(www.vknews.com) : “ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ ಶುದ್ಧ ಪೂರ್ಣಾಂ ಚಿದಾನಂದಂ ಸದಾಶಿವ ಮಹಂ ಭಜೇ।। ಭಾರತೀ ಭ್ರಾಮರೀ ಕಲ್ಪಾ ಕರಾಳೀ ಕೃಷ್ಣ ಪಿಂಗಳ| ಬ್ರಾಹ್ಮೀ ನಾರಾಯಣೀ ರೌದ್ರೀ ಚಂದ್ರಾಮೃತ ಪರಿವೃತಾ||” ಎಂಬ ಶ್ಲೋಕವಾಣಿಯಂತೆ ರಾರಾಜಿಸುತ್ತ ಸುತ್ತಲೂ ಹಸಿರುಡುಗೆಯನ್ನು ಉಟ್ಟು ಹಚ್ಚ ಹಸಿರಿನ ಸುಂದರ ಪ್ರಕೃತಿ. ಮೇಲೆ ಮೇಘಗಳ ತುಂಬಿದ ಬಾಗಿದ ಗಗನ. ಹುಬ್ಬಿನಂತೆ ಬೆಂಡಾದ ಕಾಮನಬಿಲ್ಲಿನ ಮಿಂಚು. ಮೈಗೆ ಚೂರು ಚೂರು ಚಿಮ್ಮುವ ತಣ್ಣನೆಯ ಚಳಿ, ಭುವಿಗೆ ಮುತ್ತಿಕ್ಕಿ ಬಂದು ಅಪ್ಪುವ ತಂಗಾಳಿ, ಸಸ್ಯರಾಶಿಗಳ ಹಸಿರು ಹಾಸಿದ ತಳಿರು ತೋರಣ. ಅಂಕು ಡೊಂಕಾಗಿ ಹಾವಿನ ಹಾಗೆ ಹೋಗುವ ಮಾರ್ಗ. ಆ ಚಾರಣ ಸುತ್ತಿ ಸಿಗುವುದೇ ದಿವ್ಯ ದೇಗುಲ ನೋಡುವುದೇ ಆನಂದಮಯ. ಅಲ್ಲಿ ಇರುವುದೇ ಚಿಕ್ಕ ದೇವಮ್ಮನೊಂದಿಗೆ ಸಪ್ತ ಮಾತ್ರಿಕೆಯ ಗುಡಿ ಗೋಪುರ. ಕಾಲಭೈರವನ ಶಿವ ಸಾನಿಧ್ಯವಾದ ಭೀಮಾಶಂಕರೇಶ್ವರ ಲಿಂಗದ ನೋಡುದೇ ನಯನ ಮನೋಹರ. ಕೆಳಗಿನಿಂದ ಮೇಲೆ ಬೆಟ್ಟ ನೋಡಿದರೆ ಓರ್ವ ನಾರಿಯೂ ಆಕಾಶಕ್ಕೆ ಮುಖ ಮಾಡಿ ಮಲಗಿದಂತೆ ಸುಂದರಾಕೃತಿ ಕಣ್ಮನ ಸೆಳೆಯುತ್ತದೆ.
ಪೌರಾಣಿಕ ಹಿನ್ನೆಲೆ
ಕೃತಯುಗದಲ್ಲಿ ಆದಿಮಾಯೆಯು ಹಲವಾರು ರಾಕ್ಷಸರನ್ನು ಕೊಂದದ್ದು ಎಲ್ಲರೂ ಅರಿತಿರುತ್ತಾರೆ. ಮೈಸೂರಿನಲ್ಲಿ ಚಾಮುಂಡಿ ತಾಯಿ ಮಹಿಷಾಸುರನ ಕೊಂದ ಬಳಿಕ ಉಳಿದ ರಾಕ್ಷಸರನ್ನು ಕೊಲ್ಲಲು ಸಪ್ತಮಾತೃಕೆಯರ ರೂಪ ನರಸಿಂಹಿ, ಬ್ರಹ್ಮಣಿ, ಮಾಹೇಶ್ವರಿ, ಕೌಮಾರಿ,ವೈಷ್ಣವಿ, ವಾರಾಹಿ, ಮತ್ತು ಇಂದ್ರಾಣಿರಾಗಿ ರೂಪ ತಾಳಿ ವಿವಿಧ ರಾಕ್ಷಸರಾದ ಬಿಡಲಾಸುರ, ದುರ್ಗಾಸುರ, ದುರ್ಮಾಕ್ಷ, ರಕ್ತಬೀಜಾಸುರ. ಶುಂಭ, ನಿಶುಂಭ ಮೊದಲಾದ ದುಷ್ಟ ರಾಕ್ಷಸರ ಉಪಟಳ ಈ ಕಾನನದ ಬೆಟ್ಟದಲ್ಲಿ ಅತಿಯಾಗಿ ಇತ್ತು. ಆಗ ಆ ರಾಕ್ಷಸರಿಗೆ ಹೆದರಿ ದೇವಿಯು ಈ ಬೆಟ್ಟದ ಗುಹೆಯಲ್ಲಿ ಅಡಗಿ ಕುಳಿತಳಂತೆ, ನಂತರ ಸಪ್ತ ಮಾತ್ರಿಕೆಯರೊಂದಿಗೆ ಮೈಸೂರಿನ ಚಾಮುಂಡಿ ದೇವಿ ತಾಯಿ ಚಿಕ್ಕ ಮಹಾದಮ್ಮ ಬಂದು ರಾಕ್ಷಸರ ವಧೆ ಮಾಡಿದಳಂತೆ. ಹೀಗೆ ದುಷ್ಟರ ವಧೆಯಾಗಿ ಶಿಷ್ಟರ ಪಾಲಿಸುತ್ತ ಮೂಲ ರೂಪದಲ್ಲಿ ಸಪ್ತ ಮಾತ್ರಿಕೆಯರೊಂದಿಗೆ ಈ ಬೆಟ್ಟದ ತುದಿಯಲ್ಲಿ ಚಿಕ್ಕ ದೇವಮ್ಮನ ತಾಯಿ ನೆಲೆ ನಿಂತಿದ್ದಾಳೆ. ಇವಳು ಇಲ್ಲಿ ಗುಹೆಯೊಳಗೆ ಹೆದರಿ ಅಡಗಿಕೊಂಡಿದ್ದರಿಂದ ಶಿವನು ಇಲ್ಲಿ ರೂಪ ಬದಲಿಸಿ ಕಾಲಭೈರವನ ರೂಪದಲ್ಲಿ ಇವಳಿಗೆ ನೆರಳಾಗಿ ನೆಲೆಸುತ್ತಾನೆ. ಮುಂದೆ ಕಪಿಲಾ ನದಿಯು ತಣ್ಣನೆ ಬೆಟ್ಟದ ಎದುರಿಗೆ ಹರಿಯುತ್ತದೆ. ವರುಷಕ್ಕೊಮ್ಮೆ ಆ ಕಪಿಲಾ ನದಿಯಲ್ಲಿ ಉತ್ಸವ ಮೂರ್ತಿಯನ್ನು ಅವಿಭ್ರತ ಸ್ನಾನ ಮಾಡಿ ತೆಪ್ಪೋತ್ಸವ ಆಚರಿಸುತ್ತಾರೆ.
ಹಿಂದೆ ಕಪಿಲೆಯ ಆ ದಡದಿಂದ ಬೆಟ್ಟಕ್ಕೆ ಹತ್ತಿ ಓರ್ವ ಮಹಿಳೆಯು ಹಾಲನ್ನು ತಂದು ಒಪ್ಪಿಸುತ್ತಿದ್ದಳಂತೆ, ಒಂದು ದಿನ ಬರುವಾಗ ಆಕೆಯು ಆಯತಪ್ಪಿ ನದಿಗೆ ಬಿದ್ದಾಗ ತಂದ ಹಾಲು ನದಿಯಲ್ಲಿ ಚೆಲ್ಲಿ ಹೋಯಿತು. ಆಕೆ ನೀರಿಗೆ ಬಿದ್ದ ಹಾಲನ್ನು ತಂದು ಭಕ್ತಿಯಿಂದ ಕೊಟ್ಟಾಗ ದೇವಿಯು ಹಾಲಾಗಿ ಸ್ವೀಕರಿಸುತ್ತಾಳಂತೆ. ಹೀಗೆ ಹಾಲು ಬಿದ್ದ ಸ್ಥಳದಲ್ಲಿ ನೊರೆಯಾಗಿ ನೀರು ಹರಿಯುದನ್ನು ಕಂಡು ಹಾಲ್ಗಡ ಎಂದು ಉರಾಯಿತು. ಹೀಗೆ ಕಪಿಲೆ ಅಲ್ಲಿ ಹರಿಯುದರಿಂದ ಹಾಲ್ ಗಡದಲ್ಲಿ ಒಂದು ವರುಷಕ್ಕೊಮ್ಮೆ ತೆಪ್ಪೋತ್ಸವ ನಡೆಯುತ್ತದೆ. ಮುಂದೆ ಓರ್ವ ರಾಕ್ಷಸ ಕುಂಟನಾಗಿ ದೇವಿಯ ಕಂಡು ಭಯಭೀತನಾಗಿ ಶರಣಾಗುತ್ತಾನೆ. ಬೆಟ್ಟದ ಬುಡದಲ್ಲಿ ಶರಣಾದ ರಾಕ್ಷಸನನ್ನು ಕಾವಲುಗಾರನಾಗಿ ದೇವಿ ನೇಮಿಸುತ್ತಾಳೆ.
ಈ ವೃತ್ತಾಕಾರದ ಬೆಟ್ಟದ ಮೇಲಿನ ದೇಗುಲ. ವಿವಿಧ ಶಿಲ್ಪಕಲಾಕೃತಿ ಹೊಂದಿದೆ. ಮೊದಲು ಪುನ್ನಾಟ ಅರಸರು ಅಧಿದೇವತೆಯಾಗಿ ದೇಗುಲವನ್ನು ನಿರ್ಮಿಸಿದರು. ಹಾಗು ಚಿಕ್ಕ ದೇವಮ್ಮನ ದೇವಿಯನ್ನು ಆರಾಧಿಸುತ್ತಿದ್ದರು. ಯದುವಂಶದವರು, ನಂತರ ಚೋಳರು, ಮೈಸೂರಿನ ರಾಜವಂಶದವರು ಆಡಳಿತ ಹಾಗು ಅಭಿವೃದ್ಧಿಯನ್ನು ಮಾಡಿದರು. ಈಗ ದೇಗುಲದ ವವ್ಯಹಾರವನ್ನು ಆಡಳಿತ ಅಧಿಕಾರಿಯಾಗಿ ಸರಕಾರದ ಮುಜರಾಯಿ ಇಲಾಖೆಯವರು ಮಾಡುತ್ತಿದ್ದರು. ಯುಗಾದಿ ಸಂದರ್ಭದಲ್ಲಿ ವಿಶೇಷ ಜಾತ್ರಾಮಹೋತ್ಸವ ನಡೆಯುತ್ತದೆ. ದಿನ ನಿತ್ಯವೂ ಭಕ್ತರಿಗೆ ದರುಶನದ ಭಾಗ್ಯ ಸಿಗುತ್ತದೆ. ಬೆಟ್ಟದಿಂದ ಸುತ್ತಲು ನೋಡಿದರೆ ಸುಂದರ ಪ್ರಕೃತಿ ಕಾಣುದೆ ಚೆಂದ. ಎದುರಿಗೆ ಎರಡು ಬೆಟ್ಟ ನಡುವೆ ನದಿಗೆ ಜಲಾಶಯ ನಿರ್ಮಿಸಿದ್ದಾರೆ. ಆ ಸ್ಥಳಕ್ಕೆ ಕೂಡುನದಿ ಜಲಾಶಯ ಎಂದು ಕರೆಯುತ್ತಾರೆ. ಆ ಸ್ಥಳವನ್ನು ಕಾಣಲು ಸುಂದರವಾಗಿದೆ. ಅಲ್ಲದೆ ಕಬಿನಿ ನದಿ ಹರಿಯುದು ಸಹ ಬೆಟ್ಟದ ತುದಿಯಲ್ಲಿ ಕಾಣಬಹುದು. ಹೀಗೆ ಪ್ರಕೃತಿಯ ಮಧ್ಯೆ ಸುಂದರ ನದಿಗಳು ಜಲಾಶಯಗಳು ಎಲ್ಲ ಬೆಟ್ಟದ ಮೇಲಿಂದ ನೋಡಿ ಆನಂದ ಪಡುವುದೇ ಸಂಭ್ರಮ.
ನಂಬಿ ಬಂದ ಭಕ್ತರ ಮೊರೆಯನ್ನು ಕೇಳಿ ಇಂಬನ್ನು ಕೊಡುತ್ತ, ಭಕ್ತರ ಇಷ್ಟಾರ್ಥ ಇರೆಡಿಸುತ್ತಾ, ಭಕ್ತರ ಪಾಲಿಗೆ ವರವಾಗಿ ಚಿಕ್ಕದೇವಮ್ಮ ಮಹಾತಾಯಿ ಸಪ್ತಮಾತ್ರಿಕೆಯರು, ಭೀಮಾಶಂಕರೇಶ್ವರ, ಕಾಲಭೈರವೇಶ್ವರ ದೇವರೊಂದಿಗೆ ಅಭಯಪ್ರಧಾವಾಗಿದ್ದಾಳೆ. ಚಿಕ್ಕದೇವಮ್ಮನ ಬೆಟ್ಟ ಮೈಸೂರಿನಿಂದ 60 ಕಿ.ಮೀ. ಮತ್ತು ಹೆಗ್ಗಡದೇವನ ಕೋಟೆಯಿಂದ 25 ಕಿ.ಮೀ. ದೂರದಲ್ಲಿದೆ. ಹೆಗ್ಗಡದೇವನ ಕೋಟೆಯಿಂದ ಹೊರಟು, ಹ್ಯಾಂಡ್ ಪೋಸ್ಟ್ ಸರಗೂರು, ಪುರದಕಟ್ಟೆ ಮಾರ್ಗವಾಗಿ ಚಿಕ್ಕದೇವಮ್ಮನ ದೇವಾಲಯಕ್ಕೆ ಹೋಗಬಹುದು. ಚಾಮರಾಜನಗರ ಮಾರ್ಗವಾಗಿ ಬರುವವರು ಗುಂಡ್ಲುಪೇಟೆ, ಬೇಗೂರು ಮಾರ್ಗವಾಗಿ ಇಲ್ಲಿಗೆ ತಲುಪಬಹುದು ಮೂಲ ಸೌಕರ್ಯದ ಕೊರತೆಯು ಸಹ ಈ ಪ್ರವಾಸಿ ದೇಗುಲಕ್ಕೆ ಇದೆ. ಕರ್ನಾಟಕ ಸರಕಾರ ಹಾಗು ವಿವಿಧ ಇಲಾಖೆಗಳು ಮುಂದೆ ಗಮನ ಹರಿಸಬೇಕಾಗಿದೆ.
🖋 ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.