(www.vknews.com) : ದೇಶಾದ್ಯಂತ ಕೋವಿಡ್- 19 ಪ್ರಕರಣಗಳು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಜನ ಸಾಮಾನ್ಯರು ಭಯದಿಂದ ಬದುಕುತ್ತಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಬಳಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದನ್ನು ಕಾಣುತ್ತಿದ್ದೇವೆ.
ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ರೋಗಿಗಳ ನೆರವಿಗಾಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕಿತ್ತು. ಆದರೆ ಕೆಲವು ಆಸ್ಪತ್ರೆಗಳಲ್ಲಿ ಗರ್ಭಿಣಿಯರಲ್ಲದೇ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸದೇ ಅಮಾನವೀಯ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಒಂದು ವೇಳೆ ಒಳರೋಗಿಯಾಗಿ ದಾಖಲಿಸಿದರೂ ಒತ್ತಾಯಪೂರ್ವಕವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದ ರೋಗಿಗಳ ವರದಿಗಳು ಪಾಸಿಟಿವ್ ಎಂಬ ಗೊಂದಲಕಾರಿಯಾದಂತಹ ವರದಿಗಳು ಕೂಡ ಹೊರ ಬರುತ್ತಿದೆ. ಇದರಿಂದಾಗಿ ಸಣ್ಣಪುಟ್ಟ ಮತ್ತು ಪ್ರಮುಖವಾಗಿ ದೊಡ್ಡ ಖಾಯಿಲೆ ಇರುವ ರೋಗಿಗಳು ಭೀತಿಯಿಂದ ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲೇ ಉಳಿದು ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತಿದೆ.
ಇದಕ್ಕೆಲ್ಲ ಕಾರಣ ಕೆಲವು ಖಾಸಗಿ ಆಸ್ಪತ್ರೆಗಳು ಕೊರೋನಾದ ಹೆಸರಿನಲ್ಲಿ ನಡೆಸುತ್ತಿರುವ ದಂಧೆಯಾಗಿರುತ್ತದೆ. ಇದರ ಜೊತೆಗೆ ಕೊರೋನಾ ವಾರಿಯರ್ಸ್ ಎಂಬ ಗೌರವ ಪಡೆದ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಆದರೆ ಅವರ ಸೇವೆಯನ್ನು ಅಲಕ್ಷಿಸಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ವಿಫಲವಾಗಿದೆ.
ಲಾಕ್ ಡೌನ್ ಪರಿಣಾಮದಿಂದ ಜನಸಾಮಾನ್ಯರು ಆರ್ಥಿಕವಾಗಿ ಅತಂತ್ರವಾಗಿರುವ ಸಂದರ್ಭದಲ್ಲಿ ಸರಕಾರವು ಧೈರ್ಯ ತುಂಬಬೇಕಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ‘ಕೊರೋನಾ ಜಯಿಸೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಜುಲೈ 15ರಿಂದ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿದ್ದು, ಈ ಮೂಲಕ ಜನಸಾಮಾನ್ಯರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.
ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಪರೀಕ್ಷೆಯನ್ನು ಉಚಿತವಾಗಿ ನಡೆಸಬೇಕು, ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು, ಆಶಾ ಕಾರ್ಯಕರ್ತೆಯರಿಗೆ ವಿಶೇಷ ವೇತನ, ಪಿಪಿಇ ಕಿಟ್ ಸೌಕರ್ಯ ಒದಗಿಸಬೇಕು. ಸರಕಾರೀ ಸೌಲಭ್ಯಗಳು ಆಶ್ವಾಸನೆಗೆ ಮಾತ್ರ ಸೀಮಿತವಾಗಿರದೇ ಜನಸಾಮಾನ್ಯರಿಗೆ ತಲುಪುವಂತಾಗಬೇಕು, ಮೃತದೇಹಗಳ ಗೌರವಯುತ ಅಂತ್ಯಸಂಸ್ಕಾರ ನಡೆಸಬೇಕು, ಸುದ್ದಿಗಳನ್ನು ಅತಿರಂಜಿಸಿ ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಮಾಧ್ಯಮಗಳನ್ನು ಹತೋಟಿಯಲ್ಲಿಡಬೇಕೆಂದು ಎನ್.ಡಬ್ಲ್ಯೂ.ಎಫ್. ಈ ಅಭಿಯಾನದ ಮೂಲಕ ಸರಕಾರವನ್ನು ಆಗ್ರಹಿಸುತ್ತದೆ.
ಝೀನತ್ ರಾಜ್ಯಾಧ್ಯಕ್ಷರು, ನ್ಯಾಷನಲ್ ವುಮೆನ್ಸ್ ಫ್ರಂಟ್, ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.