(www.vknews.com) : ಯಾವತ್ತೂ ಯಾವ ಅಧಿಕಾರಿ ಅಥವಾ ರಾಜಕಾರಣಿಗಳ ಬಗ್ಗೆ ಬರೆಯದ ನಾನು ಸಾರ್ವಜನಿಕವಾಗಿ ನನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆಯಲೇಬೇಕು ಎನ್ನವಷ್ಟು ಇಷ್ಟವಾಯಿತು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರ ಕಾರ್ಯವೈಖರಿ.
ಕೊರೋನ ಮಹಾಮಾರಿ ಈ ಪ್ರಪಂಚ ಎದುರಿಸಿದ ಅನಿರೀಕ್ಷಿತ ಆಘಾತ. ಈ ಕೊರೋನದಿಂದ ಯಾವರೀತಿಯಲ್ಲಿ ಜನರನ್ನು ಸುರಕ್ಷಿತವಾಗಿ ಇಡಬಹುದು ಎಂದು ಸರಕಾರ ತಿಳಿಯುವ ಮೊದಲೇ ಅನೇಕ ಅನಾಹುತಗಳು ಆಗಿ ಹೋಗಿರುತ್ತವೆ, ಆದರೆ ಸರಕಾರದ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸಿ ಕರಾವಳಿ ಜಿಲ್ಲೆಯಲ್ಲಿ ದಿಟ್ಟವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಮತ್ತವರ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸಲೇಬೇಕು.
ನಾವು ರಾತ್ರಿ ಹಗಲೆನ್ನದೇ ಕಾರ್ಯ ನಿರ್ವಹಿಸುವ ವೈದ್ಯರಿಗೆ ಅಭಿನಂದಿಸುತ್ತೇವೆ, ರಾಜಕಾರಣಿಗಳಿಗೂ ಧನ್ಯವಾದ ಅರ್ಪಿಸುತ್ತೇವೆ ಆದರೆ ಅಷ್ಟೇ ಜವಾಬ್ದಾರಿಯಿಂದ ನಿರಂತರವಾಗಿ ಕೆಲಸ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳನ್ನು ಮಾತ್ರ ಮರೆಯುತ್ತೇವೆ. ಕೊರೋನ ಸಂಕಷ್ಟದ ಸಂದರ್ಭದಲ್ಲಿ ಹಾಜರಿದ್ದು ಕಾರ್ಯನಿರ್ವಹಿಸಿದ ಜಿಲ್ಲಾಧಿಕಾರಿ ಮತ್ತು ತಂಡದ ಯತೀಶ್ ಉಳ್ಳಾಲ್, ಪ್ರವೀಣ್ ರವರಿಗೂ ಮನದಾಳದಿಂದ ಧನ್ಯವಾದ ತಿಳಿಸುತ್ತೇನೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ವಿರುದ್ಧದ ತಯಾರಿ ಅಷ್ಟು ಸುಲಭವಾಗಿಲ್ಲ, ಇಲ್ಲಿ ಅಂತರಾಜ್ಯದ ಗಡಿ ಇದೆ, ಮುಂಬೈ, ಪೂಣೆ, ಬೆಂಗಳೂರಿನಿಂದ ಕರಾವಳಿಯ ಸಾವಿರಾರು ಕಾರ್ಮಿಕರು ಊರಿಗೆ ವಾಪಾಸಾದಾಗ ಅವರನ್ನೂ ಸುರಕ್ಷಿತವಾಗಿ ಸ್ವಾಗತಿಸಿ ಕ್ವಾರಂಟೈನ್ ವ್ಯವಸ್ಥೆ ಮುನ್ನೆಚ್ಚರಿಕೆ ಮಾಡಬೇಕು, ಅದೇ ರೀತಿ ವಿಮಾನ ನಿಲ್ದಾಣವೂ ಇದೆ, ವಿಮಾನ ಮೂಲಕ ಪ್ರಯಾಣಿಸಿ ಬಂದ ಗಲ್ಫ್ ರಾಷ್ಟ್ರಗಳ ಸಾವಿರಾರು ಅನಿವಾಸಿ ಕನ್ನಡಿಗರ ಕ್ವಾರಂಟೈನ್ ವ್ಯವಸ್ಥೆ ನೋಡಿಕೊಂಡು ಅವರೆಲ್ಲರ ಕೋವಿಡ್ ಪರೀಕ್ಷೆ ನಡೆಸುವ ಸೂಕ್ಷ್ಮ ಜವಾಬ್ದಾರಿಯೂ ಬಹುದೊಡ್ಡ ಸವಾಲೇ ಆಗಿತ್ತು, ಇವೆಲ್ಲವನ್ನೂ ತುಂಬಾ ವ್ಯವಸ್ಥಿತವಾಗಿಯೇ ನಿಭಾಯಿಸಿದ್ದಾರೆ ದಕ್ಷಿಣ ಕನ್ನಡದ ಎರಡನೇ ಮಹಿಳಾ ಜಿಲ್ಲಾಧಿಕಾರಿಯಾದ ಸಿಂಧೂ ರೂಪೇಶ್.
ಗಲ್ಫ್ ರಾಷ್ಟ್ರಗಳ ಅನಿವಾಸಿ ಕನ್ನಡಿಗರಿಗೆ ಚಾರ್ಟರ್ ಫ್ಲೈಟ್ ಅನುಮತಿ ಸಿಗಬೇಕಾದರೆ ಹೋಟೆಲ್ ಕ್ವಾರಂಟೈನ್ NOC ಹಾಗೂ ಜಿಲ್ಲಾಧಿಕಾರಿ ಅನುಮತಿ ಅತ್ಯಗತ್ಯ. ಆ ಸಂದರ್ಭದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ಮಾತ್ರವಲ್ಲ ಹಲವಾರು ಇತರ ಸಂಸ್ಥೆಗಳ ವಿಮಾನದ ಅನುಮತಿ ಹಾಗೂ ಕೊನೆಕ್ಷಣದ ಬದಲಾವಣೆ ಹೀಗೆ ರಾತ್ರಿ ಹಗಲೆನ್ನದೇ ನಾವು ಕರೆಮಾಡಿದ ತಕ್ಷಣವೇ ಸ್ಪಂದಿಸಿ ನಮ್ಮ ಜಿಲ್ಲೆಯ ಜನರು ವಾಪಸಾಗಲು ಯಾವ ರೀತಿಯಲ್ಲೂ ತೊಂದರೆಯಾಗಬಾರದು ಎಂದು ಸರ್ವ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಪ್ರತಿಬಾರಿಯೂ ನಾವು ಗಡಿಬಿಡಿಯಲ್ಲಿದ್ದರೂ ಎಂದೂ ಯಾರೊಂದಿಗೂ ಸಿಟ್ಟಾಗದೇ ಸಹನೆ, ತಾಳ್ಮೆಯಿಂದಲೇ ನಿಭಾಯಿಸಿದ ರೀತಿ ನೋಡಿ ನಿಜಕ್ಕೂ ಅಚ್ಚರಿಯಾಯಿತು.
ವಿದ್ಯಾವಂತರ ಜಿಲ್ಲೆಯೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರೂ ಕೊರೋನ ಸಂದರ್ಭದಲ್ಲಿ ನಮ್ಮ ನಮ್ಮ ಕರ್ತವ್ಯ, ಸುರಕ್ಷತೆ, ಕಾನೂನಿನ ಪಾಲನೆ ಮಾಡುತ್ತಾ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಾ ಜಿಲ್ಲೆಯನ್ನು ಕೊರೋನ ಮುಕ್ತವಾಗಿಸಲು ಕೈಜೋಡಿಸಬೇಕು, ಎಲ್ಲದಕ್ಕೂ ಟೀಕಿಸುವ ಬದಲು ಸರ್ಕಾರಿ ಅಧಿಕಾರಿಗಳ ಕೆಲಸದ ಒತ್ತಡವನ್ನು ಅರ್ಥಮಾಡಿಕೊಂಡು ಅವರಿಗೂ ಪ್ರಶಂಸನೀಯ ಎರಡು ಮಾತು ಹೇಳಿ, ಸೃಷ್ಟಿಕರ್ತನಲ್ಲಿ ಅವರಿಗೂ ಪ್ರಾರ್ಥಸಿದರೆ ಅವರೆಲ್ಲರೂ ಇನ್ನಷ್ಟು ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸಬಹುದು.
ಸಿಂಧೂ ರೂಪೇಶ್ ಮೇಡಂ ನಿಮ್ಮ ಪ್ರಬುದ್ಧ ಕಾರ್ಯನಿರ್ವಹಣೆ ನಿಮ್ಮ ಉಜ್ವಲ ಭವಿಷ್ಯದ ಗುರುತಾಗಿದೆ. ನಿಮ್ಮಿಂದ ಇನ್ನಷ್ಟು ಸೇವೆ ಕನ್ನಡಿಗರಿಗೆ, ನಮ್ಮ ಕರಾವಳಿಯ ಜನತೆಗೆ ಸಿಗಲಿ, ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಪ್ರಾರ್ಥಿಸುವೆ.
ಹಿದಾಯತ್ ಅಡ್ಡೂರ್ ಕನ್ನಡಿಗಾಸ್ ಹೆಲ್ಪ್ ಲೈನ್ ಯುಎಈ. ಉಪಾಧ್ಯಕ್ಷರು, ಬಿಸಿಸಿಐ ಯುಎಈ ಘಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.