(www.vknews.com) : ಸರಿ-ತಪ್ಪುಗಳಾಚೆಗೆ ವಿಮರ್ಶೆಯೆತ್ತಿಕೊಂಡಾಗ ಸಾಮಾನ್ಯವಾಗಿ ಜನರು ತಮ್ಮ ನಿಲುವಿನಲ್ಲೇ ಸಮರ್ಥನೆ ಮಾಡಿಕೊಳ್ಳುತ್ತಾರೆ ವಿನಃ ಸತ್ಯ ಮತ್ತು ನ್ಯಾಯದ ಕುರಿತಾಗಿ ಹೆಚ್ಚಿನವರು ಯೋಚಿಸಲಾರರು. ತಪ್ಪುಗಳನ್ನು ಒಪ್ಪಿಕೊಂಡು ಅದರ ಮೂಲಕ ಸರಿದಾರಿಯಲ್ಲಿ ಬಿದ್ದಿರುವ ಕಲ್ಲುಮುಳ್ಳು ಬದಿಗೆ ಸರಿಸಿ ಮುನ್ನಡೆಯುವ ಮನಸ್ಸಿದ್ದರೆ ಮನುಷ್ಯ ಪರಿಪೂರ್ಣನಾಗುತ್ತಾನೆ. ವಾಸ್ತವದಲ್ಲಿ ಇಲ್ಲಿ ಪರಿಪೂರ್ಣರು ಯಾರೂ ಇಲ್ಲ. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ತಪ್ಪುಗಳಿರುತ್ತವೆ, ಕೆಲವೊಮ್ಮೆ ಸಂದರ್ಭಕ್ಕನುಗುಣವಾಗಿ ಆ ಕ್ಷಣಕ್ಕೆ ತಪ್ಪು ಸರಿಯಾಗಲೂಬಹುದು.
ಹೇಳಿ ಬರುತ್ತಿರುವುದು ಮೊನ್ನೆ ಬೆಂಗಳೂರಿನ ಕೆಜಿ & ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ. ಪ್ರವಾದಿ ನಿಂದನೆಯ ಕಾರಣಕ್ಕೆ ಜನ ಆಕ್ರೋಶಗೊಂಡು ಅತಿರೇಕದ ವರ್ತನೆ ಮಾಡಿದ್ದಾರೆ ಎನ್ನುವುದಷ್ಟೇ ಸುದ್ದಿಯಾಯಿತು. ಗಲಭೆ ಭುಗಿಲೆದ್ದು ಮೂರು ಅಮಾಯಕ ಯುವಕರ ಪ್ರಾಣಕ್ಕೂ ಕುತ್ತು ತಂದಿತ್ತು. ನೂರಾರು ಮಂದಿ ಕತ್ತಲು ತುಂಬಿದ ಕಂಬಿಕೋಣೆಯಲ್ಲಿ ಬಂಧಿಸಲ್ಪಟ್ಟರು. ಪ್ರಕರಣದ ಪೂರ್ಣ ಹೊಣೆಯನ್ನು ನಿರ್ದಿಷ್ಟ ಪಕ್ಷವೊಂದಕ್ಕೆ, ಧರ್ಮವೊಂದಕ್ಕೆ ಎತ್ತಿಕಟ್ಟಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಉರಿಯುತ್ತಿರುವ ಬೆಂಕಿಯಲ್ಲಿ ಚಳಿಕಾಯಿಸಿಕೊಂಡಾಗ ಸಾಥ್ ನೀಡಿದ್ದು ಸಾಮಾಜಿಕ ಪ್ರಗತಿಪರರೆನಿಸಿಕೊಂಡವರಲ್ಲಿ ಕೆಲವರು. ರಾಜಕೀಯದಲ್ಲಿ ಇದು ಸಹಜವೇ. ಸಾವಿನಲ್ಲೇ ಅವರು ಬದುಕುತ್ತಿದ್ದಾರೆ. ಮಾಧ್ಯಮಗಳೂ ಅವರ ಎಂಜಲಿನಲ್ಲೇ ಹೊಟ್ಟೆತುಂಬಿಸುತ್ತಿದ್ದಾರೆ. ಇದರ ನಡುವೆ ಪ್ರಜ್ಞಾವಂತರೂ ಸೇರಿಕೊಂಡಿದ್ದು ವಿಪರ್ಯಾಸ.
ನವೀನ್ ಎಂಬ ದುಷ್ಕರ್ಮಿಯ ಒಂದು ಫೇಸ್ಬುಕ್ ಪೋಸ್ಟ್ ಇಷ್ಟೆಲ್ಲಾ ರಾದ್ಧಾಂತವೆಬ್ಬಿಸಿದಾಗ ಇಲ್ಲಿ ಹೆಚ್ಚಿನವರಿಗೆ ತಪ್ಪಾಗಿ ಕಂಡಿದ್ದು ಜನರ ಆಕ್ರೋಶ ಮಾತ್ರ. ಪ್ರವಾದಿ ನಿಂದನೆ, ಧಾರ್ಮಿಕ ಭಾವನೆಗೆ ದಕ್ಕೆಯುಂಟುಮಾಡುವುದು, ಅಲ್ಪಸಂಖ್ಯಾತರನ್ನು ಶೋಷಣೆಗೊಳಪಡಿಸುವುದು ನಮ್ಮಲ್ಲಿ ಇದೇನೂ ಮೊದಲಲ್ಲ. ಹಿಂದಿನಿಂದಲೇ ನಡೆಯುತ್ತಲೇ ಇದೆ ಮತ್ತು ಅದರ ವಿರುದ್ಧ ಸಮರಗಳೂ ನಡೆದಿವೆ. ಯಾವುದೂ ಫಲಶ್ರುತಿ ಕಂಡಿಲ್ಲ ಅನ್ನುವುದು ವಿಪರ್ಯಾಸ. ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲಾ ಧರ್ಮಕ್ಕೂ ಅವಕಾಶವಿದೆ ಜೊತೆಗೆ ಕಾನೂನಿನಡಿಯಲ್ಲಿ ಒಂದು ಧರ್ಮವನ್ನು ಅಥವಾ ಧರ್ಮನಾಯಕರನ್ನು ಟೀಕಿಸುವುದೂ ಅಪರಾಧವೇ. ಹಾಗಿರುವಾಗ ಅದನ್ನು ಪ್ರಶ್ನಿಸುವ ಹಕ್ಕು ಕೂಡ ಜನರಿಗಿದೆ. ಬೆಂಗಳೂರಿನಲ್ಲಿ ನಡೆದಿದ್ದೂ ಅದೇ, ಆತ ಮೊದಲಬಾರಿಯೇನಲ್ಲ ಇಂತಹ ಪೋಸ್ಟ್ ಗಳನ್ನು ಮಾಡುತ್ತಿರುವುದು. ಜನರನ್ನು ಕೆರಳಿಸಬೇಕು, ಆಕ್ರೋಶಿತಗೊಳಿಸಬೇಕೆನ್ನುವ ದುರುದ್ದೇಶ ಇದ್ದುದರಿಂದಲೇ ಏನೋ ನವೀನ್ ಪದೇ ಪದೇ ಇಂತಹ ಅವಮಾನ ಮಾಡುತ್ತಾ ಮುಂದುವರಿದಿದ್ದ. ಇದನ್ನು ಪ್ರಶ್ನಿಸಿ, ಕಾನೂನಾತ್ಮಕವಾಗಿ ಶಿಕ್ಷಿಸುವಂತೆ ಕೋರಿ ಅಲ್ಲಿನ ಮುಸಲ್ಮಾನ ಬಾಂಧವರು ಪೋಲೀಸ್ ಠಾಣೆಯ ಮೆಟ್ಟಿಲೇರಿದಾಗ ಪೋಲೀಸರು ಸರಿಯಾದ ಕ್ರಮ ಕೈಗೊಂಡಿದ್ದರೆ ಅವತ್ತು ಅಷ್ಟೊಂದು ರಾದ್ಧಾಂತವಾಗುತ್ತಿರಲಿಲ್ಲ. ಜಾತ್ಯಾತೀತ ಪಕ್ಷವೊಂದರ ನಾಯಕನ ಆಪ್ತ ಸಂಬಂಧಿಯೇ ಈ ರೀತಿ ವರ್ತಿಸುವಾಗ ಜನರು ಸಾಮಾನ್ಯವಾಗಿ ತುಸು ಹೆಚ್ಚೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲಿ ಮೊನ್ನೆ ನಡೆದಿದ್ದು ಶಾಂತಿಯುತ ಪ್ರತಿಭಟನೆಯೇ ಆಗಿತ್ತು. ಇವತ್ತು ಅಪರಾಧಿ ಸ್ಥಾನದಲ್ಲಿ ನಿಲ್ಲಲ್ಪಟ್ಟಿರುವ ಪಕ್ಷ ಶಾಂತಿ ಕಾಪಾಡುವುದರಲ್ಲೇ ಸಾಹಸ ನಡೆಸುತ್ತಿತ್ತು. ಒಂದು ಪಕ್ಷದ ಮುಖಂಡರೊಬ್ಬರು ಪೋಲೀಸರ ಸಮ್ಮುಖದಲ್ಲೇ ಶಾಂತಿಪಾಠ ಮಾಡಿ ಜನರನ್ನು ಓಲೈಸುತ್ತಿದ್ದರೂ ಕೂಡ ಮರುದಿನ ಅವರೂ ಬಂಧಿಸಲ್ಪಡುತ್ತಾರೆಂದರೆ ಅರ್ಥವೇನಿಲ್ಲಿ? ಕನ್ನಡ ಮಾಧ್ಯಮಗಳಿಗಂತೂ ಹಬ್ಬವಾಗಿತ್ತದು. ನವೀನ್ ಎಂಬ ಪ್ರವಾದಿ ನಿಂದಕನ ಬಂಧನಕ್ಕೆ ಆಗ್ರಹಿಸಿ ಸೇರಿದ ಜನರೆಡೆಯಲ್ಲಿ ಯಾವುದೋ ಒಂದು ಗುಂಪು ಒಂದಷ್ಟು ಅಹಿತಕರ ವರ್ತನೆ ನಡೆಸಿದಾಗಲೂ ಹತ್ತಿರದ ದೇವಸ್ಥಾನಕ್ಕೆ ಕಾವಲಾಗಿ ನಿಂತು ಕಾಪಾಡಿದ ಸಹೋದರರನ್ನು ಮೆಚ್ಚಿಕೊಳ್ಳಲು ಮಾಧ್ಯಮಗಳಿಗೋ, ರಾಜಕಾರಣಿಗಳಿಗೋ ಮನಸ್ಸಾಗಲಿಲ್ಲ. ನವೀನ್ ಹಚ್ಚಿದ ಕಿಡಿಗೆ ಅವು ಪೆಟ್ರೋಲ್ ಸುರಿಯುತ್ತಲೇ ಇದ್ದವು.
ಆಕ್ರೋಶಿತ ಜನ ಮಾಡಿದ್ದರಲ್ಲೂ ತಪ್ಪಿರಬಹುದು. ಆದರೆ ಈ ಎಲ್ಲಾ ಘಟನೆಗೆ ಮೂಲ ಕಾರಣದ ಬಗ್ಗೆ ಯಾಕೆ ಮೌನ?.. ಮಸಲ್ಮಾನರು ಹಿಂದಿನಿಂದಲೂ ತುಳಿಸಿಕೊಂಡೇ ಬೆಳೆದವರು. ಏನು ಮಾಡಿದರೂ ಕೂಡ ಅದರಲ್ಲಿ ಲೋಪ ಹುಡುಕಿ ಚರ್ಚೆಗೆ ತರಲಾಗುತ್ತದೆ. ಭಾರತದಲ್ಲಿ ಮುಸ್ಲಿಮರು ಎಷ್ಟು ಶೋಷಣೆಗೊಳಪಟ್ಟಿದ್ದಾರೆಂದರೆ ಆಗಾಗ ನಮ್ಮೊಳಗಿನ ದೇಶಪ್ರೇಮವನ್ನು ತೋರ್ಪಡಿಸುತ್ತಲೇ ಇರಬೇಕು. ಭಯೋತ್ಪಾದಕರು, ಕೋಮುವಾದಿಗಳು, ಉಗ್ರಗಾಮಿಗಳು ಎಲ್ಲಾ ಬಿರುದೂ ಶಾಂತಿಯನ್ನೇ ಉಸಿರಾಡುವ ಮುಸಲ್ಮಾನರಿಗೆ ನೀಡಲಾಗುತ್ತದೆ. ಈಗ ತಲೆಬಾಗಿ ತಲೆಬಾಗಿ ಬೆನ್ನು ಕೂಡ ನೇರನಿಲ್ಲುತ್ತಿಲ್ಲ. ಈ ಹಿಂದೆ NRC ವಿಚಾರವಾಗಿ ಮಂಗಳೂರಿನಲ್ಲಿ ಗಲಭೆಯಾದಾಗಲೂ, ದೆಹಲಿ ಹೊತ್ತಿಉರಿದಾಗಲೂ ಹೊಣೆಗಾರಿಕೆ ಮುಸಲ್ಮಾನರ ಮೇಲೆಯೇ ಇತ್ತು. ತಪ್ಪಿತಸ್ಥರು ಯಾರು ಎಂಬುದು ಇಡೀ ಸಮಾಜಕ್ಕೆ ತಿಳಿದಿದ್ದರೂ ಕೂಡ ಒಪ್ಪಿಕೊಳ್ಳುವಂತೆಯೋ, ನ್ಯಾಯ ಅಥವಾ ಸತ್ಯವನ್ನು ಕೇಳುವಂತೆಯೂ ಇಲ್ಲ.
ಡಿಜೆಹಳ್ಳಿಯಲ್ಲಿ ನಡೆದ ಅಷ್ಟೂ ಅವಾಂತರಕ್ಕೆ ನೇರಹೊಣೆ ಪೋಲೀಸರು ಮತ್ತು ಸರ್ಕಾರವೇ ಕಾರಣ. ಹಿಂದೊಮ್ಮೆ ಕನ್ನಡ ಮಾಧ್ಯಮದ ನಿರೂಪಕನೊಬ್ಬ ಇದೇ ರೀತಿ ಪ್ರವಾದಿ ನಿಂದನೆಗೈದಾಗಲೂ ಇಡೀ ರಾಜ್ಯಾದ್ಯಂತ ಸುಮಾರು 800 ರಷ್ಟು ಕೇಸ್ ದಾಖಲಾಗಿದ್ದರೂ ಕಾನೂನು ನ್ಯಾಯದ ಪರ ನಿಲ್ಲಲಿಲ್ಲ. ಆ ಬಳಿಕವೂ ಆತ ನಿರಂತರವಾಗಿ ಮುಸಲ್ಮಾನರ ವಿರುದ್ಧ ಕಿಡಿಕಾರಿಯೇ ಬದುಕುತ್ತಿದ್ದಾನೆ. ಇನ್ನೂ ಹಲವರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಮಾತುಗಳನ್ನಾಡುತ್ತಾ ಬಂದಿದ್ದಾರೆ. ನವೀನ್ ವಿರುದ್ಧ ಕೂಡ ಕೇಸ್ ಕೊಟ್ಟಾಗ ಪೋಲೀಸರು ಕಾಟಾಚಾರಕ್ಕಾದರೂ ಆತನನ್ನು ಬಂಧಿಸಬೇಕಿತ್ತು. ಆದರೆ, ಎಲ್ಲೂ ಇಲ್ಲದ ಹೊಸ ನಿಯಮದಂತೆ ಎರಡು ಗಂಟೆಯ ಕಾಲವಕಾಶ ಕೇಳಿ ಅದಾದ ನಂತರವೂ ಯಾವುದೇ ಸ್ಪಷ್ಟಣೆ ನೀಡದಾದಾಗ ಜನರು ಕೆರಳುವುದು ಸಹಜ. ಗಲಭೆಯ ಆರಂಭದಲ್ಲಿ ಪೋಲಿಸರು ಕೈಕಟ್ಟಿ ನಿಂತಿದ್ದಾರೆನ್ನುವುದೂ ಅಲ್ಲಗಳೆಯುವಂತದ್ದಲ್ಲ. ಎಲ್ಲವೂ ರಾಜಕೀಯ ಷಡ್ಯಂತರವಲ್ಲದೆ ಇನ್ನೇನಲ್ಲ. ಗಲಭೆಯಾಗಬೇಕು, ಅಶಾಂತಿಯ ವಾತಾವರಣ ಹುಟ್ಟಿಕೊಳ್ಳಬೇಕೆನ್ನುವುದೇ ಸರ್ಕಾರ ಮತ್ತು ಪೋಲೀಸರ ದುರಾಲೋಚನೆಯಾಗಿತ್ತೇನೋ..!
ಇವೆಲ್ಲದರ ನಡುವೆ, ನಮ್ಮೊಳಗೇ ಪ್ರಗತಿಪರರು, ಚಿಂತಕರೆನಿಸಿಕೊಂಡವರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸುವ ರೀತಿ ಸೋಜಿಗವೆನಿಸಿದೆ. ಆಕ್ರೋಶಿತ ಜನತೆಯ ತಪ್ಪನ್ನು ಬೊಟ್ಟುಮಾಡುವ ಅವಸರದಲ್ಲಿ ಇವಕ್ಕೆಲ್ಲ ಬೇರು ಆಗಿದ್ದಂತಹ ಪ್ರವಾದಿ ನಿಂದನೆ ಮತ್ತು ಪೋಲೀಸರ ನಿರ್ಲ್ಯಕ್ಷದ ಬಗ್ಗೆ ಮಾತೇ ಇಲ್ಲ. ಘಟನೆಯನ್ನು ಸಂಪೂರ್ಣವಾಗಿ ಒಂದು ನಿರ್ದಿಷ್ಟ ಪಕ್ಷದ ಮೇಲೆ ಹೊರಿಸಿ ಕೈತೊಳೆದುಕೊಳ್ಳುವ ಕುತಂತ್ರ ಬುದ್ಧಿಗೆ ಸಲಾಂ. ಇಲ್ಲಿ ನ್ಯಾಯ, ಕಾನೂನು, ಸಂವಿಧಾನ, ಸರ್ಕಾರ, ಪೋಲೀಸ್, ನ್ಯಾಯಾಲಯ ಎಲ್ಲವೂ ಸತ್ಯದ ಪರವಾಗಿದ್ದುಕೊಂಡು ತಪ್ಪುಗಾರರಿಗೆ ಶಿಕ್ಷೆಕೊಡುವಲ್ಲಿ ಉತ್ಸಾಹ ತೋರಿದ್ದರೆ ಭಾರತ ಯಾವತ್ತಿಗೋ ಶಾಂತಿಯ ನೆಲೆಬೀಡಾಗುತ್ತಿತ್ತು. ಯಾವಾಗ ಇಲ್ಲಿ ಹಣ ಮತ್ತು ಅಧಿಕಾರದ ಮುಂದೆ ಸುಳ್ಳು ನೃತ್ಯವಾಡತೊಡಗಿದೆಯೋ, ಧರ್ಮ ಮತ್ತು ಹೆಣದ ಮೇಲೆ ರಾಜಕೀಯದ ಸ್ಥಂಭ ಸ್ಥಾಪಿಸಲ್ಪಟ್ಟಿದೆಯೋ ಅಂದಿನಿಂದ ಜನರೂ ತಾಳ್ಮೆ ಕಳೆದುಕೊಂಡಿದ್ದಾರೆ. ಇಲ್ಲಿ ಗಲಭೆಯಾದಾಗ, ಹಲ್ಲೆ-ಕೊಲೆಗಳಾದಾಗ ಮಾತ್ರ ಬೆಂಕಿಭಾಷಣದೊಂದಿಗೆ ಪ್ರತ್ಯಕ್ಷವಾಗುವ ಕೆಲವು ಜಾತ್ಯತೀತ (?) ರಾಜಕಾರಣಿಗಳಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಇವತ್ತು ಅದೆಷ್ಟೋ ಸಾವುಗಳು ನ್ಯಾಯವನ್ನು ಕೂಗಿ ಕರೆಯುತ್ತಿದೆ. ಅಮಾಯಕ ನಿರಪರಾಧಿ ಯುವಕರು, ಮಹಿಳೆಯರು ಜೈಲಿನೊಳಗೆ ಕೊಳೆಯುತ್ತಿದ್ದಾರೆ. ತಲೆಯಲ್ಲಿನ ಟೋಪಿ, ಮೈಮೇಲಿನ ಬುರ್ಖಾ ನೋಡಿ ಬಂದೂಕು ಗುರಿಯಿಡುವ ಪ್ರಸಕ್ತ ಕಾಲದಲ್ಲಿ ಪ್ರತಿರೋಧ ತಪ್ಪೆನಿಸದು. ಇಲ್ಲಿ ಎಲ್ಲವನ್ನೂ ಶಾಂತಿ ಮತ್ತು ಸಮಾಧಾನದಿಂದಲೇ ಸಾಧಿಸಬಹುದಾಗಿದ್ದರೆ ಜಗತ್ತಿನಲ್ಲಿ ಇಷ್ಟೊಂದು ಯುದ್ಧಗಳು ನಡೆಯುತ್ತಿರಲಿಲ್ಲ. ಅದರಲ್ಲೂ ಪ್ರಜಾಪ್ರಭುತ್ವವೆನ್ನುವ ಭಾರತದಲ್ಲಿ ಧರ್ಮ ಮತ್ತು ಜಾತಿಯ ಆಧಾರದಲ್ಲಿ ಕಾನೂನು ಕೆಲಸ ಮಾಡುತ್ತವೆಯೆಂದಾದರೆ, ಇದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ. ಅದಕ್ಕಾಗಿಯೇ ಮೇಲೆ ತಿಳಿಸಿದ್ದು, ಕೆಲವೊಮ್ಮೆ ಸಾಂದರ್ಭಿಕವಾಗಿ ಕೆಲವೊಂದು ತಪ್ಪುಗಳು ಆ ಕ್ಷಣಕ್ಕೆ ಸರಿ ನಿರ್ಧಾರವಾಗಿರುತ್ತದೆ. ಹಾಗಂತ ತಪ್ಪಿನ ಸಮರ್ಥನೆಯನ್ನಬೇಡಿ, ನ್ಯಾಯದ ಕುಣಿಕೆ ಸರಿಯಾಗಿ ಜೋಡಿಸಲ್ಪಟ್ಟರೆ ಇಲ್ಲಿ ಅಪರಾಧಗಳಿಗೆ ಭಯಹುಟ್ಟಿಕೊಳ್ಳುತ್ತದೆ.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.