ತುಮಕೂರು(ವಿಶ್ವಕನ್ನಡಿಗ ನ್ಯೂಸ್): ಆದೋನಿಯ ಶ್ರೀ ಶಾರದಾ ದತ್ತಪೀಠಂನ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮಿಗಳ 47 ನೇ ಚಾತುರ್ಮಾಸ್ಯವು ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆರಂಭಗೊಂಡಿದೆ. ಸೆಪ್ಟೆಂಬರ್ 2 ರವರೆಗೆ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿದ್ದಾರೆ.
ಈ ಅವಧಿಯಲ್ಲಿ ಧಾರ್ಮಿಕ ಪೂಜಾದಿಗಳು, ರುದ್ರಾಭಿಷೇಕ, ಶ್ರೀಚಕ್ರಪೂಜೆ ಹಾಗೂ ಪಾದಪೂಜೆ ಮೊದಲಾದ ಕಾರ್ಯಕ್ರಮಗಳು ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ನಡೆಯಲಿವೆ.
ಇಂಜಿನಿಯರಿಂಗ್ ಪದವಿಯ ಜೊತೆಗೆ ಹಲವು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಶೈಕ್ಷಣಿಕ ಪದವಿಗಳನ್ನು ಪಡೆದುಕೊಂಡು ಬಹುಭಾಷಾ ವಿದ್ವಾಂಸರಾಗಿ ಹಾಗೂ ಶಾಸ್ತ್ರೀಯ ಸಂಗೀತದಲ್ಲೂ ವಿದ್ವಾಂಸರಾಗಿ ನಂತರದಲ್ಲಿ ಸಂನ್ಯಾಸಿಗಳಾಗಿ ದೇಶ, ವಿದೇಶಗಳಲ್ಲಿ ಸಂಚರಿಸಿ ಆಧ್ಯಾತ್ಮಿಕ ಬೋಧನೆ ಮಾಡಿದ್ದಾರೆ. ಶ್ರೀಗಳು ಮೂಲತಃ ಇಂಜಿನಿಯರಿಂಗ್ ಪದವೀಧರರು. ಮೈಸೂರಿನಲ್ಲಿ ಬಿ.ಎ., ಬಿ.ಇಡಿ, ಹೈದರಾಬಾದ್ ಉಸ್ಮಾನಿಯಾ ವಿ.ವಿ.ಯಲ್ಲಿ ಸಮಾಜಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಸಂಸ್ಕøತದಲ್ಲಿ ಪ್ರತ್ಯೇಕ ಎಂ.ಎ. ಪದವಿಗಳನ್ನು ಪಡೆದಿದ್ದಾರೆ.
ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸಾ ವಿಧಾನಗಳ ಬಗ್ಗೆ ಆಸಕ್ತಿ ಹೊಂದಿ ಅದರಲ್ಲೂ ಶಿಕ್ಷಣ ಪಡೆದಿದ್ದಾರೆ. ತೀರಾ ಇತ್ತೀಚೆಗೆ ಹೈದರಾಬಾದ್ನಲ್ಲಿ ತತ್ತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಶ್ರೀಗಳು, ಇಂಗ್ಲೀಷ್ ಸಾಹಿತ್ಯದಲ್ಲೂ ಎಂ.ಎ. ಪದವಿಯನ್ನು ಪಡೆದುಕೊಂಡಿದ್ದು, ಶೈಕ್ಷಣಿಕವಾಗಿ ವಿದ್ವಾಂಸರೆನಿಸಿದ್ದಾರೆ. ಇಷ್ಟೆಲ್ಲ ಸಾಧನೆಗಳ ಜೊತೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಸಾಧನೆ ಮಾಡಿರುವ ಶ್ರೀಗಳು, ವೀಣೆ, ಕೊಳಲು, ಮೃದಂಗ ಮತ್ತು ಮೋರ್ಚಿಂಗ್ ವಾದನದಲ್ಲೂ ಪರಿಣತಿ ಹೊಂದಿರುವುದು ವಿಶೇಷವಾಗಿದೆ.
ತಮ್ಮ 38 ನೇ ವಯಸ್ಸಿನಲ್ಲಿ ಸಂನ್ಯಾಸ ದೀಕ್ಷೆ ಪಡೆದು ಶಾರದಾ ದತ್ತಪೀಠಂನ ಪೀಠಾಧಿಪತಿಗಳಾದ ಶ್ರೀಗಳು, ಸಂನ್ಯಾಸಿಗಳಾದ ಬಳಿಕ ಇದೀಗ 47 ನೇ ವರ್ಷದ ಚಾತುರ್ಮಾಸ್ಯವನ್ನು ತುಮಕೂರು ನಗರದಲ್ಲಿ ಆಚರಿಸುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.