ತಲಪಾಡಿ (www.vknews.com) : ತಲಪಾಡಿ ಟೋಲ್ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಕೆಸಿ ರೋಡಿನ ಕೊಮರಂಗಳ ಹಾಗೂ ಅಜ್ಜಿನಡ್ಕ ಪ್ರದೇಶದ ಜನ ಕೋಟೆಕಾರ್ ಪಂಚಾಯಿತಿ ಸೇರುತ್ತಾರೆ ಎನ್ನುವ ಕಾರಣಕ್ಕಾಗಿ ಅವರಿಂದ ಈಗ ತಲಪಾಡಿ ನವಯುಗ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಇದು ಸಂಸ್ಥೆ ಈ ಹಿಂದೆ ಸ್ಥಳೀಯರಿಗೆ ಅಂದರೆ 5 ಕಿಮೀ ವ್ಯಾಪ್ತಿಯವರಿಗೆ ನೀಡಿದ್ದ ಟೋಲ್ ವಿನಾಯಿತಿ ನಿಯಮದ ಉಲ್ಲಂಘನೆಯಾಗಿದೆ.
ಹೀಗೆ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ತಲಪಾಡಿ ಪಂಚಾಯಿತಿ ವ್ಯಾಪ್ತಿಯ ಜನರೂ ಟೋಲ್ ಕೊಡಬೇಕಾಗಿ ಬರಬಹುದು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ( ಡಿವೈಎಫ್ಐ) ಉಳ್ಳಾಲ ವಲಯ ಸಮಿತಿಯು ಇದನ್ನು ಖಂಡಿಸುತ್ತಿದ್ದು ನವಯುಗ ಸಂಸ್ಥೆ ಈ ನೂತನ ಟೋಲ್ ಸಂಗ್ರಹ ನೀತಿಯನ್ನು ಕೈಬಿಟ್ಟು ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ 5 ಕಿಮೀ ವ್ಯಾಪ್ತಿಯವರಿಗೆ ಟೋಲ್ ರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದೆ.
ಇನ್ನು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಗಡಿ ಬಂದ್ ಆದ ಕಾರಣ ಉಭಯ ರಾಜ್ಯಗಳ ನಡುವೆ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಈಗ ಪುನರ್ ಆರಂಭವಾದ ನಂತರ ಟೋಲ್ ಕೇಂದ್ರದಲ್ಲಿ ವಾಹನ ಪ್ರಯಾಣಿಕರಿಂದ ಕೇವಲ ಏಕ ಮುಖ ಸಂಚಾರಕ್ಕೆ ಮಾತ್ರ ಟೋಲ್ ಪಡೆದು ವಾಪಾಸ್ಸು ಬರುವಾಗ ಮತ್ತೆ ಟೋಲ್ ಪಡೆಯುತ್ತಾರೆ. ಒಮ್ಮೆಲೇ ದ್ವಿಮುಖ ಸಂಚಾರದ ಟೋಲ್ ಕೇಳಿದರೆ ಕೊಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ. ಹೀಗೆ ಮಾಡುವುದರಿಂದ ದ್ವಿಮುಖ ಸಂಚಾರ ಮಾಡುವ ಪ್ರಯಾಣಿಕರು ಹೆಚ್ಚು ಟೋಲ್ ಪಾವತಿಸಬೇಕಾಗಿ ಬರುತ್ತವೆ. ಇದೊಂದು ರೀತಿಯಲ್ಲಿ ಸಂಸ್ಥೆ ನಡೆಸುತ್ತಿರುವ ಹಗಲು ದರೋಡೆಯಾಗಿದ್ದು ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.