ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್):ನನ್ನ ಮಗ/ಮಗಳು SSLC ಯಲ್ಲಿ ಉತ್ತಮ ಅಂಕ ಗಳಿಸಿದ್ದಾನೆ/ಳೆ . ಅವನ/ಳನ್ನ ವಿಜ್ಞಾನ ವಿಭಾಗಕ್ಕೆ ಯಾವುದಾದರೂ ಖಾಸಗಿ ಕಾಲೇಜಿಗೇ ಕಳಿಸಬೇಕು. ಡೊನೆಶನ್ ಜಾಸ್ತಿ ಇರುವ ಕಾಲೇಜಿಗೇ ಕಳಿಸಬೇಕು. ಇದರಿಂದ ಪ್ರತಿಷ್ಠೆಯ ಜೊತೆಗೆ ಹೆಚ್ಚು ಹಣ ನೀಡಿದಷ್ಟು ಹೆಚ್ಚು ಹೆಚ್ಚು ತಲೆಯೊಳಗೆ ತುಂಬುತ್ತಾರೆ. ಖಾಸಗಿ ಕಾಲೇಜಿಗೆ ಸೇರಿಸಿದ ಕೂಡಲೇ 90% ಗಿಂತ ಹೆಚ್ವಿನ ಅಂಕ Credit ಆಗಿರುತ್ತದೆ. ಏಕೆಂದರೆ ನಾವು 100% ಶುಲ್ಕವನ್ನು ಕಟ್ಟಿರುತ್ತೇವೆ ಎಂದು ಬೀಗಿ ಅತೀ ಹೆಚ್ಚಿನ ಹಣ ಕೊಟ್ಟು ಸ್ಪರ್ಧಾತ್ಮಕವಾಗಿ ಹೆಚ್ಚಿನ ಅಂಕವನ್ನು ಖರೀದಿಸಲು ಹೊರಟಿರುವ ಪೋಷಕರಿಗೆ , ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಇಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪೃಥ್ವಿ ಶೆಟ್ಟಿ, ಕೆರೆಕಟ್ಟೆ ಇವರು ಸರಕಾರಿ ಕಾಲೇಜಿನಲ್ಲಿ ಓದಿ 600 ಅಂಕಗಳಿಗೆ 576 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿನ ಘನತೆ ಹೆಚ್ಚಿಸಿದ್ದು ಮಾತ್ರವಲ್ಲದೇ ಖಾಸಗಿ ಕಾಲೇಜಿನ ಗೀಳು ಹತ್ತಿಸಿಕೊಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸರಕಾರಿ ಕಾಲೇಜಿನ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದಾರೆ.ಇವಳು ಸಿದ್ಧಾಪುರದ ಆಂಗ್ಲ ಮಾದ್ಯಮ ಶಾಲೆಯಲ್ಲಿ ಓದುವಾಗಲೇ ಅವಳ ಅಣ್ಣ ಓದಿದ ಕಾಲೇಜಿನಲ್ಲಿಯೇ ತಾನೂ ಓದಬೇಕು ಎಂದು ಕನಸು ಕಂಡವಳು. ಪ್ರತಿಷ್ಠಿತ ಖಾಸಗಿ ಕಾಲೇಜಿನವರು “ನಿನ್ನ ಅಂಕ ಚೆನ್ನಾಗಿದೆ, ನಾವು ಉಚಿತವಾಗಿ ಓದಿಸುತ್ತೇವೆ, ನಮ್ಮ ಕಾಲೇಜಿಗೆ ಸೇರಿಸಿ” ಎಂದಾಗ ಹೆಮ್ಮೆಯ ಪೋಷಕರು ನನ್ನ ಮಗಳನ್ನು ಸರಕಾರಿ ಕಾಲೇಜು ಹೊಸಂಗಡಿಗೆ ಕಳಿಸುತ್ತೇನೆ . ನನ್ನ ಮಗಳು ನಮ್ಮೂರಿನ ಕಾಲೇಜಿನಲ್ಲಿಯೇ ಸಾಧನೆ ಮಾಡಲಿ ಎಂದು ದಿಟ್ಟವಾಗಿ ಉತ್ತರಿಸಿದ್ದರು. ಯಾವುದೇ ಗೊಂದಲ ಅನುಮಾನಗಳಿಗೆ ಆಸ್ಪದ ನೀಡದೆ ನೇರವಾಗಿ ನಮ್ಮ ಕಾಲೇಜಿನ application ತುಂಬಿಸಿ ಮೊದಲ ದಿನವೇ ಪ್ರವೇಶಾತಿ ಮಾಡಿಸಿಕೊಳ್ಳಲು ಕಾರಣ ಕಾಲೇಜಿನ ಮೇಲಿನ ನಂಬಿಕೆ ಹಾಗೂ ವಿಶ್ವಾಸ. SSLC ಪರೀಕ್ಷೆಯ ಯಶಸ್ಸಿನ ಸಂಧರ್ಭದಲ್ಲಿ ಎಷ್ಟೋ ಜನ ಆಪ್ತೇಷ್ಠರು, ಬಂಧುಗಳು ಹಾಗು ಕೆಲವು ಸ್ಥಳೀಯರು ಇಷ್ಟು ಅಂಕಗಳನ್ನು ಗಳಿಸಿದ ಇವಳನ್ನು ಖಾಸಗಿ ಕಾಲೇಜಿನಲ್ಲಿ ಓದಿಸಬೇಕಿತ್ತು. ಸರಕಾರಿ ಕಾಲೇಜಿಗೆ ಸೇರಿಸಿ ಅವಳ ಭವಿಷ್ಯ ಹಾಳು ಮಾಡಿತ್ತಿದ್ದೀರಿ? ಎಂದಾಗ ಇವಳ ಪೋಷಕರು ಒಂದಿಷ್ಟೂ ವಿಚಲತರಾಗದೆ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯನ್ನು ಸಮರ್ಥಿಸಿಕೊಂಡವರು. ಕಾಲೇಜಿನಲ್ಲಿ ಕು|ಪೃಥ್ವಿ ಶೆಟ್ಟಿ ತುಂಬಾ ಬುದ್ಧಿವಂತೆ ಹಾಗೂ ಪ್ರತಿಭಾನ್ವಿತೆ. ಪ್ರತಿದಿನ ಉಪನ್ಯಾಸಕರು ಮಾಡಲಿರುವ ಪಾಠವನ್ನು ಮೊದಲೇ ಓದಿ ಸಿದ್ಧಪಡಿಸಿಕೊಂಡು ಬಂದು ಅದಕ್ಕೆ ಸಂಬಂಧಿಸಿದ ಪಠ್ಯಪುಸ್ತಕ ಹೊರತಾದ ಪ್ರಶ್ನೆಗಳನ್ನು ಕೇಳಿ ಜ್ಞಾನ ಸಂಪಾದನೆ ಮಾಡುವುದರ ಮೂಲಕ ಉಪನ್ಯಾಸಕರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು. ಅವಳ ಜ್ಞಾನದಾಹವನ್ನು ತಣಿಸುವುದೇ ಉಪನ್ಯಾಸಕ ರಿಗೆ ಒಂದು ಸಂಭ್ರಮ. ದಿನಕ್ಕೊಂದು ಹೊಸ ಪ್ರಶ್ನೆ, ದಿನಕ್ಕೊಂದು ಅನುಮಾನ. ಹಾಗಾಗಿ ಉಪನ್ಯಾಸಕರುಗಳು ಇವಳ ಪ್ರಶ್ನೆಯನ್ನು ಉತ್ತರಿಸಲು ಸದಾ ಸಿದ್ಧ. ಜೊತೆಗೆ ಈ ಪಾಠದಲ್ಲಿ ಇವಳು ಯಾವ ಪ್ರಶ್ನೆ ಕೇಳಬಹುದು ಎಂದು ಊಹಿಸಿ ಉತ್ತರವನ್ನು ಮೊದಲೇ ಸಿದ್ದ ಪಡಿಸಿ ಕೊಳ್ಳುತ್ತಿದರು. ಸಹಪಾಠಿಗಳಿಗೆ ಅನುಮಾನವಿದ್ದರೆ ಉಪನ್ಯಾಸಕರಂತೆ ಪಾಠ ಮಾಡಿ ಅವರ ಅನುಮಾನವನ್ನು ಪರಿಹಾರ ಮಾಡುವ ಇವಳೆಂದರೆ ಸಹಪಾಠಿಗಳಿಗೂ ಅಷ್ಟೇ ಇಷ್ಟ. ಅವಳೊಂದಿಗೆ ಇರುವ ಇತರ ವಿದ್ಯಾರ್ಥಿಗಳೂ ಇವಳನ್ನು ಅನುಸರಿಸುವುದರೊಂದಿಗೆ ಇಡೀ ತರಗತಿಯೇ ಒಂದು ಮಾದರಿ ತರಗತಿ.ಹಾಗೂ ಉಪನ್ಯಾಸಕರಿಗೆ ಈ ತರಗತಿಗೆ ಹೋಗಲು ಸಡಗರ ಹಾಗೂ ಸ್ಪರ್ಧೆ (ಇದೇ ಕಾರಣಕ್ಕಾಗಿ ಈ ಸಲ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಫಲಿತಾಂಶ ಬಂದಿರುತ್ತದೆ) ಬಹುಶಃ ಈ ಹುಡುಗಿ ಖಾಸಗಿ ಕಾಲೇಜಿಗೆ ಸೇರಿದ್ದರೆ ಅಂಕ ಹಾಗೂ syllabus ನ ಒತ್ತಡದಲ್ಲಿ ಜ್ಞಾನ ಸಂಪಾದನೆ ಸಂಕುಚಿತ ಗೊಳ್ಳುತ್ತಿತ್ತೇನೋ. ಇವಳ ಅನುಮಾನ ಬರೀ ವಿಜ್ಞಾನ ವಿಭಾಗದಲ್ಲಿ ಮಾತ್ರವಲ್ಲ ಇತರ ವಿಷಯಗಳ ಬಗ್ಗೆ ಕೂಡ ಅಷ್ಟೇ ಅನುಮಾನ. ಈ ಅನುಮಾನವನ್ನು ಆಯಾ ವಿಷಯದ ಉಪನ್ಯಾಸಕರಲ್ಲಿ ಪ್ರಶ್ನಿಸಿ ವಾದ ಮಾಡಿ ಚರ್ಚೆಯ ಮೂಲಕ ಪರಿಹಾರ ಮಾಡಿಕೊಳ್ಳುವುದರ ಮೂಲಕ ಎಲ್ಲಾ ವಿಷಯದ ಉಪನ್ಯಾಸಕರಿಗೂ ಈಕೆ ಅಚ್ಚುಮೆಚ್ಚು. ಜೊತೆಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ನಿರೂಪಣೆಯಲ್ಲಿಯೂ ಗುರುತಿಸಿಕೊಂಡವಳು. ಹೀಗೆ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯಲ್ಲಿ (ಉಡುಪಿ ಜಿಲ್ಲೆ ,ಕುಂದಾಪುರ ತಾಲೊಕು) ಈವರೆಗಿನ ಸಾರ್ವಕಾಲಿಕ ದಾಖಲೆಯನ್ನು ಬರೆಯುವುದರ ಮೂಲಕ ಒಟ್ಟಾರೆ 600 ಅಂಕಗಳಿಗೆ 576 ಅಂಕಗಳನ್ನು ಪಡೆಯುವುದರ ಮೂಲಕ 96% ಪಡೆದಿರುತ್ತಾರೆ. ಅದರೊಂದಿಗೆ ಗಣಿತ ಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ 100% ಅಂಕಗಳನ್ನು ಪಡೆದು ಭೌತಶಾಸ್ತ್ರ 97 ವಿಷಯದಲ್ಲಿ ಹಾಗೂ ರಸಾಯನಶಾಸ್ತ್ರ ವಿಷಯದಲ್ಲಿ 94 ಅಂಕಗಳನ್ನು ಗಳಿಸಿ ಒಟ್ಟು 391 ಅಂಕ ಗಳಿಸಿ 98% ಗಳಿಸಿ ಅಂಕ ಗಳಿಸಲು ಅತೀ ಹೆಚ್ವಿನ ಹಣ ಭರಿಸಿ ಖಾಸಗಿ ಕಾಲೇಜುಗಳಿಗೇ ಹೋಗಬೇಕಿಲ್ಲ ಉತ್ತಮ ಉಪನ್ಯಾಸಕ ವೃಂದವಿರುವ ಉತ್ತಮ ಕಲಿಕಾ ವಾತಾವರಣವಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯಂತಹ ಕಾಲೇಜುಗಳಲ್ಲಿಯೂ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಇವಳು ಭವಿಷ್ಯತ್ತಿನಲ್ಲಿ ಯಾವುದೇ ಕೋರ್ಸ್ ತೆಗೆದುಕೊಂಡರೂ ಇವಳಲ್ಲಿರುವ ಕುತೂಹಲ ಹಾಗೂ ಅತೀವ ಆಸಕ್ತಿಯೊಂದಿಗೆ ಅರಿತುಕೊಳ್ಳುವ ಜ್ಞಾನದಾಹವನ್ನು ಹೊಂದಿರುವ ಈಕೆ ಕಾಲೇಜಿನೊಂದಿಗೆ ಹುಟ್ಟಿದ ಊರಿಗೆ ಕೀರ್ತಿ ಕಳಶವಾಗಿರುವ ಇವಳ ಮುಂದಿನ ವಿದ್ಯಾ ಜೀವನ ಯಶಸ್ವಿಯಾಗಿ ಸಮಾಜದ ಉನ್ನತ ಸ್ಥಾನ ಸೇರುವಂತಾಗಲಿ. ಅಂಕ ಗಳಿಸಲು ಖಾಸಗಿ ಕಾಲೇಜೇ ಸೇರಬೇಕೆನ್ನುವವರಿಗೆ ಕು|ಪೃಥ್ವಿ ಶೆಟ್ಟಿ ಅಪವಾದ.ಇವಳ ಆದರ್ಶ ಎಲ್ಲರಿಗೂ ಮಾದರಿಯಾಗಿ ಸರಕಾರಿ ಕಾಲೇಜಿನ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇರುವ ಕೀಳರಿಮೆ ಕೊನೆಗೊಳ್ಳುವಂತಾಗಲಿ. ನೈಜ ಪ್ರತಿಭಾನ್ವಿತರೂ ಹತ್ತಿರವಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಗೆ ಸೇರಿ ಅತೀ ಕಡಿಮೆ ಶುಲ್ಕದಲ್ಲಿ ಉತ್ತಮ ಹಾಗೂ ಪರಿಣಾಮಕಾರಿ ಬೋದನೆಯ ಲಾಭ ಪಡೆಯುವಂತಾಗಲಿ.
-✍🏽ರಣಜಿತ್ ಕುಮಾರ್ ಶೆಟ್ಟಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.