ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ(ಕೆಟಿಬಿಎಸ್)ಯು ದಕ್ಷಿಣ ಕನ್ನಡ ಇತಿಹಾಸದ ಪ್ರಮುಖ ಭಾಗವಾದ ಉಳ್ಳಾಲದ ರಾಣಿ ಅಬ್ಬಕ್ಕ ಸೇರಿದಂತೆ ಮೈಸೂರಿನ ಹುಲಿ ಎಂದು ಅರಿಯಲ್ಪಡುವ ಟಿಪ್ಪು ಸುಲ್ತಾನ್ ರವರ ಇತಿಹಾಸವನ್ನು ಕೊರೋನಾ ನೆಪದಲ್ಲಿ ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವುದು ಖಂಡನೀಯ. ಆದ್ದರಿಂದ ಈ ಕ್ರಮದಿಂದ ರಾಜ್ಯ ಸರಕಾರವು ಹಿಂದೆ ಸರಿಯಬೇಕು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ದಕ್ಷಿಣ ಕನ್ನಡ ಜಿಲ್ಲಾ ಘಟಕವು ಒತ್ತಾಯಿಸಿದೆ.
2020-21 ರ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಿ, ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಹಲವಾರು ಐತಿಹಾಸಿಕ ಘಟನೆಗಳನ್ನು ಕೈಬಿಟ್ಟಿದ್ದು, ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ(ಕೆಟಿಬಿಎಸ್)ಯು ಇದಕ್ಕೆ ಸಮಯದ ಕೊರತೆಯ ನೆಪವೊಡ್ಡಲಾಗಿದೆ. ಸೆಪ್ಟೆಂಬರ್ 1 ರಿಂದ 120 ದಿನಗಳಲ್ಲಿ ಅಗತ್ಯವಾದ ಪಠ್ಯದ ಭಾಗಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಕೆಟಿಬಿಎಸ್ 6 ರಿಂದ 10 ನೇ ತರಗತಿಗಳ ಸಮಾಜ ವಿಜ್ಞಾನದ ಶಿಕ್ಷಕರಿಗೆ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿದ್ದು, ಇದೇ ರೀತಿ ಬೇರೆ ಬೇರೆ ವಿಷಯಗಳ ಕೈಪಿಡಿಯು ಸಹ ಬಿಡುಗಡೆಯಾಗಿದೆ. ಧರ್ಮಗಳು, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ತುಳುನಾಡಿನ ಜಾನಪದ ಮೊದಲಾದ ಹೆಚ್ಚು ಪ್ರಮುಖ ವಿಷಯಗಳತ್ತ ಶಿಕ್ಷಕರು ಗಮನ ಹರಿಸಬೇಕಾಗಿದ್ದು, ಅದಕ್ಕಾಗಿ ಟಿಪ್ಪು ಸಹಿತ ರಾಣಿ ಅಬ್ಬಕ್ಕರ ಅಧ್ಯಾಯವನ್ನು ಮೊಟಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪೋರ್ಚುಗೀಸರೊಂದಿಗೆ ಹೋರಾಡಿದ ರಾಣಿ ಅಬ್ಬಕ್ಕ ಕುರಿತ ಅಧ್ಯಾಯ ತೆಗೆದಿದ್ದರಿಂದ ತುಳುನಾಡಿನ ಇತಿಹಾಸದ ಪ್ರಮುಖ ಭಾಗವನ್ನು ಕಲಿಯುವುದರಿಂದ ವಿದ್ಯಾರ್ಥಿಗಳು ವಂಚಿತರಾಗಲಿದ್ದು, ಆದ್ದರಿಂದ ಈ ತೀರ್ಮಾನವನ್ನು ರಾಜ್ಯ ಸರಕಾರವು ಮರು ಪರಿಶೀಲಿಸಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅಶೀರುದ್ದೀನ್ ಮಂಜನಾಡಿ ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.