ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ರಾಜ್ಯ ಬಿಜೆಪಿ ಸರಕಾರ ಹಿಟ್ ಆಂಡ್ ರನ್ ರೀತಿ ವರ್ತಿಸುವ ಮೂಲಕ ಅಧಿವೇಶನ ಹೊತ್ತಿನಲ್ಲಿ ರಾಜ್ಯದ ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರದ ವರ್ತನೆಯನ್ನು ಟೀಕಿಸಲು ಸರಣಿ ಟ್ವೀಟ್ ಮಾಡಿದ ಮಾಜಿ ಸಚಿವ ಖಾದರ್, ಕೊರೋನಾ ಸಂಕಷ್ಟ, ಪ್ರವಾಹ ಪರಿಸ್ಥಿತಿ, ರೈತ ವಿರೋಧಿ ಎಪಿಎಂಸಿ ತಿದ್ದುಪಡಿ, ಶ್ರಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಯಂತಹ ಜನವಿರೋಧಿ ನೀತಿಗಳ ಬಗ್ಗೆ ಚರ್ಚಿಸುವ ಬದಲು, ಡ್ರಗ್ಸ್ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿ ಮಾಫಿಯಾ ಮಟ್ಟ ಹಾಕಲು ನಾರ್ಕೋಟಿಕ್ ಸೆಲ್ ಹಾಗೂ ಕಾನೂನು ಇನ್ನಷ್ಟು ಬಲಗೊಳಿಸುವ ಬದಲಾಗಿ ರಾಜಕೀಯ ಹಿತಾಸಕ್ತಿಗಾಗಿ, ಸರಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ವಿಪಕ್ಷ ಮುಖಂಡರ ಮೇಲೆ ಗೂಬೆ ಕೂರಿಸಲು ಸರಕಾರ ಮುಂದಾಗಿದೆ. ರಾಜ್ಯ ಬಿಜೆಪಿ ಸರಕಾರ ಒಂದು ಅಟೆನ್ಶನ್ ಡೈವರ್ಷನ್ ಸರಕಾರ ಎಂದವರು ಟ್ವೀಟ್ ಮೂಲಕ ಝಾಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸರಕಾರ ಹಿಟ್ ಅಂಡ್ ರನ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಯು ಟಿ ಖಾದರ್ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.