ಮುಲ್ಕಿ (www.vknews.com) : ಜಗತ್ತಿನಲ್ಲೇ ಅತ್ಯಂತ ಶ್ರೇಷ್ಟ ಇತಿಹಾಸ ಇರುವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಸರಿಸಾಟಿ ಇಲ್ಲದ ನಮ್ಮ ಭಾರತ ದೇಶ ಮುಂದೆಯೂ ಹಾಗೇ ಭದ್ರವಾಗಿ ಉಳಿಯಲಿದೆ.
ಯಾರು ಏನೇ ತಿಪ್ಪರಲಾಗ ಹಾಕಿದರೂ ಭಾರತೀಯರಿಗೆ ರಕ್ತಗತವಾಗಿ ಬಂದ ಜಾತ್ಯಾತೀತ,ಮಾನವೀಯ ಗುಣಗಳನ್ನು ಯಾವ ರಾಜಕೀಯ ಪಕ್ಷಗಳಿಂದಲೂ ಅಳಿಸಲು ಸಾದ್ಯವಿಲ್ಲ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿ ಶುಕ್ರವಾರದ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಸ್ವತವಲ್ಲ.
ಈ ಹಿಂದೆ ವಿವಿಧ ರೀತಿಯಲ್ಲಿ ಜನರನ್ನು ಆಳಿದ ಶಕ್ತಿಗಳು ಕಾಲದ ಸುಳಿಗೆ ಸಿಲುಕಿ ನಾಮಾವಶೇಷ ಗೊಂಡಂತೆ ಈಗಿನವರೂ ಅಪ್ರಸ್ತುತ ವಾಗಲಿದ್ದಾರೆ. ಇತಿಹಾಸದ ಅಧ್ಯಯನ ನಡೆಸುವವರಿಗೆ ಈ ಸತ್ಯವನ್ನು ತಿಳಿದು ಕೊಳ್ಳಬಹುದು. ಜನರು ಪ್ರಬುದ್ದರಾದಂತೆ ನವ ತಲೆಮಾರು ಹೊಸ ಪ್ರಯೋಗಕ್ಕೆ ಮಾರು ಹೋಗುವುದು ಪ್ರಕೃತಿ ನಿಯಮ.
ಈ ದೇಶವನ್ನು ಸುಮಾರು ಎಂಟು ನೂರು ವರ್ಷಗಳ ಕಾಲ ಮೊಗಲರು ಆಳಿದರು.ಎರಡು ಶತಮಾನಕ್ಕೂ ಹೆಚ್ಚುಕಾಲ ಬ್ರಿಟಿಷರು ,ಪೋರ್ಚುಗೀಸರು ಮತ್ತಿತರರು ಆಳಿದರು.
ಇದೀಗ ಸ್ವಾತಂತ್ರ್ಯಾ ನಂತರ ಬ್ರಾಹ್ಮಣರು ವಿವಿಧ ಪಕ್ಷದ ಹೆಸರಲ್ಲಿ ಆಳುತ್ತಿದ್ದಾರೆ.ಒಂದಿಷ್ಟು ವರ್ಷಗಳ ಕಾಲ ಇದು ಹೀಗೇ ಮುಂದುವರಿಯ ಬಹುದು.ಆದರೆ ಮುಂದೆ ತಳಮಟ್ಟದ ಜಾತಿಯವರು ,ಹಿಂದುಳಿದವರು ಶಿಕ್ಷಣ ಕಲಿತು ಪ್ರಭುದ್ದಾರಾಗಿ,ಪ್ತಭುಗಳಾಗಿ ಅಧಿಕಾರದ ಪರಿಪೂರ್ಣ ಚುಕ್ಕಾಣಿ ಹಿಡಿಯುವ ಸಾದ್ಯಯತೆಯನ್ನು ತಳ್ಳಿಹಾಕಲಾಗದು.
ಬದಲಾವಣೆ ಜಗದ ನಿಯಮ,ಇಂದು ಅಧಿಕಾರದ ಸುಖ ಲೋಲುಪತೆಯಲ್ಲಿ ಮೈಮೆರೆತವರು ನಾಳೆ ಬೀದಿಬಿಕಾರಿಗಳಾಗಲೂ ಬಹುದು ಎಂದು ಹೇಳಿದ ದಾರಿಮಿಯವರು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳಿಗೆ ಮುಸ್ಲಿಮರು ಸದ್ಯ ನಿಂತು ಕೊಡದೇ ಸಮದೂರ ಸಿದ್ದಾಂತ ಪಾಲಿಸಿ ಬುದ್ದಿವಂತಿಕೆ ಮೆರೆಯುವುದೇ ಲೇಸು ಎಂದು ಅಭಿಪ್ರಾಯ ಪಟ್ಟರು.
ಮಸೀದಿ ಇದ್ದ ಜಾಗದಲ್ಲಿ ಕೋರ್ಟ್ ತೀರ್ಪು ಪ್ರಕಾರ ಮಂದಿರ ಆರಂಭ ಗೊಂಡದ್ದನ್ನು ಉಲ್ಲೇಖಿಸಿದ ದಾರಿಮಿಯವರು ಈ ಬಗ್ಗೆ ಮುಸ್ಲಿಮರು ತಲೆ ಕೆಡಿಸಿ ಕೊಳ್ಳದೇ ನಮ್ಮ ಮುಂದಿನ ಭವಿಷ್ಯವನ್ನು ಉಜ್ಚಲ ಗೊಳಿಸುವ ಕಡೆಗೆ ಚಿತ್ತ ಹರಿಸ ಬೇಕಾಗಿದೆ ಎಂದರಲ್ಲದೇ ಇನ್ನೂರು ವರ್ಷಗಳ ಕಾಲ ವಿವಾದದ ವಸ್ತುವಾಗಿದ್ದ ಬಾಬರಿಯನ್ನು ಉಳಿಸಿ ಕೊಳ್ಳಲು ಮುಸ್ಲಿಮರು ಶತ ಪ್ರಯತ್ನ ಪಟ್ಟಿರುವುದು ಜಗತ್ತಿನಲ್ಲೇ ಅದ್ವಿತೀಯ ಸಾಧನೆ ಎಂದರು.
ನಿಜವಾಗಿಯೂ ಈ ಮಸೀದಿ ವಿವಾದದ ಆರಂಭ ಬ್ರಿಟಿಷರ ಕುತಂತ್ರವಾಗಿದ್ದು ಅಂದು ಈಗಿನ ಯಾವುದೇ ಪಕ್ಷಗಳು ಆಸ್ತಿತ್ವದಲ್ಲಿ ಇರಲಿಲ್ಲ ಎಂದು ನೆನಪಿಸಿದರು. ತಪ್ಪಾದ ಇತಿಹಾಸ ಸೃಷ್ಟಿಸಿ ದೇಶದ ಹೆಚ್ಚಿನ ಹಿಂದು ಭಾಂದವರನ್ನು ಭಾವನಾತ್ಮಕವಾಗಿ ಕೆರಳಿಸಿದ ಪರಿಣಾಮ ಇಂದು ನಾವು ಈ ಹಂತಕ್ಕೆ ಬಂದು ನಿಂತಿದ್ದೇವೆ. ಮುಂದಿನ ದಿನಗಳಲ್ಲಿ ಇವರಿಗೆ ಸತ್ಯ ಏನೆಂದು ಮನವರಿಕೆಯಾದರೆ ಶಾಂತಿ ಕದಡುವವರಿಗೆ ಜ್ಞಾನೋದಯ ಉಂಟಾಗಿ ಮತ್ತೆ ದೇಶದಲ್ಲಿ ಶಾಂತಿ ಸೌಹಾರ್ಧತೆ ನೆಲೆ ನಿಂತು ದೇಶವು ಜಗತ್ತಿನ ರಾಷ್ಟ್ರಗಳ ಪೈಕಿ ಶೋಭಿಸಿ ನಿಲ್ಲಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ವಿವಿಧ ಸರಕಾರಗಳು ನೀಡುವ ಸವಲತ್ತು ಎಲ್ಲಾ ವರ್ಗದವರಿಗೂ ತಲುಪುವಂತದ್ದು. ಅದೇ ವೇಳೆ ಮುಸ್ಲಿಮರಿಗೆ ಅಧಿಕಾರದಲ್ಲಿ ಪಾಲು ದೊರಕಬೇಕಾದದ್ದು ಸಾಮಾಜಿಕ ನ್ಯಾಯದ ಬೇಡಿಕೆಯಾಗಿದೆ.ಆದಾಗ್ಯೂ ಮುಸ್ಲಿಮರು ತಮಗೆ ಒಂದೆರಡು ಸಚಿವ ಸ್ಥಾನ ದೊರಕದಿದ್ದರೂ ಕಳೆದು ಕೊಳ್ಳುವಂತದ್ದೇನೂ ಇಲ್ಲ.ಈಗ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪ್ರಾತಿನಿಧ್ಯ ದೊರಕದಿರುವುದರಿಂದ ಮುಸ್ಲಿಮರು ಬಿಕ್ಷೆ ಎತ್ತುವ ಗತಿ ಬಂದಿಲ್ಲ.
ಅದೇ ವೇಳೆ ನಾವು ನಮಗೆ ನೈತಿಕತೆಯ ಚೌಕಟ್ಟನ್ನು ಮೀರದೆ ತಮಗೆ ಅಲ್ಲಾಹು ನೀಡಿದ ಆರೋಗ್ಯ,ಬುದ್ದಿ,ಸಂಪತ್ತನ್ನು ಸಮಾಜದ ಶೈಕ್ಷಣಿಕ,ಆರೋಗ್ಯ,ಆರ್ಥಿಕ ಕ್ಷೇತ್ರದಲ್ಲಿ ಸದ್ವಿನಿಯೋಗ ಮಾಡುವ ನಿಟ್ಟಿನಲ್ಲಿ ಹಲವು ವ್ಯೂಹ ಗಳನ್ನು ರಚಿಸಿ ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಯಾವುದೇ ರಾಜಕೀಯ ಪಕ್ಷಗಳ ಹಂಗಿಲ್ಲದೇ ಕ್ರೈಸ್ತ ಸಮುದಾಯದಂತೆ ನಮಗೂ ತಲೆಎತ್ತಿ ನಡೆಯ ಬಹುದಾಗಿದೆ ಎಂದ ಉಸ್ತಾದರು ಸಾಮಾಜಿಕ ಮೀಡಿಯಾಗಳಲ್ಲಿ ಅನಗತ್ಯ ಚರ್ಚೆಗೆ ನಿಂತು ಕೊಡದೇ ತಮ್ಮ ಪರಿಶ್ರಮವನ್ನು ಅಭಿವೃದ್ದಿಯ ಚಟುವಟಿಕೆಗಳಿಗೆ ಮೀಸಲಿಡಬೇಕಾಗಿದೆ ಎಂದರು.
ದೇಶದ ಬಹುಸಂಖ್ಯಾತ ಹಿಂದು ಭಾಂದವರ ಜೊತೆ ಪ್ರತೀ ನಿಮಿಷದಲ್ಲೂ ನಾವು ಸೌಹಾರ್ಧತೆ ಯ ಹಸ್ತವನ್ನೇ ಚಾಚ ಬೇಕಾಗಿದ್ದು ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ತಪ್ಪು ಕಲ್ಪನೆಗೊಳಗಾದ ಮುಗ್ದರನ್ನು ಅದರಿಂದ ಮುಕ್ತಗೊಳಿಸಲು ಪ್ರಯತ್ನ ಪಡಬೇಕಾಗಿದೆ ಎಂದ ಅವರು ಇಸ್ಲಾಂ ಧರ್ಮದ ಆಧಾರದಲ್ಲಿ ಎಲ್ಲಾ ಮಾನವರನ್ನು ಪ್ರೀತಿಸಿ ಮುನ್ನಡೆದರೆ ನಮ್ಮ ಗುಣ ಸ್ವಭಾವಕ್ಕೆ ಎಲ್ಲರೂ ಮಾರು ಹೋಗಿ ನಮ್ಮನ್ನೂ ಅವರು ಪ್ರೀತಿಸಲು ಶುರುಮಾಡುತ್ತಾರೆ ಎಂದು ಅಭಿಪ್ರಾಯಿಸಿದರು. ಒಳಿತು ಯಾವತ್ತೂ ಒಳಿತೇ ಆಗಿರುತ್ತದೆ,ಕೆಡುಕನ್ನು ಜನ ಕ್ರಮೇಣ ತಿರಸ್ಕರಿಸುತ್ತಾರೆ.ಆದ್ದರಿಂದ ಒಳಿತಿನಲ್ಲಿ ನಾವು ಸ್ಥಿರವಾಗಿ ನಿಂತರೆ ಕೆಡುಕು ತನ್ನಷ್ಟಕ್ಕೇ ಕುಸಿದು ಬೀಳಲಿದೆ ಎಂದ ಖತೀಬರು
ಸತ್ಯ ವಿಶ್ವಾಸದ ಮೇಲೆ ನೆಲೆ ನಿಂತರೆ ನೀವು ಯಾರನ್ನೂ ಭಯಪಡುವ ಅಥವಾ ನಿಮಗೆ ನೀವೇ ದುಖಿಸುವ ಅಗತ್ಯ ಉಂಟಾಗುವುದಿಲ್ಲ.ಮತ್ತು ನೀವೇ ಜಗತ್ತಿನಲ್ಲಿ ಉತ್ತಮರಾಗಿರುತ್ತೀರಿ ಎಂಬ ಕುರ್ಆನ್ ಸೂಕ್ತವನ್ನು ಪಠಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.