇ ರೀತಿ ಸೈನಿಕರ ಸಮಸ್ಯೆಯನ್ನು ಆಲಿಸಲು ನೇರವಾಗಿ ತೆರಳಿದ್ದರು. ಆದರೆ, ಅವರು ಇದನ್ನು ಅಷ್ಟಾಗಿ ಪ್ರಚಾರ ಪಡಿಸಿರಲಿಲ್ಲ.)
ಆ ನಂತರ ನಡೆದಿದ್ದೆಲ್ಲವೂ ಪವಾಡ..! ಅದನ್ನೇ ಮೇಲೆ ಮೊದಲೇ ವಿವರಿಸಿದ್ದು. ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯ ಲಡಾಖ್ ಭೇಟಿಯ ಸಂದರ್ಭದಲ್ಲಿ ಪಾರ್ಟಿ ಹಾಲ್ ಆಗಿದ್ದ ಆ ಕೋಣೆ, ಪ್ರಧಾನಿಗಳು ತೆರಳಿದಾಗ ಆಸ್ಪತ್ರೆಯಾಗಿ ಬದಲಾಗಿದ್ದು, ಚಿಕಿತ್ಸೆ ನೀಡುತ್ತಿರುವ ಯಾವುದೇ ಸುಳಿವು ಅಲ್ಲಿ ಕಾಣದಿರುವುದು, ಮಂಚದಲ್ಲಿ ಯೋಗಾಸನಕ್ಕೆ ಕುಳಿತಂತೆ ಕುಳಿತು ಫೋಟೋ ಗೆ ಪೋಸ್ ಕೊಟ್ಟವರಲ್ಲಿ ಯಾರಲ್ಲೂ ಗಾಯದ ಗುರುತು ಕಾಣಿಸದಿದ್ದದ್ದು.. ಒಟ್ಟಿನಲ್ಲಿ ಮೂರ್ಖತನದ ಪರಮಾವಧಿಯೆಂದೇ ಹೇಳಬಹುದು. ಮುಗ್ಧ ಜನರನ್ನು ನಂಬುವಂತೆ ಮಾಡಲು ಅದೇನೆಲ್ಲಾ ಕಸರತ್ತುಗಳು ಮಾಡಬಹುದೋ ಅವೆಲ್ಲವನ್ನೂ ಇಲ್ಲಿ ಮಾಡಿದ್ದರು.
ಈ ಅಭಿನಯವನ್ನು ಸೆರೆಹಿಡಿಯಲು ಕ್ಯಾಮರಾಗಳು ಹಿಂಬಾಲಿಸುತ್ತಲೇ ಇತ್ತು. ನಂತರ ಅದನ್ನು ಬಹಳ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಯಿತು. ಕೊರೋನಾ ವಿರುದ್ಧ ಹೋರಾಟದಲ್ಲಿ ‘ರಣಕಲಿ, ರಣತಂತ್ರ, ರಣವಿಕ್ರಮ..’ ಎನ್ನುತ್ತಾ ಬೊಗಳೆಬಿಟ್ಟವರು ಇಲ್ಲೂ ಬಿಡಲಿಲ್ಲ. ಹೊಸ ಹೊಸ ರೀತಿಯಲ್ಲಿ ನಿರೂಪಣೆ ನಡೆಸಿ, ಮೋದಿ ಭಕ್ತ ಚಾನಲ್ ಗಳು ಚೀನಾ ವಿರುದ್ಧ ಯುದ್ಧ ಅನ್ನುತ್ತಾ ಡಂಗುರ ಸಾರಿತು. ವಾಸ್ತವದಲ್ಲಿ, 59 ಆಪ್ ಗಳನ್ನು ನಿಷೇಧಿಸುವುದಲ್ಲದೆ ಬೇರೇನೂ ಆ ರಣವಿಕ್ರಮನಿಂದ ಸಾಧ್ಯವಿಲ್ಲ ಎಂಬುದನ್ನು ಅರಿಯಲು ಭಾರತೀಯ ಜನತೆಗೆ ಕಷ್ಟವಾಗಲಿಲ್ಲ.
ಭಾರತೀಯರು ಇನ್ನೂ ಕೇಳುತ್ತಿದ್ದಾರೆ.., ಅಕ್ರಮವೇ ನಡೆಯದಿದ್ದರೆ ನಮ್ಮ ಇಪ್ಪತ್ತರಷ್ಟು ಸೈನಿಕರು ಹೇಗೆ ನಮಗೆ ನಷ್ಟವಾಯಿತು? ಚೀನೀ ಯೋಧರು ಗಡಿ ದಾಟಿ ಬರದಿದ್ದರೆ ನಮ್ಮ ಸೇನೆ ಯಾಕಾಗಿ ಚೀನಾ ಗಡಿ ದಾಟಿತು? ನೈಜ ಗಾಯಾಳುಗಳು ಎಲ್ಲಿದ್ದಾರೆ? ಘಟನೆ ನಡೆದ ಸಮಯದಲ್ಲಿ ಕೆಲವು ಸೈನಿಕರು ನಾಪತ್ತೆಯಾಗಿದ್ದಾರೆಂಬ ಸುದ್ದಿ ನಿಜವೇ? ಹೀಗೆ ನಮ್ಮ ದೇಶದ ಸೈನಿಕರನ್ನು ಪ್ರೀತಿಸುವ, ಗೌರವಿಸುವ ನಿಷ್ಠಾವಂತ ಭಾರತೀಯರಲ್ಲಿ ಹಲವಾರು ಪ್ರಶ್ನೆಗಳಿವೆ. ಉತ್ತರಿಸಲು ಐವತ್ತಾರಿಂಚಿನ ಎದೆಯ ನಾಯಕನಿಲ್ಲ.
ಈಗ ಸರಕಾರಕ್ಕೆ ಎಲ್ಲದರಲ್ಲೂ ರಾಜಕೀಯ ಲಾಭ ಪಡೆಯಬೇಕು ಅಷ್ಟೇ. ಸಾವಿನಲ್ಲೂ, ರೋಗದಲ್ಲೂ, ಯುದ್ಧದಲ್ಲೂ.. ಕೊರೋನಾ ತನ್ನ ರುದ್ರವತಾರ ತೋರ್ಪಡಿಸಲು ಶುರುಮಾಡಿದೆ. ಹೆಚ್ಚಿನ ಕಡೆಗಳಲ್ಲಿ ನಿಯಂತ್ರಣ ಕೈಬಿಟ್ಟು ಹೋಗಿದೆ. ಲಾಕ್ಡೌನ್ ಸಡಿಲಗೊಳಿಸಿದರೂ, ಜನಜೀವನ ಭೀತಿಯಲ್ಲಿದೆ. ಸೋಂಕಿತರ ಶುಶ್ರೂಷೆಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಿ ಕೊಡಲಾಗುತ್ತಿಲ್ಲ. ವೆಂಟಿಲೇಟರ್ ಗಳ ಕೊರತೆ ಕಾಡುತ್ತಿದೆ. ದೇಶವು ಅತ್ಯಂತ ಸಂದಿಗ್ಧ ಪರಿಸ್ಥಿತಿಯನ್ನು ಮುಂದೆ ನೋಡುತ್ತಿದ್ದರೂ ಸರಕಾರ ಬರೀ ಭಾಷಣಕ್ಕಷ್ಟೇ ಸೀಮಿತಗೊಂಡಿದೆ. ಒಂದು ಕಡೆ ರೋಗದ ಹೆಸರಿನಲ್ಲಿ ದೊಡ್ಡ ಹಗರಣವೇ ನಡೆಯುತ್ತಿದ್ದರೂ ಮಾತೆತ್ತಲು, ಪ್ರಶ್ನಿಸಲು ಯಾರೂ ಇಲ್ಲ. ಎಲ್ಲವೂ ರಾಜಕಾರಣಕ್ಕಾಗಿ..
ಇವೆಲ್ಲದರ ನಡುವೆಯೂ ದೇಶ ಸೈನಿಕರ ಹೆಸರಲ್ಲೂ ಪ್ರಹಸನ ನಡೆಸುತ್ತಿದೆ ಎನ್ನುವುದು ದೊಡ್ಡ ದುರಂತ..! ದೇಶವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಲಾಗದೆ, ಸುಳ್ಳು ಮಾತಿನ ತಂತ್ರದಿಂದ ದೇಶದ ಜನತೆಯನ್ನು ಮತ್ತೆ ಮತ್ತೆ ಮೂರ್ಖರನ್ನಾಗಿಸುತ್ತಿದ್ದಾರೆ. ಅದರೆಡೆಯಲ್ಲೊಬ್ಬ ದೇಶ ‘ವಿಶ್ವಗುರು’ ಆಗುವುದನ್ನು ನೋಡಿ ಆನಂದಿಸುತ್ತಿದ್ದಾನೆ. ನಾಟಕದ ರಾಜಕೀಯದಲ್ಲಿ ಸಾಮಾನ್ಯ ಜನರೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡುವಲ್ಲಿಗೆ ದೇಶ ಬಂದು ನಿಂತಿದೆ. ದೇಶವನ್ನಾಳುವ ಈ ಪರಿ ಇದೇ ರೀತಿಯಲ್ಲಿ ಮುಂದುವರಿದರೆ, ಮುಂದಕ್ಕೆ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ನಡೆದರೂ ಅಚ್ಚರಿಯಿಲ್ಲ.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.