ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಸಂದರ್ಭದಲ್ಲಿ ಅದನ್ನು ನಿಯಂತ್ರಣದ ಆಲೋಚನೆ ಮಾಡುವುದನ್ನು ಬಿಟ್ಟು, ಜವಾಬ್ದಾರಿ ಸ್ಥಾನದಲ್ಲಿರುವ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಸುಧಾಕರ ಅವರು ವಿಷಕಂಠನ ಕಥೆ ಹೇಳುವ ಮೂಲಕ ಕೈ ಚೆಲ್ಲಿ ಕುಳಿತಿರುವುದು ಬಿಜೆಪಿ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವಕೇಟ್ ತಾಹೀರ್ ಹುಸೇನ್ ಗಂಭೀರವಾಗಿ ಆರೋಪಿಸಿದರು.
ಕೋವಿಡ್-19 ಕಂಟ್ರೋಲ್ ರೂಮಿನಲ್ಲಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ರಾಜ್ಯದ ಜನತೆಗೆ ಸಾಂಕ್ರಾಮಿಕ ತೆಯ ಬಗ್ಗೆ ಸಮಾಧಾನ ಹಾಗೂ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಧೈರ್ಯ ಹೇಳುವ ಬದಲು, ದೇವತೆಗಳ ಮತ್ತು ರಾಕ್ಷಸರ ಮಧ್ಯೆ ನಡೆದ ಜಗಳದಲ್ಲಿ ಬಂದ ವಿಷವನ್ನು ಸೇವನೆ ಮಾಡಿದ ವಿಷಕಂಠ ಎಂದು ಗತಕಾಲದ ಪುರಾಣವನ್ನು ಹೇಳುತ್ತಾ ತಮ್ಮ ವೈಫಲ್ಯತೆಯನ್ನು ಮರೆಮಾಚಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.
ಬಿಜೆಪಿ ಸರಕಾರದಲ್ಲಿನ ಸಚಿವರುಗಳ ಮಧ್ಯೆ ಸಾಮರಸ್ಯದ ಕೊರತೆಯಿಂದ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದು ರಾಜ್ಯದ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ತಾವು ಮಾಡುವ ಕೆಲಸದಲ್ಲಿ ನಿರ್ಲಕ್ಷತನ ತೋರುತ್ತಿದ್ದು, ತಮ್ಮ ವೈಫಲ್ಯವನ್ನು ಮತ್ತೊಬ್ಬರ ಮೇಲೆ ಹಾಕುವ ಕಾರ್ಯ ಮಾತ್ರ ಹಾಸ್ಯಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಯದ ವಾತಾವರಣದಲ್ಲಿ ಇರುವ ರಾಜ್ಯದ ಜನರನ್ನು ಸಂತೈಸಿ, ಅವರಿಗೆ ಧೈರ್ಯ ತುಂಬುವ ಜೊತೆಗೆ ಸರಕಾರ ಕರೋನ ಸೋಂಕು ನಿವಾರಣೆಯತ್ತ ಯುದ್ಧೋಪಾದಿಯಲ್ಲಿ ಕಾರ್ಯಗಳನ್ನು ಕೈಗೊಳ್ಳಬೇಕು. ಸಚಿವರುಗಳು ತಮ್ಮ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕವಾಗಿ ಮಾಡಬೇಕು. ಗ್ರಾಮೀಣ ಮಟ್ಟದಲ್ಲಿ ಸಮುದಾಯಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರಕಾರ ತುರ್ತಾಗಿ ಕೈಗೊಳ್ಳಬೇಕು. ಸರಕಾರದಲ್ಲಿರುವ ಕೆಲ ಸಚಿವರುಗಳ ಬಾಲಿಶತನದ ಹೇಳಿಕೆಗಳಿಗೆ ನಿರ್ಬಂಧ ಹೇರಬೇಕು ಎಂದು ತಾಹೀರ್ ಹುಸೇನ್ ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.