(www.vknews.com) : ಅಕ್ರಮ ಮತ್ತು ಅನ್ಯಾಯ ಎಸಗಿದ ತಕ್ಷಣ ಶಿಕ್ಷಿಸುವ ಪರಿಪಾಠ ಅಲ್ಲಾಹನಿಗಿಲ್ಲ. ಹಾಗೇನಾದರೂ ಇದ್ದಿದ್ದರೆ ನಮ್ಮನ್ನೆಲ್ಲ ಅಲ್ಲಾಹನು ಎಂದೋ ನಾಶ ಮಾಡುತ್ತಿದ್ದ. ಯಾವುದೇ ತೀರ್ಮಾನಗಳು ಹೀಗೆ ಆಗಬೇಕು ಎಂದು ನಾವು ಕಲ್ಪಿಸುವುದನ್ನು ಅಲ್ಲಾಹನ ಮೇಲೆ ಹೊರಿಸಬಾರದು. ಅಲ್ಲಾಹನಿಗೆ ಎಲ್ಲವೂ ತಿಳಿದಿದೆ. ಅವನು, ಪ್ರತೀಯೊಬ್ಬರಿಗೂ ಮತ್ತು ಪ್ರತೀಯೊಂದಕ್ಕು ಸಮಯ ನಿಗದಿ ಪಡಿಸಿದ್ದಾನೆ. ಅವನ ತೀರ್ಮಾನಗಳು ಜಾರಿಯಾದರೆ ಅಕ್ರಮಿಗಳಿಗೆ ತಪ್ಪಿಸಿಕೊಳ್ಳುವ ಯಾವುದೇ ಅವಕಾಶ ಇರದು ಎಂದು ಕಲ್ಲೆಗ ಜುಮ್ಮಾ ಮಸೀದಿಯ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು.
ಅವರಿಂದು ಜುಮ್ಮಾ ಭಾಷಣ ಮಾಡುತ್ತಾ, ನಾವು ಪ್ರತೀ ದಿನವು ಅಕ್ರಮ ಎಸಗುತ್ತೇವೆ, ಇಸ್ಲಾಮಿಗೆ ವಿರುದ್ದವಾಗಿ ವರ್ತಿಸುತ್ತೇವೆ. ಸುಳ್ಳು ಮತ್ತು ಪಾಪಗಳನ್ನೂ ಆವರ್ತಿಸುತ್ತೇವೆ. ಅಲ್ಲಾಹನ ಧರ್ಮವನ್ನು ವಿನೋದ ಮತ್ತು ಮೋಜು ಮಾಡುತ್ತಲೂ ಇದ್ದೇವೆ. ದಿಕ್ಕಾರವು ನಮ್ಮಲ್ಲೂ ಇದೆ. ಅನೈತಿಕತೆ ಇದೆ, ಅನ್ಯಾಯವನ್ನೂ ಮಾಡುತ್ತಿದ್ದೇವೆ ಹೀಗಿದ್ದೂ ಅಲ್ಲಾಹನು ನಮಗೆ ಬದಲಾಗಲು ಅವಕಾಶ ಕೊಡುತ್ತಿದ್ದಾನೆ. ಮಾರಕ ರೋಗದ ಮೂಲಕ ಪರೀಕ್ಷಿಸುತ್ತಾನೆ. ಆಪತ್ತು ಸಂಕಷ್ಟಗಳ ಮೂಲಕ ನಮ್ಮನ್ನು ಸರಿದಾರಿಗೆ ಬರಲು ಒತ್ತಾಯಿಸುತ್ತಾನೆ. ಹೀಗಿದ್ದೂ ನಮ್ಮ ಹೃದಯಗಳು ಅಲ್ಲಾಹನ ಸ್ಮರಣೆ ಮತ್ತು ಅನುಸರಣೆಯ ಕಡೆ ಬರುತ್ತಿಲ್ಲ. ಭೂಮಿ ಕಂಪಿಸುವುದು ಮತ್ತು ನುಂಗುವುದಾದರೆ ಮೊದಲು ನಮ್ಮನ್ನು ನುಂಗಬೇಕು. ಕಾರಣ, ನಾವು ಅಲ್ಲಾಹನತ ಕುರಿತು ಗೊತ್ತಿದ್ದೂ ದಿಕ್ಕಾರದಲ್ಲಿದ್ದೇವೆ. ಅವರಿಗೆ ಅಲ್ಲಾಹನ ಪರಿಚಯವಿಲ್ಲ. ಹಾಗಾಗಿ ಅವರಿಗೆ ನಾವು ಇಸ್ಲಾಮನ್ನುತ ಪರಿಚಯಿಸಿಕೊಡಬೇಕು ಎಂದು ಖತೀಬರು ಹೇಳಿದರು.
ಎಲ್ಲವೂ ಭೂಮಿಯಲ್ಲಿ ತೀರ್ಮಾನ ಆಗುವುದಿಲ್ಲ. ಮಸೀದಿ ಉರುಳಿಸಿದ್ದು, ಮಂದಿರ ಕಟ್ಟಿದ್ದು, ಅದಕ್ಕೆ ಬೆಳ್ಳಿ ಇಟ್ಟಿಗೆ ಕೊಟ್ಟದ್ದು, ಎಲ್ಲವೂ ಪುನರುತ್ಥಾನದ ದಿನ ಇತ್ಯರ್ಥ ಆಗಲಿದೆ. ನಾವು ರಾಜಕೀಯ ಪಕ್ಷಗಳ ತವಕ್ಕುಲ್ ಬಿಟ್ಟು, ಅಲ್ಲಾಹನಲ್ಲಿ ತವಕ್ಕುಲ್ ಮಾಡಬೇಕು. ಕಾರ್ಯಪಾಲಕನಾಗಿ ಅಲ್ಲಾಹನೇ ಸಾಕು. ಇಸ್ಲಾಮಿನ ಇತಿಹಾಸ ಮತ್ತು ಚರಿತ್ರೆಗಳಲ್ಲಿ ನಮಗೆ ಪಾಠವಿದೆ. ಕಅಬಾ ಭವನವನ್ನೂ ಒಡೆಯಲು ಜನರು ಬರುತ್ತಾರೆ. ಈಗಿರುವ ಅಕ್ರಮಿಗಳಿಗಿಂತ ದೊಡ್ಡ ಅಕ್ರಮಿಗಳು ಆಗ ಇರುವರು. ಆ ಮೊದಲು ಇಸ್ಲಾಮಿನ ಪ್ರಕಾಶ ಭೂಮಿ ತುಂಬಲಿದೆ. ಅಲ್ಲಾಹನ ವಾಗ್ದಾನ ಸತ್ಯವಾದದ್ದು. ನಾವು ಪರಸ್ಪರ ಒಳಿತು – ಸತ್ಕರ್ಮ ಮತ್ತು ಪರೋಪಕಾರದಲ್ಲಿ ಸಂಘಟಿತರಾಗುವ. ಧರ್ಮ ಜಾತಿ ನೋಡದೆ ಮಾನವ ಸೇವೆ ಮಾಡುವ. ಆಗ ನಮ್ಮನ್ನು ಜನರು ಗುರುತಿಸುತ್ತಾರೆ. ಇಸ್ಲಾಮನ್ನು ಕಲಿಯುತ್ತಾರೆ ಎಂದ ಖತೀಬರು ಯಾರಿಗೂ ಇಲ್ಲಿ ಶಾಶ್ವತ ಇಲ್ಲ. ಪ್ರತೀಯೊಬ್ಬರ ಕರ್ಮಫಲವು ಅಲ್ಲಾಹನ ಬಳಿಯಲ್ಲಿದೆ.. ಸ್ವಂತ ಶರೀರವನ್ನು ನಾವು ನರಕದಿಂದ ರಕ್ಷಿಸಬೇಕಾಗಿದೆ. ಇರುವ ಮಸೀದಿಗಳನ್ನು ಸಾಮಾಜಿಕ ಕ್ರಾಂತಿ, ಶೈಕ್ಷಣಿಕ ಸೇವೆ, ಮನುಷ್ಯರ ಬದುಕಿನ ಪರಿವರ್ತನೆಯ ಕೇಂದ್ರವಾಗಿಸಬೇಕು. ಕ್ಲಪ್ತ ಸಮಯದಲ್ಲಿ ನಮಾಝ್ ನಿರ್ವಹಿಸಲು ಮಸೀದಿಗೆ ದಾವಿಸಿ ಬರಬೇಕು. ಪರಲೋಕ ಮತ್ತು ಇಹಲೋಕದ ಯಶಸ್ಸನ್ನು ಮಸೀದಿಯ ಮೂಲಕವೇ ರೂಪಿಸ ಬೇಕು. ಶಿಕ್ಷಣಕ್ಕೆ ಅತೀ ಹೆಚ್ಚು ನೆರವು ಕೊಡಲು, ಯುವಕರನ್ನು ಅಲ್ಲಾಹನ ಮಾರ್ಗದಲ್ಲಿ ತರಬೇತಿಗೊಳಿಸಲು, ಯುವತಿಯರನ್ನು ಇಸ್ಲಾಮಿನ ಬುನಾದಿಯಲ್ಲಿ ಬೆಳೆಸಲು ಮಸೀದಿಯು ಕೇಂದ್ರವಾಗಿ ಕಾರ್ಯಚರಿಸಬೇಕು ಎಂದು ಖತೀಬರು ಹೇಳಿದರು.
ನಾವು ಇಸ್ಲಾಮಿನ ವಿಶ್ವಾಸ- ಆಚರಣೆ – ಸಂಸ್ಕೃತಿ – ಸಂಪ್ರದಾಯಗಳನ್ನು ದೃಡವಾಗಿ ಅನುಸರಿಬೇಕು. ಮುಸ್ಲಿಮನ ವ್ಯಕ್ತಿತ್ವ – ಸ್ವಭಾವ – ಶಿಸ್ತು ಮತ್ತು ನೈತಿಕತೆ ನಮ್ಮಲ್ಲಿ ಇರಬೇಕು. ಅದು ಇಲ್ಲದೆ ನಾವು ಪ್ರಾರ್ಥಿಸಿದರೆ ಉತ್ತರ ಸಿಗದು. ಅಲ್ಲಾಹನು ಎಲ್ಲವನ್ನೂ ಬಹಳ ಹತ್ತಿರದಿಂದ ವೀಕ್ಷಿಸುತ್ತಾನೆ. ನಾವು ಅಲ್ಲಾಹನ ಪರಿಚಯ ಮಾಡಿಕೊಳ್ಳಬೇಕು. ಅಲ್ಲಾಹನ ಪರಿಚಯ ಮತ್ತು ಪ್ರಕೃತಿದತ್ತ ತೀರ್ಮಾನಗಳ ಬಗ್ಗೆ ಜ್ಞಾನ ಇಲ್ಲದವರು ತಮ್ಮ ಊಹೆಯನ್ನು ಹಿಂಬಾಲಿಸುತ್ತಾರೆ. ಮಸೀದಿ ಒಡೆದವರು ಇಂದು ನಾಶವಾಗಿ ಹೋಗಬೇಕು ಎಂದು ಹೇಳುವಾಗ, ಮಂದಿರ ಕಟ್ಟುತ್ತಿರುವುದು ನಮ್ಮಂತೆ ಅಲ್ಲಾಹನ ಸೃಷ್ಠಿಗಳು ಎಂಬುವುದನ್ನು ತಿಳಿಯಬೇಕು. ಲೋಕಪಾಲಕ – ಸೃಷ್ಠಿಕರ್ತ ಅಲ್ಲಾಹನನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳಬೇಕು ಎಂದ ಖತೀಬರು ಪಿರೌನನಿಗೆ ಅವಕಾಶ ಕೊಡಲಾಗಿತ್ತು. ಎಲ್ಲಾ ಪ್ರವಾದಿಗಳನ್ನೂ ಕಷ್ಟ – ಸಂಕಷ್ಟದಲ್ಲಿ ಪರೀಕ್ಷಿಸಲಾಗಿತ್ತು. ಹಲವು ಪ್ರವಾದಿಗಳ ಹತ್ಯೆ ಮಾಡಲಾಗಿತ್ತು. ಜಗತ್ತಿನ ಬದುಕು ಕ್ಷುಲ್ಲಕ ಮತ್ತು ನಶ್ವರವಾಗಿದೆ. ಪರಲೋಕವೇ ಶಾಶ್ವತ ಮತ್ತು ಉತ್ತಮ. ನಾವು ಜಮಾಅತ್ ಗಳ ಮೂಲಕ ಸಮುದಾಯವನ್ನು ಇಸ್ಲಾಮಿನ ಆದರ್ಶದಲ್ಲಿ ಬೆಳೆಸುವ. ವಿಜ್ಞಾನದಲ್ಲಿ ಪ್ರೋತ್ಸಾಹಿಸುವ. ದೇಶಸೇವೆಗೆ ಪ್ರೇರೇಪಿಸುವ. ಅವರನ್ನು ನಾಡಿನ ಸಜ್ಜನ ಸದೃಡ ಮತ್ತು ಸಶಕ್ತ ತಲೆಮಾರಾಗಿ ರೂಪಿಸುವ. ಕೋವಿಡ್ ಕಾಲದ ಈ ಅವದಿಯಲ್ಲಿ ಜಗೃತೆ ಪಾಲಿಸಿ. ಸರಕಾರದ ನೀತಿ ನಿಯಮವನ್ನು ಅನುಸರಿಸಿ. ಅಲ್ಲಾಹನು ಜಗತ್ತನ್ನು ಈ ಮಹಾ ಆಪತ್ತಿನಿಂದ ರಕ್ಷಿಸಲಿ. ಮನುಷ್ಯರ ಮೇಲೆ ಕರುಣೆ ತೋರಿಸಿ ನಮ್ಮನ್ನು ಸುರಕ್ಷಿತರನ್ನಾಗಿಸಲಿ ಎಂದು ಖತೀಬರು ಪ್ರಾರ್ಥಿಸಿದರು.
– ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.