ಅಂಧಾಲೋಕ(ವಿಶ್ವಕನ್ನಡಿಗ ನ್ಯೂಸ್): “ನಾರ್ಕೋಟಿಕ್ಸ್ ಈಸ್ ಎ ಡರ್ಟೀ ಬಿಸ್ನಸ್ (Narcotics is a dirty business)” ಮಲಯಾಳಂ ನ ‘ಲೂಸಿಫರ್’ ಎಂಬ ಸಿನೆಮಾದಲ್ಲಿ ತೂಕದ ಮಾತೊಂದಾಗಿತ್ತು ಇದು. ಅಲ್ಲಿ ಡ್ರಗ್ ಮಾಫಿಯಾ ದಂಧೆಯಾಗುವ ರೀತಿಯನ್ನು, ಅದರ ಹಿಂದೆ ಕಾಣದ ಕೈಗಳಾಗಿರುವ ರಾಜಕಾರಣಿಗಳು, ಕಾರ್ಪೊರೇಟರ್ ಗಳ ಪಾತ್ರದ ಚಿತ್ರಣವನ್ನು ನೀಡಲಾಗಿತ್ತು. ಸಮಾಜಕ್ಕೆ ಇನ್ನೂ ಸಮಸ್ಯೆಯಾಗಿರುವ ಮಾದಕ ದ್ರವ್ಯದ ಪಿಡುಗುಗಳ ಹಿಂದೆ ನಿಗೂಢವಾದ ಒಂದು ಮಾಯಾಜಾಲವೇ ಅಡಗಿದೆ ಎಂಬ ವಿಚಾರ ಸ್ಪಷ್ಟ. ಹಾಗಾಗಿಯೇ ಲೂಸಿಫರ್’ ಲ್ಲಿ ‘ಮಾದಕ ವಸ್ತು ಒಂದು ಕೊಳಕು ವ್ಯವಹಾರ’ ಎಂಬ ಮಾತು ಗಟ್ಟಿಧ್ವನಿಯಾಗಿದ್ದು. ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ ಈ ಒಂದು ಮಾತು ಮನಸ್ಸಿನೊಳಗೆ ಓಡಾಡುತ್ತಿತ್ತು.
ತೆರೆಯಲ್ಲಿ ಕಾಣುವ ಸಿನೆಮಾ ಎಂಬ ಅದ್ಭುತದ ಮರೆಯಲ್ಲಿ ವ್ಯತಿರಿಕ್ತವಾದ ಲೋಕವೊಂದಿದೆ. ಚಿತ್ರರಂಗದಲ್ಲಿ ಮಾದಕ ವಸ್ತುಗಳ ವ್ಯವಹಾರದ ಕುರಿತು ಸದ್ದು ಕೇಳಿಸುವುದು ಇದೇನೂ ಮೊದಲಲ್ಲ. ಈ ಹಿಂದೆ ಮಲಯಾಳಂ ಫಿಲಂ ಇಂಡಸ್ಟ್ರಿ ಯಲ್ಲೂ ಇದೇ ರೀತಿಯ ಒಂದು ಚರ್ಚೆ ತಲೆಯೆತ್ತಿಕೊಂಡಿತ್ತು. ಯುವ ನಟ ಶೇನ್ ನಿಗಮ್ ವಿಚಾರವಾಗಿ ಆರಂಭಗೊಂಡು ಡ್ರಗ್ಸ್ ಜಾಲದ ಕುರಿತಾಗಿ ಮಾತುಗಳಾಗಿದ್ದರೂ ಕೂಡ ಅಷ್ಟೇ ವೇಗದಲ್ಲಿ ಆ ಧ್ವನಿ ಮೌನವಾಗಿ ಹೋಗಿತ್ತು. ಹೆಚ್ಚಾಗಿ ಈ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವುದು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪ್ರಖ್ಯಾತ ಉದ್ಯಮಿಗಳೇ ಆಗಿರುವ ಕಾರಣಕ್ಕೆ ಇಂತಹ ವಿಚಾರಗಳ ಚರ್ಚೆಗಳು, ತನಿಖೆಗಳೆಲ್ಲಾ ಸಿಡಿಮದ್ದಿನಂತೆ ಒಮ್ಮೆಗೆ ಮಾತ್ರ ಸಿಡಿಯುತ್ತದೆಯೇ ಹೊರತು ಇದರಿಂದ ನ್ಯಾಯಯುತ ಪರಿಹಾರದೆಡೆಗೆ ಹೆಜ್ಜೆಯಾಗುವುದಿಲ್ಲ.
ಬಾಲಿವುಡ್ ನ ಸುಶಾಂತ್ ಸಿಂಗ್ ಆತ್ಮಹತ್ಯೆಯ ಹಿಂದೆಯೂ ಡ್ರಗ್ಸ್ ದಂಧೆಯ ಪಾಲು ಇದೆ ಎಂಬ ಮಾತೂ ಕೇಳಿಬರುತ್ತಿದೆ. ಸುಶಾಂತ್ ಕೂಡ ಮಾದಕ ವ್ಯಸನಿ ಆಗಿದ್ದ ಎನ್ನುವ ರಿಪೋರ್ಟ್ಗಳೂ ಹೊರಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಸುಶಾಂತ್ ನ ಆಪ್ತರು ಕೆಲವರು ಡ್ರಗ್ಸ್ ಮಾಫಿಯಾ ವಿಚಾರವಾಗಿ ಬಂಧನಕ್ಕೊಳಗಾಗುತ್ತಿದ್ದಾರೆ. ಈಗೀಗ ಸ್ವಾಭಾವಿಕ ಎಂಬಂತೆ ಸಿನೆಮಾ ರಂಗದಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಹರಡಿಕೊಂಡಿದೆ. ಇದರ ಮುಂದುವರಿದ ಭಾಗವಾಗಿದೆ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾದ ನಟಿ ರಾಗಿಣಿ ದ್ವಿವೇದಿ. ರಾಗಿಣಿಯ ಬಂಧನದ ಬೆನ್ನಲ್ಲಿ ಭೀತಿಯಾವರಿಸಿದ್ದು ಇಲ್ಲಿನ ಕೆಲವು ರಾಜಕಾರಣಿಗಳು ಮತ್ತು ರಾಗಿಣಿ ಆಪ್ತರ ಪಟ್ಟಿಯಲ್ಲಿರುವ ಸಿನೆಮಾ ತಾರೆಯರು ಮತ್ತು ಉದ್ಯಮಿಗಳಿಗೆ. ಈಗಾಗಲೇ ಡ್ರಗ್ಸ್ ಮಾಫಿಯಾ ಆರೋಪದಡಿ ಬಂಧಿಯಾಗಿರುವ ರಾಗಿಣಿ ಸೇರಿದಂತೆ ಕೆಲವು ಮಂದಿ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವುದಕ್ಕೆ ಸಾಕ್ಷ್ಯಾಧಾರಗಳು ಬೆಳಕಿಗೆ ಬರುತ್ತಿದ್ದಂತೆ, ನಾಯಕರೆಲ್ಲಾ ವಿಧವಿಧದ ತಂತ್ರಗಳನ್ನು ಹೆಣೆಯುತ್ತಾ ಪ್ರಕರಣದಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಅಭಿನಯವೆನ್ನುವದು ಒಂದು ಕಲೆಯಾದರೆ, ಸಿನೆಮಾ ಒಂದು ಉದ್ಯಮ. ನಟ-ನಟಿಯರಷ್ಟೇ ಮುನ್ನೆಲೆಯಲ್ಲಿ ಬರುತ್ತಾರೆ. ಸ್ಕ್ರೀನ್ ನ ಹಿಂಬಾಗದಲ್ಲಿ ನಾವರಿಯದ ಏನೇನೋ ನಡೆಯುತ್ತಿರುತ್ತದೆ. ಅದರ ಒಂದು ಭಾಗವಷ್ಟೇ ಮಾದಕ ದ್ರವ್ಯಗಳ ಬಳಕೆ. ಈಗೀಗ ಕಿರುಪ್ರಾಯದ ಕಾಲೇಜು ವಿದ್ಯಾರ್ಥಿಗಳೂ ಕೂಡ ಡ್ರಗ್ಸ್ ಗೆ ಬಲಿಯಾಗುತ್ತಿರುವಾಗ, ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಸಿನೆಮಾ ರಂಗದಲ್ಲಿ ಮಾದಕ ವ್ಯಸನ ಮತ್ತು ವ್ಯವಹಾರವೆಲ್ಲ ಅಚ್ಚರಿಯಾಗುವಂತದ್ದೇನಲ್ಲ. ಹಣ, ಅಧಿಕಾರ ಮತ್ತು ಐಶಾರಾಮಿ ಬದುಕಿನ ಕನಸನ್ನು ಮಾತ್ರ ಕಟ್ಟಿಕೊಂಡು ಸಿನೆಮಾ ಪ್ರವೇಶಿಸುವವರು ಹೆಚ್ಚಿನವರು. ಹಾಗಿರುವಾಗ ಸ್ವಾಭಾವಿಕವಾಗಿ ಬಹುತೇಕ ಮಂದಿ ಇದರ ಹಿಂದೆ ಬಿದ್ದಿರುತ್ತಾರೆ. ಇದಕ್ಕೆ ಕೈಯಾಗಿ ರಾಜಕಾರಣಿಗಳು ಮತ್ತು ಉದ್ಯಮಿಗಳಿರುವಾಗ ಈ ಜಾಲ ಸರಾಗವಾಗಿ ವ್ಯಾಪಿಸಿಕೊಳ್ಳುತ್ತದೆ.
ಇಷ್ಟೆಲ್ಲಾ ಸದ್ದುಗದ್ದಲದ ನಡುವೆ ಕೊಂಚ ಹಾಸ್ಯಾಸ್ಪದವೂ ಆಶ್ಚರ್ಯವೂ ತಂದುಕೊಟ್ಟಿದ್ದು ನಟಿ ನಿವೇದಿತಾಳ ಹೇಳಿಕೆಯಾಗಿತ್ತು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೈ ಕೊಡವುತ್ತಾ ಈ ಚರ್ಚೆಯಿಂದ ನುಣುಚಿಕೊಳ್ಳುತ್ತಿದ್ದೆ, ನಿವೇದಿತಾ ಮಾತ್ರ ಬೇರೆಯೇ ರೀತಿಯಲ್ಲಿ ಗಾಂಜಾವನ್ನು ಸಮರ್ಥಿಸಿಕೊಂಡಿದ್ದಾಳೆ. ‘ಗಾಂಜಾ ತುಳಸಿಯಷ್ಟೇ ಪವಿತ್ರ’ ಎನ್ನುತ್ತಾ ಡ್ರಗ್ಸ್ ಮಾಫಿಯಾ ಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾಳೆ. ಇಲ್ಲಿ ಗಮನಿಸಬೇಕಾದ ಅಂಶ ಬೇರೊಂದಿದೆ. ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಪ್ರವಾದಿ ನಿಂದನೆ ವಿಷಯವಾಗಿ ಗಲಭೆಯೆದ್ದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡ ಮಧ್ಯರಾತ್ರಿ ‘ಕೊತ್ತಂಬರಿ ಸೊಪ್ಪು ತರಲು ಹೋಗಿದ್ದರು’ ಎನ್ನುವಾಗ ಕೊತ್ತಂಬರಿಯನ್ನು ‘ಕೊತ್ಮಿರಿ’ ಅಂದಿದ್ದೇ ಬಹಳಷ್ಟು ಗೇಲಿಯಾಗಿತ್ತು. ಎದೆಸೀಳಿದಾಗ ಅಕ್ಷರಗಳೇ ತುಂಬಿತುಳುಕುವವರೆಲ್ಲ ಇದನ್ನು ಟ್ರೋಲ್ ಮಾಡಿ ತೃಪ್ತಿಯಾಗಿದ್ದರು. ಆದರೆ, ನಿವೇದಿತಾ ಇದಕ್ಕಿಂತಲೂ ಕಳಪೆಯಾದ ಮಾತೊಂದನ್ನಾಡಿದಾಗ ಅದರ ವಿರುದ್ಧ ಮಾತೆತ್ತಲು, ಅದನ್ನು ಪ್ರಶ್ನಿಸಲು ನಾಲಗೆ ಚಲಿಸದೇ ಇದ್ದುದು ವಿಪರ್ಯಾಸ. ಅಂದರೆ, ಇಲ್ಲಿ ಮೈಮೇಲಿನ ಬಟ್ಟೆ, ತಲೆಯಲ್ಲಿನ ಟೋಪಿಯನ್ನು ಗುರುತಿಸಿದ ಮೇಲಷ್ಟೇ ಪ್ರಶ್ನೆಗಳು ಹುಟ್ಟುತ್ತದೆ ಎನ್ನುವುದು ಸ್ಪಷ್ಟ. ಸಮಾಜಘಾತು ದ್ರವ್ಯವಾಗಿರುವ ಗಾಂಜಾವನ್ನು ತುಳಸಿ ಎಲೆಗೆ ಹೋಲಿಸಿದ ವಿದ್ಯಾವಂತ(?)ರೆಲ್ಲ ಉಳಿದವರನ್ನು ಎದೆಸೀಳಿದರೆ ನಾಲ್ಕಕ್ಷರ ಇಲ್ಲದವರು, ಪಂಚರ್ ಹಾಕುವವರೆಂದು ಗೇಲಿ ಮಾಡುವ ಪರಿಯಂತೂ ಅದ್ಭುತ.
ಒಟ್ಟಾರೆ ಈ ಡ್ರಗ್ ಮಾಫಿಯಾ ಚರ್ಚೆಗಳಿಂದಾಗಿ ಮಾಧ್ಯಮಗಳಲ್ಲಿ ಚೆಂಡಾಡುತ್ತಿದ್ದ ಕೊರೋನಾ ಒಂದಲ್ಪ ನಿಟ್ಟುಸಿರು ಬಿಟ್ಟಿದೆಯೇ ಹೊರತು ಇನ್ಯಾವುದೇ ಪ್ರಯೋಜನವಾಗಿಲ್ಲ. ಹಿಂದೆಯೂ ಡ್ರಗ್ಸ್ ವ್ಯಾಪಕ ಚರ್ಚೆಯಾಗುತ್ತಿತ್ತು. ತನಿಖೆ, ಬಂಧನದೊಡನೆಯೇ ಅದೇ ವೇಗಕ್ಕೆ ಏನಾದರೊಂದು ನೆಪಹೇಳಿ ಬಿಡುಗಡೆಯೂ ಆಗುತ್ತಿತ್ತು. ಇಲ್ಲಿಯೂ ಅದೇ ಪುನರಾವರ್ತಿಸುತ್ತದೆ. ಹಿಂದಿನಿಂದಲೂ ಕಾನೂನು ನ್ಯಾಯವಾದ ರೀತಿಯಲ್ಲಿ ಕೆಲಸ ಮಾಡಿದ್ದಿದ್ದರೆ ದೇಶವ್ಯಾಪಿಯಾಗಿ ಈ ಜಾಲ ಹರಡಿತ್ತಿರಲಿಲ್ಲ. ಯಾವತ್ತಿನಿಂದ ಹಣ ಮತ್ತು ಅಧಿಕಾರದ ಹಿಂದೆ ಅನ್ಯಾಯ ನೃತ್ಯವಾಡತೊಡಗಿತೋ ಅಂದಿನಿಂದ ನ್ಯಾಯ ಇರುಳಿಗಟ್ಟಿದೆ. ಒಂದಷ್ಟು ದಿನಗಳ ಕಾಲ ಮಾಧ್ಯಮಗಳು ಮತ್ತು ಸಾಮಾಜಿಕ ತಾಣಗಳು ಈ ವಿಷಯನ್ನು ಹಬ್ಬವನ್ನಾಗಿಸಿ ಮುಂದೆ ಹೊಸ ವಿಚಾರ ಸಿಕ್ಕಾಗ ಮರಕೋತಿಯಂತೆ ಕೊಂಬೆಯಿಂದ ಕೊಂಬೆಗೆ ಹಾರುತ್ತಿರುತ್ತದೆ. ಇವಿಷ್ಟೇ ಇವತ್ತಿನ ಭರವಸೆ.
– ಹಕೀಂ ಪದಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.