ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕಳೆದ ಕೆಲವು ತಿಂಗಳುಗಳಿಂದ ಜಗತ್ತನ್ನು ತಲ್ಲಣಗೊಳಿಸಿದ ಕೊರೋನಾ ವೈರಸ್ ನ ಅಟ್ಟಹಾಸ ನಮ್ಮ ಭಾರತದಲ್ಲಿ ಈಗೀಗ ತೀವ್ರಗೊಳ್ಳುತ್ತಿದೆ. ಸುಮಾರು ಎಂಟೂವರೆ ಲಕ್ಷದಷ್ಟು ಮಂದಿಗೆ ಸೋಂಕು ಅಂಟಿಕೊಂಡಿದ್ದು, ಐದು ಲಕ್ಷದಷ್ಟು ಜನರು ಗುಣಮುಖರಾಗಿದ್ದಾರೆ ಜೊತೆಗೆ ಈ ತನಕ 22,674 ಮಂದಿ ಸೋಂಕಿನಿಂದಾಗಿ ಮರಣವನ್ನಪ್ಪಿದ್ದಾರೆ ಎಂಬ ಮಾಹಿತಿಯಿದೆ. ಕೋವಿಡ್-೧೯ ಮೊದಮೊದಲು ಚೀನಾ, ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಹೆಚ್ಚಾಗಿ ಭೀತಿ ಹುಟ್ಟಿಸಿದ್ದರೂ, ಬಹುತೇಕ ರಾಷ್ಟ್ರಗಳು ಇದನ್ನು ತಕ್ಕಮಟ್ಟಿಗೆ ಮೆಟ್ಟಿನಿಲ್ಲುವಲ್ಲಿ ಸಫಲವಾಗಿದೆ. ಆದರೆ ಭಾರತ ಅತಂತ್ರ ಸ್ಥಿತಿಯತ್ತ ಮುನ್ನುಗ್ಗುತ್ತಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಕೊರೋನಾ ಸೋಂಕಿತ ಮೂರನೇ ರಾಷ್ಟ್ರವಾಗಿ ಭಾರತ ಮುಂದುವರಿಯುತ್ತಿದೆ.
ದೇಶದಲ್ಲಿ 500-1000 ಸೋಂಕು ಪ್ರಕರಣ ಕಂಡುಬಂದಾಗ ಸಂಪೂರ್ಣ ಲಾಕ್ಡೌನ್ ಹೇರುವ ಮೂಲಕ ವೈರಸ್ ನಿಯಂತ್ರಣಕ್ಕೆ ಶ್ರಮಿಸಲಾಗಿತ್ತು. ಆದರೆ, ಕ್ರಮೇಣ ಪ್ರಕರಣಗಳು ಹೆಚ್ಚುತ್ತಿದ್ದಂತೆ ನಿಯಂತ್ರಣಗಳನ್ನು ಸಡಿಲಗೊಳಿಸಿದ್ದೇ ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಕಾರಣವಾಗಿದೆ ಎಂಬುದು ಸತ್ಯ ಸಂಗತಿ. ಕೊರೋನಾ ವಿರುದ್ಧದ ಸಮರಕ್ಕೆ ಪ್ರಾರಂಭದಲ್ಲಿ ಕಂಡುಬಂದ ಮುನ್ನೆಚ್ಚರಿಕೆಗಳು ಸಂಖ್ಯೆ ಏರುತ್ತಿದ್ದಂತೆ ಕಡಿಮೆಯಾಗತೊಡಗಿದೆ. ದೇಶದಲ್ಲಿ ಸೋಂಕು ಈಗಲೂ ಬಹಳ ವ್ಯಾಪಕವಾಗಿ ಹರಡುತ್ತಿದ್ದು, ಇನ್ನೂ ದೊಡ್ಡ ಮಟ್ಟದಲ್ಲಿ ತೊಂದರೆಯನ್ನುಂಟು ಮಾಡಬಹುದೋ ಎಂಬ ಆತಂಕ ಶುರುವಾಗಿದ್ದರೂ, ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ಪಾಲಿಸುತ್ತಿಲ್ಲ ಮತ್ತು ಸರಕಾರ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂಬ ವಿಚಾರ ಮನದಟ್ಟಾಗುತ್ತಿದೆ. ಆರಂಭದಲ್ಲಿ ಕೇಂದ್ರ ಸರಕಾರ ಸರಿಯಾದ ಸವಲತ್ತುಗಳನ್ನು ಮಾಡದೇ, ಸೋಂಕು ನಿಯಂತ್ರಣದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸದೇ, ತಟ್ಟೆ, ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಹೇಳುವ ಮೂಲಕ ಮೂರ್ಖ ನಿರ್ಧಾರಗಳಿಂದಾಗಿ, ಬೇಜವಾಬ್ದಾರಿತನದಿಂದಾಗಿ ಇವತ್ತು ದೇಶ ಇಷ್ಟು ದೊಡ್ಡ ಮಟ್ಟದ ದುರಂತಕ್ಕೆ ಬಂದು ತಲುಪಿದೆ.
ನಮ್ಮ ಕರ್ನಾಟಕದಲ್ಲೂ ದಿನೇ ದಿನೇ ಸೋಂಕು ಎರಡರಿಂದ ಮೂರು ಸಾವಿರ ತನಕ ಪ್ರಕರಣಗಳು ದಾಖಲಾಗುತ್ತಿದ್ದರೂ, ಪೂರಕವಾದ ನಿಯಂತ್ರಣಾ ಕ್ರಮಗಳು ನಡೆಯುತ್ತಿಲ್ಲ. ಅದರಲ್ಲೂ ಈಗ ಬೆಂಗಳೂರು ಅತಂತ್ರ ಸ್ಥಿತಿಯಲ್ಲಿದೆ. ಈಗಾಗಲೇ ಆರೋಗ್ಯ ಅಧಿಕಾರಿಗಳು, ವೈದ್ಯರೆಲ್ಲರೂ ಕೈಕಟ್ಟಿ ಕೂರುವಂಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೊದನೆಯದಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಲೂ ಸರಿಯಾದ ವೆಂಟಿಲೇಟರ್ ಗಳ ಸೌಲಭ್ಯದ ಕೊರತೆಯೂ ಕಾಡುತ್ತಿರುವುದರ ಜೊತೆಗೆ, ಕೊರೋನಾ ವ್ಯಾಪಿಸುವ ತೀವ್ರತೆ ಬಹಳಷ್ಟು ಕಠಿಣವಾಗುವ ರೀತಿಯಲ್ಲಿದೆ. ಇದೆಲ್ಲವನ್ನೂ ಮುಂದೆ ನೋಡುತ್ತಾ ಸರಕಾರ ಯಾವ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಮತ್ತು ನಾಗರಿಕರು ಹೇಗೆ ಸಹಕರಿಸುತ್ತಾರೆ ಎನ್ನುವುದೂ ಸವಾಲಾಗಿದೆ. ಈಗಾಗಲೇ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕ ಮಂದಿ ತಮ್ಮ ತಮ್ಮ ಊರಿಗೆ ಮರಳುತ್ತಿದ್ದು, ಇದು ರಾಜ್ಯದ ಆರ್ಥಿಕತೆಗೆ ದೊಡ್ಡ ಏಟು ಮಾಡಬಹುದು ಮಾತ್ರವಲ್ಲ, ಇತ್ತ ಊರಿನಲ್ಲೂ ಸೋಂಕಿನ ಪ್ರಮಾಣ ಹೆಚ್ಚುವುದಕ್ಕೂ ಕಾರಣವಾಗಬಹುದು.
ಒಂದು ಕಡೆಯಲ್ಲಿ ಕೊರೋನಾ ಭೀತಿ ಮತ್ತು ಇನ್ನೊಂದು ಕಡೆ ಹಸಿವಿನ ಭಯದಿಂದ ಸಾಮಾನ್ಯ ನಾಗರಿಕರು ಸಂಕಷ್ಟ ಎದುರಿಸುತ್ತಿರುವಾಗ, ಸರಿಯಾದ ಉದ್ಯೋಗ, ವ್ಯಾಪಾರ ವಹಿವಾಟುಗಳಿಲ್ಲದೆ ಸಂದಿಗ್ಧ ಪರಿಸ್ಥಿತಿಯನ್ನು ಎದುರು ನೋಡುತ್ತಿರುವಾಗ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಜನರಿಂದ ಕೊಳ್ಳೆ ಹೊಡೆಯುತ್ತಿದೆ. ಮಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳು ಕೊರೋನಾವನ್ನು ವ್ಯಾಪಾರವನ್ನಾಗಿಸಿಕೊಂಡು, ಸಮಾನ್ಯ ಜನರ ಮೇಲೆ ದಂಧೆ ನಡೆಸುತ್ತಿದೆ. ಜಗತ್ತೇ ಎದುರು ನೋಡುತ್ತಿರುವ ದುರಂತವೊಂದನ್ನು ತಮ್ಮ ಸ್ವಾರ್ಥ ಲಾಭಕ್ಕಾಗಿ ಬಳಸಿಕೊಂಡು ನಾಗರಿಕರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಈ ನಡೆಯ ಬಗ್ಗೆ ಸರಕಾರ ಜಾಣ ಮೌನ ಪಾಲಿಸಿದ್ದಕ್ಕೂ ಕಾರಣವಿದೆ.
ಮಂಗಳೂರಿನಲ್ಲಿ ಕೊರೋನ ಕಾರಣ ಮೃತಪಟ್ಟಿದ್ದು ಕೇವಲ 4 ಮಂದಿ ಮತ್ತುಳಿದವರೆಲ್ಲ ಬೇರೆ ರೋಗಗಳಿಂದ ಮೃತಪಟ್ಟಿದ್ದಾರೆ ಎನ್ನುವ ಜಿಲ್ಲಾಧಿಕಾರಿಗಳ ಮಾತು ಇನ್ನಷ್ಟು ಗೊಂದಲಕ್ಕೆಡೆಮಾಡಿಕೊಡುತ್ತಿದೆ. ಆಸ್ಪತ್ರೆಗಳ ದಂಧೆಯ ಬಗ್ಗೆ ಒಂದು ಕಡೆ ಚರ್ಚೆಯಾಗುತ್ತಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತನಕ ಕೊರೋನಾ ಕಾರಣ ಮರಣಹೊಂದಿದ್ದಾರೆ ಅನ್ನುತ್ತಾ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿಕೊಂಡು, ಮನೆಯವರಿಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡದ ಹಿಂದಿನ ಕಾರಣವೇನು ಎಂಬುದು ಇನ್ನೂ ಅರ್ಥವಾಗುತ್ತಿಲ್ಲ. ಜನಸಾಮಾನ್ಯರನ್ನು ಪದೇಪದೇ ಈ ರೀತಿ ಮೋಸದಾಟದಿಂದ ಹಿಂಸಿಸುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅಧಿಕಾರಿಗಳು ಮತ್ತು ರೋಗವನ್ನು ವ್ಯಾಪಾರವನ್ನಾಗಿ ಮಾರ್ಪಡಿಸಿ ಜನರಿಂದ ಹಣ ದೋಚುವ ಆಸ್ಪತ್ರೆಗಳು ಇರುವ ತನಕ ನಾಡಿನಲ್ಲಿ ಶಾಂತಿಯ ಬದುಕು ಸಾಧ್ಯವೇ ಇಲ್ಲ. ಪ್ರತಿಯೊಂದು ದುರಂತವೂ, ಪ್ರತಿ ಸಾವುಗಳೂ ರಾಜಕೀಯವಾಗಿ ಬಳಕೆಯಾಗುತ್ತಿದೆ ಅನ್ನುವಾಗ ನಮ್ಮ ದೇಶದ ರಾಜಕೀಯ ಮನಸ್ಥಿತಿ ಎಷ್ಟೊಂದು ಕಳಪೆಯಾಗಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬಹುದು.
ಕೊರೋನಾ ಎಂಬ ಮಹಾಮಾರಿಯನ್ನು ಕರ್ನಾಟಕ ಸರಕಾರ ಕೂಡ ಲಾಭದಾಯಕವಾಗಿಯೇ ಉಪಯೋಗಿಸಿಕೊಂಡಿದೆ. ಕಳೆದ ವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ಸರಕಾರದ ಕೊರೋನಾ ಹಗರಣವನ್ನು ಬೆಳಕಿಗೆ ತಂದಿದ್ದರು. ಸುಮಾರು ಒಂದೂವರೆ ಸಾವಿರ ಕೋಟಿಯಷ್ಟು ಹಗರಣ ನಡೆಸಲಾಗಿದೆ ಎಂಬ ಮಾಹಿತಿ ಅವರು ನೀಡಿದ್ದರು. ಸನ್ನಿವೇಶ, ಪರಿಸ್ಥಿತಿ, ದುರಂತದ ಆಳ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ, ಜನಸಾಮಾನ್ಯರ ಸಂಕಷ್ಟವನ್ನು ಪರಿಹರಿಸಲು ಮನಸ್ಸು ತೋರದೆ ಬರಿಯ ರಾಜಕೀಯ ಲಾಭಕ್ಕಾಗಿ, ಹಣದ ವ್ಯಾಮೋಹದಿಂದ ಜನರಿಗೆ ಮೋಸ ಮಾಡುತ್ತಾ ತಮ್ಮ ಕುರ್ಚಿ ಬಿಗಿಗೊಳಿಸುವ ಅಧಿಕಾರಿಗಳ ವಿರುದ್ಧ ಸಿಡಿದೇಳಬೇಕಾದ ಸನ್ನಿವೇಶ ಎದುರಾದಂತಿದೆ. ಎಲ್ಲವನ್ನೂ ರಾಜಕೀಯವಾಗಿ ಬಳಸಿಕೊಂಡು, ಅಧಿಕಾರ ಲಾಭಕ್ಕಾಗಿಯೇ ರಾಜಕಾರಣಿಗಳು ಹಾತೊರೆಯುತ್ತಿದ್ದಾರೆಂದರೆ, ಇಂತಹ ಮತಿಗೆಟ್ಟ ನಾಯಕರನ್ನು ಮತ ನೀಡಿ ಆರಿಸಿರುವುದಾದರೂ ಯಾಕೆ ಎನ್ನುವ ವಿಷಾದತೆ ಮೂಡಿ ಬರುತ್ತಿದೆ.
ಕೊರೋನಾ ಕಾರಣ ಮರಣಹೊಂದಿದ್ದಾರೆಂದು ಹೇಳಲಾಗುವವರ ಮೃತದೇಹವನ್ನು ಜಿಲ್ಲಾಡಳಿತವು ಮನೆಯವರಿಗೆ ಬಿಟ್ಟುಕೊಡಲು ತಯ್ಯಾರಿಲ್ಲದ ಸಮಯದಲ್ಲಿ ಕೆಲವು ಸಂಘಟನೆಗಳು ಮುಂದೆ ಬಂದು ದಫನ ಕಾರ್ಯ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಆಯಾ ಧರ್ಮದ ಆಚರಣೆಯಂತೆಯೇ ನಡೆಸಿ ಬರುತ್ತಿದ್ದಾರೆ. ವಿಪರ್ಯಾಸವೆಂದರೆ, ಮೊಸರಲ್ಲೂ ಕಲ್ಲು ಹುಡುಕುವ ಕೆಲವೊಂದು ನಾಲಾಯಕ್ ನಾಯಕರು ಸಂಘಟನೆಗಳು ಮಾಡುವ ಮಹತ್ಕಾರ್ಯಕ್ಕೂ ತಡೆಯಾಗಲು ಬಂದಿದ್ದಾರೆಯೇ ಹೊರತು ನಿಜವಾದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುತ್ತಿಲ್ಲ. ಸರಕಾರ ದೊಡ್ಡ ಮಟ್ಟದ ಹಗರಣ ನಡೆಸಿ ವಿವಾದಕ್ಕೀಡಾದಾಗ, ಆಸ್ಪತ್ರೆಗಳ ಕೊಳ್ಳೆಹೊಡೆಯುವುದು ಸುದ್ದಿಯಾದಾಗ ಒಂದಕ್ಷರ ಮಾತನಾಡದವರು ಕೆಲವು ಸಂಘಟನೆಗಳು ಮಾಡುತ್ತಿರುವ ಒಳ್ಳೆಯ ಕಾರ್ಯಗಳಿಗೆ ಅಡ್ಡ ಬರುತ್ತಾರೆ.
ಒಟ್ಟಿನಲ್ಲಿ ಜಗತ್ತು ಕಂಡ ಅತೀ ದೊಡ್ಡ ದುರಂತವಾಗಿರುವ ಈ ಕೊರೋನಾ ಎಂಬ ರೋಗವನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಜನಸಾಮಾನ್ಯರ ಹೊಟ್ಟೆಗೆ ಕಲ್ಲು ಹಾಕಲಾಗುತ್ತಿದೆ. ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಇನ್ನಷ್ಟು ಸಂಕಟಕ್ಕೆ ದೂಡುವಲ್ಲಿ ಪ್ರಯತ್ನವಾಗುತ್ತಿದೆ. ಇನ್ನೂ ನಿಯಂತ್ರಣಕ್ಕೆ ಬಾರದ ಸೋಂಕಿನ ಹರಡುವಿಕೆ ತಡೆಯಲು ಸರಕಾರ ಮತ್ತು ಆರೋಗ್ಯ ಇಲಾಖೆ ಏನು ನಿರ್ಧಾರ ಕೈಗೊಂಡಿದೆ ಎಂಬುದು ತಿಳಿದಿಲ್ಲ. ಒಂದಂತೂ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಮುಂದಕ್ಕೆ ನಮ್ಮ ಸಹಾಯಕ್ಕೆ ಯಾರೂ ಬರುತ್ತಾರೆ ಎನ್ನಹವ ನಿರೀಕ್ಷೆ ಬಿಟ್ಟುಬಿಡಿ. ಇನ್ನೇನಿದ್ದರೂ ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ. ಸೋಂಕು ಹರಡದಂತೆ ನಮ್ಮನ್ನು ನಾವೇ ತಡೆಯಬೇಕಿದೆ. ಅದಕ್ಕಾಗಿ ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮುಂದುವರಿಯಬೇಕಿದೆ. ಒಂದುವೇಳೆ ಇನ್ನೂ ಪರಿಸ್ಥಿತಿ ಹದಗೆಟ್ಟರೆ ಈಗಾಗಲೇ ತತ್ತರಿಸಿರುವ ದೇಶ ಪಾತಾಳಕ್ಕಿಳಿಯಬಹುದು. ಸರಕಾರಕ್ಕೆ ಇದ್ಯಾವುದರ ಯೋಚನೆಯಿಲ್ಲ. ಕಾರಣ ,ಅವರು ಸರಕಾರ ಭದ್ರಪಡಿಸುವಲ್ಲಿ ನಿಸ್ಸೀಮರಾಗಿದ್ದಾರೆ.
– ಹಕೀಂ ಪದಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.