ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಈ ವ್ಯಕ್ತಿ ಉತ್ತರ ಪ್ರದೇಶದ ಮಾವೂ ಜಿಲ್ಲೆಯವರು. ಹೆಸರು ಗೋಬಾರಿ ಸಹಾನಿ. ಕಳೆದ ಎರಡು ತಿಂಗಳಿನಿಂದ ಅಬುಧಾಬಿ ಪಾರ್ಕೊಂದರಲ್ಲಿ ದಿನಕಳೆಯುತ್ತಿದ್ದರು. ಕೆಸಿಎಫ್ ಸನ್ನಧ್ಧ ಸಂಘದ ಸದಸ್ಯರಾದ ಎನ್.ಕೆ ಸಿದ್ಧೀಕ್ ಅಳಿಕೆ ಈ ವಿಷಯವನ್ನು ಕೆಸಿಎಫ್ ಅಬುಧಾಬಿ ಸನ್ನದ್ದ ಸಂಘ ಗ್ರೂಪ್ ನಲ್ಲಿ ಚರ್ಚೆಗೆ ಹಾಕಿದರು. ನಂತರ ನಡೆದದ್ದೆಲ್ಲವೂ ಅಧ್ಬುತ…!!!
ಎನ್.ಕೆ ಸಿದ್ಧೀಕ್ ರವರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಬುಧಾಬಿ ಕೆಸಿಎಫ್ ನ ನಾಯಕರಾದ ಮುಹಮ್ಮದ್ ಕುಂಞಿಯವರು ಗೋಬಾರಿ ಸಹಾನಿ ಯವರನ್ನು ಭೇಟಿಯಾದರು. ಅತ್ಯಂತ ಶೋಚನೀಯ ಅವಸ್ಥೆಯಲ್ಲಿ ದಿನಕಳೆಯುತ್ತಿದ್ದ ಗೊಬಾರಿ ಸಹಾನಿಯವರ ಬದುಕಿನ ಯಶೋಗಾಥೆ ನಿಜಕ್ಕೂ ಕಣ್ಣೀರು ತರಿಸುವಂತದ್ದು. ತನ್ನ ದುಖವನ್ನು ತೋಡಿಕೊಳ್ಳಲು ಯಾರೂ ಇಲ್ಲದೆ ಮೌನವೇ ಮಾತಾಗಿದ್ದ ಗೋಬಾರಿ ಸಹಾನಿಯವರಿಗೆ ಆಪತ್ಭಾಂದವನಾಗಿ ತಲುಪಿದ್ದು ಭರವಸೆಯ ಬೆಳಕಾದ ಕೆಸಿಎಫ್ ಅಬುಧಾಬಿ ನಾಯಕ ಮುಹಮ್ಮದ್ ಕುಂಞಿಯವರು.
ಗೋಬಾರಿ ಸಹಾನಿಯವರ ಹತ್ತಿರ ತಲುಪಿದ ಮುಹಮ್ಮದ್ ಕುಂಞಿಯವರು ಪ್ರೀತಿಯಿಂದ ಮಾತನಾಡಿಸಿದರು. ವಿಸಿಟ್ ವೀಸಾದಲ್ಲಿ ಕರೆಸಿ ಮೂರು ಲಕ್ಷ ನೀಡಿದರೆ ವೀಸಾ ನೀಡಲಾಗುವುದು ಎಂಬ ವಂಚನೆಯ ಜಾಲಕ್ಕೆ ಸಿಲುಕಿದ ವಿಷಯವನ್ನು ದುಃಖದಿಂದಲೇ ವಿವರಿಸಿದರು. ನಂತರ ಸ್ವಲ್ಪ ತಿಂಗಳುಗಳ ಕಾಲ ಯಾವುದೋ ಅರಬಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ನಂತರ ಇವರ ಬದುಕು ಅಬುಧಾಬಿ ಪಾರ್ಕಿನಲ್ಲೇ ಸಾಗುತ್ತಿತ್ತು. ಗರಿಗೆದರಿದ ಕೂದಲು ಒಂದೇ ಜೊತೆ ಬಟ್ಟೆ ಧರಿಸಿ ಹಸಿವಿನಿಂದ ಬಳಲಿ ಬೆಂಡಾದ ಶರೀರ ಎರಡು ತಿಂಗಳಿನಿಂದ ಪಾರ್ಕಲ್ಲೇ ದಿನಕಳೆಯುತ್ತಿದ್ದರು. ಉಮ್ಮಳಿಸಿ ಬರುತ್ತಿರುವ ದುಃಖವನ್ನು ಅದುಮಿಟ್ಟುಕೊಂಡು ಎಲ್ಲವನ್ನೂ ವಿವರಿಸಿದರು.
ಸಾಂತ್ವಾನದ ಮಾತಿನ ಮೂಲಕ ಮುಹಮ್ಮದ್ ಕುಂಞಿಯವರು ಸಂತೈಸಿದರು. ಅವರ ಬದುಕಿನ ಗಂಟು ಬಿಚ್ಚಿದಾಗ ಬರೀ ನೋವುಗಳೇ ತುಂಬಿಕೊಂಡಿತ್ತು. ನೀವು ಹಸಿವಿಗೆ ಏನು ಮಾಡುತ್ತೀರಿ? ಬಸ್ಟಾಂಡ್ ಲ್ಲಿ ಮಲಗುತ್ತಿರುವ ಸಂದರ್ಭದಲ್ಲಿ ಪಾಲಕ್ಕಾಡ್ ಮೂಲದ ಶರೀಫ್ ಎಂಬ ವ್ಯಕ್ತಿಯು ಊಟ ನೀಡುತ್ತಿದ್ದರು. ಈಗ ಅಲ್ಲಿ ಇಲ್ಲಿ ಏನಾದರೂ ಸಿಕ್ಕಿದರೆ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಸ್ನಾನ ಮಾಡುವುದಿಲ್ಲವೇ ಎಂದು ಕೇಳಿದಾಗ ಯಾವಾಗಲಾದರೊಮ್ಮೆ ಸ್ನಾನ ಮಾಡುತ್ತೇನೆ. ಬಟ್ಟೆ ಬರೆ ಏನಾದರೂ ಇದ್ಯಾ? ಉಟ್ಟ ಬಟ್ಟೆಯನ್ನು ತೋರಿಸಿ ಇದೇ ಒಂದು ಜೊತೆ ಇದೆ ಎಂದು ಹೇಳಿದರು. ಸಿಐಡಿ/ಪೋಲಿಸ್ ಯಾರೂ ನಿಮ್ಮನ್ನು ನೋಡಿಲ್ಲವೇ? ಹೌದು ನೋಡಿದ್ದಾರೆ. ಅವರು ಬಂದಾಗ ಆ ಮೇಲ್ಸೇತುವೆ ಅಡಿಯಲ್ಲಿ ಹೋಗಿ ಮಲಗಿ ಅಡಗಿಕೊಳ್ಳುತ್ತೇವೆ ಎಂದು ಹೇಳಿದರು. ಅತ್ಯಂತ ಶೋಚನೀಯ ದುಸ್ಥಿತಿಯನ್ನು ಕಂಡು ಮರುಗಿದ ಕುಞಿಚ್ಚರವರು ನಿಮಗೆ ಸಹಾಯ ಮಾಡುವುದಾಗಿ ಯಾರೂ ಸಂಪರ್ಕಿಸಲಿಲ್ಲವೇ ಎಂದು ಕೇಳಿದರು. ಆಗ ಯಾರೋ ಒಬ್ಬರು ಬರೆದುಕೊಟ್ಟ ಕಾಗದವೂಂದನ್ನು ಕೈಗೆ ನೀಡಿದರು. ಅದರಲ್ಲಿರುವ ನಂಬರ್ ಗೆ ಕರೆ ಮಾಡಿದಾಗ ಅದು ಗುಜರಾತ್ ಮೂಲದ ಗೋಲ್ಡ್ ವ್ಯಾಪಾರಿ ತುಷಾರ್ ಎಂಬವರಾಗಿದ್ದರು. ಅವರಲ್ಲಿ ಕರೆ ಮಾಡಿ ವಿಷಯ ತಿಳಿಸಿದಾಗ ಈಗಲೇ ಕರೆದುಕೊಂಡು ಬನ್ನಿ ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಕ್ಷಣವೇ ಅವರನ್ನು ಎತ್ತಿ ಕಾರಲ್ಲಿ ಕೂರಿಸಿ ತುಷಾರ್ ಬಳಿ ಹೋದೆವು. ಮೊದಲೇ ಪರಿಚಯಸ್ಥರಾಗಿದ್ದ ತುಷಾರ್ ರವರೊಂದಿಗೆ ವಿಷಯದ ಗಂಭೀರತೆಯನ್ನು ವಿವರಿಸಿದರು. ಎಲ್ಲವನ್ನೂ ಸಮಾಧಾನದಿಂದಲೇ ಆಲಿಸಿ ತಕ್ಷಣವೇ ಅವರನ್ನು ಸಲೂನ್ ಗೆ ಕಳುಹಿಸಿ ಕೊಟ್ಟು ತಲೆಕೂದಲು ಕತ್ತರಿಸುವಂತೆ ಹೇಳಿ ಹೊಸ ಬಟ್ಟೆಯನ್ನು ತೊಡಿಸಿದರು. ಉಳಿಯಲು ರೂಮ್ ವ್ಯವಸ್ಥೆ ಮಾಡಿಕೊಟ್ಟ ತುಷಾರ್ ಬಾಯ್ ರವರು ಹೊಟ್ಟೆ ತುಂಬ ಅನ್ನ ನೀಡಿ ಹಸಿವು ನೀಗಿಸಿದರು. ಇಂಡಿಯನ್ ಎಂಬಸಿ ಮುಖಾಂತರ ಸಂಪರ್ಕಿಸಿ ನಾಳೆ ಬೆಳಿಗ್ಗೆ 08/07/2020 ರಂದು ಅಬುದಾಬಿಯಿಂದ ಹೊರಡುವ ಲಕ್ನೋ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿಕೊಟ್ಟರು.
ಮುಹಮ್ಮದ್ ಕುಂಞಿಯವರಿಗೆ ಕರೆಮಾಡಿ ಅಭಿನಂದಿಸಿದ ತುಷಾರ್ ರವರು ನಿಮ್ಮಂತ ಸಮಾಜ ಸೇವಕರಿಂದಾಗಿ ನಮಗೂ ಬಡವರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಬಡಪಾಯಿ ಜೀವವೊಂದು ಕುಟುಂಬ ಸೇರುವಂತೆ ಮಾಡಿದ ನಿಮ್ಮ ಸೇವೆ ನಿಜಕ್ಕೂ ಶ್ಲಾಘನೀಯ. ನಾನು ನನ್ನ ಸ್ನೇಹಿತರೊಂದಿಗೆ ಚರ್ಚಿಸಿ ಒಂದು ಲಕ್ಷ ರೂಪಾಯಿಯನ್ನು ಹೊಂದಿಸಿ ಅವರಿಗೆ ಕೊಡಲು ತಿರ್ಮಾನಿಸಿದ್ದೇವೆ ಎಂಬ ಸಂತೋಷದ ವಾರ್ತೆಯನ್ನು ತಿಳಿಸಿದಾಗ ನಿಜಕ್ಕೂ ಅದ್ಭುತವಾಯಿತು. ಒಂದು ಲಕ್ಷ ರೂಪಾಯಿಯ ಚೆಕ್ ಕೂಡ ನೀಡಿದರು. ಕೆಸಿಎಫ್ ನ ಸೇವೆ ಅನಿವಾಸಿ ಭಾರತೀಯರ ಕಣ್ಣೀರು ಒರೆಸುವುದರಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದೆ. ಇನ್ನು ಮುಂದೆಯೂ ಕೂಡ ಕಾರ್ಯಾಚರಿಸಲು ಅಲ್ಲಾಹು ತೌಫೀಕ್ ನೀಡಲಿ ಆಮೀನ್.
✍️Nizzu4ever👁️ ಉರುವಾಲು ಪದವು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.