ಅಂಧಾಲೋಕ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯದಲ್ಲಿ ಈಗ ಅತಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿಚಾರವೆಂದರೆ, ‘ಹಿಂದಿ ದಿವಸ್ ಮತ್ತು ಹಿಂದಿ ಹೇರಿಕೆ’ ಯ ಕುರಿತಾಗಿ. ಸರಕಾರವು ಸೆಪ್ಟೆಂಬರ್ 14 ನ್ನು ಹಿಂದಿ ದಿವಸ್ ಆಗಿ ಆಚರಿಸುವಂತೆ ಪ್ರಖ್ಯಾಪಿಸಿದಂದಿನಿಂದ ಈ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಕರ್ನಾಟಕದಲ್ಲಿದ್ದುಕೊಂಡ ಕನ್ನಡವನ್ನೇ ಉಸಿರಾಡುವ ಕನ್ನಡಿಗರು ಹಿಂದಿ ದಿನ ಎಂಬುದನ್ನು ಆಚರಿಸಬೇಕಿಲ್ಲ ಮತ್ತು ಆಚರಿಸುವುದೂ ಇಲ್ಲ ಎನ್ನುವುದೇ ಬಹುಪಾಲು ಕನ್ನಡಿಗರ ವಾದ. ಆದಾಗ್ಯೂ ಈ ವಾದ ಸಮಕಾಲೀನವೇ. ಕನ್ನಡಿಗರ ಮೇಲೆ ರಾಷ್ಟ್ರ ಭಾಷೆ ಎನ್ನುವ ನೆಪವೊಡ್ಡಿ ಹಿಂದಿಯನ್ನಿ ಬಲವಂತವಾಗಿ ಹೇರುವುದಕ್ಕಿರುವ ತಂತ್ರಗಳ ಮುಂದುವರಿದ ಭಾಗವಾಗಿದೆ ಇದು. ಇದನ್ನು ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸುತ್ತಿದ್ದಾರೆನ್ನುವುದು ಅಭುನಂದನಾರ್ಹ.
ಕುವೆಂಪುರವರು ಒಂದು ಮಾತನ್ನು ಹೇಳುತ್ತಾರೆ; “ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ, ಕರ್ನಾಟಕದಲ್ಲಿ ಕನ್ನಡವಿರಬೇಕು. ಈ ವಿಷಯದಲ್ಲಿ ಅಸ್ವಾಭಾವಿಕತೆ ಲವಲೇಶವೂ ಇಲ್ಲ. ” ಸಾಮಾನ್ಯವಾಗಿ ಕನ್ನಡ ಭಾಷೆಯಂತೆಯೇ ಹಿಂದಿಯೂ ಒಂದು ಭಾಷೆ. ಅದಕ್ಕೆ ಮಿಗಿಲಾದ ಪ್ರತ್ಯೇಕತೆಗಳೇನೂ ಇಲ್ಲ. ಉತ್ತರ ಭಾರತದಲ್ಲಿ ಹೆಚ್ಚಾಗಿ ಹಿಂದಿ ಬಳಕೆಯಾಗುತ್ತಿದೆ ಎಂದ ಮಾತ್ರಕ್ಕೆ ಹಿಂದಿಯನ್ನು ಎಲ್ಲರೂ ಪರಿಗಣಿಸಬೇಕೆನ್ನುವುದು ತಪ್ಪು. ಕನ್ನಡಿಗರಿಗೆ ಅಥವಾ ಕರ್ನಾಟಕಕ್ಕೆ ಕನ್ನಡವೇ ರಾಷ್ಟ್ರಭಾಷೆ. ಅದರ ಹೊರತಾಗಿ ಹೊರಗಿನ ಯಾವ ಭಾಷೆಗೂ ನಾವು ಕನ್ನಡಕ್ಕಿಂತ ಹೆಚ್ಚು ಮಾನ್ಯತೆ ಕೊಡುವಂತಿಲ್ಲ ಮತ್ತು ಕೊಡುವುದೂ ಇಲ್ಲ. ಕುವೆಂಪು ಹೇಳಿದ್ದೂ ಅದನ್ನೇ, ಇಂಗ್ಲೆಂಡ್, ಫ್ರಾನ್ಸ್ ನಲ್ಲಿ ಅಲ್ಲಿನ ಭಾಷೆಗಳಿರುವಂತೆಯೇ ಕರ್ನಾಟಕಕ್ಕೆ ಕನ್ನಡವೇ ಬೇಕು. ಈಗಾಗಲೇ ಇಂಗ್ಲಿಷ್ ದಾಳಿಯಿಂದಾಗಿ ಕನ್ನಡದ ಬಳಕೆ ಮತ್ತು ಕಲಿಕೆ ಕುಂಠಿತವಾಗುತ್ತಿರುವಾಗ ಈ ಹಿಂದಿ ಹೇರಿಕೆಯ ಮೂಲಕ ಕನ್ನಡವನ್ನು ಇನ್ನಷ್ಟು ಹಿಂದಕ್ಕೆ ತಳ್ಳುವ ಹುನ್ನಾರವಿದೆ.
‘ಕನ್ನಡವೇ ಸತ್ಯ; ಕನ್ನಡವೇ ನಿತ್ಯ’ ಕುವೆಂಪು ನುಡಿಯೊಂದು ಕನ್ನಡಿಗರ ಹೃದಯದೊಳಗಿದೆ. ಉಸಿರಾಡುವ ಗಾಳಿ, ನೆಲ, ಜಲ ಎಲ್ಲವೂ ಕನ್ನಡ ಎಂದು ಎದೆತುಂಬಿ ಹಾಡುವ ಕರುನಾಡ ಕರುಳ ಕುಡಿಗಳ ಮೇಲೆ ಹಿಂದಿಯನ್ನು ಬಲಾತ್ಕಾರದಿಂದ ತುರುಕಿಸುವಾಗ ಕೈಕಟ್ಟಿ ಕೂರುತ್ತಾರೆನ್ನುವುದು ತಪ್ಪು ಕಲ್ಪನೆ. ದೇಹದ ನರನಾಡಿಗಳೆಲ್ಲ ಕನ್ನಡವನ್ನೇ ಜಪಿಸುವ ಸಾವಿರಾರು ಕನ್ನಡಿಗರು ಹುಟ್ಟಿ ಬೆಳೆದ ಮಣ್ಣಿನಲ್ಲಿ ಕನ್ನಡಕ್ಕಿಂತ ಮಿಗಿಲಾಗಿ ಇನ್ನೊಂದು ಭಾಷೆಯಿಲ್ಲ.
‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.’ ಕರುನಾಡ ಜನತೆಗೆ ಸ್ಪೂರ್ತಿ ತುಂಬಿದ ಸಾಲುಗಳಿವು. ಕನ್ನಡದಂತೆಯೇ ನಾವು ಇವುಗಳನ್ನೂ ಉಸಿರಾಡುತ್ತಿರುತ್ತೇವೆ. ಕನ್ನಡ ನಾಡಿನ ನೆಲ, ಭಾಷೆ ಸಂಸ್ಕೃತಿ, ಇತಿಹಾಸ ಎಲ್ಲವನ್ನೂ ಗೌರವಿಸುತ್ತಾ ಬಾಳುತ್ತಿರುವ ಕನ್ನಡಿಗರ ನಡುವೆ, ಇನ್ನೊಂದು ಭಾಷೆಯ ಹೇರಿಕೆಗೆ ಮೌನವಿದ್ದು ಬಿಡಲಾಗದು. ಹಿಂದಿಯನ್ನು ಬಲಪಡಿಸುವ ನಿಮಿತ್ತ, ಎಲ್ಲಾ ಸರ್ಕಾರಿ ಕಛೇರಿ ಗಳು ಮತ್ತು ಸರ್ಕಾರಿ ಕೆಲಸಗಳಲ್ಲೆಲ್ಲಾ ಹಿಂದಿಗೇ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕೂಡ ಇಲ್ಲಿನ ನಾಡ ಭಾಷೆ ಕನ್ನಡವನ್ನು ಕಡೆಗಣಿಸಿ ಸರಕಾರವು ಹಿಂದಿಯನ್ನು ಅತಿಯಾಗಿ ಬಳಕೆ ಮಾಡುತ್ತಿರುವುದು ಖಂಡನಾರ್ಹ. ಉತ್ತರ ಭಾರತ ಮಾದರಿಯ ಕ್ರೂರ ಆಡಳಿತವನ್ನು ದಕ್ಷಿಣ ಭಾರತದಲ್ಲೂ ಕಾರ್ಯರೂಪಕ್ಕೆ ತರುವ ರಣತಂತ್ರಗಳ ಒಂದು ಭಾಗ ಎನ್ನಬಹುದು. ಈಗಾಗಲೇ ದೇಶದಾದ್ಯಂತ ಹಿಂದಿ ದಿವಸ್ ಗೆ ಚಾಲನೆಯಿಟ್ಟಾಗಿದೆ. ಇನ್ನೂ ಮೌನವಾಗಿದ್ದಲ್ಲಿ ಒಂದಷ್ಟು ವರ್ಷಗಳ ಬಳಿಕ ಕನ್ನಡ ಸಂಪೂರ್ಣವಾಗಿ ಮಾಯವಾಗಲೂಬಹುದು. ಅದಕ್ಕಾಗಿ ಈಗಲೇ ಧ್ವನಿ ಸದ್ದಾಗಬೇಕಿದೆ. ಕನ್ನಡಿಗರೆಲ್ಲೂ ಒಕ್ಕೊರಳಿನಿಂದ ಹಿಂದಿ ಹೇರಿಕೆಯನ್ನು ವಿರೋಧಿಸಿ, ಕನ್ನಡಕ್ಕಾಗಿ ಹೋರಾಡೋಣ.. ಜೈ ಕನ್ನಡ..
– ಹಕೀಂ ಪದಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.